'ಕಲ್ಪನಾ 2', 'ಸಂತ' ಸಿನಿಮಾಗಳ ಖಳನಟ ಪ್ರಕಾಶ್ ಹೆಗ್ಗೋಡು ನಿಧನ: ಸಾಗರದ ಪುರಪ್ಪೆಮನೆಯಲ್ಲಿ ಅಂತಿಮ ದರ್ಶನ!
ದಕ್ಷಿಣ ಭಾರತದ ಚಿತ್ರರಂಗಕ್ಕೆ ಒಂದರ ಹಿಂದೊಂದು ಶಾಕ್ ಬರುತ್ತಲೇ ಎದುರಾಗುತ್ತಲೇ ಇದೆ. ನಿನ್ನೆಯಷ್ಟೇ (ಮಾರ್ಚ್ 29) ಕಿರಾತಕ ಸಿನಿಮಾದಲ್ಲಿ ಖಳನಾಯಕನಾಗಿ ನಟಿಸಿದ್ದ ಡ್ಯಾನಿಯಲ್ ಬಾಲಾಜಿ ಹೃದಯಾಘಾತದಿಂದ ಮೃತಪಟ್ಟಿದ್ದರು. ಸಿನಿಪ್ರೇಮಿಗಳು ಈ ಶಾಕ್ನಿಂದ ಹೊರಬರುವುದರೊಳಗೆ ಮತ್ತೊಬ್ಬ ನಟ ಇಹಲೋಕ ತ್ಯಜಿಸಿದ್ದಾರೆ.
ಕನ್ನಡ ಸಿನಿಮಾಗಳಲ್ಲಿ ಖಳನಟನಾಗಿ ಗುರುತಿಸಿಕೊಂಡಿದ್ದ ರಂಗಕರ್ಮಿ ಪ್ರಕಾಶ್ ಹೆಗ್ಗೋಡು ಅನಾರೋಗ್ಯದಿಂದ ಕೊನೆಯುಸಿರೆಳೆದಿದ್ದಾರೆ. ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಪ್ರಕಾಶ್ ಹೆಗ್ಗೋಡು ಬಳಲುತ್ತಿದ್ದರು. ಮಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೆ ಇಂದು (ಮಾರ್ಚ್ 30) ಇಹಲೋಕ ತ್ಯಜಿಸಿದ್ದಾರೆ.

ಪ್ರಕಾಶ್ ಹೆಗ್ಗೋಡು ಕನ್ನಡ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಶಿವರಾಜ್ಕುಮಾರ್ ನಟಿಸಿರುವ 'ಸಂತ', 'ಭಾಗ್ಯದ ಬಳೆಗಾರ', ಉಪೇಂದ್ರ ಅಭಿನಯದ 'ಕಲ್ಪನಾ 2', 'ವೀರು', 'ಮಾಡರ್ನ್ ಮಹಾಭಾರತ' ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದರು. ಅವರಿಗೆ 58 ವರ್ಷ ವಯಸ್ಸಾಗಿತ್ತು.
ಪ್ರಕಾಶ್ ಹೆಗ್ಗೋಡು ಶಿವಮೊಗ್ಗ ಜಿಲ್ಲೆಯ, ಸಾಗರ ತಾಲೂಕಿನ ಪುರಪ್ಪೆಮನೆಯವರಾಗಿದ್ದಾರೆ. ನಾಳೆ (ಮಾರ್ಚ್ 31) ಅವರ ಅಂತಿಮ ದರ್ಶನವನ್ನು ಅವರ ಸ್ವಗೃಹವಾದ ಪುರಪ್ಪೆಮನೆಯಲ್ಲಿ ಅವಕಾಶ ಮಾಡಿಕೊಡಲಾಗಿದೆ. ಕುಟುಂಬಸ್ಥರು, ಆತ್ಮೀಯರು, ರಂಗಕರ್ಮಿಗಳು ಹಾಗೂ ಊರಿನ ಜನರಿಗೆ ಅಂತಿಮ ದರ್ಶನ ಪಡೆಯಬಹುದಾಗಿದೆ.
ಪ್ರಕಾಶ್ ಹೆಗ್ಗೋಡು ಅವರು ಸಿನಿಮಾದ ಜೊತೆಗೆ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದರು. ರಂಗಕರ್ಮಿಯಾಗಿಯೂ ಗುರುತಿಸಿಕೊಂಡಿದ್ದರು. ಇದರೊಂದಿಗೆ ಸಾಮಾಜಿಕ ಹೋರಾಟಗಳ ಮೂಲಕವೂ ಪ್ರಕಾಶ್ ಹೆಗ್ಗೋಡು ಗುರುತಿಸಿಕೊಂಡಿದ್ದರು. ಅಗಲಿಗೆ ರಂಗಕರ್ಮಿಗೆ ರಂಗ ನಮನದ ಮೂಲಕ ಅಂತಿಮ ದರ್ಶನ ನೀಡಲಾಗುತ್ತಿದೆ.


Click it and Unblock the Notifications











