ಕಂಗನಾ, ಕರಣ್, ಅದ್ನಾನ್ ಸಾಮಿ, ಏಕ್ತಾ ಕಪೂರ್ಗೆ ಪದ್ಮಶ್ರೀ, ಎಸ್ಪಿಬಿಗೆ ಪದ್ಮ ವಿಭೂಷಣ
2020ನೇ ಸಾಲಿನ ಪ್ರತಿಷ್ಠಿತ ಪದ್ಮ ಪ್ರಶಸ್ತಿ ಪ್ರಧಾನ ಸಮಾರಂಭ ರಾಷ್ಟ್ರಪತಿ ಭವನದಲ್ಲಿ ಇಂದು( ನವೆಂಬರ್ 8) ನಡೆದಿದೆ. ರಾಷ್ಟ್ರಪತಿ ರಾಮ್ನಾಥ್ ಕೋವಿಂದ್ ರಾಷ್ಟ್ರಭವನದಲ್ಲಿ ಸಾಧಕರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ. ಈ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಪದ್ಮ ವಿಭೂಷಣ 7 ಸಾಧಕರಿಗೆ , ಪದ್ಮಭೂಷಣ 10 ಸಾಧಕರಿಗೆ ಹಾಗೂ 102 ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ.
ರಾಜಕೀಯ, ಕಲೆ, ವೈದ್ಯಕೀಯ, ಶಿಕ್ಷಣ, ಆಧ್ಯಾತ್ಮ, ಸಾರ್ವಜನಿಕ ಸೇವೆ, ಕ್ರೀಡೆ, ಸಮಾಜ ಸೇವೆ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಭಾರತದ ಪ್ರತಿಪ್ಠಿತ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿತ್ತು. ಆದರೆ, ಕೊರೊನಾ ಕಾರಣದಿಂದ 2020ರ ಸಾಲಿನ ಪ್ರಶಸ್ತಿಯನ್ನು ನೀಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ನವೆಂಬರ್ 8ರಂದು ರಾಷ್ಟ್ರಪತಿ ಭವನದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಈ ಸಮಾರಂಭದಲ್ಲಿ ಸಿನಿಮಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೂ ಪ್ರಶಸ್ತಿ ನೀಡಲಾಗಲಾಗಿದೆ.

ಗಾಯಕ ದಿವಂಗತ ಎಸ್ ಪಿ ಬಾಲಸುಬ್ರಹ್ಮಣ್ಯಂ ಮರಣೋತ್ತರ ಪದ್ಮ ವಿಭೂಷಣ
ಭಾರತ ಕಂಡ ಅದ್ಭುತ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂಗೆ ಭಾರತದ ಸರ್ಕಾರ ಮರಣೋತ್ತರ ಪದ್ಮ ವಿಭೂಷಣ ಪ್ರಶಸ್ತಿಯನ್ನು ನೀಡಿದೆ. ವಿವಿಧ ಭಾಷೆಗಳಲ್ಲಿ ಸುಮಾರು 40 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿರುವ ಎಸ್ಪಿಬಿ ಸಾಧನೆಯೇನು ಸಣ್ಣದಲ್ಲ. ನಾಲ್ಕು ಭಾಷೆಗಳಿಂದ 6 ರಾಷ್ಟ್ರ ಪ್ರಶಸ್ತಿಯನ್ನು ಪಡೆದ ದಕ್ಷಿಣ ಭಾರತದ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ. ಆಂಧ್ರ ಪ್ರದೇಶದಲ್ಲಿ ಜನಿಸಿದ್ದರೂ, ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲೂ ಹಾಡಿ ಸೈ ಎನಿಸಿಕೊಂಡಿದ್ದ ಗಾನಗಂಧರ್ವ. ಕಳೆದ ವರ್ಷ ಕೊರೊನಾ ತಗುಲಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಕೊರೊನಾ ಸೋಂಕಿನಿಂದ ಮುಕ್ತರಾಗಿದ್ದರೂ, ಆರೋಗ್ಯ ಸುಧಾರಣೆಯಾಗದೆ ಕೊನೆಯುಸಿರೆಳೆದಿದ್ದರು. ಎಸ್ಪಿ ಬಾಲಸುಬ್ರಹ್ಮಣ್ಯಂ ಅವರ ಅಭೂತ ಪೂರ್ವ ಸಾಧನೆಯನ್ನು ಗುರುತಿಸಿ ಸರ್ಕಾರ ಮರಣೋತ್ತರ ಪದ್ಮ ವಿಭೂಷಣ ಪ್ರಶಸ್ತಿಯನ್ನು ನೀಡಿದೆ.
ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ರಾಮ್ನಾಥ್ ಕೋವಿಂದ್ ಸಮ್ಮುಖದಲ್ಲಿ ಎಸ್ಪಿಬಿ ಪುತ್ರ ಎಸ್ಪಿ ಚರಣ್ ಪದ್ಮ ವಿಭೂಷಣ ಪ್ರಶಸ್ತಿಯನ್ನು ಸ್ವೀಕರಿಸಿದರು. " ಇಷ್ಟು ದೊಡ್ಡ ಪ್ರಶಸ್ತಿಯಿಂದ ಗೌರವಿಸಿರುವುದಕ್ಕೆ ಭಾರತ ಸರ್ಕಾರಕ್ಕೆ ನಾವು ಅಭಾರಿಯಾಗಿದ್ದೇವೆ. ತಂದೆಯವರು ನಮ್ಮೊಂದಿಗಿರುವಾಗಲೇ ಈ ಪ್ರಶಸ್ತಿಯನ್ನು ನಿರೀಕ್ಷೆ ಮಾಡಿದ್ದೆವು. ಇದು ಘಳಿಗೆ ನಮಗೆ ಭಾವನೆಗಳ ಮಿಶ್ರಣದಂತಿದೆ." ಎಂದು ಚರಣ್ ಹೇಳಿದ್ದಾರೆ.

ಕಂಗನಾ ರಣಾವತ್ , ಕರಣ್ ಜೋಹರ್ಗೆ ಪದ್ಮಶ್ರೀ ಪ್ರಶಸ್ತಿ
ಇದೇ ಸಮಾರಂಭದಲ್ಲಿ ಬಾಲಿವುಡ್ ನಟಿ ಕಂಗನಾ ರಣಾವತ್ ಹಾಗೂ ಬಾಲಿವುಡ್ ನಿರ್ಮಾಪಕ ಕರಣ್ ಜೋಹರ್ಗೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. " ಹಿಮಾಚಲ ಪ್ರದೇಶದ ಸಣ್ಣ ಹಳ್ಳಿಯಿಂದ ಜರ್ನಿ ಆರಂಭಿಸಿದ ನಾನು ಕರಣ್ ಜೋಹರ್, ಏಕ್ತಾ ಕಪೂರ್, ಅದ್ನಾನ್ ಸಾಮಿಯಂತಹ ದೊಡ್ಡ ಸೆಲೆಬ್ರೆಟಿಗಳನ್ನು ನೋಡಿಕೊಂಡು ಬೆಳೆದಿದ್ದೇನೆ. ಈಗ ಅವರೊಂದಿಗೆ ಪ್ರಶಸ್ತಿ ಸ್ವೀಕರಿಸುತ್ತಿರುವುದಕ್ಕೆ ಖುಷಿಯಾಗುತ್ತಿದೆ" ಎಂದು ಪ್ರಶಸ್ತಿ ಪಡೆದ ಬಳಿಕ ಕಂಗನಾ ಹೇಳಿದ್ದರು.
ನಿರ್ಮಾಪಕ ಕರಣ್ ಜೋಹರ್ ಕೂಡ ಪ್ರಶಸ್ತಿ ಘೋಷಣೆಯಾದಾಗಲೇ ಹರ್ಷ ವ್ಯಕ್ತಪಡಿಸಿದ್ದರು." ನನ್ನಲ್ಲೀಗ ಸಾಕಷ್ಷು ಭಾವನೆಗಳು ಹೊರ ಹೊಮ್ಮುತ್ತಿವೆ. ಯಾವ ರೀತಿ ಪ್ರತಿಕ್ರಿಯಿಸಬೇಕು ಅಂತಲೇ ಗೊತ್ತಾಗುತ್ತಿಲ್ಲ" ಎಂದು ಹೇಳಿದ್ದರು.

ಪದ್ಮ ಪ್ರಶಸ್ತಿ ಸ್ವೀಕರಿಸಿದ ಏಕ್ತಾ ಕಪೂರ್, ಅದ್ನಾನ್ ಸಾಮಿ
17 ವರ್ಷಕ್ಕೆ ಧಾರಾವಾಹಿ ಜಗತ್ತಿಗೆ ಕಾಲಿಟ್ಟಿದ್ದ ಏಕ್ತಾ ಕಪೂರ್ ಇಂದು ಯಶಸ್ವಿ ನಿರ್ಮಾಪಕಿ. ಕೇವಲ ಧಾರಾವಾಹಿ ಅಷ್ಟೇ ಅಲ್ಲ, ಸಿನಿಮಾ ನಿರ್ಮಾಣಕ್ಕೂ ಕೈ ಏಕ್ತಾ ಕಪೂರ್ ಕೈ ಹಾಕಿದ್ದಾರೆ. ಇನ್ನು ಪಾಕಿಸ್ತಾನದಿಂದ ವಲಸೆ ಬಂದು ಭಾರತದ ನಾಗರಿಕನಾಗಿರುವ ಗಾಯಕ ಅದ್ನಾನ್ ಸಾಮಿಗೂ ಭಾರತದ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಲಾಗಿದೆ.


Click it and Unblock the Notifications











