ಕರ್ನಾಟಕದಲ್ಲಿ 'ಥಗ್ ಲೈಫ್' ಯಾಕೆ ಬಿಡುಗಡೆ ಆಗ್ಲಿಲ್ಲ? ವಿತರಕ ವೆಂಕಟೇಶ್ ಏನಂತಾರೆ?
ಕಮಲ್ ಹಾಸನ್ ಕೊನೆಗೂ ಕನ್ನಡಿಗರ ಕ್ಷಮೆ ಕೇಳಲಿಲ್ಲ. ಕರ್ನಾಟಕದ ಚಿತ್ರಮಂದಿರಗಳಲ್ಲಿ 'ಥಗ್ ಲೈಫ್' ಸಿನಿಮಾ ಬಿಡುಗಡೆ ಆಗಲಿಲ್ಲ. ಅಷ್ಟರಲ್ಲೇ ಓಟಿಟಿಗೆ ಬಂದುಬಿಟ್ಟಿದೆ. ನೆಟ್ಫ್ಲಿಕ್ಸ್ನಲ್ಲಿ 5 ಭಾಷೆಗಳಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದೆ. ಬಹಳ ಹೀನಾಯವಾಗಿ ಸೋಲುಂಡ ಸಿನಿಮಾ ತಿಂಗಳು ಕಳೆಯುವ ಮುನ್ನ ಡಿಜಿಟಲ್ ಪ್ಲಾಟ್ಫಾರ್ಮ್ಗೆ ಬಂದಿದೆ.
ಸುಪ್ರೀಂ ಅನುವು ಮಾಡಿಕೊಟ್ಟರೂ ಕರ್ನಾಟಕದಲ್ಲಿ ಯಾಕೆ ಸಿನಿಮಾ ಬಿಡುಗಡೆ ಮಾಡ್ಲಿಲ್ಲ ಎನ್ನುವ ಬಗ್ಗೆ ವಿತರಕ ವೆಂಕಟೇಶ್ ಮಾತನಾಡಿದ್ದಾರೆ. ಕಮಲ್ ಹಾಸನ್ ಯಾವುದೇ ವಿವಾದ ಮಾಡಿಕೊಳ್ಳದೇ ಜೂನ್ 5ರಂದು ಕರ್ನಾಟಕದಲ್ಲಿ ಕೂಡ ಸಿನಿಮಾ ಬಿಡುಗಡೆ ಆಗಿದ್ದರೆ ಕೊಂಚ ಮಟ್ಟಿಗೆ ಕಲೆಕ್ಷನ್ ಆಗುತ್ತಿತ್ತು ಎಂದು ಬಾಕ್ಸಾಫೀಸ್ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಎಲ್ಲಾ ಕಡೆ ಸಿನಿಮಾ ಹೀನಾಯವಾಗಿ ಸೋತ ಬಳಿಕ ಕರ್ನಾಟಕದಲ್ಲಿ ಬಿಡುಗಡೆ ಮಾಡಿದರೂ ಪ್ರಯೋಜನವಿಲ್ಲ ಎಂದು ಕಮಲ್ ತೀರ್ಮಾನಿಸಿದಂತಿದೆ.

ಚೆನ್ನೈನಲ್ಲಿ ನಡೆದ ಪ್ರೀ ರಿಲೀಸ್ ಈವೆಂಟ್ನಲ್ಲಿ ಕಮಲ್ ಹಾಸನ್ ನೀಡಿದ್ದ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು. ತಮಿಳಿನಿಂದ ಕನ್ನಡ ಭಾಷೆ ಹುಟ್ಟಿದ್ದು ಎಂದು ಅವರು ನೀಡಿದ್ದ ಹೇಳಿಕೆ ವಿವಾದದ ಕಿಡಿ ಹೊತ್ತಿಸಿತ್ತು. ಮುಂದೆ ಇದು ಕರ್ನಾಟಕದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಕನ್ನಡ ಪರ ಸಂಘಟನೆಗಳು ಕಮಲ್ ಹೇಳಿಕೆ ಖಂಡಿಸಿ ಪ್ರತಿಭಟನೆ ನಡೆಸಿದ್ದವು. ಕ್ಷಮೆ ಕೇಳದ ಹೊರತು ರಾಜ್ಯದಲ್ಲಿ ಸಿನಿಮಾ ಬಿಡುಗಡೆ ಬಿಡುವುದಿಲ್ಲ ಎಂದು ಎಚ್ಚರಿಕೆ ಕೊಟ್ಟಿದ್ದರು.
ಕಮಲ್ ಹಾಸನ್ ಮಾತ್ರ ತಮ್ಮ ಹೇಳಿಕೆ ಹಿಂಪಡೆಯಲಿಲ್ಲ. ನಾನು ತಪ್ಪು ಮಾತನಾಡಿಲ್ಲ ಎಂದು ವಾದಿಸುತ್ತಾ ಬಂದಿದ್ದರು. ಕರ್ನಾಟಕ ಹೈಕೋರ್ಟ್ ಸಹ ಕಮಲ್ ಕ್ಷಮೆ ಕೇಳಬೇಕು ಎಂದಿತ್ತು. ಬಳಿಕ ಸುಪ್ರೀಂ ಕೋರ್ಟ್ನಲ್ಲಿ ಚಿತ್ರತಂಡಕ್ಕೆ ಗೆಲುವು ಸಿಕ್ಕಿತ್ತು. ಕರ್ನಾಟಕ ಸರ್ಕಾರಕ್ಕೆ ಸುಪ್ರೀಂ ಛೀಮಾರಿ ಹಾಕಿತ್ತು. ಕೆಲ ಸಂಘಟನೆಗಳ ಬೆದರಿಕೆಗೆ ಹೆದರಿ ಒಂದು ಸಿನಿಮಾ ಬಿಡುಗಡೆಗೆ ಅವಕಾಶ ಮಾಡಿಕೊಡಲ್ಲ ಎನ್ನುವುದು ತಪ್ಪು ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿತ್ತು.

ಕರ್ನಾಟಕದಲ್ಲಿ 'ಥಗ್ ಲೈಫ್' ಸಿನಿಮಾ ಬಿಡುಗಡೆಗೆ ಅನುವು ಮಾಡಿಕೊಡಬೇಕು, ಸೂಕ್ತ ಭದ್ರತೆ ಒದಗಿಸಬೇಕು ಎಂದು ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು. ಸರ್ಕಾರ ಕೂಡ ಇದಕ್ಕೆ ಒಪ್ಪಿತ್ತು. ಜೂನ್ 27ಕ್ಕೆ ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆ ಆಗುತ್ತದೆ ಎಂದು ಕೆಲವರು ಭಾವಿಸಿದ್ದರು. ಆದರೆ ಆ ಲೆಕ್ಕಾಚಾರ ಸುಳ್ಳಾಗಿದೆ. ಸಿನಿಮಾ ತೆರೆಕಂಡ 26 ದಿನಕ್ಕೆ ಓಟಿಟಿಗೆ ಬಂದುಬಿಟ್ಟಿದೆ.
ಸುಪ್ರೀಂ ಕೋರ್ಟ್ ಬಿಟ್ಟರೆ ಎಲ್ಲಾ ಕಡೆಗಳಲ್ಲಿ ಈ ಸಿನಿಮಾ ಮಾಡಿ ಕಮಲ್ ಹಾಸನ್ಗೆ ಸೋಲಾಗಿದೆ. ಮೊದಲಿಗೆ ಸಿನಿಮಾ ಬಾಕ್ಸಾಫೀಸ್ನಲ್ಲಿ ಮುಗ್ಗರಿಸಿತ್ತು. ತಮಿಳು ಪ್ರೇಕ್ಷಕರ ನಿರೀಕ್ಷೆಯನ್ನು ಹುಸಿಗೊಳಿಸಿ ನಿರಾಸೆ ಅನುಭವಿಸಿದ್ದಾರೆ. ಮಣಿರತ್ನಂ ರೀತಿಯ ದಿಗ್ಗಜ ನಿರ್ದೇಶಕ ಕಾಂಬಿನೇಷನ್ನಲ್ಲಿ ಸಿನಿಮಾ ಮಾಡಿ ಪ್ರಯೋಜನವಾಗಲಿಲ್ಲ. ನಿರ್ದೇಶಕರ ಜೊತೆ ಸೇರಿ ಕಮಲ್ ಚಿತ್ರಕ್ಕೆ ಕಥೆ ಬರೆದು ಹಣ ಹೂಡಿದ್ದರು. ಹಾಗಾಗಿ ಅಲ್ಲೂ ಸೋಲು ಎದುರಾದಂತಾಗಿದೆ. ಅಂದಾಜು 200 ಕೋಟಿ ರೂ. ಬಜೆಟ್ ಸಿನಿಮಾ ಬಾಕ್ಸಾಫೀಸ್ನಲ್ಲಿ 50 ಕೋಟಿ ರೂ. ಕೂಡ ಗಳಿಕೆ ಕಾಣಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ತಮಿಳು ಪ್ರೇಕ್ಷಕರೇ ಸಿನಿಮಾವನ್ನು ಟ್ರೋಲ್ ಮಾಡುವಂತಾಯಿತು.
ತ್ರಿಷಾ, ಸಿಂಬು, ಅಭಿರಾಮಿ, ನಾಸರ್ ರೀತಿಯ ಘಟಾನುಘಟಿ ಕಲಾವಿದರು 'ಥಗ್ ಲೈಫ್' ಚಿತ್ರದಲ್ಲಿದ್ದಾರೆ. ಎ. ಆರ್ ರಹಮಾನ್ ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡಿದ್ದರು. ಆದರೆ ಯಾವುದೇ ಕೂಡ ಚಿತ್ರದ ಗೆಲುವಿಗೆ ಸಹಕಾರಿ ಆಗಲಿಲ್ಲ. ಸತತ ಸೋಲಿನ ಸುಳಿಗೆ ಸಿಲುಕಿದ್ದ ಕಮಲ್ ಹಾಸನ್ 'ವಿಕ್ರಂ' ಸಿನಿಮಾ ಮಾಡಿ ಕಂಬ್ಯಾಕ್ ಮಾಡಿದ್ದರು. ಆದರೆ 'ಇಂಡಿಯನ್- 2' ಸಿನಿಮಾ ಹೀನಾಯವಾಗಿ ಸೋತಿತ್ತು. ಇದೀಗ 'ಥಗ್ ಲೈಫ್' ಏಟಿನ ಮೇಲೆ ಏಟು ಕೊಟ್ಟಿದೆ.
ವೆಂಕಟೇಶ್ ಎಂಬುವವರು 'ಥಗ್ ಲೈಫ್' ಚಿತ್ರದ ಕರ್ನಾಟಕ ವಿತರಣೆ ಹಕ್ಕು ಕೊಂಡುಕೊಂಡಿದ್ದರು. ಈಗಾಗಲೇ ಅಡ್ವಾನ್ಸ್ ಕೂಡ ಕೊಟ್ಟುಬಿಟ್ಟಿದ್ದಾರೆ. ಆ ಹಣ ಕೂಡ ಇನ್ನು ವಿತರಕರ ಕೈ ಸೇರಿಲ್ಲ. ಬೇರೆ ಕಡೆಗಳಲ್ಲಿ ಚಿತ್ರಕ್ಕೆ ಸಿಕ್ಕ ರೆಸ್ಪಾನ್ಸ್ ನೋಡಿ ಕರ್ನಾಟಕದಲ್ಲಿ ಈಗ ಬಿಡುಗಡೆ ಮಾಡುವುದು ವ್ಯರ್ಥ ಎಂದು ವಿತರಕರು ತೀರ್ಮಾನಿಸಿದ್ದರು. ಇದನ್ನೇ ಚಿತ್ರತಂಡಕ್ಕೂ ತಿಳಿಸಿದ್ದರು. ಆದರೆ ನನ್ನ ಹಣ ವಾಪಸ್ ಕೊಟ್ಟು ಯಾರು ಬೇಕಾದರೂ ಸಿನಿಮಾ ಬಿಡುಗಡೆ ಮಾಡಲಿ ಎಂದಿದ್ದರು.
ವಿತರಕರೇ ಹಿಂದೇಟು ಹಾಕಿದ್ದರಿಂದ ಕಮಲ್ ಹಾಸನ್ ಸುಮ್ಮನಾಗದೇ ಬೇರೆ ವಿಧಿ ಇರಲಿಲ್ಲ. ಕೊನೆಗೂ ಕರ್ನಾಟಕದಲ್ಲಿ 'ಥಗ್ ಲೈಫ್' ಸಿನಿಮಾ ಚಿತ್ರಮಂದಿರದ ಮುಖ ನೋಡಲಿಲ್ಲ. ಕರ್ನಾಟಕದಲ್ಲಿರುವ ಕೆಲ ತಮಿಳು ಸಿನಿಮಾ ನೋಡಲು ಬಯಸಿದ್ದರು. ಮತ್ತೆ ಕೆಲವರು ತಮಿಳುನಾಡಿಗೆ ಹೋಗಿ ಸಿನಿಮಾ ನೋಡಿ ಬೇಸರಗೊಂಡಿದ್ದರು. ಒಟ್ಟಾರೆ ಭಾರೀ ಬಂಡವಾಳ ಹಾಕಿ ಮಣಿರತ್ನಂ ಜೊತೆ ಕೈಜೋಡಿಸಿ ತಂಡ ಕಟ್ಟಿಕೊಂಡು ಕಮಲ್ 'ಥಗ್ ಲೈಫ್' ಸಿನಿಮಾ ಮಾಡಿ ಗೆಲ್ಲಲು ಸಾಧ್ಯವಾಗಲಿಲ್ಲ.
ವಿತರಕ ವೆಂಕಟೇಶ್ ಫಿಲ್ಮಿಬೀಟ್ ಕನ್ನಡಕ್ಕೆ ಪ್ರತಿಕ್ರಿಯಿಸಿ "ನಮ್ಮ ಹಣ ವಾಪಸ್ ಬಂದಿಲ್ಲ. 15 ದಿನಗಳ ಒಳಗೆ ಕೊಡುತ್ತೇವೆ ಎಂದಿದ್ದಾರೆ. ಓಟಿಟಿಯಲ್ಲಿ ಹಾಕಿದ ಮೇಲೆ ಅವರಿಗೆ ಹಣ ಬರುವುದು. ಅದಕ್ಕಾಗಿಯೇ ಕಾಯುತ್ತಿದ್ದೇನೆ. ಈ ರೀತಿ ಆದಾಗ ನಾವು ಸಮಸ್ಯೆಗೆ ಸಿಲುಕುತ್ತೇವೆ. ನಮ್ಮ ಹಣ ವಾಪಸ್ ಬರುತ್ತೆ ಎನ್ನುವ ಭರವಸೆ ಇದೆ. ಅವರಿಗೂ ಬಹಳ ನಷ್ಟವಾಗಿದೆ" ಎಂದು ಹೇಳಿದ್ದಾರೆ.
ಸುಪ್ರೀಂ ತೀರ್ಪಿನ ಬಳಿಕ ಕರ್ನಾಟಕದಲ್ಲಿ ಅವಕಾಶ ಸಿಕ್ಕರೂ ಯಾಕೆ ಸಿನಿಮಾ ಬಿಡುಗಡೆ ಮಾಡಲಿಲ್ಲ ಎನ್ನುವ ಪ್ರಶ್ನೆಗೆ "ನಮಗೆ ಬಿಡುಗಡೆ ಮಾಡಲು ಕೇಳಿದರು. ನಾವು ಒಪ್ಪಲಿಲ್ಲ. ಬ್ಯುಸಿನೆಸ್ ರೀತಿ ಯೋಚಿಸಿದರೆ ಸಿನಿಮಾ ಓಡಲ್ಲ. ಸಿನಿಮಾ ಬಿಡುಗಡೆ ಮಾಡುವುದರಿಂದ ಪ್ರಯೋಜನ ಇಲ್ಲ ಎನ್ನುವುದು ಅವರಿಗೂ ಗೊತ್ತು. ಎಲ್ಲಾ ಕಡೆ ಸೋತಿರುವ ಸಿನಿಮಾ ಇಲ್ಲಿ ಬಿಡುಗಡೆ ಮಾಡುವುದರಿಂದ ಅರ್ಥವಿಲ್ಲ ಎನ್ನುವುದು ಅವರಿಗೆ ಅರಿವಾಗಿದೆ" ಎಂದು ವೆಂಕಟೇಶ್ ವಿವರಿಸಿದ್ದಾರೆ.
ರಾಜ್ಯಸಭೆ ಚುನಾವಣಾ ಅಖಾಡಕ್ಕೆ ಕಮಲ್ ಹಾಸನ್ ಇಳಿದಿದ್ದಾರೆ. ಮಕ್ಕಳ್ ನೀದಿಮಯ್ಯಂ ಪಕ್ಷದ ಮುಖ್ಯಸ್ಥ, ನಟ ಕಮಲ್ ಹಾಸನ್ ಸೇರಿ ತಮಿಳುನಾಡಿನ 6 ಮಂದಿ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆ ಇದೆ. ಈಗಾಗಲೇ ಕಮಲ್ ನಾಮಪತ್ರ ಸಲ್ಲಿಸಿದ್ದಾರೆ. ಸ್ವಂತ ಪಕ್ಷ ಕಟ್ಟಿ ಕಮಲ್ ಗೆಲ್ಲಲು ಸಾಧ್ಯವಾಗಲಿಲ್ಲ. ಹಾಗಾಗಿ ಮೈತ್ರಿ ಅಭ್ಯರ್ಥಿಯಾಗಿ ರಾಜ್ಯಸಭೆಗೆ ಆಯ್ಕೆ ಆಗುವ ಕನಸು ಕಾಣುತ್ತಿದ್ದಾರೆ.
ದಕ್ಷಿಣದ ಇತರೆ ಭಾಷೆಗಳಿಗಿಂತ ತಮಿಳು ಶ್ರೇಷ್ಠ. ಬಹಳ ಹಳೆಯದು ಎಂಬ ನಂಬಿಕೆ ತಮಿಳರಲ್ಲಿದೆ. ತಮಿಳು ಭಾಷೆಯಿಂದಲೇ ದ್ರಾವಿಡ ಭಾಷೆಗಳು ಹುಟ್ಟಿಕೊಂಡವು ಎನ್ನುವುದು ಅವರ ನಂಬಿಕೆ. ಇದನ್ನೇ ಡಿಎಂಕೆ ಪಕ್ಷ ಇದನ್ನೇ ವಾದಿಸುತ್ತಿದೆ. ಇದೀಗ ಅದೇ ಪಕ್ಷದ ಬಲದೊಂದಿಗೆ ಕಮಲ್ ರಾಜ್ಯಸಭೆಗೆ ಪ್ರವೇಶಿಸಲು ಮುಂದಾಗಿದ್ದಾರೆ. ಹಾಗಾಗಿ ಅವರು ತಮ್ಮ ಹೇಳಿಕೆಯನ್ನು ಹಿಂಪಡೆಯಲು, ಕ್ಷಮೆ ಕೇಳಲು ಒಪ್ಪಲಿಲ್ಲ. ಕರ್ನಾಟಕದಲ್ಲಿ ನನ್ನ ಸಿನಿಮಾ ಬಿಡುಗಡೆ ಆಗದಿದ್ದರೂ ಪರವಾಗಿಲ್ಲ, ನಾನು ಕ್ಷಮೆ ಕೇಳಲ್ಲ ಎನ್ನುವ ಮೊಂಡುತನ ಪ್ರದರ್ಶಿಸಿದ್ದರು.
ಅಂತಿಮವಾಗಿ ಹಾವು ಸಾಯಲಿಲ್ಲ, ಕೋಲು ಮುರಿಯಲಿಲ್ಲ ಎನ್ನುವಂತಾಗಿದೆ. ಸಿನಿಮಾ ಬಿಡುಗಡೆಗೆ ಅವಕಾಶ ಸಿಕ್ಕರೂ ಕರ್ನಾಟಕದಲ್ಲಿ ಸಿನಿಮಾ ಪ್ರದರ್ಶನಕ್ಕೆ ಕಮಲ್ ಮುಂದಾಗಲಿಲ್ಲ. ತಮ್ಮ ಹೇಳಿಕೆಗೆ ಕ್ಷಮೆ ಕೂಡ ಕೇಳಲಿಲ್ಲ. ಸಿನಿಮಾ ಓಟಿಟಿಗೆ ಬಂದುಬಿಟ್ಟಿದೆ. ಅಲ್ಲಿಗೆ 'ಥಗ್ ಲೈಫ್' ಸಿನಿಮಾ ಬಿಡುಗಡೆ ವಿವಾದ ತಣ್ಣಗಾಗಿದೆ.


Click it and Unblock the Notifications











