"ಒಬ್ಬ ನಿರ್ಮಾಪಕ ಸೋತರೆ ಈಗಿನ ಸ್ಟಾರ್ಗಳು ಹತ್ತಿರಕ್ಕೂ ಬಿಟ್ಟುಕೊಳ್ಳುವುದಿಲ್ಲ"; ಕೆ.ಮಂಜು
ಕನ್ನಡ ಚಿತ್ರರಂಗದ ಜನಪ್ರಿಯರ ನಿರ್ಮಾಪಕರ ಪಟ್ಟಿಯಲ್ಲಿ ಕೆ. ಮಂಜು ಅವರಿಗೆ ವಿಶೇಷ ಸ್ಥಾನವಿದೆ. ಇಲ್ಲಿವರೆಗೂ ತಮ್ಮ ನಿರ್ಮಾಣ ಸಂಸ್ಥೆಯಿಂದ ಸುಮಾರು 48 ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಪುತ್ರ ಶ್ರೇಯಸ್ ಮಂಜು ನಟಿಸಿರುವ 'ವಿಷ್ಣು ಪ್ರಿಯ' ಅವರ ಸಂಸ್ಥೆಯಿಂದ ಬಂದಿರುವ 48ನೇ ಸಿನಿಮಾ.
ಕೆ. ಮಂಜು ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕರಲ್ಲಿ ಒಬ್ಬರು. ಕನ್ನಡ ಚಿತ್ರರಂಗ ಬೆಳವಣಿಗಳನ್ನು ನೋಡಿಕೊಂಡು ಬಂದಿದ್ದಾರೆ. ಕನ್ನಡದ ಸೂಪರ್ಸ್ಟಾರ್ಗಳಿಗೆ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಕೆಲವು ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟಿದ್ದಾರೆ. ಕೆಲವರು ಸದಾಭಿರುಚಿಯ ಸಿನಿಮಾಗಳನ್ನು ನೀಡಿದ್ದಾರೆ. ಇನ್ನು ಕೆಲವು ಸಿನಿಮಾಗಳು ಸೋತಿವೆ. ಇತ್ತೀಚೆಗೆ ಸಿನಿಮಾ ಮಾಡುವುದನ್ನು ಕಡಿಮೆ ಮಾಡಿದ್ದರೂ, ಪುತ್ರನಿಗಾಗಿ ಸಿನಿಮಾ ಮಾಡುವ ಭರವಸೆ ನೀಡಿದ್ದಾರೆ.

ಇತ್ತೀಚೆಗೆ ನಿರ್ಮಾಪಕ ಕೆ. ಮಂಜು ಫಿಲ್ಮಿಬೀಟ್ ಕನ್ನಡಕ್ಕೆ ಸಂದರ್ಶನ ನೀಡಿದ್ದರು. ಆ ವೇಳೆ ಕನ್ನಡ ಚಿತ್ರರಂಗದಲ್ಲಿ ಆಗುತ್ತಿರುವ ಬೆಳವಣಿಗೆಗಳ ಬಗ್ಗೆ ಅಸಮಧಾನ ಹೊರ ಹಾಕಿದ್ದಾರೆ. ಅದರಲ್ಲೂ ಇಂದಿನ ಸೂಪರ್ಸ್ಟಾರ್ಗಳು ಕನ್ನಡದ ಹಿರಿಯ ನಿರ್ಮಾಪಕರು ಸೋತರೆ ಅವರನ್ನು ಹತ್ತಿರಕ್ಕೂ ಸೇರಿಸುವುದಿಲ್ಲ ಎಂದು ಬೇಸರ ಹೊರಹಾಕಿದ್ದಾರೆ. ಈ ಸಂದರ್ಶನದಲ್ಲಿ ಕೆ ಮಂಜು ಏನು ಹೇಳಿದ್ದಾರೆ? ಅನ್ನೋದನ್ನು ನೋಡುವುದಾರೆ.
ಸಿನಿಮಾ ಸೋತರೆ ಹತ್ತಿರಕ್ಕೂ ಬಿಟ್ಟುಕೊಳ್ಳುವುದಿಲ್ಲ
ಹಿಂದೆ ಇದ್ದ ಕಲಾವಿದರು ನಿರ್ಮಾಪಕರಿಗೆ ಗೌರವ ನೀಡುತ್ತಿದ್ದರು. ಆದರೆ, ಈಗಿನ ಸೂಪರ್ಸ್ಟಾರ್ಗಳು ನಿರ್ಮಾಪಕರ ಒಂದು ಸಿನಿಮಾ ಸೋತರೆ ಹತ್ತಿರಕ್ಕೂ ಸೇರಿಸುವುದಿಲ್ಲ ಎಂದಿದ್ದಾರೆ. "ಹಿರಿಯ ಕಲಾವಿದರು ನಿರ್ಮಾಪಕರನ್ನು ಅನ್ನದಾತರು, ನಮ್ಮ ಮನೆಯವರು ಅಣ್ತಮ್ಮ ಅಂತಾನೇ ಪ್ರೀತಿಸೋರು. ಎಲ್ಲಾ ಸೀನಿಯರ್ ನಟರೂ ಅಷ್ಟೇ. ಈಗಿನ ನಟರು ಗೌರವಿಸುತ್ತಾರೆ. ಆದರೆ, ವ್ಯಾಪಾರ ಮುಖ್ಯ. ಒಬ್ಬ ನಿರ್ಮಾಪಕ ಸೋತರೆ ಸಾಮಾನ್ಯವಾಗಿ ಕೆಲವರು ಹತ್ತಿರಕ್ಕೂ ಬಿಟ್ಟುಕೊಳ್ಳುವುದಿಲ್ಲ. ಸೀನಿಯರ್ ಪ್ರಡ್ಯೂಸರ್ ಆಗಿದ್ದರೂ ಅಷ್ಟೇ." ಎಂದು ಕೆ.ಮಂಜು ಹೇಳಿದ್ದಾರೆ.

"ನಿರ್ಮಾಪಕರದ್ದೂ ತಪ್ಪು ಇದೆ"
"ನಮ್ಮ ಪಡ್ರ್ಯೂಸರ್ಗಳೂ ಕೆಲವು ತಪ್ಪುಗಳನ್ನು ಮಾಡಿರುತ್ತಾರೆ. ಮಾತಾಡಿದಷ್ಟು ಸಂಭಾವನೆಯನ್ನು ಕೊಡುವುದಿಲ್ಲ. ಲಾಸ್ ಆಗಿರುತ್ತೆ. ಏನೋ ಆಗಿರುತ್ತೆ. ಈಗಿನ ನಟರೆಲ್ಲ ಕಮರ್ಷಿಯಲ್. ಅವರು ಸೀನಿಯರ್ ನಿರ್ಮಾಪಕರನ್ನು ಸೇರಿಸಿಕೊಳ್ಳುವುದಿಲ್ಲ. ಅವರು ಹೇಳಿದ ದುಡ್ಡು ಕೊಡುವುದಿಲ್ಲ ಅನ್ನೋದು ಆರೋಪ. ಕೆಲವು ಕಲಾವಿದರು ಗೌರವ ಕೊಡುತ್ತಾರೆ. ಸಿನಿಮಾ ಅಂತ ಬಂದಾಗ ಸ್ವಲ್ಪ ಹಿಂದೆ ಬೀಳುತ್ತಾರೆ." ಎನ್ನುತ್ತಾರೆ ಕೆ. ಮಂಜು.
"ಕಲಾವಿದರೂ ಕಷ್ಟ ಪಟ್ಟಿದ್ದಾರೆ"
"ಈಗ ಮೇಲೆ ಬಂದಿರುವ ಕಲಾವಿದರು ಯಾರೂ ನೇರವಾಗಿ ಗೆದ್ದಿಲ್ಲ. ಎಲ್ಲರೂ ತುಂಬಾನೇ ಕಷ್ಟ ಪಟ್ಟಿದ್ದಾರೆ. ಯಾವ್ಯಾವ ಕಲಾವಿದರು ಈಗ ರನ್ನಿಂಗ್ನಲ್ಲಿ ಇದ್ದಾರೆ, ದರ್ಶನ್ ಅವರು ಆಗಬಹುದು, ಸುದೀಪ್ ಅವರು ಆಗಬಹುದು, ಯಶ್ ಅವರು ಆಗಬಹುದು, ದುನಿಯಾ ವಿಜಯ್ ಅವರು ಆಗಬಹುದು. ಇವರೆಲ್ಲರೂ ತುಂಬಾನೇ ಕಷ್ಟ ಬಿದ್ದು ಬಂದಿದ್ದಾರೆ. ಅದರಲ್ಲಿ ಅದೃಷ್ಟವಂತ ಅಂದರೆ ಗಣೇಶ್ ಕಾಮಿಡಿ ಮಾಡಿಕೊಂಡು ಹಿಂಗೆ ಚಾನ್ಸ್ ಗಿಟ್ಟಿಸಿಕೊಂಡ. ಹಾಗೇ ಧ್ರುವ ಸರ್ಜಾ ಕೂಡ ಚಾನ್ಸ್ ಹೊಡೆದರು." ಎನ್ನುತ್ತಾರೆ.
"ಹಳೆಯ ನಿರ್ಮಾಪಕರಿಗೆ ಸಪೋರ್ಟ್ ಮಾಡಬೇಕು"
ಫಿಲ್ಮಿಬೀಟ್ ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ "ಕಲಾವಿದರು ಈ ಮಟ್ಟಕ್ಕೆ ಬೆಳೆಯುವುದು ಅಂದರೆ ಸುಲಭ ಅಲ್ಲ. ಜನತೆ ಅವರಿಗೆ ಆಶೀರ್ವಾದ ಮಾಡಿದ್ದಾರೆ. ಅವರೆಲ್ಲರೂ ಚಿತ್ರರಂಗಕ್ಕೆ ಒಂದು ಆಸ್ತಿ ಅಂತ ಹೇಳುವುದಕ್ಕೆ ಇಷ್ಟ ಪಡುತ್ತೇನೆ. ಆದರೆ, ಅವರೆಲ್ಲರೂ ಹಳೆಯ ನಿರ್ಮಾಪಕರಿಗೆ ಸಪೋರ್ಟ್ ಮಾಡಬೇಕು ಅಂತ ಮನವಿ ಮಾಡುತ್ತೇನೆ." ಎಂದು ನಿರ್ಮಾಪಕ ಕೆ.ಮಂಜು ಫಿಲ್ಮಿಬೀಟ್ ಕನ್ನಡ ಜೊತೆಗಿನ ಸಂದರ್ಶನದಲ್ಲಿ ಹೇಳಿದ್ದಾರೆ.


Click it and Unblock the Notifications











