ಅಣ್ಣಾವ್ರ ಮೊದಲ ಭೇಟಿ ಹೇಗಿತ್ತು?: ಜಗ್ಗೇಶ್ ಹಂಚಿಕೊಂಡ ಸವಿ ನೆನಪು
ಡಾ. ರಾಜ್ ಕುಮಾರ್ ಕುರಿತು ಸದಾ ನೆನಪಿಸಿಕೊಳ್ಳುವವರಲ್ಲಿ ನವರಸ ನಾಯಕ ಜಗ್ಗೇಶ್ ಒಬ್ಬರು. ಅವರ ಸಾಮಾಜಿಕ ಜಾಲತಾಣಗಳ ಪೋಸ್ಟ್ಗಳಲ್ಲಿ ರಾಘವೇಂದ್ರ ರಾಯರು ಮತ್ತು ಡಾ. ರಾಜ್ ಕುಮಾರ್ ಹೆಸರು ಸಾಮಾನ್ಯ. ರಾಜ್ ಕುಮಾರ್ ಅವರನ್ನು ಭೇಟಿ ಮಾಡಿದ, ಅವರಿಂದ ಮೆಚ್ಚುಗೆ ಪಡೆದ, ಅವರೊಂದಿಗೆ ಕಳೆದ ಅಮೂಲ್ಯ ಘಟನೆಗಳನ್ನು ಆಗಾಗ್ಗೆ ಹಂಚಿಕೊಳ್ಳುತ್ತಿರುತ್ತಾರೆ.
ರಾಜ್ ಕುಮಾರ್ ಅವರನ್ನು ನೋಡಲು ಅವರನ್ನು ಮಾತನಾಡಿಸಲು ಸಾಹಸ ಪಟ್ಟವರಲ್ಲಿ ಜಗ್ಗೇಶ್ ಕೂಡ ಒಬ್ಬರು. ಅವರ ಮನೆಯ ಬಳಿ ನಿಂತು ಅವರನ್ನು ಕಾಣಲು ಒದ್ದಾಡಿದ್ದರು. ಆದರೆ ನಂತರ ಜಗ್ಗೇಶ್ ಅವರಲ್ಲಿನ ಪ್ರತಿಭೆ ಕಂಡು ಸ್ವತಃ ರಾಜ್ ಕುಮಾರ್ ಬೆರಗಾಗಿದ್ದರು. ಪ್ರಶಂಸೆಯ ಮಾತುಗಳನ್ನಾಡಿದ್ದರು. ಅಷ್ಟರಮಟ್ಟಿಗೆ ಜಗ್ಗೇಶ್ ಚಿತ್ರರಂಗದಲ್ಲಿ ನಂತರ ಗುರುತಿಸಿಕೊಂಡರು. ರಾಜ್ ಕುಮಾರ್ ಅವರನ್ನು ನೋಡಿದ ಮೊದಲ ಸಲದ ನೆನಪನ್ನು ಜಗ್ಗೇಶ್ ಹೇಳಿಕೊಂಡಿದ್ದಾರೆ. ಮುಂದೆ ಓದಿ...

ದುಡ್ಡು ಕದ್ದು ಮದರಾಸಿಗೆ ಹೋದೆ
1979ಯಲ್ಲಿ ನಟ ಆಗುವ ಕನಸು ಹೊತ್ತು... ಅಂದಿನ ಪ್ರಜಾಮತ ವಾರಪತ್ರಿಕೆಯಲ್ಲಿ ಪ್ರಕಟವಾಗಿದ್ದ ರಾಜಣ್ಣನ ವಿಳಾಸ ಹರಿದು ಜೇಬಲ್ಲಿ ಇಟ್ಟು..ಅಮ್ಮನ ಪರ್ಸ್ನಲ್ಲಿ 800 ರೂ. ಕದ್ದು ಮದರಾಸಿಗೆ ರೈಲಿನಲ್ಲಿ ಹೋಗಿ, 23B ಬಸ್ಸು ಹತ್ತಿ ಟ್ರಸ್ಟ್ ಪುರಂ (ಚೆನ್ನೈನ ಪ್ರದೇಶ) ಹೋಗಿ ಅಣ್ಣನ ಮನೆ ಹುಡುಕುವ ಮುನ್ನ ಮುರುಗನ ಆಲಯಕ್ಕೆ ಹೋಗಿ ನಮಸ್ಕರಿಸಿದ್ದೆ. ಬಳಿಕ ಅಣ್ಣನ ಈ ಮನೆಮುಂದೆ ನಿಂತೆ! ಎಂದು ಜಗ್ಗೇಶ್ ತಿಳಿಸಿದ್ದಾರೆ.

ಸಾಮಾನ್ಯನಂತೆ ಪೂಜೆ ಮಾಡುತ್ತಿದ್ದರು
ಸುಮಾರು ಹೊತ್ತು ಕಾದರೂ ಯಾರೂ ಕಾಣಲಿಲ್ಲ! ಅಣ್ಣನ ನೋಡಲೇಬೇಕು ಎಂದು ಹಟಮುನಿಯಂತೆ ಗೇಟಿನ ಮುಂದೆ ನಿಂತೆ.. ಇದ್ದಕ್ಕಿದ್ದಂತೆ ಮಿಂಚು ಮೋಡದಂತೆ ನನ್ನ ಇಷ್ಟದ ದೇವರು ಬಂದುಬಿಟ್ಟರು! ಆದರೆ ಪರದೆ ಮೇಲೆ ನೋಡಿದಂತೆ ಅಲ್ಲ. ಬದಲಾಗಿ ಟವಲ್ ಸುತ್ತಿ ಸಾಮಾನ್ಯನಂತೆ ತುಳಸಿಕಟ್ಟೆಗೆ ನಮಸ್ಕಾರ ಮಾಡುತ್ತಿದ್ದರು!
ಆನಂದ ತಡೆಯಲಾಗಲಿಲ್ಲಾ. ಅವರನ್ನೆ ಮೂಕವಿಸ್ಮಿತನಾಗಿ ನೋಡುತ್ತ ನಿಂತುಬಿಟ್ಟೆ! ಎಂದಿದ್ದಾರೆ.

ಮನೆಬಿಟ್ಟು ಬಂದದ್ದು ತಪ್ಪು ಎಂದರು
ತಡೆಯಲಾಗದೆ ಜೋರಾಗಿ ಅಣ್ಣ ಅಂತ ಕೂಗಿದೆ. ಅವರು ನನ್ನ ನೋಡುತ್ತ ಒಳಹೋದರು. ನಂತರ ಬಂದದ್ದು ಒಬ್ಬ ಎತ್ತರದ ವ್ಯಕ್ತಿ. ಬಂದ ಕಾರಣ ಕೇಳಿದ. ನಟನಾಗಲು ಬಂದೆ ಎಂದು ಹೇಳಿದೆ. ಅದಕ್ಕೆ ಅವನು ಯಾವ ಊರು? ಅಂದ. ತುರುವೇಕೆರೆ ಪಕ್ಕ ಮಾಯಸಂದ್ರ ಅಂದೆ. ಅದಕ್ಕೆ ಅವನು, 'ಮಗು ನಾನು ತಿಪಟೂರಿನವನು. ನೀನು ಮನೆಬಿಟ್ಟು ಬಂದದ್ದು ತಪ್ಪು. ಈಗ ಅಣ್ಣನ ಚಿತ್ರೀಕರಣಕ್ಕೆ ತಡವಾಗಿದೆ ಅವರು ಹೊರಡಬೇಕು. ನಿಲ್ಲಬೇಡ ಹೊರಡು' ಎಂದು ಗದರಿದ. ನಾನು ನಟನಾದ ಮೇಲೆ ಅವನನ್ನು ಗುರುತಿಸಿದೆ. ಅವನೇ ತಿಪಟೂರು ಸಿದ್ದರಾಮಯ್ಯ ಎಂದು ನೆನಪಿಸಿಕೊಂಡಿದ್ದಾರೆ.

ಚಪ್ಪಾಳೆ ತಟ್ಟಿದ
ಇದನ್ನು ಅವನಿಗೆ 1993ರಲ್ಲಿ 'ಇಂದ್ರನ ಗೆದ್ದ ನರೇಂದ್ರ' ಚಿತ್ರೀಕರಣದಲ್ಲಿ ನೆನಪಿಸಿದಾಗ ಕೈಹಿಡಿದು ಜೋರಾಗಿ ನಕ್ಕುಬಿಟ್ಟ. ಎಲ್ಲಿಂದ ಎಲ್ಲಿಗೆ ಜಗ್ಗೇಶ್ ಎಂದು ಚಪ್ಪಾಳೆ ತಟ್ಟಿದ. ಆದರೆ ರಾಜಣ್ಣ ಅವರನ್ನು ಮಾತನಾಡಿಸಲು ಅಂದು ತಪ್ಪಿದ ಅವಕಾಶವನ್ನು ಮುಂದೆ ರಾಯರು, ರಾಜಣ್ಣ ಜೊತೆ 18 ವರ್ಷ ಕಳೆಯುವ ಯೋಗ ನೀಡಿದರು. ಧನ್ಯೋಸ್ಮಿ ಎಂದು ಜಗ್ಗೇಶ್ ವಿವರಿಸಿದ್ದಾರೆ.

ಆ ಮನೆ ರಾಯರ ಮಂತ್ರಾಲಯದಂತೆ
ನನ್ನ ದೇವರ ಆ ಮನೆ ಮುಂದೆ ನಟನಾಗಿ ಮತ್ತೆ ನಾನು ಹೋಗಿ ನಿಂತ ಕ್ಷಣ. ಕಲಾದೇವರು ಪೂಜಿಸಿದ ದೇವರಮನೆ, ಅವರು ಕೂತು ವಿಶ್ರಮಿಸಿದ ವರಾಂಡ, ಅವರ ಅಡುಗೆ ಮನೆ ನೋಡಿ ಆನಂದಿಸಿ. ನೂರಾರು ಕನ್ನಡ ಚಿತ್ರಗಳಲ್ಲಿ ನಟಿಸಲು ಪ್ರೇರೇಪಿಸಿದ ಆ ಮನೆ ನನಗೆ ರಾಯರ ಮಂತ್ರಾಲಯದಂತೆ ಭಾಸವಾಯಿತು. ರಾಜಣ್ಣನ ಎಲ್ಲಾ ಮಕ್ಕಳು ಹುಟ್ಟಿ ಆಡಿ ನಲಿದ ನಂದಗೋಕುಲ ಎಂದು ಫೋಟೊಗಳನ್ನು ಹಂಚಿಕೊಂಡಿದ್ದಾರೆ.

ಅಮರ ಹಳೆ ನೆನಪು
ಇನ್ನೊಂದು ಚಿತ್ರ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ರಾಜಣ್ಣ ಕೂರುತ್ತಿದ್ದ ಆಸನ. ಅಣ್ಣ ಮೇಲೆ ಕೂತಾಗ ಅವರ ಪಾದದ ಬಳಿ ನಾನು ಕೂತಂತ ಜಾಗ. ಕಳೆದ ಶ್ರೇಷ್ಠ ಸಮಯಗಳನ್ನು ನೆನಪಿಸಿಕೊಳ್ಳುವುದು ಮನಸ್ಸಿಗೆ ಅತೀವ ಆನಂದ ಕೊಡುತ್ತದೆ. ಜಗ್ಗೇಶ್ ಬದುಕಿನ ಮರೆಯಲಾಗದ ಆ ದಿನಗಳು... ಅಮರ ಹಳೆ ನೆನಪು ಎಂದು ಜಗ್ಗೇಶ್ ಮಧುರ ಕ್ಷಣಗಳನ್ನು ಸ್ಮರಿಸಿಕೊಂಡಿದ್ದಾರೆ.


Click it and Unblock the Notifications











