ನಟ ದರ್ಶನ್ ಹುಟ್ಟುಹಬ್ಬದ ದಿನ ಎಂತಹ ದುರಂತ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹುಟ್ಟುಹಬ್ಬವನ್ನು ಭರ್ಜರಿಯಾಗಿ ಆಚರಿಸಿ ಅವರಿಗೆ ಶುಭಾಶಯ ಕೋರಿ ಬೈಕ್ ನಲ್ಲಿ ವಾಪಸ್ ಮರಳುತ್ತಿದ್ದ ಸಂದರ್ಭದಲ್ಲಿ ಕಿಲ್ಲರ್ ಬಿ.ಎಂ.ಟಿ.ಸಿ ಬಸ್ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ದರ್ಶನ್ ಅವರ ಅಭಿಮಾನಿ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ನಿನ್ನೆ (ಫೆಬ್ರವರಿ 16) ಸಂಭವಿಸಿದೆ.
ಬೆಂಗಳೂರು ಬಿ.ಎಂ.ಟಿ.ಸಿ ಬಸ್ ಚಾಲಕನ ಅಡ್ಡಾದಿಡ್ಡಿ ಚಾಲನೆಯಿಂದ ನಾಯಂಡಹಳ್ಳಿ ಮೇಲ್ಸೇತುವೆ ಬಳಿ ಸಂಭವಿಸಿದ ಅಪಘಾತದಲ್ಲಿ ದರ್ಶನ್ ಅವರ ಒಬ್ಬ ಅಭಿಮಾನಿ ಸಾವನ್ನಪ್ಪಿದ್ದು, ಇನ್ನೊಬ್ಬರು ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.[ಹುಟ್ಟುಹಬ್ಬದಂದು ಸ್ಪೆಷಲ್ ಅಭಿಮಾನಿಯೊಬ್ಬರನ್ನು ಭೇಟಿಯಾದ ದರ್ಶನ್ ]

ಥಣಿಸಂದ್ರದ ನಿವಾಸಿ 25 ವರ್ಷದ ಯುವಕ ಮಧು ಕುಮಾರ್ ಮೃತ ದುರ್ದೈವಿ. ನಾಯಂಡಹಳ್ಳಿ ಮೇಲ್ಸೇತುವೆಯಲ್ಲಿ ಮುಂದಿನ ಕೆ.ಎಸ್.ಆರ್.ಟಿ.ಸಿ ಬಸ್ ಹಿಂದಿಕ್ಕುವ ಆತುರದಲ್ಲಿ ಬಿ.ಎಂ.ಟಿ.ಸಿ ಬಸ್ ನ ಚಾಲಕ ಓವರ್ ಟೇಕ್ ಮಾಡುವ ಸಂದರ್ಭದಲ್ಲಿ ಈ ಭೀಕರ ಅಪಘಾತ ನಡೆದಿದೆ.
ತನ್ನ ನೆಚ್ಚಿನ ನಟನ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಲು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ನಟ ದರ್ಶನ್ ಅವರ ಮನೆಗೆ ಮುಂಜಾನೆಯೇ ತನ್ನ ಗೆಳೆಯ ಸುಧಾಂಶು ಜೊತೆ ತೆರಳಿದ್ದ ಅಭಿಮಾನಿ ಮಧುಕುಮಾರ್ ಬಳಿಕ ದರ್ಶನ್ ಅವರನ್ನು ಕಂಡು ವಿಶ್ ಮಾಡಿ ಬೆಳಗ್ಗೆ 10.40ರ ಸುಮಾರಿಗೆ ಮನೆಗೆ ವಾಪಸಾಗುತ್ತಿದ್ದರು.[ಫ್ಯಾನ್ಸ್ ಜೊತೆ ಮಧ್ಯರಾತ್ರಿ ಬರ್ತ್ ಡೇ ಆಚರಿಸಿಕೊಂಡ ದರ್ಶನ್ ]

ಈ ವೇಳೆ ಸಿಟಿ ಮಾರ್ಕೆಟ್ ನಿಂದ ಕೆಂಗೇರಿಗೆ ತೆರಳುತ್ತಿದ್ದ ಬಿ.ಎಂ.ಟಿ.ಸಿ ಬಸ್ ಚಾಲಕ ನಾಗರಾಜ್, ನಾಯಂಡಹಳ್ಳಿ ಮೇಲ್ಸೇತುವೆಯಲ್ಲಿ ಮುಂದೆ ಹೋಗುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ಅನ್ನು ಹಿಂದಿಕ್ಕಲು ಯತ್ನಿಸಿದ್ದಾನೆ. ಆಗ ಚಾಲಕನ ನಿಯಂತ್ರಣ ತಪ್ಪಿದ ಬಿ.ಎಂ.ಟಿ.ಸಿ ಬಸ್, ರಸ್ತೆ ವಿಭಜಕ ದಾಟಿ ಹಠಾತ್ತಾಗಿ ಬಲ ಬದಿಗೆ ಬಂದಿದೆ.

ಬಳಿಕ ರಾಜರಾಜೇಶ್ವರಿ ನಗರದಿಂದ ಥಣಿಸಂದ್ರ ಕಡೆಗೆ ತೆರಳುತ್ತಿದ್ದ ಮಧು ಬೈಕ್ ಗೆ ಮುಖಾಮುಖಿಯಾಗಿ ಬಸ್ ಡಿಕ್ಕಿಯಾಗಿದೆ. ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡು ದರ್ಶನ್ ಅವರ ಅಭಿಮಾನಿ ಮಧುಕುಮಾರ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಹಿಂಬದಿ ಸವಾರ ಸುಧಾಂಶುಗೆ ಸಣ್ಣಪುಟ್ಟ ಗಾಯವಾಗಿದೆ.[ಬರ್ತ್ ಡೇ ಸ್ಪೆಷಲ್: ದರ್ಶನ್ ಅವರ ಮುಂಬರುವ ಚಿತ್ರಗಳ ಲಿಸ್ಟ್]

ಸ್ಯಾಂಡಲ್ ವುಡ್ ನ ಬಾಕ್ಸಾಫೀಸ್ ಸುಲ್ತಾನ ದರ್ಶನ್ ಅವರು ನಿನ್ನೆ (ಫೆಬ್ರವರಿ 16) ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳ ಜೊತೆ ತಮ್ಮ ನಿವಾಸದ ಬಳಿ ಭರ್ಜರಿಯಾಗಿ ಆಚರಿಸಿಕೊಂಡಿದ್ದರು.


Click it and Unblock the Notifications











