ಹುಟ್ಟಿದ ಊರಿನ ಶಾಲೆಗೆ ಹೈಟೆಕ್ ಸ್ಪರ್ಶ ಕೊಟ್ಟ ಡಾಲಿ; ಸರ್ಕಾರಿ ಶಾಲೆ ಉಳಿಸಲು ಲಕ್ಷಾಂತರ ಖರ್ಚು
ಸ್ಯಾಂಡಲ್ವುಡ್ನ ನಟ ರಾಕ್ಷಸ ಧನಂಜಯ್ ಮದುವೆ ತಯಾರಿಯಲ್ಲಿ ಇದ್ದಾರೆ. ಸಮಾಜದ ಗಣ್ಯರನ್ನು ಭೇಟಿ ಮಾಡಿ ತಮ್ಮ ಮದುವೆಗೆ ಆಮಂತ್ರಣವನ್ನು ನೀಡುತ್ತಿದ್ದಾರೆ. ಒಂದು ಕಡೆ ಮದುವೆ ಬ್ಯುಸಿಯಲ್ಲಿ ಇದ್ದರೂ, ಇನ್ನೊಂದು ಕಡೆ ಸಮಾಜ ಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ತಾನು ಹುಟ್ಟಿದ ಊರಿನ ಸರ್ಕಾರಿ ಶಾಲೆಗೆ ತಮ್ಮ ಸ್ವಂತ ಖರ್ಚಿನಿಂದ ಹೊಸ ರೂಪ ಕೊಟ್ಟಿದ್ದಾರೆ.
ಡಾಲಿ ಧನಂಜಯ್ ಇನ್ನೊಂದು ತಿಂಗಳಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಮದುವೆ ಅಂದ್ಮೇಲೆ ಅದರದ್ದೇ ಆದ ಕೆಲಸಗಳು ಇದ್ದೇ ಇರುತ್ತವೆ. ಓಡಾಟ, ಗಣ್ಯರಿಗೆ ಆಹ್ವಾನ ನೀಡುವುದು ಇರುತ್ತೆ. ಇಷ್ಟೆಲ್ಲ ಬ್ಯುಸಿಯಿದ್ದರೂ ತನ್ನ ಹುಟ್ಟೂರಿನ ಶಾಲೆಗೆ ಮೆರುಗು ನೀಡುವುದಕ್ಕೆ ಮುಂದಾಗಿದ್ದರೆ. ಸರ್ಕಾರಿ ಶಾಲೆಗೆ ಹೊಸ ರೂಪ ಕೊಡುವುದಕ್ಕೆ ಮುಂದೆ ಬಂದಿದ್ದಾರೆ.

ಧನಂಜಯ್ ಹುಟ್ಟೂರು ಕಾಳೇನಹಳ್ಳಿಯಲ್ಲಿ 1 ರಿಂದ 7ನೇ ತರಗತಿ ವರೆಗೆ ಸರ್ಕಾರಿ ಶಾಲೆಯಿದೆ. ಆದರೆ, ಆ ಶಾಲೆ ಸುಣ್ಣ ಬಣ್ಣ ಕಾಣದೆ ಎಷ್ಟೋ ವರ್ಷಗಳಾಗಿತ್ತು. ಗೋಡೆಗಳು ಬಿರುಕು ಬಿಟ್ಟಿದ್ದವು. ಸಿಮೆಂಟ್ ನೆಲ ಇತ್ತು. ಮೂಲಭೂತ ಸೌಕರ್ಯಗಳು ಸರಿಯಾಗಿ ಇಲ್ಲದೆ ಇದ್ದಿದ್ದರಿಂದ ಡಾಲಿ ಧನಂಜಯ್ ಈ ಶಾಲೆಯನ್ನು ಹೈ ಟೆಕ್ ಮಾಡುವ ಮನಸ್ಸು ಮಾಡಿದ್ದರು. ಅಂದ್ಹಾಗೆ ಈ ಶಾಲೆಯಲ್ಲಿ ಧನಂಜಯ್ ಓದಿಲ್ಲ. ಹಾಗಿದ್ದರೂ ತನ್ನ ಹುಟ್ಟೂರಿನ ಶಾಲೆಗೆ ತನ್ನದೇ ಸ್ವಂತ ಖರ್ಚಿನಲ್ಲಿ ಹೊಸ ರೂಪ ಕೊಟ್ಟಿದ್ದಾರೆ.
ಕಾಳೇನಹಳ್ಳಿಯ ಈ ಸರ್ಕಾರಿ ಶಾಲೆಯಲ್ಲಿ ಸದ್ಯ 80 ಮಕ್ಕಳು ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಈ ಶಾಲೆಗೆ ಕಾಯಕಲ್ಪ ನೀಡುವ ಮೂಲಕ ಸರ್ಕಾರಿ ಶಾಲೆಯನ್ನು ಉಳಿಸುವುದಕ್ಕೆ ಮುಂದಾಗಿದ್ದಾರೆ. ಇಡೀ ಶಾಲೆಯ ನೆಲಕ್ಕೆ ಟೈಲ್ಸ್ ಅಳವಡಿಸಲಾಗಿದೆ. ಬಣ್ಣ ಕಾಣದ ಶಾಲೆಯ ಎಲ್ಲಾ ಗೋಡೆಗಳನ್ನು ರಂಗಾಗಿಸಲಾಗಿದೆ. ಬಿರುಕು ಬಿಟ್ಟಿದ್ದ ಗೋಡೆಗಳು ಮಿಂಚುತ್ತಿವೆ.

ಹಾಗಂತ ಶಾಲೆಗೆ ಕೇವಲ ಬಣ್ಣ ಬಳಿದು ಸುಮ್ಮನಾಗಿಲ್ಲ. ಮೂಲಭೂತ ಸೌಕರ್ಯದ ಕಡೆಗೂ ಗಮನ ಹರಿಸಿದ್ದಾರೆ. ಶಾಲೆಯ ಮಹಡಿಗೆ ಚುರತಿ, ಶಾಲೆಯ ಗೇಟ್ ದುರಸ್ತಿ ಮಾಡಲಾಗಿದೆ. ಹಾಗೆಯೇ ಶಿಕ್ಷಕರ ಕೊಠಡಿಗೆ ಹೊಸ ರೂಪ ನೀಡಲಾಗಿದೆ. ಶೌಚಾಲಯವನ್ನು ಶುಚಿತ್ವ ನೀಡಲಾಗಿದೆ. ಹಾಗೇ ಅಡುಗೆ ಮನೆಗೂ ಹೊಸ ರೂಪ ಕೊಡಲಾಗಿದೆ. ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ತನ್ನ ಹುಟ್ಟೂರಿನ ಶಾಲೆಗೆ ಧನಂಜಯ್ ಹೈಟೆಕ್ ಸ್ಪರ್ಶ ನೀಡುತ್ತಿದ್ದಾರೆ.
ಅಂದ್ಹಾಗೆ, ಧನಂಜಯ್ ಈ ಶಾಲೆಯಲ್ಲೇನು ಓದಿಲ್ಲ. ಆದರೂ ತಮ್ಮ ಊರಿನ ಸರ್ಕಾರಿ ಶಾಲೆ ಚೆನ್ನಾಗಿರಬೇಕು. ಉತ್ತಮ ವಾತಾವರಣದಲ್ಲಿ ಇಲ್ಲಿನ ಮಕ್ಕಳು ಶಿಕ್ಷಣವನ್ನು ಪಡೆಯಬೇಕು ಅನ್ನೋದು ಅವರ ಉದ್ದೇಶ. ಮದುವೆಯ ಓಡಾಟದ ನಡುವೆಯೂ ಧನಂಜಯ್ ಒಂದೊಳ್ಳೆ ಕೆಲಸ ಮಾಡುವ ಮೂಲಕ ತಮ್ಮ ಊರಿನ ಗ್ರಾಮಸ್ಥರ ಮೆಚ್ಚುಗೆಯನ್ನು ಗಳಿಸಿದ್ದಾರೆ.
ಸರ್ಕಾರಿ ಶಾಲೆಗೆ ಹೈ ಟೆಕ್ ಸ್ಪರ್ಶ ಕೊಡುವುದಕ್ಕೆ ಲಕ್ಷಾಂತರ ರೂಪಾಯಿಯನ್ನು ಖರ್ಚು ಮಾಡುತ್ತಿದ್ದಾರೆ. ಶಾಲೆಗೆ ಬೇಕಿರುವ ಅಗತ್ಯ ಸೌಕರ್ಯವನ್ನು ಡಾಲಿ ಧನಂಜಯ ಕೊಡುತ್ತಿದ್ದಾರೆ. ಹಾಗೇ ಸರ್ಕಾರಿ ಶಾಲೆಯ ಹಾಜರಿ ಹೆಚ್ಚಾಗಬೇಕು. ಆ ಶಾಲೆಗಳು ಉಳಿಯಬೇಕು ಅಂತ ಆಸೆ ಪಟ್ಟು ಈ ಕೆಲಸಕ್ಕೆ ಮುಂದಾಗಿದ್ದಾರೆ. ಇದೇ ವೇಳೆ ಧನಂಜಯ್ ಕೂಡ ಕೆಲಸಕ್ಕೆ ಸೋಶಿಯಲ್ ಮೀಡಿಯಾದಲ್ಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.


Click it and Unblock the Notifications











