"ನಿಮ್ಮ ಮನೆಯಲ್ಲಿ ಅನ್ನ ಇಲ್ದೆ ಇದ್ರೂ ಪರ್ವಾಗಿಲ್ಲ.. ನೀವು ಭಿಕ್ಷೆ ಎತ್ತಿ ತಮಿಳುನಾಡಿಗೆ ಕೊಡಬೇಕು"-ಜಗ್ಗೇಶ್
ಕಾವೇರಿ ಹೋರಾಟ ಇನ್ನೂ ನಿಂತಿಲ್ಲ. ಎರಡೆರಡು ಬಂದ್ ಮಾಡಿದರೂ ಏನೂ ಪ್ರಯೋಜನ ಆಗಿಲ್ಲ. ತಮಿಳುನಾಡಿಗೆ ಕಾವೇರಿ ನೀರು ಹರಿಯೋದು ನಿಂತಿಲ್ಲ. ರೈತರ ಹೋರಾಟ ನಿಂತಿಲ್ಲ. ದಿನದಿಂದ ದಿನಕ್ಕೆ ಆಕ್ರೋಶ ಹೆಚ್ಚಾಗುತ್ತಲೇ ಇವೆ.
ಕನ್ನಡ ಪರ ಸಂಘಟನೆಗಳು ಕಾವೇರಿ ನೀರು ಬಿಡುತ್ತಿರುವುದನ್ನು ವಿರೋಧಿಸಿ ಕರ್ನಾಟಕ ಬಂದ್ಗೆ ಕರೆ ನೀಡಲಾಗಿತ್ತು. ಈ ವೇಳೆ ನವರಸ ನಾಯಕ ಜಗ್ಗೇಶ್ ಆ ಪ್ರತಿಭಟನಾ ಸಭೆಯಲ್ಲಿ ಭಾಗಿಯಾಗಿರಲಿಲ್ಲ. ಗೈರಾಗಿದ್ದಕ್ಕೆ ಅನಾರೋಗ್ಯ ಕಾರಣವನ್ನು ನೀಡಿದ್ದರು.

ಅನಾರೋಗ್ಯದ ನಡುವೆಯೂ ನವರಸ ನಾಯಕ ಜಗ್ಗೇಶ್ ಮಾಧ್ಯಮಗಳ ಮುಂದೆ ಬಂದಿದ್ದರು. ಈ ವೇಳೆ ದೇವೆಗೌಡರು ಹೇಳಿದ ಮಾತುಗಳನ್ನು ನೆನೆಪಿಸಿಕೊಂಡಿರು. ಹಾಗೇ ಕಾವೇರಿ ಹೋರಾಟ ಯಾಕೆ ಉಪಯೋಗವಿಲ್ಲ? ಕಲಾವಿದರನ್ನು ಯಾಕೆ ಟಾರ್ಗೆಟ್ ಮಾಡಬಾರದು? ಅನ್ನೋದನ್ನು ಜಗ್ಗೇಶ್ ವಿವರಿಸಿದ್ದಾರೆ. ಅದರ ಸಾರಾಂಶ ಇಲ್ಲಿದೆ.
"ಶವ ಪೆಟ್ಟಿಗೆಗೆ ಕಡೆ ಮೊಳೆ ಹೊಡೆಸಿಬಿಟ್ಟರು"
ಕನ್ನಡ ಭಾಷೆ, ನೆಲ, ಜಲ ಅನ್ನೋ ವಿಷಯ ಬಂದಾಗ ನವರಸ ಜಗ್ಗೇಶ್ ಸದಾ ಮುಂದಿರುತ್ತಿದ್ದರು. ಆದರೆ, ಈ ಬಾರಿ ನಡೆದ ಪ್ರತಿಭಟನೆಗಳಲ್ಲಿ ಜಗ್ಗೇಶ್ ಭಾಗಿಯಾಗಿರಲಿಲ್ಲ. ಈ ವೇಳೆ ಕಾವೇರಿ ಸಮಸ್ಯೆ ಬಗ್ಗೆ ಮಾತಾಡಿದ್ದಾರೆ. "ಈ ಸಂದರ್ಭದಲ್ಲಿ ದೇವೇಗೌಡರನ್ನು ನೆನೆಸಿಕೊಳ್ಳುತ್ತೇನೆ. ಎಂಥಾ ಒಳ್ಳೆ ಮಾತು ಹೇಳಿದ್ರು ಅಂದರೆ, ಟ್ರಿಬ್ಯೂನಲ್ ಮಾಡಿದ್ದಾಗ ಒಂದು ಅಂದಿದ್ರು. ಶವ ಪೆಟ್ಟಿಗೆಗೆ ಎಲ್ಲಾ ಸೇರಿಕೊಂಡು ಕಡೇ ಮೊಳೆ ಹೊಡೆಸಿಬಿಟ್ಟರು ಎಂದರು. ಆಗ ಯಾರೂ ಅರ್ಥ ಮಾಡಿಕೊಳ್ಳಲಿಲ್ಲ." ಎಂದು ಜಗ್ಗೇಶ್ ಹೇಳಿದ್ದಾರೆ.
"ಭಿಕ್ಷೆ ಎತ್ತಿ ತಮಿಳುನಾಡಿಗೆ ಕೊಡಬೇಕು"
"ಎಂಥಾ ಪರಿಸ್ಥಿತಿ ಇದೆ ಅಂದರೆ, ನಿಮ್ಮ ಮನೆಗೆ ಅನ್ನ ಇಲ್ಲದೆ ಹೋದರೂ ಪರ್ವಾಗಿಲ್ಲ. ನೀವು ಭಿಕ್ಷೆ ಎತ್ತಿ ತಮಿಳುನಾಡಿಗೆ ಹೋಗಿ ಕೊಡಬೇಕು ಅಂತಹ ಸ್ಥಿತಿ ಇವತ್ತು ಕಾನೂನಿನಲ್ಲಿ ಆಗಿರೋದು. ಇದು ಹೋರಾಟದಿಂದ ಬಗೆಹರಿಯೋದಿಲ್ಲ. ಎರಡು ಸರ್ವ ಪಕ್ಷಗಳ ಸಭೆಗೆ ಹೋಗಿದ್ದೆ ನಾನು. ಯಾವುದೇ ಕಾರಣಕ್ಕೂ ಯಾವುದೇ ಹೋರಾಟದಿಂದ ಸಾಧ್ಯವಾಗೋದಿಲ್ಲ." ಎಂದು ಜಗ್ಗೇಶ್ ಅಭಿಪ್ರಾಯ ಪಟ್ಟಿದ್ದಾರೆ.

"ಕಲಾವಿದ ಭಾಷಣ ಬಿಗಿದರೆ ಸರಿಹೋಗಲ್ಲ"
"ಯಾವನೋ ಒಬ್ಬ ಕಲಾವಿದ ಬಂದು ವೇದಿಕೆ ಮೇಲೆ ಭಾಷಣ ಹೊಡೆದರೆ ನೀರು ನಿಲ್ಲಿಸಿಬಿಡುತ್ತಾರಾ. ಕಾನೂನು ಇದು. ಕಾನೂನಿನ ಮುಂದೆ ಎಲ್ಲರೂ ತಲೆಬಾಗಲೇ ಬೇಕು. ಇಲ್ಲಿ ನಡೆದಿರೋದು ಏನಂದರೆ, ರಾಜ್ಯ ಸರ್ಕಾರ ಬಹಳ ದೊಡ್ಡ ತಪ್ಪು ಮಾಡಿತು. ಏಕಾಏಕಿ ಫುಲ್ ನೀರು ಬಿಟ್ಟುಬಿಡ್ತು. ಆಮೇಲೆ ಸರ್ವಪಕ್ಷ ಸಭೆ ಕರೀತು. ಹಾಗೇ ಮಾಡಬಾರದಿತ್ತು." ಎಂದು ಜಗ್ಗೇಶ್ ಹೇಳಿದ್ದಾರೆ.
"ಬೇರೆಯವರಿಗೆ ಕೋಟಿ ಬ್ಯುಸಿನೆಸ್ ಕೊಡುತ್ತೀರಿ"
"ಒಳ್ಳೆಯ ಕಲೆಕ್ಷನ್ ತಗೊಂಡು ಇಲ್ಲಿ ಬೇರೆ ಭಾಷೆ ಕಲಾವಿದರು ಮೆರೆಯುತ್ತಿದ್ದಾರೆ. ಅದನ್ನು ನೋಡುವವರನ್ನು ಮುಖಕ್ಕೆ ಉಗೀಬೇಕು ಮೊದಲು. ಅವರು ಬೇರೆಯವರಿಗೆ ಬೆಂಬಲ ನೀಡುತ್ತಿದ್ದಾರೆ. ಕೋಟಿಗಟ್ಟಲೆ ಬ್ಯುಸಿನೆಸ್ ಕೊಡುತ್ತೀರಿ ಬೇರೆಯವರಿಗೆ, ಈಗ ಯಾವ ಸ್ವಾಭಿಮಾನ ಬಂದುಬಿಟ್ಟಿದೆ ನಿಮಗೆ. ಈಗ ಎಲ್ಲಾ ಆರ್ಟಿಸ್ಟ್ಗಳನ್ನು ಕರೆಯಿರಿ. ಕನ್ನಡಿಗರಿಗೆ ನಮಸ್ಕಾರ ಮಾಡುತ್ತೇನೆ.. ಇದು ಕಾನೂನು ಪ್ರಕ್ರಿಯೆ.. ಕಲಾವಿದರ ಪ್ರಕ್ರಿಯೆ ಅಲ್ಲ" ಎಂದು ಜಗ್ಗೇಶ್ ಅಭಿಪ್ರಾಯ ಪಟ್ಟಿದ್ದಾರೆ.


Click it and Unblock the Notifications











