ಸಿದ್ದರಾಮಯ್ಯ 'ಬಯೋಪಿಕ್' ಮಾಡ್ತಾರಂತೆ ಮಾಜಿ ಸಚಿವ: ಹೀರೊ ವಿಜಯ್ ಸೇತುಪತಿ ಅಂತ ಸುದ್ದಿ!
ಭಾರತೀಯ ಚಿತ್ರರಂಗದಲ್ಲಿ ಬಯೋಪಿಕ್ ಸಿನಿಮಾಗಳಿಗೇನು ಭರವಿಲ್ಲ. ಯಾರದ್ದಾದರೂ ಆತ್ಮಚರಿತ್ರೆಯನ್ನು ತೆರೆಮೇಲೆ ತರುವುದಕ್ಕೆ ಒಂದಲ್ಲ ಒಂದು ಟೀಮ್ ಪ್ರಯತ್ನ ಪಡುತ್ತಲೇ ಇರುತ್ತೆ. ಈಗಾಗಲೇ ಬಂದಿರೋ ಬಯೋಪಿಕ್ಗಳಲ್ಲಿ ಕೆಲವು ಗೆದ್ದಿವೆ. ಮತ್ತೆ ಕೆಲವು ಸೋತಿವೆ.
ಸದ್ಯ ಸ್ಯಾಂಡಲ್ವುಡ್ನಲ್ಲೂ ಒಂದು ಬಯೋಪಿಕ್ ರಿಲೀಸ್ಗೆ ರೆಡಿಯಾಗಿದೆ. ಅದುವೇ ವಿಜಯ್ ಸಂಕೇಶ್ವರ್ ಅವರ ಆತ್ಮಚರಿತ್ರೆಯನ್ನು ಸಾರುವ 'ವಿಜಯಾನಂದ'. ಈ ಸಿನಿಮಾ ಸದ್ಯ ಬಿಡುಗಡೆಗೆ ಸಜ್ಜಾಗುತ್ತಿದೆ. ಇದರೊಂದಿಗೆ ಮತ್ತೊಂದು ಬಯೋಪಿಕ್ಗೆ ವೇದಿಕೆ ಸಜ್ಜಾಗುತ್ತಿದೆ ಅನ್ನೋ ಮಾತು ಕೇಳಿಬರುತ್ತಿದೆ.
ಕಾಂಗ್ರೆಸ್ ಮುಖಂಡ, ಮಾಜಿ ಸಿ ಎಂ ಸಿದ್ಧರಾಮಯ್ಯ ಅವರ ಬಯೋಪಿಕ್ ಮಾಡುವುದಕ್ಕೆ ವೇದಿಕೆ ಸಿದ್ಧವಾಗುತ್ತಿದೆ ಅನ್ನೋದು ಗುಸು ಗುಸು ಮಾಧ್ಯಮವಲಯದಲ್ಲಿ ಹರಿದಾಡುತ್ತಿದೆ. ಮಾಜಿ ಸಚಿವರೊಬ್ಬರು 'ಸಿದ್ಧರಾಮಯ್ಯ ಬಯೋಪಿಕ್'ಗೆ ರೆಡಿಯಾಗಿದ್ದಾರೆ. ಅಷ್ಟಕ್ಕೂ ಮ್ಯಾಟರ್ ಏನು ಅನ್ನೋದನ್ನು ತಿಳಿಯಲು ಮುಂದೆ ಓದಿ.

ಸಿದ್ಧರಾಮಯ್ಯ ಬಯೋಪಿಕ್ಗೆ ಕಸರತ್ತು?
ಮಾಜಿ ಸಿಎಂ ಸಿದ್ಧರಾಮಯ್ಯ ಅವರ ಬರೋಪಿಕ್ ತೆರೆಮೇಲೆ ತರುವುದಕ್ಕೆ ತೆರೆ ಮರೆಯಲ್ಲಿ ಕಸರತ್ತು ನಡೆಯುತ್ತಿದೆ ಅನ್ನೋ ಮಾತುಗಳು ಕೇಳಿಬರುತ್ತಿವೆ. ಉತ್ತರ ಕರ್ನಾಟಕದ ಮಾಜಿ ಸಚಿವ ಶಿವರಾಜ್ ತಂಗಡಗಿ ಈಗಾಗಲೇ ಸಿದ್ಧರಾಮಯ್ಯ ಬಯೋಪಿಕ್ ಮಾಡುವುದಕ್ಕೆ ವೇದಿಕೆ ರೆಡಿ ಮಾಡಿದ್ದಾರಂತೆ. ಸಿದ್ಧರಾಮಯ್ಯ ಅವರ ಬಳಿನೂ ಚರ್ಚೆ ಮಾಡಿದ್ದು, ಉತ್ತರ ಕರ್ನಾಟಕ ಭಾಗದಲ್ಲಿ ಕ್ರಾಂಗ್ರೆಸ್ ಬಲಪಡಿಸಲು ಈ ಸಿನಿಮಾ ಸಹಕಾರಿಯಾಗಲಿದೆ ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆಂದು ವರದಿಯಾಗಿದೆ.

20 ಕೋಟಿ ರೂ. ವೆಚ್ಚದಲ್ಲಿ ಸಿನಿಮಾ ನಿರ್ಮಾಣ
ಮಾಜಿ ಸಿಎಂ ಸಿದ್ಧರಾಮಯ್ಯ ಬರೋಪಿಕ್ಗೆ ಸುಮಾರು 20 ಕೋಟಿ ರೂ. ಬಜೆಟ್ ಅನ್ನು ನಿಗದಿ ಮಾಡಲಾಗಿದ್ಯಂತೆ. ತಮ್ಮ ನಾಯಕನ ಸಿನಿಮಾವನ್ನು ಅದ್ಧೂರಿಯಾಗಿ ತೆರೆಮೇಲೆ ತರುವುದಕ್ಕೆ ಮಾಜಿ ಸಚಿವರು ಮುಂದಾಗಿದ್ದಾರೆ. ಆದರೆ, ಸಿದ್ಧರಾಮಯ್ಯ ಅವರೇ ಬಯೋಪಿಕ್ಗೆ ಅನುಮತಿ ಕೊಡಲು ಹಿಂದೇಟು ಹಾಕಿದ್ದಾರೆ. ಚುನಾವಣೆ ಸಮಯದಲ್ಲಿ ಬಯೋಪಿಕ್ ಬೇಡ ಎಂದು ಹೇಳುತ್ತಿದ್ದು, ರಾಜ್ಯಾದ್ಯಂತ ನಿಮ್ಮ ಅಭಿಮಾನಿಗಳಿರೋದ್ರಿಂದ ಒಪ್ಪಿಕೊಳ್ಳಿ ಎಂದು ಸಿದ್ಧರಾಮಯ್ಯ ಗುಂಪು ಮನವಿ ಮಾಡಿಕೊಂಡಿದೆ. ಸತ್ಯರತ್ನಂ ಎಂಬುವವರು ಈಗಾಗಲೇ ಕಥೆಯನ್ನು ಸಿದ್ಧಪಡಿಸಿಕೊಂಡಿದ್ದಾರೆ. ಸದ್ಯ ಚುನಾವಣೆ ಬ್ಯುಸಿಯಲ್ಲಿ ಇದ್ದೀನಿ. ಇನ್ನೊಮ್ಮೆ ಚರ್ಚೆ ಮಾಡಿ ತಿಳಿಸುತ್ತೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ ಎನ್ನುತ್ತಿದೆ ಚಿತ್ರತಂಡ.

ವಿಜಯ್ ಸೇತುಪತಿಗೆ ಅಪ್ರೋಚ್
ಮಾಜಿ ಸಿಎಂ ಸಿದ್ಧರಾಮಯ್ಯ ಬಯೋಪಿಕ್ಗೆ ವಿಜಯ್ ಸೇತುಪತಿಯನ್ನು ಅಪ್ರೋಚ್ ಮಾಡಲಾಗಿದ್ಯಂತೆ. ಅಲ್ಲದೆ ಈಗಾಗಲೇ ವಿಜಯ್ ಸೇತುಪತಿಯೊಂದಿಗೂ ಮಾತುಕತೆ ನಡೆಸಿದ್ದಾರಂತೆ. ಆದರೆ, ಬಯೋಪಿಕ್ನಲ್ಲಿ ನಟಿಸುವುದಕ್ಕೆ ವಿಜಯ್ ಸೇತುಪತಿ ಒಪ್ಪಿಗೆ ನೀಡಿದ್ದಾರಾ? ಅನ್ನೋದು ಇನ್ನೂ ತಿಳಿಯಬೇಕಿದೆ. ಸದ್ಯ ಸಿದ್ಧರಾಮಯ್ಯ ಬಯೋಪಿಕ್ ಬಗ್ಗೆ ರಾಜಕೀಯ ವಲಯದಲ್ಲಿ ಜೋರಾಗಿಯೇ ಚರ್ಚೆ ಆರಂಭ ಆಗಿದೆ.

ಚುನಾವಣೆಗಾಗಿ ಸಿದ್ಧರಾಮಯ್ಯ ಬಯೋಪಿಕ್?
ಇನ್ನು ನಾಲ್ಕೈದು ತಿಂಗಳಲ್ಲಿ ರಾಜ್ಯದಲ್ಲಿ ವಿಧಾನ ಸಭೆ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ತಮ್ಮ ಪಕ್ಷವನ್ನು ಅಧಿಕಾರಕ್ಕೆ ತರುವುದಕ್ಕೆ ಈಗಿನಿಂದಲೇ ಭರ್ಜರಿ ಪ್ರಚಾರ ಆರಂಭಿಸಿದೆ. ಅಲ್ಲದೆ ತಂತ್ರಗಳನ್ನು ಹೆಣೆಯುವುದಕ್ಕೆ ಆರಂಭಿಸಿದೆ. ಈ ಹಿನ್ನೆಲೆಯಲ್ಲಿ ಮಾಜಿ ಸಚಿವರು ಬಯೋಪಿಕ್ಗೆ ಸಿದ್ಧರಾಮಯ್ಯ ಅವರನ್ನು ಒಪ್ಪಿಸುತ್ತಾರಾ? ಸಿದ್ಧರಾಮಯ್ಯ ಒಪ್ಪಿಗೆ ನೀಡುತ್ತಾರಾ? ಅನ್ನೋದು ಸದ್ಯ ಪ್ರಶ್ನೆಯಾಗಿಯೇ ಉಳಿದಿದೆ.


Click it and Unblock the Notifications











