"ನಮ್ಮ ಯಜಮಾನ ಈ ಮಣ್ಣಲ್ಲಿ ಹುಟ್ಟಿದ್ದೇ ತಪ್ಪು, 2ನೇ ಬಾರಿ ತೀರಿ ಹೋದರು"; ರವಿ ಶ್ರೀವತ್ಸ-ಕೆ.ಮಂಜು ಭಾವುಕ
ಇಂದು (ಆಗಸ್ಟ್ 8) ಡಾ. ವಿಷ್ಣುವರ್ಧನ್ ಅಭಿಮಾನಿಗಳಿಗೆ ಕರಾಳ ದಿನ. ಸಾಹಸ ಸಿಂಹ ಅಂತ್ಯಕ್ರಿಯೆ ನಡೆದ ಅಭಿಮಾನ್ ಸ್ಟುಡಿಯೋದಲ್ಲಿಯೇ ಸ್ಮಾರಕ ಆಗ್ಬೇಕು ಎನ್ನುವ ಅವರ ಆಸೆ ಕಮರಿ ಹೋಗಿದೆ. ರಾತ್ರೋ ರಾತ್ರಿ ಡಾ.ವಿಷ್ಣುವರ್ಧನ್ ಸಮಾಧಿಯನ್ನು ನೆಲಸಮ ಮಾಡಲಾಗಿದೆ. ಇದು ಡಾ. ವಿಷ್ಣುವರ್ಧನ್ ಅಭಿಮಾನಿಗಳನ್ನು ಕಣ್ಣೀರಿನಲ್ಲಿ ಮುಳುಗಿಸಿದೆ. ಬೆಳಗ್ಗೆಯಿಂದಲೂ ಅಭಿಮಾನಿಗಳು ಸಮಾಧಿ ಮುಂದೆ ಕಣ್ಣೀರು ಹಾಕುತ್ತಿದ್ದಾರೆ.
ಕಳೆದ ಹಲವು ವರ್ಷಗಳಿಂದ ಹಿರಿಯ ನಟ ಬಾಲಣ್ಣನ ಮಕ್ಕಳಿಗೂ ಹಾಗೂ ವಿಷ್ಣುವರ್ಧನ್ ಅವರ ಅಭಿಮಾನಿಗಳಿಗೂ ಸ್ಮಾರಕ ವಿಚಾರಕ್ಕೆ ಜಟಾಪಟಿ ನಡೆಯುತ್ತಲೇ ಇತ್ತು. ಇನ್ನೊಂದು ಕಡೆ ಬಾಲಣ್ಣ ಮಕ್ಕಳ ನಡುವೆ ಆಸ್ತಿ ವಿಚಾರಕ್ಕೆ ಸಂಘರ್ಷ ಏರ್ಪಟ್ಟಿತ್ತು. ಈ ಸಂಬಂಧ ಅವರು ಕೋರ್ಟ್ ಮೆಟ್ಟಿಲೇರಿದ್ದರು. ಹೀಗಾಗಿ ಅಭಿಮಾನ್ ಸ್ಟುಡಿಯೋ ಸೇರಿದಂತೆ ಇಡೀ ಆಸ್ತಿ ಕೋರ್ಟ್ನಲ್ಲಿ ಇತ್ತು.

ಆದ್ರೀಗ ಕೋರ್ಟ್ ಆದೇಶದಂತೆ ಡಾ.ವಿಷ್ಣುವರ್ಧನ್ ಸಮಾಧಿಯನ್ನು ನೆಲೆಸಮ ಮಾಡಲಾಗಿದೆ ಎನ್ನಲಾಗಿದೆ. ಈ ಬಗ್ಗೆ ವಿಷ್ಣುವರ್ಧನ್ ಅವರ ಅಭಿಮಾನಿಗಳು ಆಗಿರುವ ನಿರ್ಮಾಪಕ ಕೆ.ಮಂಜು ಹಾಗೂ ನಿರ್ದೇಶಕ ರವಿ ಶ್ರೀವತ್ಸ ಇಬ್ಬರೂ ಬೇಸರ ಹೊರ ಹಾಕಿದ್ದಾರೆ. ತಮ್ಮ ಯಜಮಾನನ ಸಮಾಧಿಯನ್ನು ನೆಲಸಮಾ ಮಾಡಿದ್ದಕ್ಕೆ ಭಾವುಕರಾಗಿದ್ದು, "ನಮ್ಮ ಯಜಮಾನ ಈ ಮಣ್ಣಲ್ಲಿ ಹುಟ್ಟಿದ್ದೇ ತಪ್ಪು" ಎಂದು ಬೇಸರ ಹೊರ ಹಾಕಿದ್ದಾರೆ.
"ಏನೂ ಮಾಡುವುದಕ್ಕೆ ಆಗಲ್ಲ"
ವಿಷ್ಣುವರ್ಧನ್ ಸಮಾಧಿ ನೆಲಸಮ ಮಾಡಿದ ವಿಷಯವನ್ನು ತಿಳಿದು ನಿರ್ಮಾಪಕ ಕೆ.ಮಂಜು ಅಭಿಮಾನ್ ಸ್ಟುಡಿಯೋಗೆ ಆಗಮಿಸಿದ್ದರು. ಆ ವೇಳೆ ಫಸ್ಟ್ ನ್ಯೂಸ್ಗೆ ಪ್ರತಿಕ್ರಿಯೆ ನೀಡಿದ್ದು, ಈ ವಿಷಯದಲ್ಲಿ ಬೇರೆ ಏನೂ ಮಾಡುವುದಕ್ಕೆ ಆಗುವುದಿಲ್ಲ ಬಾಲಣ್ಣ ಮಗ ಗಣೇಶ್ ಅವರ ಬಳಿ ಹೋಗಿ ಕೇಳಿಕೊಳ್ಳಬೇಕಷ್ಟೇ ಎಂದಿದ್ದಾರೆ. "ಇದು ಕೋರ್ಟ್ನಲ್ಲಿ ಕೇಸ್ ಇತ್ತು. ಇದು ಅವರ ಫ್ಯಾಮಿಲಿ ಕಿತ್ತಾಟ. ಸ್ಟುಡಿಯೋ ಮಾಡುವುದಕ್ಕೆ ಆಗ ಸರ್ಕಾರ ಜಾಗ ಕೊಟ್ಟಿದ್ದರು. ಅದರಲ್ಲಿ ಅರ್ಧವನ್ನು ಮಾರಿದ್ದಾರೆ. ಇನ್ನು ಸರ್ಕಾರ ಮನೆಯವರ ಅನುಮತಿಯ ಮೇರೆಗೆ ಮೈಸೂರಿನಲ್ಲಿ ಜಾಗವನ್ನು ಕೊಟ್ಟಿದ್ದಾರೆ. ಆದ್ದರಿಂದ ನಾವ್ಯಾರೂ ಈ ಬಗ್ಗೆ ಮಾತಾಡಿದರೆ ತಪ್ಪಾಗುತ್ತೆ. ಗಣೇಶ್ ಅವರು ಕೂತು ಅದಷ್ಟೇ ಜಾಗವನ್ನು ಸ್ಟುಡಿಯೋ ತರಹ ಅಥವಾ ದೇವಸ್ಥಾನದ ಹಾಗೆ ಮಾಡಿಕೊಡಿ ಅಂತ ಕೇಳಿ ಕೊಳ್ಳಬಹುದು ಅಷ್ಟೇ. ಅದು ಬಿಟ್ಟರೆ, ಬೇರೆ ಏನೂ ಮಾಡುವುದಕ್ಕೆ ಆಗುವುದಿಲ್ಲ." ಎಂದು ಕೆ.ಮಂಜು ಹೇಳಿದ್ದಾರೆ.
"ಈ ಜಾಗಕ್ಕೆ ಹಣ ಕೊಡುವುದಕ್ಕೆ ನಾನು ರೆಡಿ"
ಇದೇ ವೇಳೆ ಗಣೇಶ್ ಅವರಿಗೆ ವಿಷ್ಣು ಸ್ಮಾರಕ ನಿರ್ಮಾಣ ಮಾಡುವ ಜಾಗಕ್ಕೆ ಎಷ್ಟು ಹಣ ಆಗುತ್ತೋ ಅಷ್ಟು ಕೊಡುವುದಕ್ಕೆ ರೆಡಿ ಎಂದಿದ್ದಾರೆ. "ಇದನ್ನು ಬೇರೆ ಯಾರೋ ಕಿಡಿಗೇಡಿಗಳು ಮಾಡಿದ್ದಲ್ಲ. ಕೋರ್ಟ್ ಆದೇಶದ ಮೇರೆಗೆ ಮಾಡಲಾಗಿದೆ. ಹಾಗಾಗಿ ಯಾರೂ ಇದನ್ನು ತಪ್ಪಾಗಿ ತಿಳಿದುಕೊಳ್ಳಬಾರದು. ನಾನೇ ಗಣೇಶ್ ಹತ್ತಿರ ಮಾತಾಡುತ್ತೇನೆ. ಒಳಗಡೆ ಸ್ಟುಡಿಯೋ ಮಾಡುವುದಕ್ಕೆ ಜಾಗ ಕೊಡುವಂತೆ ಮಾತಾಡುತ್ತೇನೆ. 30 ರಿಂದ 35 ಅಳತೆಯ ಜಾಗ ಕೊಡಿ ಅಂತ ನಾನು ಹೇಳಿದ್ದೆ. ಕೋರ್ಟ್ನಲ್ಲಿ ಅಕ್ಕ ತಂಗಿಯರ ನಡುವೆ ಸಮಸ್ಯೆಯಿದೆ. ಇನ್ನೂ ಡಿವೈಡ್ ಆಗಿರಲಿಲ್ಲ. ಗಣೇಶ್ ಅವರು ಮಾಡಿಕೊಡುತ್ತೇನೆ ಎಂದು ಹೇಳಿದ್ದರು. ಇದು ಯಾರಿಗೆ ಬಂದಿದೆ ಅನ್ನೋದು ಗೊತ್ತಿಲ್ಲ. ಕಾನೂನು ಚೌಕಟ್ಟಿನಲ್ಲಿ ಮಾಡುವುದಕ್ಕೆ ಆಗುವುದಿಲ್ಲ. ಈಗ ಆಗಿ ಹೋಗಿದೆ. ಹಾಗಾಗಿ ಗೊಂದಲವಿಲ್ಲದೆ ಸ್ಟುಡಿಯೋ ಕಟ್ಟುವುದಕ್ಕೆ ಏನಾದರೂ ಮಾಡಿಕೊಡಿ ಅಂತ ಹೇಳುವುದಕ್ಕೆ ಇಷ್ಟ ಪಡುತ್ತೇನೆ. ಬೇರೆವರ ಜಾಗಕ್ಕೆ ನಾವೇನೂ ಮಾಡುವುದಕ್ಕೆ ಆಗುತ್ತಿಲ್ಲ. ಆ ಜಾಗಕ್ಕೆ ಎಷ್ಟು ದುಡ್ಡಾಗುತ್ತೋ ಅಷ್ಟು ಕೊಡುವುದಕ್ಕೆ ನಾನು ರೆಡಿಯಿದ್ದೆ." ಎಂದಿದ್ದಾರೆ.

"ಇದು ನಮಗೆ ಕರಾಳ ದಿನ"
ಇನ್ನು ನಿರ್ದೇಶಕ ರವಿ ಶ್ರೀವತ್ಸ ಅವರು ವಿಷ್ಣುದಾದ ಸಮಾಧಿ ನೆಲಸಮ ಆಗಿದ್ದಕ್ಕೆ ಕಣ್ಣೀರು ಹಾಕಿದ್ದಾರೆ. ವಿಷ್ಣುದಾದ ಎರಡನೇ ಬಾರಿ ತೀರಿ ಹೋದರು ಎಂದು ಭಾವುಕರಾಗಿದ್ದಾರೆ. "ಇನ್ನು ಏನಿಲ್ಲ. ಎಲ್ಲಾ ಮುಗಿದು ಹೋಗಿದೆ ಅಷ್ಟೇ. ನಾನು ಸಾವಿರ ಬಾರಿ ಹೇಳಿದ್ದೇನೆ. ಸಿನಿಮಾ ಇಂಡಸ್ಟ್ರಿ ಅಂತ ಬಂದಾಗ ನನ್ನ ಯಜಮಾನನೇ ಎಲ್ಲಾ. ನನ್ನ ಅಪ್ಪ ಅಮ್ಮನೂ ಪಕ್ಕ ಅಂತ. ನಮ್ಮ ಯಜಮಾನ ಎರಡನೇ ಸಾರಿ ತೀರಿ ಹೋದರು. ಇವತ್ತೇ ತೀರಿಕೊಂಡಿದ್ದು, ಎರಡನೇ ಬಾರಿ ತೀರಿಕೊಂಡರು ಅಂತ ಹೇಳಿದ್ನಲ್ಲ. ಯಾರೂ ಇಲ್ಲ. ಎಲ್ಲಾ ಅನಾಥವಾಗಿದೆ. ತುಂಬಾ ನೋವಾಗುತ್ತಿದೆ. ನಮಗೆ ಇದು ಕರಾಳವಾದ ದಿನ." ಎಂದು ನಿರ್ದೇಶಕ ರವಿ ಶ್ರೀವತ್ಸ ಹೇಳಿದ್ದಾರೆ.
"ಈ ಮಣ್ಣಲ್ಲಿ ಹುಟ್ಟಿದ್ದೇ ತಪ್ಪು"
ಸಾಹಸ ಸಿಂಹ ವಿಷ್ಣುವರ್ಧನ್ ಈ ಮಣ್ಣಿನಲ್ಲಿ ಹುಟ್ಟಿದ್ದೇ ತಪ್ಪು ಎಂದು ರವಿ ಶ್ರೀವತ್ಸ ಅಭಿಪ್ರಾಯ ಪಟ್ಟಿದ್ದಾರೆ. "ನಂಬಿಕೆನೇ ಮನುಷ್ಯನ ಬುನಾದಿ ಅಂತಾರೆ, ಅದನ್ನು ಎಲ್ಲರೂ ಸೇರಿ ಚೆನ್ನಾಗಿ ಹೊಸಗಿ ಹಾಕಿದರು. ನೀಟ್ ಆಗಿ ಪ್ಲಾನ್ ಮಾಡಿ ಇದನ್ನು ಮಾಡಿದ್ದಾರೆ. ಯಾರೋ ಹೇಳುತ್ತಿದ್ದರು. ಬೆಳಗ್ಗೆ ಬಂದು ಜೆಸಿಬಿಯಲ್ಲಿ ಒಡೆದು ಹಾಕಿದರು ಅಂತ ಯಾರೋ ಅಂದರು. ಯಾರಿಗೂ ಗೊತ್ತಾಗಲೇ ಇಲ್ಲ. ನಮ್ಮ ಯಜಮಾನ ಈ ಮಣ್ಣಲ್ಲಿ ಹುಟ್ಟಿದ್ದು ತಪ್ಪು ಅಷ್ಟೇ. ಒಂದೇ ಒಂದು ಸೈಜುಗಲ್ಲು ಇದೆ. ಅಲ್ಲೆಲ್ಲೋ ಒಂದು ನಾಯಿ ಮಲಗಿದೆ ಅಷ್ಟೇ." ಎಂದು ಭಾವುಕರಾಗಿದ್ದಾರೆ.


Click it and Unblock the Notifications











