"ಹನುಮಂತ ಕನ್ನಡ ಕಲಿಪುಂಗವ ಇಷ್ಟು ಅರ್ಥವಾದರೆ ಸಾಕಲ್ಲವೆ ಸಾರ್"; ನಟ ಜಗ್ಗೇಶ್
ಕನ್ನಡ ಭಾಷೆಯ ಕುರಿತು ತಮಿಳು ನಟ, ರಾಜಕಾರಣಿ ಕಮಲ್ ಹಾಸನ್ ಹೇಳಿಗೆ ಭಾರೀ ಚರ್ಚೆ ಹುಟ್ಟಾಕ್ಕಿದೆ. ಈ ಬಗ್ಗೆ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೂಡಲೇ ಕ್ಷಮೆ ಕೇಳಬೇಕು ಎಂದು ಆಗ್ರಹಿದ್ದಾರೆ. ಹೇಳಿಕೆ ವಾಪಸ್ ಪಡೆಯದಿದ್ದರೆ 'ಥಗ್ ಲೈಫ್' ಸಿನಿಮಾ ಬಿಡುಗಡೆಗೆ ಕರ್ನಾಟಕದಲ್ಲಿ ಅವಕಾಶ ಕೊಡುವುದಿಲ್ಲ ಎಂದು ಕಿಡಿಕಾರಿದ್ದಾರೆ.
ಕಮಲ್ ಹಾಸನ್ ಹೇಳಿಕೆ ಬಗ್ಗೆ ಇದೀಗ ಕನ್ನಡ ಚಿತ್ರರಂಗ ಕೂಡ ಪ್ರತಿಕ್ರಿಯಿಸುತ್ತಿದೆ. ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್ ಈ ಬಗ್ಗೆ 'X' ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಕಮಲ್ ಹಾಸನ್ ಹೇಳಿಕೆಯನ್ನು ವಿರೋಧಿಸಿದ್ದಾರೆ. ನಿಮ್ಮ ಮಾತನ್ನು ಒಪ್ಪಲು ಸಾಧ್ಯವಿಲ್ಲ ಎಂದಿದ್ದಾರೆ. ಕನ್ನಡಕ್ಕೆ 2.5 ಸಾವಿರ ವರ್ಷದ ಇತಿಹಾಸವಿದೆ, ಎಂದು ತಿಳಿ ಹೇಳಿದ್ದಾರೆ.

ನಟ ಜಗ್ಗೇಶ್ ಟ್ವೀಟ್ ಮಾಡಿ "ಕಲೆಗೆ ಜಾತಿ ಇಲ್ಲಾ.ಎಲ್ಲಾಭಾಷೆಯ ಕಲಾವಿದರು ಶಾರದಾಸುತರು ಒಪ್ಪುತ್ತೇವೆ,ಆ ನಿಟ್ಟಿನಲ್ಲಿ ಕಮಲ್ ಹಾಸನ್ ರವರ ಮೆಚ್ಚಿದ್ದೇವೆ. ಅಂದ ಮಾತ್ರಕ್ಕೆ ಕನ್ನಡ ತಮಿಳಿಂದ ಹುಟ್ಟಿದೆ ಎಂದ ಅವರ ಮಾತು ಒಪ್ಪೋಲ್ಲಾ. ಕನ್ನಡಕ್ಕೆ 2.5 ಸಾವಿರ ವರ್ಷದ ಇತಿಹಾಸವಿದೆ,ಅಷ್ಟೇಕೆ ಹನುಮದೇವರು ಕನ್ನಡ ಕಲಿಪುಂಗವ ಅವನ ಕಾಲ ರಾಮಾಯಣ ಇಷ್ಟು ಅರ್ಥವಾದರೆ ಸಾಕಲ್ಲವೆ ಸಾರ್!" ಎಂದು ಬರೆದುಕೊಂಡಿದ್ದಾರೆ.
ಸಿಎಂ ಸಿದ್ಧರಾಮಯ್ಯ ಕೂಡ ಕನ್ನಡ ಬಹಳ ಪ್ರಾಚೀನ ಭಾಷೆ ಎಂದಿದ್ದಾರೆ. ನಗರದ ಟೌನ್ ಹಾಲ್ನಲ್ಲಿ ಬೃಹತ್ "ಜೈ ಹಿಂದ್ ಸಭಾ" ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದ್ದರು. ಈ ವೇಳೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಿಎಂ "ಕನ್ನಡ ಭಾಷೆಗೆ ಬಹಳ ದೀರ್ಘಕಾಲದ ಇತಿಹಾಸ ಇದೆ. ಪಾಪ ಕಮಲ್ ಹಾಸನ್ ಅವರಿಗೆ ಗೊತ್ತಿಲ್ಲ ಅನ್ನಿಸುತ್ತೆ" ಎಂದಿದ್ದಾರೆ.
"ಕಮಲ್ ಹಾಸನ್ ಒಬ್ಬ ತಲೆ ತಿರುಕ. ಹುಚ್ಚ. ಅವನಿಗೆ ಕನ್ನಡದಲ್ಲಿ ಸಾಕಷ್ಟು ಅವಕಾಶವನ್ನು ಕನ್ನಡ ಚಿತ್ರ ನಿರ್ದೇಶಕರು, ನಿರ್ಮಾಪಕರು ಕೊಟ್ಟಿದ್ದಾರೆ. ಆ ಋಣ ತೀರಿಸುವುದಕ್ಕಾದರೂ ಅವಉ ನ್ಯಾಯವಾಗಿ ಮಾತನಾಡಬೇಕು. ಅದನ್ನು ಬಿಟ್ಟು ಕನ್ನಡವನ್ನು ಅವಹೇಳನ ಮಾಡುವುದು, ಕನ್ನಡ ಪ್ರಾಚೀನ ಭಾಷೆ ಅಲ್ಲ ಎಂದು ಹೇಳಿರುವುದು ನೋಡಿದರೆ ಅವನೊಬ್ಬ ನಗರ ನಕ್ಸಲ್" ಎಂದು ವಿಪಕ್ಷ ನಾಯಕ ಆರ್. ಅಶೋಕ್ ಕಿಡಿ ಕಾರಿದ್ದಾರೆ.
ಕಮಲ್ ಹೇಳಿಕೆ ಖಂಡಿಸಿ ಮಾತು ಮುಂದುವರೆಸಿರು ಆರ್ ಅಶೋಕ್ "ಕಮಲ್ ಹಾಸನ್ ಹುಚ್ಚು ಹುಚ್ಚಾಗಿ ಮಾತನಾಡ್ತಾನೆ. ಪಾರ್ಟಿ ಮಾಡ್ದ. ಪಾರ್ಟಿ ಮುಳುಗೋಯ್ತು. ಕಮಲ್ ಹಾಸನ್ನ ರಾಜ್ಯದಲ್ಲಿ ಬಹಿಷ್ಕಾರ ಹಾಕಬೇಕು. ಕರ್ನಾಟಕಕ್ಕೆ ಬರಲು ಬಿಡಬಾರದು. ಅವನ ಸಿನಿಮಾಗಳನ್ನು ರಾಜ್ಯದಲ್ಲಿ ಬಹಿಷ್ಕಾರ ಹಾಕಬೇಕು. ಸರ್ಕಾರ ಈ ನಿರ್ಧಾರ ಕೈಗೊಳ್ಳಬೇಕು, ಅದಕ್ಕೆ ಕನ್ನಡ ಪರ ಸಂಘಟನೆಗಳು ಒತ್ತಾಯ ಹೇರಬೇಕು" ಎಂದಿದ್ದಾರೆ.
ಕನ್ನಡ ಪರ ಸಂಘಟನೆಗಳನ್ನು ಕಮಲ್ ಹಾಸನ್ ವಿರುದ್ಧ ರಾಜ್ಯದ ವಿವಿಧ ಭಾಗಗಳಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಕರವೇ ಪ್ರವೀಣ್ ಶೆಟ್ಟಿ ಬಣ ಫಿಲ್ಮ್ ಛೇಂಬರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಕಮಲ್ ವಿರುದ್ಧ ದೂರು ನೀಡಿದ್ದಾರೆ. ನಾಳೆ ಸಂಜೆಯ ಒಳಗೆ ಕಮಲ್ ಹಾಸನ್ ತಮ್ಮ ಹೇಳಿಕೆ ಹಿಂಪಡೆದು ಕ್ಷಮೆ ಕೋರಬೇಕು. ಇಲ್ಲದಿದ್ದರೆ ರಾಜ್ಯದಲ್ಲಿ ಆತನ ಸಿನಿಮಾ ಬಿಡುಗಡೆಗೆ ಅವಕಾಶ ಕೊಡುವುದಿಲ್ಲ ಎಂದು ಪ್ರವೀಣ್ ಶೆಟ್ಟಿ ಹೇಳಿದ್ದಾರೆ.
ಮಣಿರತ್ನಂ ನಿರ್ದೇಶನದಲ್ಲಿ ಕಮಲ್ ಹಾಸಬ್ ಹಾಗೂ ಸಿಂಬು ನಟನೆಯ 'ಥಗ್ ಲೈಫ್' ಸಿನಿಮಾ ಮುಂದಿನ ವಾರ ತೆರೆಗೆ ಬರಲಿದೆ. ಈ ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮ ಇತ್ತೀಚೆಗೆ ಚೆನ್ನೈನಲ್ಲಿ ನಡೀತು. ಈ ಕಾರ್ಯಕ್ರಮಕ್ಕೆ ಕನ್ನಡ ನಟ ಶಿವರಾಜ್ಕುಮಾರ್ ಅತಿಥಿಯಾಗಿ ಹೋಗಿದ್ದರು. ಡಾ. ರಾಜ್ಕುಮಾರ್ ಫ್ಯಾಮಿಲಿ ಜೊತೆಗಿನ ಒಡನಾಟದ ಬಗ್ಗೆ ಮಾತನಾಡುತ್ತಾ ಕಮಲ್ ಹಾಸನ್ "ತಮಿಳಿನಿಂದ ಕನ್ನಡ ಹುಟ್ಟಿದ್ದು" ಎಂದಿದ್ದು. ಇದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.


Click it and Unblock the Notifications











