"ನನಗೆ ಬೆದರಿಕೆ ಹೊಸದಲ್ಲ, ನಾನು ತಪ್ಪು ಮಾಡಿಲ್ಲ, ಕ್ಷಮೆ ಕೇಳಲ್ಲ"; ಮತ್ತೆ ಕಮಲ್ ಮೊಂಡುವಾದ
ಕನ್ನಡ ಭಾಷೆಯ ಬಗ್ಗೆ ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆ ಭಾರೀ ಅಸಮಾಧಾನಕ್ಕೆ ಗುರಿಯಾಗಿದೆ. ಕಮಲ್ ಕ್ಷಮೆ ಕೇಳಬೇಕು ಎಂದು ಕನ್ನಡಿಗರು ಪಟ್ಟು ಹಿಡಿದಿದ್ದಾರೆ. ನಾನು ಕ್ಷಮೆ ಕೇಳುವ ಮಾತೇಯಿಲ್ಲ ಎಂದು ಕಮಲ್ ಹಾಸನ್ ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ.
ಚೆನ್ನೈನಲ್ಲಿ ಇಂದು(ಮೇ 30) ಮಾಧ್ಯಮಗಳ ಜೊತೆ ಕಮಲ್ ಹಾಸನ್ ಮಾತನಾಡಿದ್ದಾರೆ. ಈ ವೇಳೆ ಕರ್ನಾಟಕದಲ್ಲಿ 'ಥಗ್ ಲೈಫ್' ಚಿತ್ರವನ್ನು ಬ್ಯಾನ್ ಮಾಡುವ ಎಚ್ಚರಿಕೆ ಕೊಟ್ಟಿದ್ದಾರೆ. ಈ ಬಗ್ಗೆ ಏನು ಹೇಳುತ್ತೀರಾ ಎನ್ನುವ ಪತ್ರಕರ್ತರ ಪ್ರಶ್ನೆಗೆ ಕಮಲ್ ಪ್ರತಿಕ್ರಿಯಿಸಿದ್ದಾರೆ. "ನಾನು ತಪ್ಪು ಮಾಡಿಲ್ಲ, ಕ್ಷಮೆ ಕೇಳುವ ಮಾತೇಯಿಲ್ಲ" ಎಂದು ಮತ್ತೊಮ್ಮೆ ಹೇಳಿದ್ದಾರೆ. ಆ ಮೂಲಕ ತಮ್ಮ ಮೊಂಡುವಾದವನ್ನು ಮುಂದುವರೆಸಿದ್ದಾರೆ.

ರಾಜ್ಯಸಭಾ ಚುನಾವಣೆಗೆ ಕಮಲ್ ಹಾಸನ್ ಅವರನ್ನು ಆಯ್ಕೆ ಮಾಡಲು ಡಿಎಂಕೆ ನಿರ್ಧರಿಸಿದೆ. ರಾಜ್ಯಸಭೆ ಚುನಾವಣೆಗೆ ಸಿದ್ಧತೆ ನಡೆಯುತ್ತಿದೆ. ಶೀಘ್ರದಲ್ಲೇ ನಾಮಪತ್ರ ಸಲ್ಲಿಸುತ್ತೇನೆ ಎಂದು ಕಮಲ್ ಹಾಸನ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಮೊದಲಿನಿಂದಲೂ ನಾನು ತಮಿಳುನಾಡು ಪರ ಧ್ವನಿ ಎತ್ತುತ್ತಿದ್ದೇನೆ. ಮುಂದೆ ರಾಜ್ಯಸಭೆಯಲ್ಲಿ ಕೂಡ ಅದು ಮುಂದುವರೆಯುತ್ತದೆ ಎಂದಿದ್ದಾರೆ. ಇದರ ಬೆನ್ನಲ್ಲೇ ಕರ್ನಾಟಕದಲ್ಲಿ ವಿವಾದ ಸೃಷ್ಟಿಸಿರುವ ಹೇಳಿಕೆ ಬಗ್ಗೆ ಪ್ರಶ್ನೆ ತೂರಿ ಬಂತು.
"ಇದು ಪ್ರಜಾಪ್ರಭುತ್ವ ದೇಶ. ನಾನು ಕಾನೂನು, ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟಿದ್ದೇನೆ. ಪ್ರೀತಿ ಯಾವಾಗಲೂ ಗೆಲ್ಲುತ್ತದೆ. ಕರ್ನಾಟಕದ ಮೇಲಿನ ನನ್ನ ಪ್ರೀತಿ ಸತ್ಯ. ಆಂಧ್ರ, ಕೇರಳದ ಬಗ್ಗೆ ನನ್ನ ಪ್ರೀತಿ ಸತ್ಯ. ಅಜೆಂಡಾ ಇಟ್ಟುಕೊಂಡವರಿಗೆ ಮಾತ್ರ ಅನುಮಾನ ಇರುತ್ತದೆ. ಉಳಿದರವರಿಗೆ ಅಲ್ಲ" ಎಂದ ಕಮಲ್ ಹಾಸನ್ ಪ್ರತಿಕ್ರಿಯಿಸಿದ್ದಾರೆ.
ಕರ್ನಾಟಕದಲ್ಲಿ 'ಥಗ್ ಲೈಫ್' ಸಿನಿಮಾ ಬಿಡುಗಡೆಗೆ ಅವಕಾಶ ಕೊಡಲ್ಲ, ಸಿನಿಮಾ ಬ್ಯಾನ್ ಮಾಡ್ತೀವಿ ಎನ್ನುತ್ತಿದ್ದಾರಲ್ಲ, ಅದಕ್ಕೆ ಏನು ಹೇಳ್ತೀರಾ? ಕ್ಷಮೆ ಕೇಳ್ತೀರಾ? ಎನ್ನುವ ಪ್ರಶ್ನೆಗೆ "ನನಗೆ ಮೊದಲಿನಿಂದಲೂ ಬೆದರಿಕೆಗಳು ಬರುತ್ತದೆ ಇದೆ. ನಾನು ತಪ್ಪು ಮಾಡಿದ್ದರೆ ಕ್ಷಮೆ ಕೇಳುತ್ತೇನೆ. ತಪ್ಪು ಮಾಡದಿದ್ದರೆ ಕ್ಷಮೆ ಕೇಳಲ್ಲ. ಇದು ನನ್ನ ಜೀವನಶೈಲಿ" ಎಂದು ನಟ ಕಮಲ್ ಹಾಸನ್ ತಮ್ಮ ಪಟ್ಟು ಮುಂದುವರೆಸಿದ್ದಾರೆ.
ಕಮಲ್ ಹಾಸನ್ ಹೇಳಿಕೆ ಬಗ್ಗೆ ರಾಜ್ಯದಲ್ಲಿ ಆಕ್ರೋಶ ಮುಂದುವರೆದಿದೆ. ಕ್ಷಮೆ ಕೇಳಲೇಬೇಕು ಎಂದು ಕನ್ನಡ ಪರ ಸಂಘಟನೆಗಳು ಒತ್ತಾಯಿಸುತ್ತಿದ್ದಾರೆ. ಕಮಲ್ ಹೇಳಿಕೆ ಬಗ್ಗೆ ನಟ ಶಿವರಾಜ್ಕುಮಾರ್ ಕೂಡ ಪ್ರತಿಕ್ರಿಯಿಸಿದ್ದರು. ಈ ಸಮಸ್ಯೆಯನ್ನು ಕಮಲ್ ಹಾಸನ್ ಸರಿಪಡಿಸಿಕೊಳ್ಳುತ್ತಾರೆ ಎಂದಿದ್ದರು. ಕನ್ನಡದ ಬಗ್ಗೆ ಕಮಲ್ ಅವರಿಗೂ ಪ್ರೀತಿಯಿದೆ. ಅವರು ಬೆಂಗಳೂರಿಗೆ ಬಂದಿದ್ದಾಗ ಕೇಳಬಹುದಿತ್ತು. ಈಗ ಯಾಕೆ ದೊಡ್ಡ ವಿಚಾರ ಮಾಡುತ್ತೀರಾ? ಬರೀ ಬಾಯಿ ಮಾತಿನಲ್ಲಿ ಕನ್ನಡ ಎನ್ನಬಾರದು, ಕನ್ನಡಕ್ಕಾಗಿ ನಾನು ಹೋರಾಟ ಮಾಡ್ತೀನಿ. ಕನ್ನಡಕ್ಕಾಗಿ ಸಾಯ್ತೀನಿ ಎಂದು ಶಿವಣ್ಣ ಹೇಳಿದ್ದರು.
ಕರ್ನಾಟಕ ಫಿಲ್ಮ್ ಚೇಂಬರ್ ಕೂಡ 'ಥಗ್ ಲೈಫ್' ಸಿನಿಮಾ ಬಿಡುಗಡೆಗೆ ಅಸಹಕಾರ ತೋರುವುದಾಗಿ ಹೇಳಿದೆ. ಚಿತ್ರವನ್ನು ಬ್ಯಾನ್ ಮಾಡುವ ಅಧಿಕಾರ ನಮಗೆ ಇಲ್ಲ. ಆದರೆ ಕಮಲ್ ಹಾಸನ್ ಹೇಳಿಕೆ ಖಂಡಿಸುತ್ತೇವೆ. ನಾವು ಕೂಡ ಈ ಬಗ್ಗೆ ಕಮಲ್ ಅವರನ್ನು ಸಂಪರ್ಕಿಸುತ್ತಿದ್ದೇವೆ. ಅವ್ರು ಕರೆಗೆ ಸಿಗುತ್ತಿಲ್ಲ ಎಂದು ಫಿಲ್ಮ್ ಚೇಂಬರ್ ಅಧ್ಯಕ್ಷ ನರಸಿಂಹಲು ಹೇಳಿದ್ದಾರೆ. ಮಣಿರತ್ನಂ ನಿರ್ದೇಶನದ 'ಥಗ್ ಲೈಫ್' ಸಿನಿಮಾ ಮುಂದಿನ ವಾರ ತೆರೆಗೆ ಬರಬೇಕಿದೆ. ಸಿಂಬು ಕೂಡ ಈ ಚಿತ್ರದಲ್ಲಿ ಕಮಲ್ ಹಾಸನ್ ಜೊತೆ ನಟಿಸಿದ್ದಾರೆ. ಸಿನಿಮಾ ಬಿಡುಗಡೆ ಹೊಸ್ತಿಲಲ್ಲಿ ಸಮಸ್ಯೆ ಎದುರಾಗಿದೆ. ಇದಕ್ಕೆ ಯಾವ ರೀತಿಯ ಅಂತ್ಯ ಸಿಗುತ್ತದೆ ಕಾದು ನೋಡಬೇಕಿದೆ.


Click it and Unblock the Notifications











