ಬರ್ತಿದೆ ದಕ್ಷಿಣ ಭಾರತದ ದಂತಕಥೆ 'ಚಕ್ರವರ್ತಿ ಇಮ್ಮಡಿ ಪುಲಕೇಶಿ' ಬಯೋಪಿಕ್; ಏನಿದರ ಹೈಲೈಟ್?
6 ನೇ ಶತಮಾನದ ಭಾರತದಲ್ಲಿ ಆಡಳಿತ ನಡೆಸಿದ ದಕ್ಷಿಣ ಭಾರತದ ದಂತಕಥೆಯೆನಿಸಿರುವ ಚಕ್ರವರ್ತಿ ಇಮ್ಮಡಿ ಪುಲಕೇಶಿ ಅವರ ಜೀವನ ಮತ್ತು ಪರಂಪರೆಯನ್ನು ಆಧರಿಸಿದ ಮಹಾಕಾವ್ಯ ಚಲನಚಿತ್ರವಾದ "ಎರೆಯ"ದ ನಿರ್ಮಾಣವನ್ನು ಮಾಡುವುದರ ಮೂಲಕ ವಿಂಗ್ಸ್ಪ್ಯಾನ್ ಮೋಷನ್ ಪಿಕ್ಚರ್ಸ್ LLP ಒಂದು ಅಭೂತಪೂರ್ವ ಸಿನಿಮಾ ಸಾಹಸಗಾಥೆಗೆ ಮುನ್ನುಡಿ ಬರೆಯಲಿದೆ.
ಸುನೀತ್ ಜಾವಡೇಕರ್ ಮತ್ತು ನಿವೇದಿತಾ ಕೊಠಾರೆ ನಿರ್ಮಿಸಲಿರುವ "ಎರೆಯ" ಚಿತ್ರದಲ್ಲಿ ಚಕ್ರವರ್ತಿ ಇಮ್ಮಡಿ ಪುಲಕೇಶಿಯ ಸಾಹಸ, ಚಾತುರ್ಯ ಮತ್ತು ಅದ್ವಿತೀಯ ಆಡಳಿತಸೂತ್ರಗಳ ಮೂಲಕ ವಿಶಾಲ ಸಾಮ್ರಾಜ್ಯವನ್ನು ಆಳಿದ ಅವರ ಆಳ್ವಿಕೆಯನ್ನು ಚಿತ್ರಿಸುತ್ತದೆ. ಇಮ್ಮಡಿ ಪುಲಕೇಶಿಯ ಕಾಲವನ್ನು ಇತಿಹಾಸದಲ್ಲಿ ಒಂದು ಸುವರ್ಣಯುಗ ಎಂದೇ ಹೇಳಲಾಗುತ್ತದೆ. ಡಾ. ಭೂಷನ್ ಶಾನಭಾಗ್ ಅವರ ಆಳವಾದ ಸಂಶೋಧನೆಯನ್ನು ಆಧರಿಸಿ ಚಿತ್ರಕಥೆಯನ್ನು ಹೆಣೆಯಲಾಗಿದೆ.

ಕನ್ನಡಕ್ಕೆ ಒಂದು ಮೈಲಿಗಲ್ಲಾಗಲಿರುವ ಈ ಮಹತ್ವಾಕಾಂಕ್ಷೆಯ ಯೋಜನೆಯನ್ನು ನಿರ್ದೇಶಿಸುತ್ತಿರುವುದು ಫಿಲ್ಮ್ಫೇರ್ ಪ್ರಶಸ್ತಿ ವಿಜೇತ ಕನ್ನಡ ಚಲನಚಿತ್ರ ನಿರ್ದೇಶಕರಾದ ಕೆ.ಎಂ. ಚೈತನ್ಯ ಅವರು. ಸೂಕ್ಷ್ಮತೆಯ ಕಥೆಗಾರಿಕೆ ಮತ್ತು ವಿಭಿನ್ನ ದೃಶ್ಯ ಶೈಲಿಗೆ ಹೆಸರುವಾಸಿಯಾಗಿರುವ. ಚೈತನ್ಯ ಕನ್ನಡದಲ್ಲಿ 8 ಯಶಸ್ವಿ ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಅವರ ಮೊದಲ ಚಲನಚಿತ್ರ "ಆ ದಿನಗಳು" ಒಂದು ಮಹತ್ವದ ಮೈಲಿಗಲ್ಲಾಗಿದ್ದು 2007 ರ ದಕ್ಷಿಣದ ಚಿತ್ರಗಳ ವರ್ಗದಲ್ಲಿ ಅತ್ಯುತ್ತಮ ನಿರ್ದೇಶಕ ಮತ್ತು ಅತ್ಯುತ್ತಮ ಚಲನಚಿತ್ರ ಸೇರಿದಂತೆ ಹಲವಾರು ಫಿಲ್ಮ್ಫೇರ್ ಪ್ರಶಸ್ತಿ ಪ್ರಶಸ್ತಿಗಳನ್ನು ಗೆದ್ದಿದೆ. ಅವರು ತಮ್ಮ "ಆಕೆ" ಚಿತ್ರಕ್ಕಾಗಿ "ಅತ್ಯುತ್ತಮ ರೂಪಾಂತರ ಚಿತ್ರಕಥೆ"ಗಾಗಿ ಟೈಮ್ಸ್ ಕೆಎಎಫ್ಟಿಎ ಪ್ರಶಸ್ತಿ - 2017 ಅನ್ನು ಗೆದ್ದಿದ್ದಾರೆ. ಅವರ ಮುಂಬರುವ ಚಲನಚಿತ್ರ "ಬಲರಾಮನ ದಿನಗಳು" ಈ ವರ್ಷ ಬಿಡುಗಡೆಯಾಗಲಿದೆ. "ಎರೆಯ" ದೊಂದಿಗೆ, ಇತಿಹಾಸದ ಪುಟಗಳಲ್ಲಿ ಕಂಡ ಭಾರತದ ಭವ್ಯತೆಯನ್ನು ಬಿಂಬಿಸಲು ಅವರು ತಯಾರಿ ಮಾಡಿಕೊಳ್ಳುತ್ತಿದಾರೆ.
"ಎರೆಯ" ಚಿತ್ರವು ನಿರ್ಮಾಪಕರು ನಿರ್ಮಿಸುತ್ತಿರುವ ಮೂರನೇ ಚಲನಚಿತ್ರವಾಗಿದ್ದು, ಕೇ ಕೇ ಮೆನನ್, ಜಿಮ್ಮಿ ಶೇರ್ಗಿಲ್, ಜಾಕಿ ಶ್ರಾಫ್, ಪಂಕಜ್ ತ್ರಿಪಾಠಿ ಮುಂತಾದ ಅದ್ಭುತ ನಟರ ಅಭಿನಯವಿದ್ದ "ಫಾಮಸ್" ಹಾಗೂ ದಿವಂಗತ ರಾಜೇನ್ ಕೊಥಾರಿ ಅವರ ನಿರ್ದೇಶನದಲ್ಲಿ ಓಂ ಪುರಿ, ಸತೀಶ್ ಶಾ, ಸುಪ್ರಿಯಾ ಪಾಠಕ್ ಮುಂತಾದವರು ನಟಿಸಿದ್ದ "ಪಂಗಾ ನಾ ಲೋ" ಅವರ ಇನ್ನಿತರೆ ಚಿತ್ರಗಳಾಗಿವೆ. "ಫಾಮಸ್" ಅನ್ನು ಆಸಕ್ತರು ಅಮೆಜಾನ್ ಪ್ರೈಮ್ನಲ್ಲಿ ನೋಡಬಹುದು. ಈ ಎರಡೂ ಚಲನಚಿತ್ರಗಳನ್ನು ಅವರ ವಿದಿಶಾ ಪ್ರೊಡಕ್ಷನ್ಸ್ ಪ್ರೈವೇಟ್ ಲಿಮಿಟೆಡ್ (ವಿಂಗ್ಸ್ಪ್ಯಾನ್ ಮೋಷನ್ ಪಿಕ್ಚರ್ಸ್ ಎಲ್ಎಲ್ಪಿಯ ಸಹೋದರಿ ಸಂಸ್ಥೆ) ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗಿದೆ.
ಪ್ಯಾನ್-ಇಂಡಿಯಾ ಪ್ರೇಕ್ಷಕರ ಮನಸೂರೆಗೊಳ್ಳಲು ಬೃಹತ್ ಪ್ರಮಾಣದಲ್ಲಿ ತೆರೆಯ ಮೇಲೆ ಬರಲಿರುವ "ಎರೆಯ" ಚಿತ್ರವನ್ನು ಹಿಂದಿ ಜೊತೆಗೆ ಎಲ್ಲಾ ಪ್ರಮುಖ ದಕ್ಷಿಣ ಭಾರತೀಯ ಭಾಷೆಗಳಲ್ಲೂ ನಿರ್ಮಿಸಲಾಗುವುದು. ಇದು ಜಗತ್ತಿನಾದ್ಯಂತ ಇರುವ ಸಿನಿಮಾಸಕ್ತರನ್ನು ತಲುಪುವ ಗುರಿ ಹೊಂದಿದೆ. ಈ ಚಿತ್ರವು ರಾಷ್ಟ್ರದ ಎಲ್ಲಾ ಭಾಗಗಳಿಂದ ಬಂದ ಉತ್ಕೃಷ್ಟ ತಾರಾಬಳಗವನ್ನು ಒಳಗೊಂಡಿದ್ದು, ಅತ್ಯಂತ ನುರಿತ ತಂತ್ರಜ್ಞರ ತಂಡ ಇದನ್ನು ತೆರೆಗೆ ತರಲು ಸಿದ್ಧತೆ ಮಾಡಿಕೊಳ್ಳುತ್ತಿದೆ.
ಚಿತ್ರದ ಪ್ರಮುಖ ನಟರ ಆಯ್ಕೆ ಮತ್ತು ತಾಂತ್ರಿಕ ತಂಡದ ವಿವರಗಳನ್ನು ಶೀಘ್ರದಲ್ಲೇ ಅಧಿಕೃತವಾಗಿ ಪ್ರಕಟಿಸಲಾಗುತ್ತದೆ. ಬಹು ಹೆಸರಾಂತ ನಟವರ್ಗವನ್ನೊಳಗೊಂಡ ಈ ಸಿನಿಮಾ ವರ್ಷದ ಅಂತ್ಯಕ್ಕೆ ಬಿಡುಗಡೆಯಾಗುವ ಸಾಧ್ಯತೆಯಿದೆ. "ಎರೆಯ" ಸಿನಿಮಾ ಇತಿಹಾಸದ ಪುಟಗಳಲ್ಲಿ ಕಳೆದುಹೋದ ಭಾರತದ ಶ್ರೇಷ್ಠ ಚಕ್ರವರ್ತಿಯೊಬ್ಬರ ಪರಂಪರೆಯನ್ನು ಆಚರಿಸುವ ಒಂದು ಮುಖ್ಯ ಚಿತ್ರವಾಗಲಿದೆ.


Click it and Unblock the Notifications











