ಬೆಂಗಳೂರಿನ ಫೇಮಸ್ ಮಂತ್ರಿ ಮಾಲ್ ಇರೋ ಜಾಗದಲ್ಲಿ ಮೊದಲು ಏನಿತ್ತು? ಜಗ್ಗೇಶ್ ಹೇಳ್ತಾರೆ ನೋಡಿ!
ನವರಸ ನಾಯಕ ಜಗ್ಗೇಶ್ ಫುಲ್ ಜೋಷ್ನಲ್ಲಿದ್ದಾರೆ. ಬಹಳ ದಿನಗಳ ಬಳಿಕ ಜಗ್ಗೇಶ್ ಅಭಿನಯದ ಪಕ್ಕಾ ಕಾಮಿಡಿ ಸಿನಿಮಾವೊಂದು ಬಿಡುಗಡೆ ಸಜ್ಜಾಗಿದೆ. ಇದೇ ದಸರಾ ಹಬ್ಬಕ್ಕೆ 'ತೋತಾಪುರಿ' ಸಿನಿಮಾ ಗ್ರ್ಯಾಂಡ್ ಆಗಿ ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ.
ಪ್ಯಾನ್ ಇಂಡಿಯಾ ಸಿನಿಮಾ 'ತೋತಾಪುರಿ' ಬಿಡುಗಡೆ ಹಿನ್ನೆಲೆ ಪ್ರೀ-ರಿಲೀಸ್ ಈವೆಂಟ್ ಅನ್ನು ಬೆಂಗಳೂರಿನ ಫೇಮಸ್ ಮಂತ್ರಿ ಮಾಲ್ನಲ್ಲಿ ಇಟ್ಟುಕೊಂಡಿದ್ದರು. ಜಗ್ಗೇಶ್ಗೆ ಸಿನಿಮಾರಂಗಕ್ಕೆ ಕಾಲಿಡುವ ಮುನ್ನ ಇದೇ ಮಂತ್ರಿ ಮಾಲ್ ಇರುವ ಶೇಷಾದ್ರಿಪುರ, ಶ್ರೀರಾಮ್ಪುರ ಹಾಗೂ ಮಲ್ಲೇಶ್ವರದಲ್ಲಿ ಓಡಾಡಿಕೊಂಡಿದ್ದವರು. ಹೀಗಾಗಿ ಅವರಿಗೆ ಈ ಏರಿಯಾಗಳು ತೀರಾ ಚಿರಪರಿಚಿತ.
ಇದೇ 30-40 ವರ್ಷಗಳ ಹಿಂದಿನ ಬೆಂಗಳೂರು ಈಗ ಬದಲಾಗಿದೆ. ಜನಪ್ರಿಯ ಕಟ್ಟಡಗಳು ಕಳೆದು ಹೋಗಿ ಮಾಲ್ಗಳಾಗಿವೆ. ಬೆಂಗಳೂರಿನ ಸಂಪಿಗೆ ರಸ್ತೆಯಲ್ಲಿರುವ ಮಂತ್ರಿ ಮಾಲ್ ನಿರ್ಮಾಣಕ್ಕೂ ಮುನ್ನ ಏನಿತ್ತು? ಆ ಹಳೆ ಕಟ್ಟಡಕ್ಕೂ ತಮ್ಮ ಬದುಕಿಗೂ ಇರುವ ಲಿಂಕ್ ಏನು ಅನ್ನೋದನ್ನು ನವರಸ ನಾಯಕ ಜಗ್ಗೇಶ್ ತಮ್ಮದೇ ಶೈಲಿಯಲ್ಲಿ ವಿವರಿಸಿದ್ದಾರೆ.

ಮಂತ್ರಿ ಮಾಲ್ಗೂ ಮುನ್ನ ಏನಿತ್ತು?
" ಈ ಮಂತ್ರಿ ಮಾಲ್ ಆಗುವುದಕ್ಕೂ ಮುಂಚೆ, ಇಲ್ಲಿ ಅದ್ಭುತವಾದಂತಹ ಮಿಲ್ ಇತ್ತು. ಬಟ್ಟೆ ಮಿಲ್ ಇತ್ತು. ಅದರ ಹೆಸರು ರಾಜಾ ಮಿಲ್ ಅಂತ. ಆ ರಾಜಾ ಮಿಲ್ನ ಜಾಗದ ಊಟವನ್ನು ತಿಂದು ಈ ಜಗ್ಗೇಶ್ ಇಷ್ಟು ಬೆಳೆದಿರೋದು." ಎಂದು ಜಗ್ಗೇಶ್ ಆ ದಿನವನ್ನು ವಿವರಿಸಿದ್ದಾರೆ.

ಮಂತ್ರಿ ಮಾಲ್ಗೂ ಜಗ್ಗೇಶ್ಗೂ ಏನು ನಂಟು?
"ಇಲ್ಲಿ ನಮ್ಮ ಅಪ್ಪ ಪಾಪ ಕೂಲಿ ಕೆಲಸ ಮಾಡುತ್ತಿದ್ದರು. ಬಂಡಲಿಂಗ್ ಸೆಕ್ಷನ್ನಲ್ಲಿ ಇದ್ದರು . ನಮ್ಮ ಅಪ್ಪ ಇಲ್ಲಿ ಮೇನ್ ಗೇಟ್ ಒಂದಿತ್ತು. ಅಲ್ಲಿ ನಮ್ಮ ಅಮ್ಮ ಊಟ ತಗೊಂಡು ಬರೋಳು. ನ್ಯೂ ಕೃಷ್ಣ ಭವನ್ ಇದೆಯಲ್ಲ ಅಲ್ಲಿ. ನಾನು ನನ್ನ ಅಮ್ಮನ ಜೊತೆ ಕೈ ಹಿಡ್ಕೊಂಡು ಬರುತ್ತಿದೆ. ಆಗ ನಮ್ಮ ಅಮ್ಮ ಹೇಳೋಳು ಆವಾಗ ಮಗನೇ ನಿಮ್ಮ ಅಪ್ಪನ ತರ ನೀನು ಆಗಬಾರದು. ನೀನು ಎಕ್ಸ್ಟ್ರಾಡಿನರಿ ಆಗಬೇಕು ಅನ್ನೋಳು ನಮ್ಮ ಅಮ್ಮ." ಎಂದು ಅಂದು ಅಪ್ಪ ಇದೇ ಮಂತ್ರಿ ಇರೋ ಜಾಗದಲ್ಲಿ ಕೆಲಸ ಮಾಡಿದ್ದ ಅನುಭವವನ್ನು ಹಂಚಿಕೊಂಡಿದ್ದಾರೆ.

ಈ ಮಾಲ್ ಸುತ್ತಮುತ್ತ ಯಾವ್ಯಾವ ಥಿಯೇಟರ್ ಇತ್ತು?
"ನಾನು ಎಷ್ಟು ಪುಣ್ಯವಂತ ಅಂದರೆ, ದಿನ ಬೆಳಗಾದರೆ, ಶೇಷಾದ್ರಿಪುರಂ ಕಾಲೇಜು ನಮ್ಮದು. ಆಗ ನಾನು ಹೀರೊ ಸೈಕಲ್ ತಗೊಂಡು ಹೋಗುತ್ತಿದ್ದೆ. ಆಗ ಇಲ್ಲಿ ಸಂಪಿಗೆ ಥಿಯೇಟರ್ ಮಾತ್ರ ಇತ್ತು. ಅದು ಬಿಟ್ಟರೆ ನಟರಾಜ ಅಂತ ಥಿಯೇಟರ್ ಇತ್ತು. ಹಾಗೇ ಸೆಂಟ್ರಲ್ ಅಂತ ಒಂದು ಥಿಯೇಟರ್ ಇತ್ತು ನೀವು ನೋಡಿದ್ದೀರೋ ಇಲ್ಲವೋ ಗೊತ್ತಿಲ್ಲ. ಇಂತಹದ್ದೊಂದು ಜಾಗದಲ್ಲಿ ಇಂತಹದ್ದೊಂದು ಅದ್ಭುತ ಮಾಲ್ ಆಗಿ. ನಾನು ಇಲ್ಲಿ ನಿಂತುಕೊಂಡು ನನ್ನ ಸಿನಿಮಾ ನೋಡಿ ಅಂತ ಹೇಳುವ ಸೌಭಾಗ್ಯ ಬಂದಿದೆಯಲ್ಲಾ. ಆಗ ನಾನು ಅಂದುಕೊಂಡು ಇದು ಬೆಳವಣಿಗೆ ಅಂತ." ಎನ್ನುತ್ತಾರೆ ನವರಸ ನಾಯಕ.

'ತೋತಾಪುರಿ' ಎಲ್ಲೆಲ್ಲಿ ರಿಲೀಸ್ ?
" ತೋತಾಪುರಿ ಸಿನಿಮಾ ರಾಜ್ಯಾದ್ಯಂತ ಅಲ್ಲ. ಇಡೀ ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ. ಅಮೆರಿಕಾ, ಕೆನಡಾ, ಆಸ್ಟ್ರೇಲಿಯಾ, ಮಲೇಷ್ಯಾದಲ್ಲಿ ಎಲ್ಲಾ ಕಡೆ ಬಿಡುಗಡೆಯಾಗುತ್ತಿದೆ. ನಾನು ಕೆನಡಾಗೆ ಹೋಗಿ ಉದ್ಘಾಟನೆ ಮಾಡುತ್ತೇನೆ. ಯಾಕಂದ್ರೆ, ಸ್ವಾಮಿ ಕಾರ್ಯ ಹಾಗೂ ಸ್ವಕಾರ್ಯಗಳಿದ್ದಾವೆ. ನಮ್ಮ ತುಮಕೂರು ಜಿಲ್ಲೆಯವರು ಅಲ್ಲಿ ಎಂಪಿ ಆಗಿದ್ದಾರೆ. ಅಲ್ಲಿ ಅವರು ಕನ್ನಡದಲ್ಲಿ ಭಾಷಣ ಮಾಡಿದ್ದರು. ನಾವಿಬ್ಬರೂ ಅಲ್ಲಿ ಸೇರುತ್ತಿದ್ದೇವೆ." ಎಂದು ರಿಲೀಸ್ ಬಗ್ಗೆ ಮಾಹಿತಿ ನೀಡಿದ್ದಾರೆ.


Click it and Unblock the Notifications











