ಅಂದು ಸಾವಿನ ದೃಶ್ಯದಲ್ಲಿ ಹೆದರಿ ನಟಿಸಿದ್ದರು, ಇಂದು ಅಂಜದೆ ಹೋದರು: ಹಿರಿಯ ನಟನನ್ನು ನೆನೆದ ಜಗ್ಗೇಶ್
ಹಿರಿಯ ನಟ ಹುಲಿವಾನ್ ಗಂಗಾಧರಯ್ಯ ಕೊರೊನಾ ವೈರಸ್ ಸೋಂಕಿಗೆ ಬಲಿಯಾಗಿದ್ದಾರೆ. 115ಕ್ಕೂ ಹೆಚ್ಚು ಸಿನಿಮಾ, 1,000ಕ್ಕೂ ಹೆಚ್ಚು ನಾಟಕ ಮತ್ತು ಕಿರುತೆರೆಯ ಧಾರಾವಾಹಿಗಳಲ್ಲಿ ನಟಿಸಿದ್ದ ಅವರು, ಚಿತ್ರರಂಗದ ಚಟುವಟಿಕೆಗಳಿಂದ ಸ್ವಲ್ಪ ದೂರವೇ ಉಳಿದು ಕೃಷಿಯಲ್ಲಿ ತೊಡಗಿಸಿಕೊಂಡಿದ್ದರು.
Recommended Video
ಜನಪ್ರಿಯ ಧಾರಾವಾಹಿ 'ಪ್ರೇಮಲೋಕ'ದಲ್ಲಿ ಅಭಿನಯಿಸುತ್ತಿದ್ದ ಅವರು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಹೀಗಾಗಿ ಅವರನ್ನು ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅವರು ಶುಕ್ರವಾರ ರಾತ್ರಿ ಮೃತಪಟ್ಟಿದ್ದರು. ತುಮಕೂರಿನ ಕುಣಿಗಲ್ ಸಮೀಪದಲ್ಲಿ ಅವರು ತೆಂಗಿನ ತೋಟವನ್ನು ಹೊಂದಿದ್ದರು. ನೀರಾ ಚಳವಳಿ ನಡೆದ ಸಂದರ್ಭದಲ್ಲಿ ಮುಂಚೂಣಿಯಲ್ಲಿದ್ದರು. ತೆಂಗಿನ ವಿವಿಧ ಬಗೆಯ ಉತ್ಪನ್ನಗಳ ತಯಾರಿಕೆಯಲ್ಲಿ ತೊಡಗಿಸಿಕೊಳ್ಳುವ ಮಾದರಿಯಾಗಿದ್ದರು. ಅವರ ಜತೆ 'ನೀರ್ ದೋಸೆ' ಸಿನಿಮಾದಲ್ಲಿ ನಟಿಸಿದ್ದ ನಟ ಜಗ್ಗೇಶ್ ವಿಶೇಷವಾಗಿ ಸ್ಮರಿಸಿಕೊಂಡಿದ್ದಾರೆ. ಮುಂದೆ ಓದಿ...

ಅಂದು ಧೈರ್ಯ ತುಂಬಿದ್ದೆ
ಹುಲಿವಾನ್ ಗಂಗಾಧರಯ್ಯ ನೀರ್ ದೋಸೆ ಚಿತ್ರದಲ್ಲಿ ನನ್ನ ತಂದೆ ಪಾತ್ರದಲ್ಲಿ ನಟಿಸಿದ್ದರು. ಬಹಳ ಸಜ್ಜನ. ಕೃಷಿ ಬಗ್ಗೆ ಅಪಾರ ಜ್ಞಾನವಿದ್ದವರು. ಕುಣಿಗಲ್ ಸಮೀಪ ಜಮೀನುಕೊಂಡು ಕೃಷಿಯಲ್ಲಿ ತೊಡಗಿದ್ದರು. ಅವರ ಸಾವಿನ ದೃಶ್ಯದಲ್ಲಿ ಬಹಳ ಹೆದರಿದ್ದರು. ನಾನು ದುರ್ಗಾ ರುದ್ರ ಶ್ಲೋಕ ಹೇಳಿ ತಂಗಿನಕಾಯಿ ನೀವಾಳಿಸಿ ಒಡೆದು ದೈರ್ಯ ತುಂಬಿದ್ದೆ. ದೌರ್ಭಾಗ್ಯ ಈ ಸುದ್ದಿ ಕೇಳಿ ದುಃಖವಾಯಿತು ಎಂದು ಜಗ್ಗೇಶ್ ಬೇಸರ ವ್ಯಕ್ತಪಡಿಸಿದ್ದಾರೆ.

ಕಲಾವಿದ ಮಾತ್ರ ಉಳಿಯುತ್ತಾನೆ
ಬಂದಾಗ ನೀ ಅಪರಿಚಿತ, ಹೋದಾಗ ಜಗತ್ತಿಗೆ ಪರಿಚಿತ. ಬಾಧಕನಾಗಿ 100ವರ್ಷ ಬಾಳಿಗಿಂತ ಸಾಧಕನಾಗಿ ಅಲ್ಪ ಆಯುಷ್ಯವೆ ಶ್ರೇಷ್ಠ. ಭೂಮಿಗೆ ಭಾರವಾಗಿ ತಾಮಸ ಗುಣ ಕೋಟಿ ಇದೆ. ನಿಮ್ಮಂಥ ಸತ್ವಗುಣ ಕೆಲವೇ ಮಂದಿಯಲ್ಲಿ ಇತ್ತು. ನಿಮ್ಮ ನೆರಳು ನಿಮ್ಮ ಗುಣ ಸಾಧನೆಯಿಂದ ನಮ್ಮಲ್ಲಿಯೇ ಉಳಿದಿದೆ. ದೇಹ ಹೋದರು ನೆನಪು ಉಳಿದಿದೆ. ಹಾಗೆ ಉಳಿಯುವನು ಕಲಾವಿದ ಮಾತ್ರ. ಹೋಗಿ ಬಾ ಬೆಳಕೆ ಹೋಗಿ ಬಾ ಎಂದು 'ನೀರ್ ದೋಸೆ' ಚಿತ್ರದಲ್ಲಿ ತಂದೆಯ ಸಾವಿನ ಸಂದರ್ಭದಲ್ಲಿ ಬರುವ ಹಾಡಿನ ಸಾಲನ್ನು ಅವರು ನೆನಪಿಸಿಕೊಂಡಿದ್ದಾರೆ.

ಹಾಡು ಬಿಡುಗಡೆಯಾದ ದಿನವೇ ಸಾವು
ಕಾಕತಾಳೀಯ ಎಂಬಂತೆ 'ನೀರ್ ದೋಸೆ' ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ನಿರ್ದೇಶನದಲ್ಲಿ ಚಿತ್ರದ ನಿರ್ದೇಶಕ ವಿಜಯಪ್ರಸಾದ್ ಬರೆದ ಭಾವಪೂರ್ಣ ಸಾಹಿತ್ಯದ 'ಹೋಗಿ ಬಾ ಬೆಳಕೇ...' ಹಾಡು ಯೂಟ್ಯೂಬ್ನಲ್ಲಿ ಶುಕ್ರವಾರವೇ ಬಿಡುಗಡೆಯಾಗಿದೆ. ಇಡೀ ಹಾಡು ಹುಲಿವಾನ್ ಗಂಗಾಧರಯ್ಯ ಅವರು ನಿರ್ವಹಿಸಿದ್ದ ಪಾತ್ರದ ಸಾವಿನ ಮೇಲೆಯೇ ಚಿತ್ರಿತವಾಗಿತ್ತು. ಅದನ್ನು ಜಗ್ಗೇಶ್ ಅಭಿಮಾನಿಯೊಬ್ಬರು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ.

ಇಂದು ಅಂಜದೆ ನಟಿಸಿ ಹೋದರು
ಈ ಹಾಡನ್ನು ವೀಕ್ಷಿಸಿದ ಬಳಿಕ ಜಗ್ಗೇಶ್ ಮತ್ತಷ್ಟು ಭಾವುಕರಾಗಿದ್ದಾರೆ. 'ನನ್ನ ಕಣ್ಣಿಂದ ಅನುಮತಿಯಿಲ್ಲದೆ ಹರಿಯಿತು ಕಣ್ಣೀರು. ಸಾವಿಗೆ ಹೆದರುತ್ತಿದ್ದ ಮನುಷ್ಯ ಹೆದರಿ ನಟಿಸಿದ್ದರು. ಅವರಿಗೆ ಧೈರ್ಯ ಸಾಂತ್ವನ ಹೇಳಿದ್ದ ಆ ದಿನ ಮತ್ತೆ ನೆನಪಾಗಿ ದುಃಖಿತನಾದೆ. ಅಂದು ನಟಿಸುವಾಗ ಸಾವಿಗೆ ಅಂಜಿದರು. ಇಂದು ಅಂಜದೆ ಸಾವಿನ ನಟನೆ ನೈಜವಾಗಿ ನಟಿಸಿ ಹೋಗಿಬಿಟ್ಟರು. ಈ ಸತ್ಯ ಅರಿತ ಮೇಲೆಯೂ ಮನುಷ್ಯ ಬದಲಾಗದಿದ್ದರೆ ವ್ಯರ್ಥ ಮನುಜನ್ಮ' ಎಂದು ಜಗ್ಗೇಶ್ ಹೇಳಿದ್ದಾರೆ.


Click it and Unblock the Notifications











