"ನಮಗೆ ಪ್ಯಾನ್ ಇಂಡಿಯಾನೇ ಬೇಡ. ನಿಮ್ಮಿಂದ ಆಗಬೇಕಾಗಿದ್ದು ಏನೇನೂ ಇಲ್ಲ."; ನಟ ಪ್ರಥಮ್ ಆಕ್ರೋಶ
ಕನ್ನಡ ಚಿತ್ರರಂಗ ಕಳೆದ ಒಂದೂವರೆ ಎರಡು ವರ್ಷಗಳಿಂದ ನಷ್ಟದ ಹಾದಿ ಹಿಡಿದಿದೆ. ಪ್ಯಾನ್ ಇಂಡಿಯಾ ಸಿನಿಮಾಗಳ ಮೂಲಕ ವಿಶ್ವ ಮಟ್ಟದಲ್ಲಿ ಸದ್ದು ಮಾಡಿದ್ದ ಸ್ಯಾಂಡಲ್ವುಡ್ ಈಗ ಸಂಪೂರ್ಣವಾಗಿ ಸೈಲೆಂಟ್ ಆಗಿದೆ. ಇನ್ನೊಂದು ಕಡೆ ಸ್ಮಾಲ್ ಬಜೆಟ್ ಸಿನಿಮಾಗಳನ್ನು ನೋಡುವುದಕ್ಕೆ ಜನರು ಥಿಯೇಟರ್ಗಳಿಗೆ ಬರುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ.
ಈ ಬೆನ್ನಲ್ಲೇ ಕರ್ನಾಟಕದಲ್ಲಿ ಸಿಂಗಲ್ಸ್ಕ್ರೀನ್ ಥಿಯೇಟರ್ಗಳು ನಶಿ ಹೋಗುತ್ತಿರುವು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. ಇತ್ತೀಚೆಗೆ ಫಿಲ್ಮ್ ಚೇಂಬರ್ ನೇತೃತ್ವದಲ್ಲಿ ಚಿತ್ರರಂಗದ ಪರಿಸ್ಥಿತಿ ಬಗ್ಗೆ ಗಂಭೀರ ಚರ್ಚೆ ಮಾಡಲಾಗಿತ್ತು. ಕನ್ನಡ ಚಿತ್ರರಂಗವನ್ನು ಉಳಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ತೆಗೆದು ಕೊಳ್ಳುವುದಾಗಿ ಫಿಲ್ಮ್ ಚೇಂಬರ್ ಹೇಳಿತ್ತು.

ಇತ್ತ ಪ್ಯಾನ್ ಇಂಡಿಯಾ ಸಿನಿಮಾಗಳಿಂದಲೇ ಕನ್ನಡ ಚಿತ್ರರಂಗ ಈ ಸ್ಥಿತಿಗೆ ಬಂದಿದೆ ಅಂತ ಕೆಲವರು ವಾದ ಮಾಡುತ್ತಿದ್ದಾರೆ. ಈಗ ಒಳ್ಳೆಯ ಹುಡುಗ ಪ್ರಥಮ್ ಪ್ಯಾನ್ ಇಂಡಿಯಾ ಸಿನಿಮಾಗಳ ಬಗ್ಗೆ ಆಕ್ರೋಶ ಹೊರ ಹಾಕಿದ್ದಾರೆ. "ನಮಗೆ ಪ್ಯಾನ್ ಇಂಡಿಯಾನೇ ಬೇಡ. ನಿಮ್ಮಿಂದ ಆಗಬೇಕಾಗಿದ್ದು ಏನೇನೂ ಇಲ್ಲ." ಎಂದು ಹೇಳಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಥಿಯೇಟರ್ಗೆ ಬಂದು ಸಿನಿಮಾ ನೋಡದ ಯುವಕರಿಗೆ ಬ್ಲ್ಯಾಕ್ ಟಿಕೆಟ್ ಪಾಠ ಮಾಡಿದ್ದಾರೆ ಪ್ರಥಮ್. ಹಿಂದೆ ಇದೇ ಸಿಂಗಲ್ ಸ್ಕ್ರೀನ್ಗಳ ಮುಂದೆ ಜನರು ಟಿಕೆಟ್ ಖರೀದಿಸಲು ಮುಗಿಬೀಳುತ್ತಿದ್ದರು. ಆದರೆ, ಈಗ ಇಲ್ಲ. ಅದು ಯುವಕರಿಗೆ ಗೊತ್ತೇ ಇಲ್ಲ ಎಂದು ಪ್ರಥಮ್ ಹೇಳಿದ್ದಾರೆ. "ಈಗಿನ ಯುವಕರಿಗೆ ಬುದ್ದಿ ಇದೆಯೋ ಇಲ್ಲವೋ ಗೊತ್ತಿಲ್ಲ. ನಿಮಗೆ ಬ್ಲ್ಯಾಕ್ ಟಿಕೆಟ್ ಅಂದರೆ ಏನು ಅಂತ ಗೊತ್ತೇನ್ರೋ.. ಬ್ಲ್ಯಾಕ್ ಟಿಕೆಟ್ ಖರೀದಿ ಮಾಡಿ ಸಿನಿಮಾ ನೋಡುವ ಅನುಭವ ಗೊತ್ತಾ? 10.30ರ ಶೋಗೆ ಬೆಳಗ್ಗೆನೇ ಹೋಗಿ ಟಿಕೆಟ್ ಸಿಕ್ಕಿಲ್ಲ ಅಂತ ಕಿತ್ತಾಡಿಕೊಂಡು ಟಿಕೆಟ್ ತೆಗೆದುಕೊಂಡು ಸಿನಿಮಾ ನೋಡುತ್ತಿದ್ದರು. ಅದು ಚಿತ್ರರಂಗ. ಅದು ಸುವರ್ಣ ಯುಗ. ಅದು ನಿಜವಾದ ಚಿತ್ರರಂಗದ ಏಳಿಗೆ ಅಂದರೆ." ಎಂದು ಪ್ರಥಮ್ ಆಕ್ರೋಶ ಹೊರ ಹಾಕಿದ್ದಾರೆ.
ಒಂದು ಥಿಯೇಟರ್ ಮುಚ್ಚಿದಾಗ ಒಬ್ಬ ಸ್ಟಾರ್ ನಟನ 10 ಸಿನಿಮಾಗಳು ಸೋತಾಗ ಆಗುವಂತಹ ನೋವು ಆಗುತ್ತೆ. ಒಂದು ಚಿತ್ರಮಂದಿರ ಒಡೆದು ಹಾಕುತ್ತಿದ್ದಾರೆ ಅಂದರೆ, ಪ್ರತಿಯೊಬ್ಬ ನಟನೂ ತನ್ನ 5 ಸಿನಿಮಾ ಸೋತಿರುವಷ್ಟು ಫೀಲ್ ಆಗಬೇಕು ಎಂದಿದ್ದಾರೆ. "ಮೂರು ವರ್ಷಕ್ಕೊಂದು ಫ್ಯಾನ್ ಇಂಡಿಯಾ ಸಿನಿಮಾ ಬಂದರೆ, ಏನು ಸಾರ್ ಮಾಡೋಣ. ಒಂದು ಥಿಯೇಟರ್ ಒಡೆದು ಹಾಕುತ್ತಿದ್ದಾರೆ ಅಂದರೆ, ಏನು ಯೋಚನೆ ಮಾಡಬೇಕು ಗೊತ್ತಾ? ನಂದು ಐದು ಸಿನಿಮಾ ಸೋತಾಗಾ ಏನಾಗುತ್ತೋ ಅದು ಒಂದು ಥಿಯೇಟರ್ ಮುಚ್ಚಿದಾಗ ಅದಾಗಬೇಕು." ಎಂದಿದ್ದಾರೆ ಪ್ರಥಮ್.

ಹಾಗೇ ಇನ್ನು 10 ವರ್ಷಕ್ಕೆ ಕನ್ನಡ ಚಿತ್ರರಂಗ 100 ವರ್ಷಗಳನ್ನು ಪೂರೈಸುತ್ತೆ. ಆಗ ಮುಂದಿನ ಪೀಳಿಗೆ ಸಿನಿಮಾ ನೋಡುವುದಕ್ಕೆ ಸಾಧ್ಯ ಆಗುತ್ತಾ? ಎಂದು ಪ್ರಶ್ನೆ ಮಾಡಿದ್ದಾರೆ. "ಅಣ್ಣಾವ್ರು, ವಿಷ್ಣುವರ್ಧನ್, ಅಂಬರೀಶ್ ಅಂತಹವರು 90 ವರ್ಷದಿಂದ ಕಟ್ಟಿದ ಸಿನಿಮಾವಿದು. ಮುಂದಿನ ಪೀಳಿಗೆಗೆ ಸಿನಿಮಾ ಕೊಡುವುದಕ್ಕೆ ಆಗುತ್ತಾ? ಇನ್ನು 10 ವರ್ಷಕ್ಕೆ 100 ವರ್ಷ. ಚಿತ್ರರಂಗ ಇರುತ್ತಾ? ಇಂತಹ ದರಿದ್ರ ವ್ಯವಸ್ಥೆಗೆ ಹೊರಟು ಹೋಗಿದ್ದೇವೆ." ಎಂದಿದ್ದಾರೆ.
ಇದೇ ವೇಳೆ ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಮಾಡುತ್ತಿರುವ ಸ್ಟಾರ್ಗಳ ವಿರುದ್ಧವೂ ಆಕ್ರೋಶ ಹೊರ ಹಾಕಿದ್ದಾರೆ. "ಒಂದೇ ಒಂದು ಪ್ಯಾನ್ ಇಂಡಿಯಾ ಸಿನಿಮಾ ಮೂರು ವರ್ಷಕ್ಕೆ ಒಮ್ಮೆ ಬಂದರೆ, ಚಿತ್ರರಂಗ ಎಲ್ಲಿ ಉದ್ಧಾರ ಆಗುತ್ತೆ. ನಮಗೆ ಪ್ಯಾನ್ ಇಂಡಿಯಾನೇ ಬೇಡ. ನಿಮ್ಮಿಂದ ಆಗಬೇಕಾಗಿದ್ದು ಏನೇನೂ ಇಲ್ಲ." ಎಂದಿದ್ದಾರೆ.


Click it and Unblock the Notifications











