"ಚಿತ್ರರಂಗ ಅನ್ನೋದು ಹಾರ್ಟ್ ಬೀಟ್ ಇದ್ದಂಗೆ, ಏರಿಳಿತ ಇರಬೇಕು ಇಲ್ಲದಿದ್ದರೆ ಸತ್ತಂತೆ"; ಆರ್.ಚಂದ್ರು
ಕನ್ನಡದ ಚಿತ್ರರಂಗದ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಬಣಿಸುತ್ತಿದೆ. ನಿರೀಕ್ಷೆ ಇಟ್ಟು ಕಾದಿದ್ದೆಲ್ಲ ಸುಳ್ಳಾಗುತ್ತಿದೆ. ಸಿನಿಮಾ ಮಂದಿಗಷ್ಟೇ ಅಲ್ಲ. ಸಿನಿ ಪ್ರಿಯರಿಗೂ ಕೂಡ ನಿರಾಸೆಯಾಗಿದೆ. 'ಕೆಜಿಎಫ್ 2', 'ಕಾಂತಾರ'ದ ಬಳಿಕ ಕನ್ನಡ ಸಿನಿಮಾಗಳು ಕರ್ನಾಟಕದಲ್ಲಿಯೇ ಸದ್ದು ಮಾಡುತ್ತಿಲ್ಲ. ಇನ್ನು ಪ್ಯಾನ್ ಇಂಡಿಯಾ ರೀಚ್ ಆಗುವುದು ಕನಸಿನ ಮಾತಾಗಿದೆ. ಇದು ಕನ್ನಡ ಸಿನಿಮಾ ಮಂದಿಯನ್ನು ಆತಂಕಕ್ಕೆ ತಳ್ಳಿದೆ.
ಕಳೆದ ಕೆಲವು ದಿನಗಳಿಂದ ಬ್ಯಾಕ್ ಟು ಬ್ಯಾಕ್ ಮೀಟಿಂಗ್ಗಳು ಆಗುತ್ತಿವೆ. ಶಿವಣ್ಣನ ಮನೆಯಲ್ಲಿ ರಹಸ್ಯವಾಗಿ ಮೀಟಿಂಗ್ ನಡೆದಿದೆ. ಫಿಲ್ಮ್ ಚೇಂಬರ್ ಕೂಡ ತಣ್ಣಗಾಗಿದೆ. ಮತ್ತೆ ಸರ್ಕಾರದ ಮೊರೆ ಹೋಗುವುದಕ್ಕೆ ಸಿನಿಮಾ ಮಂದಿ ನಿರ್ಧರಿಸಿದ್ದಾರೆ. ಇಷ್ಟಾದರೂ ಚಿತ್ರರಂಗದ ಸಮಸ್ಯೆಗಳ ಬಗ್ಗೆ ಯಾರೊಬ್ಬರೂ ಮುಂದೆ ಬಂದು ಧ್ವನಿ ಎತ್ತುತ್ತಿಲ್ಲ. ಸೂಪರ್ಸ್ಟಾರ್ಗಳು ಸೈಲೆಂಟ್ ಆಗಿದ್ದಾರೆ. ಹಿರಿಯರು ವಿಷಾದ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ಕನ್ನಡ ಚಿತ್ರರಂಗದಲ್ಲಿ ಇಷ್ಟೇ ನಡೆಯುತ್ತಿದೆ.

2025 ಆದರೂ ಆಶಾದಾಯಕ ಆಗಬಹುದೆಂಬ ನಿರೀಕ್ಷೆಯಿತ್ತು. ಆದರೆ, ಅದೂ ಹುಸಿಯಾಗಿದೆ. ಇನ್ನೇನು ಆರು ತಿಂಗಳು ಮುಗಿದೇ ಹೋಯ್ತು. 2025ರಲ್ಲಿ ಕಳೆದ ಐದು ತಿಂಗಳಲ್ಲಿ ಬರೋಬ್ಬರಿ 100ಕ್ಕೂ ಹೆಚ್ಚು ಸಿನಿಮಾಗಳು ರಿಲೀಸ್ ಆಗಿವೆ. ಆದರೆ, ಅದರಲ್ಲಿ ಮೆಗಾ ಬ್ಲಾಕ್ ಬಸ್ಟರ್ ಅಲ್ಲ. ಹಿಟ್ ಕ್ಯಾಟಗರಿಗೆ ಸೇರಿಸುವ ಒಂದೇ ಒಂದು ಸಿನಿಮಾನೂ ಇಲ್ಲ. ಇದು ಕನ್ನಡ ಚಿತ್ರರಂಗದ ಪರಿಸ್ಥಿತಿಯನ್ನು ತೋರಿಸುತ್ತಿದೆ. ಇನ್ನು ಆರು ತಿಂಗಳ ಪರಿಸ್ಥಿತಿ ಹೀಗೆ ಇದ್ದರೆ ಮುಂದೆ ಹೇಗೆ? ಎನ್ನುವ ಆತಂಕವಂತೂ ಶುರುವಾಗಿದೆ.
ಹಾಗಿದ್ದರೆ, ಕನ್ನಡ ಚಿತ್ರರಂಗದ ಯಾಕಿಷ್ಟು ಸಮಸ್ಯೆಗಳನ್ನು ಎದುರಿಸುತ್ತಿದೆ? ಈ ಗಂಭೀರ ಸಮಸ್ಯೆಯಿಂದ ಹೊರ ಬರುವುದು ಹೇಗೆ? ಇದೇ ಸಿನಿಮಾ ಮಂದಿಗೆ ಯಕ್ಷ ಪ್ರಶ್ನೆಯಾಗಿದೆ. 'ಕಬ್ಜ' ಸಿನಿಮಾ ನಿರ್ದೇಶಿಸಿದ ಆರ್.ಚಂದ್ರು ಫಿಲ್ಮಿಬೀಟ್ ಕನ್ನಡಕ್ಕೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಕನ್ನಡ ಚಿತ್ರರಂಗ ಸದ್ಯ ಎದುರಿಸುತ್ತಿರುವ ಸಮಸ್ಯೆಯೇನು? ಯಾಕೆ ಈ ಪರಿಸ್ಥಿತಿಯ ತಲುಪಿದೆ? ಎನ್ನುವ ಬಗ್ಗೆ ವಿಶ್ಲೇಷಣೆ ಮಾಡಿದ್ದಾರೆ.

ಥಿಯೇಟರ್ಗಂತಲೇ ಸಿನಿಮಾ ಮಾಡ್ಬೇಕು
ಕನ್ನಡ ಚಿತ್ರರಂಗದ ನಿರ್ಮಾಪಕರು ಸ್ಯಾಟಲೈಟ್ ಹಾಗೂ ಓಟಿಟಿಯಿಂದ ಎಷ್ಟು ಹಣ ಬರುತ್ತೆ ಮೊದಲು ಲೆಕ್ಕಾಚಾರ ಹಾಕುತ್ತಿದ್ದಾರೆ. ಇಲ್ಲಿ ದೊಡ್ಡ ಮೊತ್ತದ ಹಣ ಸಿಗುತ್ತೆ ಎನ್ನುವ ನಿರೀಕ್ಷೆಯನ್ನು ಇಟ್ಟುಕೊಂಡೇ ಸಿನಿಮಾ ಮಾಡುತ್ತಾರೆ. ಆದರೆ, ಥಿಯೇಟರ್ ಕಡೆಗೆ ಗಮನ ಕೊಡುವುದನ್ನೇ ಕಡಿಮೆ ಮಾಡಿದ್ದಾರೆ. ಅಂದರೆ, ನಿರ್ಮಾಪಕರು ಥಿಯೇಟರ್ಗಾಗಿ ಸಿನಿಮಾ ಮಾಡುತ್ತಿಲ್ಲ ಎಂಬುವುದು ಆರ್. ಚಂದ್ರು ಅಭಿಪ್ರಾಯ ಪಟ್ಟಿದ್ದಾರೆ.
"ಚಿತ್ರರಂಗ ಅನ್ನೋದು ಹಾರ್ಟ್ ಬೀಟ್ ತರ. ಹಾರ್ಟ್ ಬೀಟ್ ಒಂದೇ ರೀತಿ ಇದ್ದರೆ ಅದು ಡೆತ್ ಅಂತಲೇ ಅರ್ಥ. ಮೇಲೂ ಹೋಗಬೇಕು. ಕೆಳಗೂ ಬರಬೇಕು. ಹಾಗಿದ್ದರೇನೆ ಸಿನಿಮಾ ಇಂಡಸ್ಟ್ರಿ ಗೆಲ್ಲುವುದು. ನಾನು ತಾಜ್ಮಹಲ್ ಅಂತಹ ಸಿನಿಮಾ ಮಾಡುವುದಕ್ಕೆ ಬಂದಾಗ, ಸ್ಯಾಟಲೈಟ್ ಹಾಗೂ ಓಟಿಟಿಯನ್ನು ನಂಬಿ ಸಿನಿಮಾ ಮಾಡಿರಲಿಲ್ಲ. ಆಗ ಸಂಪೂರ್ಣವಾಗಿ ಥಿಯೇಟರ್ಗೆಂದು ಸಿನಿಮಾ ಮಾಡಿದ್ವಿ. ಆಗ ಜನರು ಥಿಯೇಟರ್ಗೆ ಬಂದು ಸಿನಿಮಾ ನೋಡಿದ್ದರು. ಆಗ ಜನರು ದುಡ್ಡು ಕೊಟ್ಟರು, ಗೆದ್ವಿ. ಮುಂದುವರೆದ ಕಾಲದಲ್ಲಿ ಸ್ಯಾಟಲೈಟ್ ಬಂತು, ಓಟಿಟಿ ಬಂತು. ಆದು ನಿರ್ಮಾಪಕರಿಗೆ ಬೋನಸ್ ಆಯ್ತು." ಎನ್ನುತ್ತಾರೆ ಕಬ್ಜ ನಿರ್ದೇಶಕ ಆರ್.ಚಂದ್ರು.

ಸಂಭಾವನೆ ಹೆಚ್ಚಾಯ್ತು, ಬಜೆಟ್ ಜಾಸ್ತಿ ಆಯ್ತು
ಕೋವಿಡ್ ಬಳಿಕ ಕನ್ನಡ ಚಿತ್ರರಂಗದ ಪರಿಸ್ಥಿತಿ ಬದಲಾಯಿತೇ? ಮೇಲ್ನೋಟಕ್ಕೆ ಈ ಮಾತು ನಿಜ. ಪ್ರೇಕ್ಷಕರ ಆಸಕ್ತಿಗೆ ಅನುಗುಣವಾಗಿ ಸಿನಿಮಾ ಮಂದಿ ಆಲೋಚನೆ ಮಾಡುವುದಕ್ಕೆ ಶುರು ಮಾಡಿದ್ದರು. ಇನ್ನೊಂದು ಕಡೆ ಸ್ಯಾಟಲೈಟ್ ಹಾಗೂ ಓಟಿಟಿಗೆ ಬೆಲೆ ಬಂದಿದ್ದರಿಂದ ಕಲಾವಿದರು ಹಾಗೂ ತಂತ್ರಜ್ಞರ ಸಂಭಾವನೆಯು ಹೆಚ್ಚಾಯ್ತು.
"ಕೋವಿಡ್ ಬಂದಾಗ ಜನರು ಮನೆಯಲ್ಲಿ ಕೂತು ಸಿನಿಮಾ ನೋಡುವುದಕ್ಕೆ ಶುರು ಮಾಡಿದ್ದರು. ಆಗ ಓಟಿಟಿಯವರಿಗೆ ವೀಕ್ಷಕರ ಸಂಖ್ಯೆ ತುಂಬಾನೇ ಜಾಸ್ತಿ ಆಯ್ತು. ಒಳ್ಳೊಳ್ಳೆ ರೇಟ್ ಕೊಟ್ಟರು. ಕೋವಿಡ್ ಕಡಿಮೆ ಆದ್ಮೇಲೆ ಜನರು ಥಿಯೇಟರ್ಗೂ ಬಂದು ಸಿನಿಮಾ ನೋಡುವುದಕ್ಕೆ ಶುರು ಮಾಡಿದ್ದರು. ಈಗ ಏನಾಯ್ತು, ಸಿನಿಮಾದ ಬಜೆಟ್ ಜಾಸ್ತಿ ಆಯ್ತು. ಕಲಾವಿದರು, ಟೆಕ್ನಿಷಿಯಲ್ ಸಂಭಾವನೆ ಹೆಚ್ಚಾಯ್ತು. ನಿರ್ಮಾಪಕರಿಗೆ ಸ್ಯಾಟಲೈಟ್ ಹಾಗೂ ಓಟಿಟಿಯಿಂದ ಹಣ ಬರುತ್ತಿತ್ತು. ಹೀಗಾಗಿ ಸಂಭಾವನೆ ಹೆಚ್ಚು ಕೊಡುವುದಕ್ಕೆ ನಿರ್ಮಾಪಕರಿಗೆ ಸಮಸ್ಯೆ ಆಗಲಿಲ್ಲ. ಕ್ರಮೇಣ ಇದು ಹೊರೆಯಾಗುವುದಕ್ಕೆ ಶುರುವಾಗಿದೆ." ಎನ್ನುವುದು ಆರ್.ಚಂದ್ರು ಅಭಿಪ್ರಾಯ.
5 ಜಿ, ಓಟಿಟಿ ಕ್ರಾಂತಿ
ಭಾರತದಲ್ಲಿ ಮೊಬೈಲ್ ಬಳಕೆ ಹೆಚ್ಚಾಗಿದೆ. 5 ಜಿ ಕ್ರಾಂತಿ ಆದರಲ್ಲಿಂದ ಹಳ್ಳಿಯಲ್ಲಿರುವ ವ್ಯಕ್ತಿ ಓಟಿಟಿ ನೋಡುವುದಕ್ಕೆ ಶುರು ಮಾಡಿದ್ದಾನೆ. ಬೇರೆ ಭಾಷೆ, ಬೇರೆ ದೇಶದ ಸಿನಿಮಾಗಳು ಸುಲಭವಾಗಿ ಸಿಗುತ್ತಿವೆ. ಇದು ಕೂಡ ನಿರ್ಮಾಪಕರಿಗೆ ಸವಾಲಾಗಿ ಪರಿಣಮಿಸಿದೆ. "ಈಗ ನಿರ್ಮಾಪಕರಿಗೆ ಎರಡು ಚಾಲೆಂಜ್ ಇದೆ. ಕ್ವಾಲಿಟಿಯನ್ನು ಕೊಡಲೇಬೇಕಾದ ಅನಿವಾರ್ಯತೆ ಇದೆ. ಕ್ವಾಲಿಟಿ ಸಿನಿಮಾ ಮಾಡುವುದಕ್ಕೆ ಹೋದರೆ, ಬಜೆಟ್ ಬೇಕು. ಎರಡನೆಯದು ಕರ್ನಾಟಕದಲ್ಲಿ ಎಲ್ಲಾ ಭಾಷೆಯ ಸಿನಿಮಾ ನೋಡುತ್ತಾರೆ. ಅದೇ ತೆಲುಗಿಗೆ ಹೋದರೆ, ಕನ್ನಡ ಸಿನಿಮಾದ ಡಬ್ಬಿಂಗ್ ವರ್ಷನ್ ನೋಡುತ್ತಾರೆ. ಓಟಿಟಿ ಮಂದಿ ಕೂಡ ತೆಲುಗು ಭಾಷೆಯಲ್ಲಿಯೇ ರಿಲೀಸ್ ಮಾಡುವುದಕ್ಕೆ ಇಷ್ಟ ಪಡುತ್ತಾರೆ." ಅನ್ನೋದು ಆರ್.ಚಂದ್ರು ಅನುಭವ.
ಎಲ್ಲಾ ಭಾಷೆಯಲ್ಲೂ ಸಮಸ್ಯೆಯಿದೆ
"ಎಲ್ಲಾ ಭಾಷೆಯವರಿಗೂ ಸಮಸ್ಯೆಯಿದೆ. ನಾವು ಕರ್ನಾಟಕದಲ್ಲಿ ಇದ್ದೀವಿ. ನಮಗೆ ಹಾಗೆ ಅನಿಸುತ್ತಿದೆ. ತೆಲುಗಿನಲ್ಲಿ 'ಪುಷ್ಪ 2' ಕಾಣಿಸುತ್ತೆ. ಆದರೆ, ಅದರ ಹಿಂದೆ 200 ಸಿನಿಮಾ ಫ್ಲಾಪ್ ಆಗಿದ್ದು ಕಾಣಿಸುವುದಿಲ್ಲ. ನಾವೂ ಭ್ರಮೆಯಲ್ಲೇ ಇದ್ದೇವೆ. ಯಾಕಂದ್ರೆ, ಎಲ್ಲಾ ಭಾಷೆಯೂ ಸಮಸ್ಯೆಯಲ್ಲಿದೆ. ಈಗ ನಾನು ಫಾದರ್ ಸಿನಿಮಾ ಮಾಡಿದ್ದೀನಿ. ಅದನ್ನು ಥಿಯೇಟರ್ಗೆ ಅಂತಲೇ ಮಾಡಿದ್ದೇನೆ. ನನಗೆ ಒಂದು ಬ್ರ್ಯಾಂಡ್ ಇದೆ. ಸಿನಿಮಾ ಚೆನ್ನಾಗಿ ಮಾಡಿದರೆ, ಸ್ಯಾಟಲೈಟ್ ಹಾಗೂ ಓಟಿಟಿಯವರು ಬಂದು ತೆಗೆದುಕೊಳ್ಳುತ್ತಾರೆ." ಎನ್ನುವ ಭರವಸೆಯಲ್ಲಿ ಆರ್. ಚಂದ್ರು ಇದ್ದಾರೆ.
ಸಮಸ್ಯೆಗೆ ಪರಿಹಾರ ಏನು?
ಸದ್ಯದ ಪರಿಸ್ಥಿತಿಯಲ್ಲಿ ಥಿಯೇಟರ್ ಹಾಗೂ ಓಟಿಟಿ ಎರಡೂ ಕಡೆ ಸಿನಿಮಾ ನೋಡುತ್ತಿದ್ದಾರೆ. ಈ ಕಾರಣಕ್ಕೆ ಓಟಿಟಿಯವರಿಗೂ ಸಮಸ್ಯೆ ಆಗಿದೆ. ಹೀಗಾಗಿ ಎಲ್ಲಾ ಸಿನಿಮಾಗಳನ್ನು ಖರೀದಿ ಮಾಡುತ್ತಿಲ್ಲ. ಇದು ಬರೀ ಕನ್ನಡಕ್ಕೆ ಅಷ್ಟೇ ಅಲ್ಲ. ಇದು ಎಲ್ಲಾ ಭಾಷೆಯಲ್ಲೂ ಈ ಸಮಸ್ಯೆಯಿದೆ. ಈಗ ಜನರ ಮನಸ್ಥಿತಿನೂ ಬದಲಾಗಿದೆ. ಥಿಯೇಟರ್ನಲ್ಲಿ ಎಲ್ಲಾ ಭಾಷೆಯ ಸಿನಿಮಾಗಳನ್ನು ಹೇಗೆ ನೋಡುತ್ತಾರೋ? ಹಾಗೆ ಓಟಿಟಿಯಲ್ಲೂ ನೋಡುತ್ತಿದ್ದಾರೆ. "ತಕ್ಷಣಕ್ಕೆ ದೊಡ್ಡ ದೊಡ್ಡ ಸ್ಟಾರ್ಗಳು ವರ್ಷಕ್ಕೆ ಎರಡು ಸಿನಿಮಾ ಅಂತ ಮಾಡಬೇಕು. ಹತ್ತು ಮಂದಿ ಸ್ಟಾರ್ಗಳು ಏನಿದ್ದಾರೆ ಅವರು ಬೇಗ ಬೇಗ ಸಿನಿಮಾ ಮಾಡಿದರೆ, ಇಂಡಸ್ಟ್ರಿ ಹಾಗೇ ಬೆಳವಣಿಗೆ ಆಗುತ್ತೆ. ಯಾಕಂದ್ರೆ ಅವರ ಫ್ಯಾನ್ ಬೇಸ್ ಕಾಯ್ತಾ ಇರುತ್ತಾರೆ. ಈಗ ಸುದೀಪ್ ಸರ್ ಸಿನಿಮಾ ಬಂದರೆ, ಫ್ಯಾನ್ ಬೇಸ್ ಕಾಯುತ್ತಿರುತ್ತೆ. ಹಾಗಂತ ಅವರ ತಪ್ಪು ಅಂತ ಹೇಳುತ್ತಿಲ್ಲ. ಅವರ ಆಲೋಚನೆ, ಪರಿಸ್ಥಿತಿ ಏನಿರುತ್ತೋ ಗೊತ್ತಿಲ್ಲ. ಆದರೆ, ಸಿನಿಮಾ ಒಂದರ ಹಿಂದೊಂದು ಮಾಡಿದರೆ, ಇಂಡಸ್ಟ್ರಿ ಮತ್ತೆ ಟ್ರ್ಯಾಕ್ಗೆ ಬರುತ್ತೆ." ಎನ್ನುತ್ತಾರೆ ಆರ್.ಚಂದ್ರು.


Click it and Unblock the Notifications











