ಕಾರು ಮಾರಿ ಜನರಿಗೆ ಸೇವೆ ಮಾಡೋಣ ಎಂದಿದ್ದ ಸಂಚಾರಿ ವಿಜಯ್: ಜಗ್ಗೇಶ್
ಅದ್ಭುತ ಕಲಾವಿದ ಎಂದು ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡಿದ್ದ ನಟ ಸಂಚಾರಿ ವಿಜಯ್ ಒಳ್ಳೊಳ್ಳೆ ಸಿನಿಮಾ ಮಾಡ್ಬೇಕು, ಒಳ್ಳೆಯ ಪಾತ್ರಗಳನ್ನು ಮಾಡ್ಬೇಕು ಎನ್ನುವ ದಾರಿಯಲ್ಲಿ ಸಾಗಿದ್ದರು. ಸ್ಟಾರ್ ಆಗಿ ಮೆರೆಯಬೇಕು, ದುಡ್ಡು ಮಾಡಬೇಕು, ಐಷಾರಾಮಿ ಜೀವನ ಮಾಡ್ಬೇಕು ಎನ್ನುವ ವಿಭಾಗಕ್ಕೆ ಸೇರದ ನಟ.
Recommended Video
ಪ್ರವಾಹ, ಕೊರೊನಾ ಮೊದಲನೇ ಅಲೆ, ಎರಡನೇ ಅಲೆ ಸಂದರ್ಭದಲ್ಲಿ ಜನಸಾಮಾನ್ಯರ ಕಷ್ಟಕ್ಕೆ ಸ್ಪಂದಿಸಿದ ನಟ. ತನ್ನ ಬಳಿ ಕೊಟ್ಯಾಂತರ ರೂಪಾಯಿ ಇಲ್ಲವಾದರೂ ತನ್ನಿಂದ ಆದ ಹಾಗೂ ತನ್ನ ಕೈಯಿಂದ ಆಗುವಂತಹ ರೀತಿ ಸಹಾಯ ಮಾಡುತ್ತಿದ್ದರು. ಈಗಲೂ ಸಮಾಜಸೇವೆಯಲ್ಲಿ ತೊಡಗಿಕೊಂಡಿದ್ದಾಗಲೇ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ.
ಕನ್ನಡ ಚಿತ್ರರಂಗದಲ್ಲಿ ಸವ್ಯಸಾಚಿ ಎಂದೇ ಗುರುತಿಸಿಕೊಳ್ಳುತ್ತಿದ್ದ ಸಂಚಾರಿ ವಿಜಯ್, ಆರ್ಥಿಕವಾಗಿ ಬಹಳ ಕಷ್ಟದಲ್ಲಿದ್ದರು ಎಂದು ನಟ ಜಗ್ಗೇಶ್ ಹೇಳಿದ್ದಾರೆ. ಕಾರಿನ ಇಎಂಐ ಕಟ್ಟಲಾಗದ ಪರಿಸ್ಥಿತಿಯಲ್ಲಿಯೂ ಜನರಿಗೆ ಸೇವೆ ಮಾಡೋಣ ಎಂಬ ಆಲೋಚನೆ ಮಾಡ್ತಿದ್ದರು ಎಂಬ ವಿಚಾರ ಬಹಿರಂಗಪಡಿಸಿದ್ದಾರೆ. ಮುಂದೆ ಓದಿ...

ಅಪೋಲೋ ಆಸ್ಪತ್ರೆಗೆ ಭೇಟಿ ನೀಡಿದ ಜಗ್ಗೇಶ್
ಸಂಚಾರಿ ವಿಜಯ್ ಆರೋಗ್ಯ ಕುರಿತು ವಿಷಯ ತಿಳಿದ ನಟ ಜಗ್ಗೇಶ್, ಅಪೋಲೋ ಆಸ್ಪತ್ರೆಗೆ ಭೇಟಿ ನೀಡಿದರು. ಐಸಿಯು ಘಟಕದೊಳಗೆ ಹೋಗಿ ವಿಜಯ್ ಪರಿಸ್ಥಿತಿ ಅವಲೋಕಿಸಿದರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಜಗ್ಗೇಶ್ 'ಕಾರು ಮಾರಿ ಜನರ ಸೇವೆ ಮಾಡೋಣ' ಎಂದು ಹೇಳಿಕೊಂಡಿದ್ದ ಘಟನೆ ನೆನಪು ಮಾಡಿಕೊಂಡರು.

ಕನ್ನಡ ಚಿತ್ರರಂಗದ ಹೆಮ್ಮೆ
'ಸಂಚಾರಿ ವಿಜಯ್ ಇಂಜಿನಿಯರಿಂಗ್ ಪದವಿ ಮಾಡಿದ್ದಾರೆ. ವಿದ್ಯಾವಂತ ಯುವಕ ಆಗಿದ್ದರೂ ಕಲಾಸೇವೆ ಮಾಡ್ತೀನಿ ಅಂತ ಇಂಡಸ್ಟ್ರಿಗೆ ಬಂದಿದ್ದರು. ಯಾರ ಸಹಾಯವೂ ಇಲ್ಲದೇ ಬೆಳೆದ ಪ್ರತಿಭೆ. ಕನ್ನಡ ಚಿತ್ರರಂಗಕ್ಕೆ ರಾಷ್ಟ್ರ ಪ್ರಶಸ್ತಿ ತಂದುಕೊಟ್ಟ ಹೆಮ್ಮೆ ನಮಗೆ ಇದೆ. ತುಂಬಾ ಆಶಾವಾದಿ. ತನ್ನ ಬದುಕಿನಲ್ಲಿ ಅನೇಕ ಕೆಲಸಗಳನ್ನು ಮಾಡಬೇಕು ಎಂಬ ಆಸೆ ಹೊಂದಿದ್ದ' ಎಂದು ಜಗ್ಗೇಶ್ ಹೇಳಿದರು.

ಕಾರು ಇಎಂಐ ಕಟ್ಟಲು ಕಷ್ಟವಾಗಿತ್ತು
ಸಂಚಾರಿ ವಿಜಯ್ ಬಳಿ ಒಂದು ಕಾರು ಇದೆ. ಅದಕ್ಕೆ 25 ಸಾವಿರ ಇಎಂಐ ಕಟ್ಟಬೇಕು. ಇಎಂಐ ಪಾವತಿಸಿಲ್ಲ ಅಂದ್ರೆ ಕಾರು ಜಪ್ತಿ ಮಾಡ್ತಾರೆ ಎನ್ನುವ ಸಂದರ್ಭದಲ್ಲಿ ತನ್ನ ಸಹೋದರನ ಬಳಿ, ''ಕಟ್ಟೋದು ಬೇಡ, ಅದನ್ನು ಮಾರಿ, ಅದರಿಂದ ಬಂದ ಹಣದಲ್ಲಿ ಕೋವಿಡ್ನಿಂದ ಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡೋಣ'' ಎಂದಿದ್ದರಂತೆ.

ಕಲಾವಿದನ ಬದುಕು ಹೇಗಿದೆ ನೋಡಿ
''26 ಸಾವಿರ ರೂಪಾಯಿಗೆ ಕಷ್ಟಪಡುವ ನಮ್ಮ ಕಲಾವಿದರಿಗೆ ಕನ್ನಡ ಇಂಡಸ್ಟ್ರಿಯಲ್ಲಿ ಎಂತಹ ದುಸ್ಥಿತಿ ಇದೆ ಅಂತ ಯೋಚನೆ ಮಾಡಬೇಕು. ಸುಮ್ಮನೆ ಮೀಸೆ ತಿರುವಿಕೊಂಡು ನಾವು ಕನ್ನಡವರು, ನಾವು ಕನ್ನಡದವರು ಅಂತ ಸುತ್ತಾಡೋದು ಅಷ್ಟೆ'' ಎಂದು ಜಗ್ಗೇಶ್ ಬೇಸರ ವ್ಯಕ್ತಪಡಿಸಿದರು.


Click it and Unblock the Notifications











