ಕೋಮಲ್ ಮದುವೆಯಾದ 20 ದಿನದಲ್ಲಿ ಈ ಘಟನೆ ನಡೆದಿತ್ತು: ಜಗ್ಗೇಶ್ ಹಂಚಿಕೊಂಡ ನೋವಿನ ಕಥೆ
ನಟ ಕೋಮಲ್ ಅವರನ್ನು ಚಿತ್ರರಂಗಕ್ಕೆ ತಂದು ಬೆಳೆಸುವ ವಿಚಾರದಲ್ಲಿ ಅವರ ಅಣ್ಣ ಜಗ್ಗೇಶ್ ಸಾಕಷ್ಟು ಪ್ರಯತ್ನ ಮಾಡಿದ್ದರು. ಇಬ್ಬರ ನಡುವೆ ಹತ್ತು ವರ್ಷದ ವ್ಯತ್ಯಾಸ. ಪರಿಮಳಾ ಅವರೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದ ನಟ ಜಗ್ಗೇಶ್, ಅನೇಕ ಎಡರು ತೊಡರುಗಳ ನಡುವೆ ಮದುವೆಯಾಗಿದ್ದು ಆಸಕ್ತಿಕರ ಕಥೆ. ಚಿತ್ರರಂಗದಲ್ಲಿ ಇನ್ನೂ ಅವಕಾಶಗಳು ಸಿಗದೆ ಪರದಾಡುವ ಸಮಯದಲ್ಲಿಯೇ ಜಗ್ಗೇಶ್ ಮದುವೆಯಾಗಿದ್ದರು.
Recommended Video
ಅವರ ಸಹೋದರ ಕೋಮಲ್ ಅವರ ಮದುವೆಯೂ ಬೇಗನೆ ನಡೆದಿತ್ತು. ವೈವಾಹಿಕ ಜೀವನಕ್ಕೆ ಕಾಲಿರಿಸುವ ವೇಳೆ ಅವರಿಗಿನ್ನೂ 20 ವರ್ಷ. ಅಂದರೆ 1993ರ ಇಸವಿ. ಆಗ ಅವರು ಜಗ್ಗೇಶ್ ನಟನೆಯ 'ಸೂಪರ್ ನನ್ಮಗ' ಚಿತ್ರದಲ್ಲಿ ಎರಡನೆಯ ನಾಯಕನಾಗಿ ಪರಿಚಯವಾಗಿ ಒಂದು ವರ್ಷ ಕಳೆದಿತ್ತು. ಆದರೆ ಕೋಮಲ್ ಅವರ ಮದುವೆಯಾಗಿ ಕೆಲವೇ ದಿನಗಳಲ್ಲಿ ಅವರ ಮನೆಯಲ್ಲಿ ಕಹಿ ಘಟನೆ ನಡೆದಿತ್ತು. ಅದನ್ನು ಜಗ್ಗೇಶ್ ನೆನಪಿಸಿಕೊಂಡಿದ್ದಾರೆ. ಮುಂದೆ ಓದಿ...

ಅಮ್ಮನ ಕೊನೆಯ ಆಸೆ
ಕೋಮಲ್ ಮದುವೆ ಬಹಳ ತರಾತುರಿಯಲ್ಲಿ ನಡೆದಿತ್ತು. ಅದು ಅಮ್ಮನ ಕೊನೆಯ ಆಸೆಯಾಗಿತ್ತು ಎಂಬುದನ್ನು ಜಗ್ಗೇಶ್ ತಿಳಿಸಿದ್ದಾರೆ. ಹಾಗೆಯೇ ಕೊನೆಯ ಆಸೆ ಈಡೇರಿದ ಬಳಿಕ ಅಮ್ಮ ನಮ್ಮನ್ನು ಅಗಲಿದರು ಎಂಬ ನೋವಿನ ಸಂಗತಿಯನ್ನು ಅಮ್ಮಂದಿರ ದಿನದ ಸಂದರ್ಭದಲ್ಲಿ ಹಂಚಿಕೊಂಡಿದ್ದಾರೆ.

ಒಂದೇ ವಾರದಲ್ಲಿ ಮದುವೆ
'ಬೇಗ ಕೋಮಲ್ ಮದುವೆ ಮಾಡು ಈಶ (ಜಗ್ಗೇಶ್ ಮೊದಲ ಹೆಸರು ಈಶ್ವರ್). ಯಾಕೋ ಶಿವ ಕರೆದಂತೆ ಆಗುತ್ತಿದೆ' ಎಂಬುದಾಗಿ ತಾಯಿ ನಂಜಮ್ಮ ಪದೇ ಪದೇ ಹೇಳತೊಡಗಿದ್ದರು. ಕೊನೆಗೆ ಒಂದೇ ವಾರದಲ್ಲಿ ಸ್ನೇಹಿತನ ತಂಗಿಯನ್ನು ಒಪ್ಪಿಸಿ 20 ವರ್ಷದ ಕೋಮಲ್ಗೆ ಮದುವೆ ಮಾಡಿಸಿಬಿಟ್ಟೆ ಎಂದು ಜಗ್ಗೇಶ್ ಸ್ಮರಿಸಿಕೊಂಡಿದ್ದಾರೆ.

ಚಪ್ಪಾಳೆ ತಟ್ಟಿ ಆನಂದಿಸಿದ್ದರು
ಮಗ ಕೋಮಲ್ ಮದುವೆಯನ್ನು ತಾಯಿ ಚಪ್ಪಾಳೆ ತಟ್ಟಿ ಆನಂದಿಸಿದ್ದರು. ಅವನ ಮದುವೆಯಾದ 20 ದಿನಕ್ಕೆ ದೇಹತ್ಯಾಗ ಮಾಡಿಬಿಟ್ಟರು. ಇಂದು ಆಕಸ್ಮಿಕವಾಗಿ ಸಿಕ್ಕ ಅಮ್ಮನ ಫೋಟೊ ನನ್ನನ್ನು ಭಾವುಕನನ್ನಾಗಿಸಿತು ಎಂದು ಕೋಮಲ್ ಮದುವೆಯ ವೇಳೆ ಅಮ್ಮ ಚಪ್ಪಾಳೆ ತಟ್ಟುವ ಫೋಟೊ ಹಂಚಿಕೊಂಡಿದ್ದಾರೆ.

ಬಂಡಿ ಬಿಟ್ಟು ಹೋದರು...
ಹೀಗಿರದಿರಲಿ ಅಮ್ಮನ ದಿನ. ಅಮ್ಮ ಕೂರಿಸಿ ಎಳೆದ ಬಂಡಿ ಬಹುದೂರ ಸಾಗಿ, ಬಂಡಿಯ ಪಯಣಿಗ ಬೆಳೆದು ಹಿರಿಯನಾಗಿ, ಅಮ್ಮ ಎಳೆದ ಬಂಡಿ ಹಳತಾಯಿತೆಂದು, ಹೊಸಬಂಡಿ ಏರಿ ಅಮ್ಮನ ನಡುರಸ್ತೆಯಲ್ಲೆ ಬಿಟ್ಟರು. ಅವರವರಿಗೆ ಅವರ ಹೊಸಬಂಡಿ ಮುಖ್ಯವಾಗಿ ಮುಖ್ಯರಸ್ತೆಯಲ್ಲೆ ಉಳಿದಳು ಅಮ್ಮ ರಸ್ತೆಯಲ್ಲೆ ಬಿಟ್ಟುಹೋದರು. ಬಿಟ್ಟವರ ಶಪಿಸದ ತ್ಯಾಗಮಯಿ ಎಂದು ಭಾವುಕ ಸಾಲುಗಳನ್ನು ಜಗ್ಗೇಶ್ ಬರೆದಿದ್ದಾರೆ.

ಏಳು ಲೋಕ ಬೇಧಿಸುವ ಶಕ್ತಿ
ಯಾವ ದೇವರು ದೇವಸ್ಥಾನ ಮಠ ಸಿಕ್ಕರೆ ಅವಳು ಬೇಡುತ್ತಿದ್ದದ್ದು ಒಂದೇ, ದೇವರೆ ನನ್ನ ಮಗನಿಗೆ ಯಶಸ್ಸುಕೊಡು ಎಂದು. ಅವಳು ಕಷ್ಟಪಟ್ಟು ಬೇಡಿದಳು, ನಾನು ನಿರಾಯಾಸವಾಗಿ ದಡಮುಟ್ಟಿದೆ. ಇದರ ಅರ್ಥ ಒಬ್ಬ ತಾಯಿ ಆಶೀರ್ವಾದ 7 ಲೋಕ ಬೇಧಿಸುವ ಶಕ್ತಿ ನೀಡುತ್ತದೆ. ನಾನು ಸ್ವಯಂ ಅರಿತದ್ದು ಒಂದೇ, ತಾಯಿಗಿಂತ ಮತ್ತೊಬ್ಬ ದೇವರು ಇರಲು ಸಾಧ್ಯವಿಲ್ಲ. ತಾಯಿದೇವರು ಎಂದು ತಾಯಿಯನ್ನು ನೆನಪಿಸಿಕೊಂಡಿದ್ದಾರೆ.

ಅವಳ ಹೆಸರಲ್ಲಿ ವಡೆ ಪಾಯಸ ಪ್ರೀತಿ ಬೇಡ
ಅಮ್ಮ ಇರುವ ಅದೃಷ್ಟವಂತರೆ, ಅಮ್ಮನೆ ಈಜಗಕ್ಕೆ ಪರಿಚಯಿಸಿದ ದೇವರು. ಕ್ಷಣಿಕ ಸುಖದ ಮಾಯೆ, ಹಣ-ಕೀರ್ತಿ ಏನೇ ಗಳಿಸಿದರು ಅಮ್ಮ ಜೀವಕೊಟ್ಟ ಮೇಲೆ ಜಗತ್ತು ಸಿಕ್ಕಿದ್ದು. ಇದ್ದಾಗಲೆ ಅವಳಿಗಾಗಿ ಬಾಳಿ. ಸತ್ತಮೇಲೆ ಪೋಟೋ ಮುಂದೆ ಅವಳ ಹೆಸರಲ್ಲಿ ವಡೆ ಪಾಯಸ ಪ್ರೀತಿಬೇಡ! ಹೋದ ಮೇಲೆ ಮತ್ತೆ ಸಿಗಳು ಆ ದೇವತೆ! ಅಮ್ಮನ ವಸ್ತು ನನ್ನ ಬಳಿ ಜೋಪಾನವಾಗಿವೆ ಎಂದು ಜಗ್ಗೇಶ್ ತಿಳಿಸಿದ್ದಾರೆ.


Click it and Unblock the Notifications











