ಬಾಹುಬಲಿ, ಕೆಜಿಎಫ್ 2 ಓಕೆ.. ಆದರೆ 'ತೋತಾಪುರಿ' ಹಾಗಲ್ಲ: ಜಗ್ಗೇಶ್ ಫುಲ್ ಜೋಷ್!
ದಸರಾ ಹಬ್ಬಕ್ಕೆ ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುವುದಕ್ಕೆ 'ತೋತಾಪುರಿ' ರೆಡಿಯಾಗಿ ನಿಂತಿದೆ. ನವರಸ ನಾಯಕ ಜಗ್ಗೇಶ್ ಇದ್ಮೇಲೆ ಆ ಸಿನಿಮಾದಲ್ಲಿ ಕಾಮಿಡಿಗೇನು ಬರವಿರಲ್ಲ. ಹಾಗೇ ಆ ಸಿನಿಮಾವನ್ನು ವಿಜಯ್ ಪ್ರಸಾದ್ ನಿರ್ದೇಶನ ಮಾಡಿದ್ಮೇಲೆ ನಾನ್ ಸ್ಟಾಪ್ ನಗು ಗ್ಯಾರಂಟಿ.
ಇದೇ ಗ್ಯಾರಂಟಿ ಮೇಲೆ 'ತೋತಾಪುರಿ' ತಂಡ ಗ್ರ್ಯಾಂಡ್ ಆಗಿ ಪ್ರೀ-ರಿಲೀಸ್ ಈವೆಂಟ್ ಅನ್ನು ಹಮ್ಮಿಕೊಂಡಿತ್ತು. ಜಗ್ಗೇಶ್ ವೇದಿಕೆ ಹತ್ತಿದ್ರೆ ಕೇಳೋದೇ ಬೇಡ. ಅವರ ಅನುಭವಗಳನ್ನು ಸ್ವಾರಸ್ಯಕರವಾಗಿ ಬಿಡುಗಡೆವಿಲ್ಲದಂತೆ ಹೇಳುತ್ತಲೇ ಇರುತ್ತಾರೆ. ಈ ಕಾರ್ಯಕ್ರಮದಲ್ಲಿ 'ತೋತಾಪುರಿ' ಸಿನಿಮಾದ ಬಗ್ಗೆ ಸಾಕಷ್ಟು ಮಾಹಿತಿ ಹಂಚಿಕೊಂಡಿದ್ದಾರೆ.
ಟ್ರೈಲರ್ ಸಾಂಗ್ ಸೂಪರ್ ಹಿಟ್
ವಿಜಯ್ ಪ್ರಸಾದ್ ನಿರ್ದೇಶನದ 'ತೋತಾಪುರಿ' ಸಿನಿಮಾ ಸಿನಿಪ್ರಿಯರಲ್ಲಿ ನಗುವಿನ ಬುಗ್ಗೆ ಎಬ್ಬಿಸಿದೆ. ಈಗಾಗಲೇ ರಿಲೀಸ್ ಆಗಿರೋ ಟ್ರೈಲರ್ ಹಾಗೂ ಸಾಂಗ್ಗಳು ಹಾಸ್ಯ ಪ್ರಿಯರಿಗೆ ಕಿಕ್ ಕೊಟ್ಟಿದೆ. ಇನ್ನು ಕೆಲವೇ ದಿನಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿದ್ದು, ಪ್ರೇಕ್ಷಕರನ್ನು ಎಷ್ಟು ರಂಜಿಸಬಹುದು ಅನ್ನೋ ಕುತೂಹಲವಿದೆ.

'ನೀರ್ ದೋಸೆ' ಬಳಿಕ ನವರಸ ನಾಯಕ ಜಗ್ಗೇಶ್ ಹಾಗೂ ವಿಜಯ್ ಪ್ರಸಾದ್ ಇಬ್ಬರ ಕಾಂಬಿನೇಷನ್ನಲ್ಲಿ ಮತ್ತೊಂದು ಸಿನಿಮಾ ಬರುತ್ತಿದೆ. 'ನೀರ್ ದೋಸೆ' ಬಿಡುಗಡೆಯಾದಾಗ, ಆ ಸಿನಿಮಾ 14 ಕೋಟಿ ರೂ. ಕಲೆಕ್ಷನ್ ಮಾಡಿತ್ತು ಅನ್ನೋನ್ನು ಜಗ್ಗೇಶ್ ಅವರೇ ಹೇಳಿಕೊಂಡಿದ್ದಾರೆ. ಅದು ಈಗಿನ ಕಾಲಕ್ಕೆ ಸುಮಾರು 50 ಕೋಟಿ ರೂ. ಅಂತಾರೆ. ಈಗ ತೋತಾಪುರಿ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ರಿಲೀಸ್ ಆಗುತ್ತಿದ್ದು, ಸಿನಿಮಾ ಬಗ್ಗೆ ಭರವಸೆ ದುಪ್ಪಟ್ಟಾಗಿದೆ.
ಕಾಮಿಡಿ ಸಿನಿಮಾವನ್ನು ಯಾರೂ ಪಾರ್ಟ 2 ಮಾಡಿಲ್ಲ
'ತೋತಾಪುರಿ' ಪ್ರೀ -ರಿಲೀಸ್ ಈವೆಂಟ್ನಲ್ಲಿ ಜಗ್ಗೇಶ್ ಬಾಹುಬಲಿ ಹಾಗೂ ಕೆಜಿಎಫ್ 2 ಸಿನಿಮಾ ಬಗ್ಗೆನೂ ಮನಬಿಚ್ಚಿ ಮಾತಾಡಿದ್ದಾರೆ. ಹಾಗೇ ಈ ಎರಡೂ ಸಿನಿಮಾಗಳ ಜೊತೆ ತಮ್ಮ 'ತೋತಾಪುರಿ' ಸಿನಿಮಾ ಬೇರೆ ಸಾಲಿನಲ್ಲಿ ನಿಲ್ಲುತ್ತೆ ಅಂತಾನೇ ಹೇಳಿದ್ದಾರೆ.
" ಈ ಚಿತ್ರ ನಾವೆಲ್ಲಾ 'ಬಾಹುಬಲಿ', ಎಲ್ಲಾ ದೊಡ್ಡ ಪ್ರಮಾಣದಲ್ಲಿ ಬೇರೆ ಭಾಷೆಗಳಲ್ಲಿ. ಆಮೇಲೆ ನಮ್ಮ ಕನ್ನಡದ ಹೆಮ್ಮೆಯ ಚಿತ್ರ ಕೆಜಿಎಫ್. ಇವೆರಡನ್ನೂ ಪಾರ್ಟ್ 1 ಹಾಗೂ ಪಾರ್ಟ್ 2 ಅಂತ ಮಾಡಿದ್ರು. ಆದರೆ, ಒಂದು ಕಾಮಿಡಿ ಸಿನಿಮಾ, ಎರಡೂ ಪಾರ್ಟ್ ಮಾಡುವಂತಹದ್ದು ಇದೂವರೆಗೂ ಇತಿಹಾಸದಲ್ಲಿ ಎಲ್ಲೂ ಆಗಿರಲಿಲ್ಲ. ಫಸ್ಟ್ ಟೈಮ್ ಆಗಿದೆ. ಸುಮ್ಮನೆ ಎರಡು ಪಾರ್ಟ್ ಮಾಡೋದಲ್ಲ. ನಾನು ಭರವಸೆಯನ್ನು ಕೊಡುತ್ತೇನೆ. ನೀವು ಎಷ್ಟು ನಗುತ್ತೀರೋ ಅಷ್ಟು ಮಜಾ ತಗೊಂಡು ನಗುತ್ತೀರಾ. ಕಡೆಗೆ ಒಂದು ಮೆಸೇಜ್ ಬಂದಾಗ ನಿಮ್ಮ ಮನಸ್ಸಿನಲ್ಲಿ ಒಂದು ಹುಳ ಹೋಗುತ್ತೆ." ಎಂದು ಜಗ್ಗೇಶ್ ಭರವಸೆ ಕೊಟ್ಟಿದ್ದಾರೆ.

ಜಗ್ಗೇಶ್ ಲಾಫಿಂಗ್ ಮಂತ್ರ
ನವರಸ ನಾಯಕ ಜಗ್ಗೇಶ್ ಕೇವಲ 'ತೋತಾಪುರಿ' ಸಿನಿಮಾ ಬಗ್ಗೆ ಅಷ್ಟೇ ಮಾತಾಡಿಲ್ಲ. ಸಿನಿಮಾದಲ್ಲಿ ನಟಿಸಲು ಕಾಮಿಡಿಯನ್ನೇ ಯಾಕೆ ಆಯ್ಕೆ ಮಾಡಿಕೊಂಡೆ ಅನ್ನೋದನ್ನು ಗುರುಗಳ ಉದಾಹರಣೆ ಕೊಟ್ಟು ವಿವರಿಸಿದ್ದಾರೆ.
"ನನ್ನ ಗುರುಗಳು ಒಬ್ಬರು ಬಂದ್ರು ಎಂಆರ್ಎಂ ಅಂತ. ಅವರು ನಿಂತ ಕಡೆ ನಿಲ್ಲುತ್ತಿರಲಿಲ್ಲ. ಅವರು ಎಂತಹ ಕಾಮಿಡಿ ಅಂದರೆ, ಅವರು ಒಂದು ಕಡೆ ನಿಲ್ಲುತ್ತಲೇ ಇರಲಿಲ್ಲ. ನಮಗೆ ಗಮನ ಬೋರ್ಡ್ ಮೇಲೆ ಬರುತ್ತಿರಲಿಲ್ಲ. ಮಾತಿನ ಮೇಲೆ ಗಮನ ಬರುತ್ತಿತ್ತು. ಮನೆಗೆ ಹೋದರೆ ಅವರ ಪಾಠ ನೆನಪಿನಲ್ಲಿ ಉಳಿಯುತ್ತಿತ್ತು. ನಾನು ಕಲಾವಿದ ಆದಾಗ ನಾನು ಕಲಿತಿದ್ದು ಏನು ಅಂದರೆ, ನಾನು ಮಾಡೋ ಪಾಠ ಪ್ರೀಚಿಂಗ್, ಟೀಚಿಂಗ್ ಆಗಬಾರದು. ಅದು ಲಾಂಫಿಂಗ್ ಆಗಬೇಕು. ಆಮೇಲೆ ಲರ್ನಿಂಗ್. ಇದನ್ನೇ ನಾನು ಮಾಡಿಕೊಂಡು ಬಂದಿರೋದು" ಎಂದು ಜಗ್ಗೇಶ್ ಜನರಿಗೆ ಹೇಳಿದ್ದಾರೆ.


Click it and Unblock the Notifications











