"ಪುನೀತ್ ₹60 ಕೋಟಿ ವ್ಯವಹಾರ ಒಪ್ಪಿಕೊಂಡಿದ್ದೀನಿ ಎಂದ.. ಭಗವಂತ ಕೊಟ್ಟಿದ್ದನ್ನು ಬಿಟ್ಟು ಹೋದ"-ಜಗ್ಗೇಶ್
ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅಗಲಿ ನಾಲ್ಕು ವರ್ಷಗಳಾಗುತ್ತಿದೆ. ಆದರೂ ಅವರ ನೆನಪಿಸಿಕೊಳ್ಳದ ದಿನವಿಲ್ಲ. ಕನ್ನಡ ಚಿತ್ರರಂಗದ ಪ್ರತಿಯೊಬ್ಬ ನಟನೂ ಕೂಡ ಅಪ್ಪು ಜೊತೆಗಿನ ಒಂದೊಂದು ನೆನಪುಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಅಪ್ಪಂದಿರ ದಿನದಂದು ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಹೇಳಿದ ಮಾತುಗಳನ್ನು ನೆನಪಿಸಿಕೊಂಡಿದ್ದಾರೆ. ಅಪ್ಪಂದಿರ ದಿನಾಚರಣೆಯ ಕಾರ್ಯಕ್ರಮವೊಂದರಲ್ಲಿ ಪುನೀತ್ ರಾಜ್ಕುಮಾರ್ ಹೇಳಿದ ಮಾತುಗಳನ್ನು ಜಗ್ಗೇಶ್ ನೆನಪಿಸಿಕೊಂಡಿದ್ದಾರೆ.
ನವರಸ ನಾಯಕ ಜಗ್ಗೇಶ್ ಹಾಗೂ ಪುನೀತ್ ರಾಜ್ಕುಮಾರ್ ನಡುವೆ ಉತ್ತಮ ಬಾಂಧವ್ಯವಿತ್ತು. ಇಬ್ಬರೂ ರಾಯರ ಭಕ್ತರು. ಜಗ್ಗೇಶ್ ಹಾಗೂ ಪುನೀತ್ ರಾಜ್ಕುಮಾರ್ ಇಬ್ಬರೂ ಒಟ್ಟಿಗೆ ರಾಯರ ಸನ್ನಿಧಿಗೆ ಹೋಗಿ ಬಂದಿದ್ದಾರೆ. ಸಿನಿಮಾ ಕಾರ್ಯಕ್ರಮಗಳಲ್ಲಿ ವೇದಿಕೆಗಳನ್ನು ಹಂಚಿಕೊಂಡಿದ್ದಾರೆ. ಆಗಾಗ ಭೇಟಿಯಾಗುತ್ತಿತ್ತು. ಇಬ್ಬರ ನಡುವೆ ಮಾತುಕತೆ ನಡೆಯುತ್ತಿತ್ತು. ಆ ಮಟ್ಟಿಗೆ ಇಬ್ಬರೂ ಆತ್ಮೀಯರಾಗಿದ್ದರು.

ಪುನೀತ್ ರಾಜ್ಕುಮಾರ್ ಅಗಲುವ ಮುನ್ನ ಜಗ್ಗೇಶ್ ಬಳಿ ಹೇಳಿದ್ದ ಕೆಲವು ಮಾತುಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ವ್ಯವಹಾರವೂ ಕೂಡ ಸೇರಿಕೊಂಡಿದೆ. ಅಪ್ಪು ಅಗಲುವ ಮುನ್ನ ಸುಮಾರು ₹60 ಕೋಟಿಯಷ್ಟು ವ್ಯವಹಾರ ಒಪ್ಪಿಕೊಂಡಿದ್ದೇನೆ ಎಂದಿದ್ದರಂತೆ. ಅದಾದ ಕೆಲವೇ ದಿನಗಳಲ್ಲಿ ಅವರು ಎಲ್ಲವನ್ನೂ ಬಿಟ್ಟು ಹೋಗಿದ್ದರು ಎಂದು ಜಗ್ಗೇಶ್ ವೇದಿಕೆಯೊಂದರಲ್ಲಿ ಹೇಳಿದ್ದಾರೆ.
ನನಗೆ ಪುನೀತ್ ರಾಜ್ಕುಮಾರ್ ಸಂತ
"ವಿಶ್ವದಲ್ಲಿ ಏನಾದರೂ ಸಂಪಾದನೆ ಮಾಡಿ. ನೆನಪಿಡಿ ಭಗವಂತ ಎನ್ನುವಂತಹವನು ಒಂದೇ ಒಂದು ಚುಟಿಕೆ ಹೀಗೆ ಹೊಡೆದಾಗ ಎಲ್ಲವನ್ನೂ ಎಲ್ಲಿರುತ್ತೆ ಅಲ್ಲೇ ಬಿಟ್ಟು ತೊಲಗಿ ಹೋಗುತ್ತಿರಬೇಕು. ಯಾವುದು ನಮ್ಮದು? ಯಾವ ಹೆಸರು ನಮ್ಮದು? ಯಾವಾಗಲೂ ಕೂತುಕೊಂಡರೂ ನನ್ನ ಭಾಗಕ್ಕೆ ಪುನೀತ್ ದೊಡ್ಡ ಸಂತನಾಗಿ ಕಾಣಿಸಿಬಿಟ್ಟ. ಯಾಕೆ? ನನ್ನನ್ನು ಎಷ್ಟು ಪ್ರೀತಿಸುವಂತಹ ಜೀವ ಅದು." ಎಂದು ವೇದಿಕೆ ಮೇಲೆ ಜಗ್ಗೇಶ್ ಹೇಳಿದ್ದಾರೆ.
₹60 ಕೋಟಿ ವ್ಯವಹಾರ ಬಗ್ಗೆ ಹೇಳಿದ್ದ ಅಪ್ಪು
"ಪುನೀತ್ ನನ್ನ ಮುಂದೆ ಬಂದು ಹೇಳುತ್ತಾನೆ. ಅಣ್ಣ ನಿಮ್ಮ ಜೊತೆ ನಾನೊಂದು ವಿಷಯ ಹಂಚಿಕೊಳ್ಳಬೇಕು. ಏನು ಹೇಳಪ್ಪ ಅಂದೆ. ಅಣ್ಣ ನಾನು ₹60 ಕೋಟಿಯಷ್ಟು ವ್ಯವಹಾರವನ್ನು ಒಪ್ಪಿಕೊಂಡಿದ್ದೀನಿ. ನನಗೆ ಬಹಳ ಖುಷಿಯಾಗಿತ್ತು. ಈ ವಿಷಯ ಕೇಳಿದರೆ ನಿಮ್ಮ ಅಪ್ಪ ಎಷ್ಟು ಖುಷಿ ಪಡುತ್ತಾನೆ. ನಿಮ್ಮ ಅಪ್ಪ ಇರಬೇಕಾಗಿತ್ತು. ನಿಮ್ಮ ಅಪ್ಪ ಸಾವಿರ ರೂಪಾಯಿಗಳಲ್ಲಿ ತಗೊಂಡು ತಗೊಂಡು ವರ್ಷಾನುಗಟ್ಟಲೆ ಕೆಲಸ ಮಾಡಿ, ಯಾವಾಗೋ ಯಾರೋ ಒಂದು ಲಕ್ಷ ಕೊಟ್ಟಾಗ ಉಬ್ಬಿ ಹಿಗ್ಗಿ ಹೀರೆಕಾಯಿ ಆಗಿಬಿಟ್ಟಿದ್ದ. ಅವರ ಮಗ ನೀನು. ಈಗ ಎಷ್ಟು ಚೆನ್ನಾಗಿ ಸಂಪಾದನೆ ಮಾಡಿದ್ದೀಯ ಅಂದೆ." ಎಂದು ಅಪ್ಪು ಜೊತೆಗಿನ ಸಂಭಾಷಣೆಯನ್ನು ಹಂಚಿಕೊಂಡಿದ್ದಾರೆ.

ಬೆಳಗ್ಗೆ ಅವನು ಇಲ್ಲ
"ಒಂದು 20 ದಿನ ಆದ್ಮೇಲೆ ಅಣ್ಣ ನಾನು ಮಲ್ಲೇಶ್ವರಕ್ಕೆ ಬಂದಿದ್ದೀನಿ. ನಾನು ಎಲ್ಲಿ ಟ್ರೀಟ್ಮೆಂಟ್ ತೆಗೆದುಕೊಳ್ಳುತ್ತೇನೋ. ಅವನು ಅಲ್ಲಿಗೆ ಬಂದಿದ್ದ. ಏನಾಯ್ತಪ್ಪ ಅಂದೆ, ಇಲ್ಲ ಹೋಮಕ್ಕೆ ಕೂತಿದ್ದೆ. ಯಾಕೋ ತುಂಬಾನೇ ನೋವು ಬಂದುಬಿಟ್ಟಿದೆ ಎಂದು ಟ್ರೀಟ್ಮೆಂಟ್ ತಗೊಂಡ. ನಾನು ಆಚೆ ಹೋಗುವುದಕ್ಕೆ ಬಂದೆ. ಏನಕ್ಕೆ ಆಚೆ ಹೋಗುತ್ತೀರ ಅಂದ. ಟ್ವೀಟ್ಮೆಂಟ್ ತಗೋತಿದ್ದೀಯ ಅದಕ್ಕೆ ಅಂದೆ. ಅದಕ್ಕೆ ಅವನು ಬನ್ನಿ ಅಣ್ಣ ನಿಮಗೆ ಇರೋದೇ ನನಗೂ ಇರೋದು ಅಂದ. ಸರಿ ಅಂದು ನನಗೆ ಕತ್ತು. ಅವನಿಗೆ ಟ್ರೀಟ್ಮೆಂಟ್ ಅಯ್ತು. ಬೆಳಗ್ಗೆ ಅವನು ಇಲ್ಲ." ಎಂದು ಪುನೀತ್ ರಾಜ್ಕುಮಾರ್ ಬಗ್ಗೆ ಜಗ್ಗೇಶ್ ಹೇಳಿದ್ದಾರೆ.
ಭಗವಂತ ಕೊಟ್ಟಿದ್ದನ್ನು ಬಿಟ್ಟು ಹೋದ
"ಅವನು ಹೇಳಿದ ಕಥೆಗಳು ನೆನಪಾಯ್ತು. ₹60 ಕೋಟಿಯಷ್ಟು ವ್ಯವಹಾರ ಒಪ್ಪಿಕೊಂಡಿದ್ದೇನೆ ಅಂತ. ಒಂದು ಚುಟಿಕೆ ಭಗವಂತ ಕೊಟ್ಟಿದ್ದನ್ನು ಅವನು ಅವನ ಪಾಡಿಗೆ ಅಲ್ಲೇ ಬಿಟ್ಟು ಹೊರಟು ಹೋದ. ಇದೇ ಸ್ಥಿತಿ ಎಲ್ಲರಿಗೂ. ಇದೇ ಗತಿ ಎಲ್ಲರಿಗೂ. ನಮ್ಮದು ಯಾವುದೂ ಅಲ್ಲ. ನಮ್ಮದು ಏನೂ ಇಲ್ಲ." ಎಂದು ಪುನೀತ್ ರಾಜ್ಕುಮಾರ್ ಉದಾಹರಣೆಯಾಗಿಟ್ಟುಕೊಂಡು ಅಪ್ಪನನ್ನು ನವರಸ ನಾಯಕ ಜಗ್ಗೇಶ್ ನೆನಪಿಸಿಕೊಂಡಿದ್ದಾರೆ.


Click it and Unblock the Notifications











