'ಕೈವ' ಸಿನಿಮಾಗೂ '1983ರ ಗಂಗರಾಮ್ ಕಟ್ಟಡ ದುರಂತ'ಕ್ಕೂ 'ಭಕ್ತ ಪ್ರಹ್ಲಾದ' ರಿಲೀಸ್ಗೂ ಏನು ಸಂಬಂಧ?
'ಒಲವೇ ಮಂದಾರ', 'ಬೆಲ್ ಬಾಟಂ' ಸೇರಿದಂತೆ ಅನೇಕ ವಿಶಿಷ್ಠ ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿದ ಜಯತೀರ್ಥ ಹೊಸ ಸಿನಿಮಾ ಜೊತೆ ಅಖಾಡಕ್ಕಿಳಿದಿದ್ದಾರೆ. ಅದುವೇ ಧನ್ವೀರ್ ನಟನೆಯ 'ಕೈವ'. ಸಿನಿಮಾ ಟೈಟಲ್ ಕುತೂಹಲ ಕೆರಳಿಸುತ್ತೆ. ಇತ್ತೀಚೆಗೆ ರಿಲೀಸ್ ಆಗಿರೋ ಟೀಸರ್ ನೋಡಿದವರಿಗೆ ಇದೊಂದು ಮಾಮೂಲಿ ರೌಡಿಸಂ ಸಿನಿಮಾ ಅನಿಸಬಹುದು.
ಈಗಾಗಲೇ ನಿರ್ದೇಶಕರೇ ಕಥೆ ಸಿಕ್ಕಿದ್ದು ಹೇಗೆ? ಅನ್ನೋ ಸ್ವಾರಸ್ವಕರ ಸಂಗತಿಯನ್ನು ಬಿಚ್ಚಿದ್ದಾರೆ. ಬೆಲ್ಬಾಟಂ ವೇಳೆ ಪೋಸ್ಟ್ ಮಾರ್ಟಂ ಜಾಗದಲ್ಲಿ ಸಿಕ್ಕಿದ ಕಥೆ ಇದು. ಮೇಲ್ನೋಟಕ್ಕೆ ಇದು ರೌಡಿಸಂ ಕಥೆ ಅಂತ ಅನಿಸಿದರೂ, ಇಲ್ಲೊಂದು ಪ್ರೇಮಕಥೆಯಿದೆಯೆಂದು ನಿರ್ದೇಶಕರು ಕುತೂಹಲ ಹುಟ್ಟಿಸಿದ್ದಾರೆ.

ಇದೇ ವೇಳೆ ಇನ್ನೊಂದು ಇಂಟ್ರೆಸ್ಟಿಂಗ್ ಸ್ಟೋರಿಯನ್ನು ರಿವೀಲ್ ಮಾಡಿದ್ದಾರೆ. "1983 ಸೆಪ್ಟೆಂಬರ್ 12ನೇ ತಾರೀಕು ಮಧ್ಯಾಹ್ನ 3.30ಕ್ಕೆ ಕಪಾಲಿ ಚಿತ್ರಮಂದಿರದಲ್ಲಿ ಭಕ್ತ ಪ್ರಹ್ಲಾದ ಸಿನಿಮಾ ನಡೆಯುವಾಗ ಗಂಗರಾಮ್ ಬಿಲ್ಡಿಂಗ್ ಬಿದ್ದಿತ್ತು. ಅದೇ ಸಮಯದಲ್ಲಿ ಈ ಪ್ರೇಮಕಥೆಯಲ್ಲೊಂದು ದುರಂತ ನಡೆಯುತ್ತೆ. ಈ ಎರಡೂ ಇವೆಂಟ್ ಅನ್ನೂ ಇಟ್ಟುಕೊಂಡು ಚಿತ್ರಕಥೆ ಬರೆದೆ" ಎಂದು ಜಯತೀರ್ಥ ಹೇಳಿದ್ದಾರೆ. ಅಸಲಿಗೆ ಅಂದು ನಡೆದ ದುರಂತವೇನು? 'ಭಕ್ತ ಪ್ರಹ್ಲಾದ'ಗೂ, ಕೈವ ಸಿನಿಮಾಗೂ, ದುರಂತಕ್ಕೂ ಅದೇನು ಸಂಬಂಧ? ಅನ್ನೋದನ್ನು ತಿಳಿಯಲು ಮುಂದೆ ಓದಿ.
1983ರಲ್ಲಿ ನಡೆದ ದುರಂತವೇನು?
1983, ಸೆಪ್ಟೆಂಬರ್ 12, ಮಧ್ಯಾಹ್ನ 3.35 ಇಡೀ ಬೆಂಗಳೂರು ಬೆಚ್ಚಿಬೀಳುವ ದುರಂತ ನಡೆಯುತ್ತೆ. ಕಪಾಲಿ ಚಿತ್ರಮಂದಿರ ಪಕ್ಕದಲ್ಲಿಯೇ ಗಂಗರಾಮ್ ಎಂಬುವವರು 8 ಅಂತಸ್ಥನ ಕಟ್ಟಡವನ್ನು ನಿರ್ಮಾಣ ಮಾಡುತ್ತಿರುತ್ತಾರೆ. ಹೆಚ್ಚು ಕಡಿಮೆ ಮೂರು ವರ್ಷಗಳಿಂದ ಈ ಕಟ್ಟಡ ನಡೆಯುತ್ತಿರುತ್ತೆ. ಈ ಸಮಯದಲ್ಲಿ ದಿಢೀರನೇ 8 ಅಂತಸ್ಥಿತನ ಕಟ್ಟಡ ಕುಸಿದು ಬೀಳುತ್ತೆ. ನೋಡ ನೋಡುತ್ತಿದ್ದಂತೆ 100ಕ್ಕೂ ಹೆಚ್ಚು ಮಂದಿ ಕಾರ್ಮಿಕರು ಸಾವನ್ನಪ್ಪುತ್ತಾರೆ. 100ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯಗಳಾಗುತ್ತೆ. ಮೃತದೇಹವನ್ನು ಹೊರತೆಗೆಯಲು ಹೆಚ್ಚು ಕಡಿಮೆ ಒಂದು ತಿಂಗಳಿಗೂ ಅಧಿಕ ಸಮಯ ಹಿಡಿಯುತ್ತೆ. ಅಷ್ಟು ಭೀಕರ ದುರಂತ ಅದು.
ಕಪಾಲಿ ಚಿತ್ರಮಂದಿರದಲ್ಲಿ 'ಭಕ್ತ ಪ್ರಹ್ಲಾದ'
1983, ಸೆಪ್ಟೆಂಬರ್ 9, ಗಂಗರಾಮ್ ಕಟ್ಟಡ ದುರಂತ ನಡೆಯುವುದಕ್ಕೂ ಮೂರು ದಿನ ಮುನ್ನ ಡಾ.ರಾಜ್ಕುಮಾರ್ ಹಾಗೂ ಅಪ್ಪು ನಟಿಸಿದ 'ಭಕ್ತ ಪ್ರಹ್ಲಾದ' ಸಿನಿಮಾ ರಿಲೀಸ್ ಆಗಿರುತ್ತೆ. ಆಗತಾನೇ ಮಾರ್ನಿಂಗ್ ಶೋ ಬಿಟ್ಟು, ಮ್ಯಾಟನಿ ಶೋ ಆರಂಭ ಆಗಿರುತ್ತೆ. ಇನ್ನೇನು ಸಿನಿಮಾ ಪ್ರೀ ಕ್ಲೈಮ್ಯಾಕ್ಸ್ ಹಂತದಲ್ಲಿರುವಾಗಲೇ ಕಟ್ಟಡ ಕುಸಿದು ಬೀಳುತ್ತೆ. ಕಪಾಲಿ ಚಿತ್ರಮಂದಿರ ಬಾಗಿಲಿನಲ್ಲಿ ನಿಂತಿದ್ದ ಇಬ್ಬರು ಸಾವನ್ನಪ್ಪುತ್ತಾರೆ. ಹಲವರಿಗೆ ಗಾಯಗಳಾಗುತ್ತೆ.

'ಕೈವ'ಗೂ ಈ ಘಟನೆಗಳಿಗೂ ಏನು ಸಂಬಂಧ?
ಘಟನೆ ಒಂದೇ.. ಆದರೆ, ಎರಡು ಸಂದರ್ಭಗಳು. ಇದಕ್ಕೂ ಕೈವಗೂ ಒಂದು ಸಂಬಂಧವಿದೆ. 'ಭಕ್ತ ಪ್ರಹ್ಲಾದ' ಕ್ರೇಜ್ ಒಂದು ಕಡೆಯಾದರೆ, ಇನ್ನೊಂದು ಕಡೆ ಕಟ್ಟಡ ದುರಂತ. ಇವೆರಡರ ಮಧ್ಯೆ ನಿರ್ದೇಶಕ ಜಯತೀರ್ಥ ಹೇಳಿದ ಹಾಗೆ ಇದೇ ಸಮಯದಲ್ಲಿ 'ಕೈವ'ನ ಪ್ರೇಮಕಥೆಯಲ್ಲಿ ಒಂದು ದುರಂತ ನಡೆಯುತ್ತೆ. ಒಂದು ವೇಳೆ ಗಂಗರಾಮ್ ಕಟ್ಟಡ ಕುಸಿಯದೇ ಹೋಗಿದ್ದರೆ, ಅಂದು ಬೆಂಗಳೂರಿನಲ್ಲಿ ಈ ಲವ್ ಸ್ಟೋರಿಯ ದುರಂತ ದೊಡ್ಡ ಸಂಚಲನವನ್ನೇ ಸೃಷ್ಟಿಸುತ್ತಿತ್ತು. ಅದನ್ನೇ ಸಿನಿಮಾದಲ್ಲಿ ತೋರಿಸಲಾಗಿದೆ ಅನ್ನೋದು ಸದ್ಯಕ್ಕೆ ಸಿಕ್ಕಿರೋ ಸುದ್ದಿ.
'ಕೈವ' ಯಾರು?
ಕೈವನದ್ದು ಇಲ್ಲೊಂದು ಅಂತರ ಧರ್ಮೀಯ ಪ್ರೇಮಕಥೆ. ಹಾಗಂತ ಧರ್ಮದ ನಡುವೆ ಯಾವುದೇ ಗಲಾಟೆ ನಡೆದಿಲ್ಲ. ಹಿಂದೂ-ಮುಸ್ಲಿಂ ಎರಡು ಧರ್ಮಕ್ಕೂ ಇವರ ಲವ್ ಸ್ಟೋರಿ ಮೇಲೆ ಏನೂ ತಕರಾರು ಇದ್ದಂತೆ ಕಾಣಲಿಲ್ಲ. ಆದರೆ, ಅಂದು ನಡೆದಿದ್ದೇ ಬೇರೆ. ಬೇರೊಂದು ಕಾರಣಕ್ಕೆ ಇವರ ಪ್ರೇಮಕಥೆಯಲ್ಲೊಂದು ದುರಂತ ನಡೀತು. ಆದರೆ, ಬೆಳಕಿಗೆ ಬಂದಿಲ್ಲ. ಯಾಕಂದ್ರೆ, ಪೊಲೀಸರಿಂದ ಹಿಡಿದು ಎಲ್ಲರೂ ಗಂಗರಾಮ್ ಕಟ್ಟಡ ದುರಂತ ಕಡೆ ಗಮನ ಹರಿಸಿದ್ದರು.


Click it and Unblock the Notifications











