ಹರೀಶ್ ರಾಯ್ ಅಂತಿಮ ದರ್ಶನಕ್ಕೆ ಬಂದ ಯಶ್ ಇಬ್ಬರೂ ಪುತ್ರರಿಗೆ ಹಣ ಸಹಾಯ? ಕಾರಿನೊಳಗೆ ನಡೆದ ಮಾತುಕತೆಯೇನು?
ಕನ್ನಡ ಚಿತ್ರರಂಗದ ಜನಪ್ರಿಯ ಖಳನಟ ಹರೀಶ್ ರಾಯ್ ಇಂದು (ನವೆಂಬರ್ 6) ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಥೈರಾಯ್ಡ್ ಕ್ಯಾನ್ಸರ್ನಿಂದ ಬಳಲುತ್ತಿದ್ದ ನಟ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಇತ್ತೀಚೆಗೆ ಅದು ಅವರ ದೇಹಕ್ಕೆಲ್ಲ ವ್ಯಾಪಿಸಿತ್ತು. ಕೆಲವು ದಿನಗಳ ಹಿಂದಷ್ಟೇ ಆಸ್ಪತ್ರೆಗೆ ದಾಖಲಾಗಿದ್ದರು. ತೀರಾ ವೀಕ್ ಆಗಿದ್ದ ಹರೀಶ್ ರಾಯ್ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.
ಹರೀಶ್ ರಾಯ್ ಅವರ ಅಂತಿಮ ದರ್ಶನಕ್ಕೆ ಕನ್ನಡ ಚಿತ್ರರಂಗದ ಗಣ್ಯರು ಆಗಮಿಸುತ್ತಿದ್ದಾರೆ. ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದ ನಟ ರಾಕಿಂಗ್ ಸ್ಟಾರ್ ಯಶ್ ಬಂದು ಅಂತಿಮ ದರ್ಶನ ಪಡೆದಿದ್ದಾರೆ. ಧ್ರುವ ಸರ್ಜಾ ಸೇರಿದಂತೆ ಕನ್ನಡದ ಸ್ಟಾರ್ ನಟರು ಒಬ್ಬರೊಬ್ಬರಾಗಿಯೇ ಬಂದು ಅಂತಿಮ ನಮನ ಸಲ್ಲಿಸುತ್ತಿದ್ದಾರೆ. ಮೂರು-ನಾಲ್ಕು ದಶಕಗಳಿಂದ ಕನ್ನಡ ಚಿತ್ರರಂಗಕ್ಕೆ ಸೇವೆ ಸಲ್ಲಿಸಿರುವ ಹರೀಶ್ಗೆ ಅಂತಿಮ ಗೌರವ ಸಲ್ಲಿಸಲಾಗುತ್ತಿದೆ.

ಹರೀಶ್ ರಾಯ್ ಆರ್ಥಿಕವಾಗಿ ಸಂಕಷ್ಟದಲ್ಲಿದ್ದರು. ಕ್ಯಾನ್ಸರ್ ಚಿಕಿತ್ಸೆಗಾಗಿ ಕನ್ನಡ ಚಿತ್ರರಂಗದ ನೆರವನ್ನು ಕೋರಿದ್ದರು. ಈ ವೇಳೆ ರಾಕಿಂಗ್ ಸ್ಟಾರ್ ಯಶ್ ಅವರ ಚಿಕಿತ್ಸೆಗೆ ಹಣದ ನೆರವನ್ನು ನೀಡಿದ್ದರು. ಅದನ್ನು ಹರೀಶ್ ರಾಯ್ ಈ ಹಿಂದೆ ನೆನಪಿಸಿಕೊಂಡಿದ್ದರು. ಇಂದು (ನವೆಂಬರ್ 6) ಕೂಡ ಅಂತಿಮ ದರ್ಶನಕ್ಕೆ ಬಂದು ಯಶ್ ಇಬ್ಬರು ಮಕ್ಕಳನ್ನು ಕಾರಿನೊಳಗೆ ಕೂರಿಸಿಕೊಂಡು ನೆರವು ನೀಡುವ ಭರವಸೆ ಕೊಟ್ಟಿದ್ದಾರೆಂದು ಹೇಳಲಾಗಿದೆ.
'ಕೆಜಿಎಫ್' ಸೀರಿಸ್ನಲ್ಲಿ ಯಶ್ ಜೊತೆಗೆ ಹರೀಶ್ ರಾಯ್ ನಟಿಸಿದ್ದರು. ಆ ವೇಳೆ ಹರೀಶ್ ರಾಯ್ ಅವರಿಗೆ ಯಶ್ ಆತ್ಮೀಯರಾಗಿದ್ದರು. ಹೀಗಾಗಿ ಕ್ಯಾನ್ಸರ್ ಚಿಕಿತ್ಸೆಗೆ ನೆರವು ಬೇಕೆಂದು ಮನವಿ ಮಾಡುತ್ತಿದ್ದಂತೆ ಯಶ್ ತೆರೆಮರೆಯಲ್ಲಿ ನೆರವು ನೀಡಿದ್ದರು. ಆದರೆ, ಇದನ್ನು ಹರೀಶ್ ರಾಯ್ ಗೌಪ್ಯವಾಗಿ ಇಟ್ಟಿರಲಿಲ್ಲ. ಅವರ ನೀಡಿದ ನೆರವನ್ನು ಕೊಂಡಾಡಿದ್ದರು. ಯಶ್ ಜೊತೆ ದರ್ಶನ್ ಸೇರಿದಂತೆ ಹಲವು ಮಂದಿನೂ ನೆರವೂ ನೀಡಿದ್ದನ್ನು ಸ್ಮರಿಸಿಕೊಂಡಿದ್ದರು.
ಹರೀಶ್ ರಾಯ್ ಅಂತಿಮ ದರ್ಶನ ಪಡೆದ ರಾಕಿಂಗ್ ಸ್ಟಾರ್ ಯಶ್ ಭಾವುಕರಾಗಿದ್ದರು. ಇಬ್ಬರ ಮಕ್ಕಳು ಹಾಗೂ ಪತ್ನಿಗೆ ಸಾಂತ್ವಾನ ಹೇಳಿದ್ದರು. ಅಂತಿಮ ದರ್ಶನ ಪಡೆದ ಬಳಿಕ ಇಬ್ಬರೂ ಮಕ್ಕಳನ್ನು ತಮ್ಮ ಕಾರಿನವರೆಗೂ ಕರೆದುಕೊಂಡು ಮಾತುಕತೆ ನಡೆಸಿದರು. ಅಲ್ಲದೇ ಕಾರಿನೊಳಗೆ ಕೂರಿಸಿಕೊಂಡು ಇಬ್ಬರೂ ಮಕ್ಕಳೊಂದಿಗೆ ಕೆಲವು ಕ್ಷಣ ಮಾತಾಡಿದ್ದಾರೆ. ಅಲ್ಲದೇ ಹಣದ ನೆರವನ್ನೂ ನೀಡಿದ್ದಾರೆಂದು ಹೇಳಲಾಗುತ್ತಿದೆ.

ಮುಂದಿನ ದಿನಗಳಲ್ಲಿ ಹರೀಶ್ ರಾಯ್ ಕುಟುಂಬಕ್ಕೆ ಹಣದ ಸಹಾಯ ಮಾಡುವುದಾಗಿ ಯಶ್ ಭರವಸೆ ಕೊಟ್ಟಿದ್ದಾರೆಂದು ಹೇಳಲಾಗಿದೆ. ಜೊತೆಗೆ ಅಂತಿಮ ಕಾರ್ಯಕ್ಕೂ ಹಣ ಸಹಾಯ ನೀಡಿದ್ದಾರೆ ಎನ್ನಲಾಗಿದೆ. ಆದರೆ, ರಾಕಿಂಗ್ ಸ್ಟಾರ್ ಯಶ್ ಎಷ್ಟು ಹಣ ನೀಡಿದ್ದಾರೆಂಬುದು ಗೊತ್ತಾಗಿಲ್ಲ. 'ಕೆಜಿಎಫ್ ಚಾಚಾ' ಅಂತಿಮ ಯಾತ್ರೆಯಲ್ಲಿಯೂ ಯಶ್ ನೆರವಿಗೆ ಬಂದಿದ್ದಾರೆ. ಅಲ್ಲದೆ ಇಬ್ಬರೂ ಮಕ್ಕಳಿಗೂ ಎಲ್ಲಿಯೂ ಹೇಳಬೇಡಿ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಹರೀಶ್ ರಾಯ್ ಕನ್ನಡ ಸೇರಿದಂತೆ ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಹುತೇಕ ಕಳನಾಯಕನ ಪಾತ್ರದಲ್ಲಿಯೇ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ. 90ರ ದಶಕದಲ್ಲಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಹರೀಶ್ ರಾಯ್ ಸ್ಟೈಲಿಶ್ ಖಳನಾಯಕ ಎಂದು ಜನಪ್ರಿಯರಾಗಿದ್ದರು. 'ಕೆಜಿಎಫ್' ಸೀರಿಸ್ ಮೂಲಕ ಅವರು ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದರು. ಹರೀಶ್ ರಾಯ್ ಅವರ ಅಂತ್ಯ ಸಂಸ್ಕಾರವನ್ನು ಅವರ ಹುಟ್ಟೂರು ಉಡುಪಿಯಲ್ಲಿ ಮಾಡುವುದಕ್ಕೆ ನಿರ್ಧರಿಸಲಾಗಿದೆ.


Click it and Unblock the Notifications











