'ಹಿಟ್ಲರ್ ಕಲ್ಯಾಣ' ಖ್ಯಾತಿಯ ದಿಲೀಪ್ ರಾಜ್ ಇನ್ನಿಲ್ಲ; ತೀವ್ರ ಹೃದಯಾಘಾತದಿಂದ ನಿಧನ
ಬೆಳ್ಳಂಬೆಳಗ್ಗೆ ಸ್ಯಾಂಡಲ್ವುಡ್ ಶೋಕಸಾಗರದಲ್ಲಿ ಮುಳುಗಿದೆ. ಕನ್ನಡ ನಟ ಹಾಗೂ ನಿರ್ಮಾಪಕ ದಿಲೀಪ್ ರಾಜ್ ತೀವ್ರ ಹೃದಯಘಾತದಿಂದ ನಿಧನರಾಗಿದ್ದಾರೆ. ಫಿಟ್ ಅಂಡ್ ಫೈನ್ ಆಗಿದ್ದ 47 ವರ್ಷದ ನಟನಿಗೆ ಇದ್ದಕ್ಕಿದ್ದ ಹಾಗೇ ಹೃದಯಾಘಾತವಾಗಿದ್ದು ಕೊನೆಯುಸಿರೆಳೆದಿದ್ದಾರೆ.
ಕನ್ನಡದ ಹಲವು ಸಿನಿಮಾಗಳಲ್ಲಿ ನಾಯಕನಾಗಿ, ಖಳನಾಯಕನಾಗಿ, ಪೋಷಕ ಪಾತ್ರಗಳಲ್ಲಿ ನಟಿಸಿದ್ದರು. ಇಷ್ಟೇ ಅಲ್ಲದೇ ಕಿರುತೆರೆಯಲ್ಲಿಯೂ ದಿಲೀಪ್ ರಾಜ್ ನಟಿಸಿದ್ದರು. 'ಹಿಟ್ಲರ್ ಕಲ್ಯಾಣ' ದಿಲೀಪ್ ರಾಜ್ ನಟಿಸಿದ್ದ ಜನಪ್ರಿಯ ಧಾರಾವಾಹಿ. ಇಷ್ಟೇ ಅಲ್ಲದೇ ದಿಲೀಪ್ ರಾಜ್ ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದರು. ಅಲ್ಲದೇ, ಎರಡು ಧಾರಾವಾಹಿಗಳ ನಿರ್ಮಾಣ ಆಗುತ್ತಿತ್ತು.

ಇಂದು (ಮೇ 13) ಬೆಳಗಿನ ಜಾವ ದಿಲೀಪ್ ರಾಜ್ ಅವರಿಗೆ ತೀವ್ರ ಹೃದಯಾಘಾತವಾಗಿತ್ತು. ಮನೆಯಲ್ಲಿಯೇ ಕುಸಿದು ಬಿದ್ದಿದ್ದರು. ತಕ್ಷಣವೇ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ದಿಲೀಪ್ ರಾಜ್ ಅವರಿಗೆ ಚಿಕಿತ್ಸೆ ನೀಡಿದರೂ ಅವರು ಬದುಕಿಸಿಕೊಳ್ಳಲು ಸಾಧ್ಯವಾಗಿಲ್ಲ. ಸದ್ಯ ಕುಮಾರ ಸ್ವಾಮಿ ಲೇಔಟ್ ನ ಅಪೋಲೊ ಆಸ್ಪತ್ರೆಯಲ್ಲಿ ಮೃತದೇಹವನ್ನು ಇರಿಸಲಾಗಿದೆ.
ದಿಲೀಪ್ ರಾಜ್ ಸುಮಾರು 24ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. 2005ರಲ್ಲಿ ತೆರೆಕಂಡ 'ಭಾಯ್ ಫ್ರೆಂಡ್' ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿನಯದ 'ಮಿಲನ' ಅವರಿಗೆ ಜನಪ್ರಿಯತೆ ತಂದುಕೊಟ್ಟಿತ್ತು. ಈ ಸಿನಿಮಾದಲ್ಲಿ ಖಳನಾಯಕನಾಗಿ ನಟಿಸಿದ್ದರು. ಇದರೊಂದಿಗೆ 'ಯು ಟರ್ನ್', 'ಆರ್ಕೆಸ್ಟ್ರಾ ಮೈಸೂರು', 'ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು', '7 ಓ ಕ್ಲಾಕ್', 'ಕ್ಷಣ ಕ್ಷಣ' ಅಂತಹ ಸಿನಿಮಾಗಳಲ್ಲಿ ನಟಿಸಿದ್ದರು.
ಅವರ ಪ್ರತಿಭೆಗೆ ತಕ್ಕಂತೆ ದಿಲೀಪ್ ರಾಜ್ಗೆ ಸಿನಿಮಾಗಳಲ್ಲಿ ಮನ್ನಣೆ ಸಿಗಲಿಲ್ಲ. ಹೀಗಾಗಿ ಧಾರಾವಾಹಿಗಳ ಕಡೆಗೆ ಮುಖ ಮಾಡಿದ್ದರು. ಅಲ್ಲೂ ನಟರಾಗಿ, ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದರು. 'ಕಂಬದ ಮನೆ' ಧಾರಾವಾಹಿ ಅವರ ಮೊದಲ ಧಾರಾವಾಹಿ. ಅವರು ನಟಿಸಿದ 'ಹಿಟ್ಲರ್ ಕಲ್ಯಾಣ' ಧಾರಾವಾಹಿ ಜೀ ಕನ್ನಡದಲ್ಲಿ ಪ್ರಸಾರ ಆಗಿತ್ತು. ಈ ಧಾರಾವಾಹಿಯಲ್ಲಿ ನಟನಾಗಿ, ನಿರ್ಮಾಪಕನಾಗಿ ಗುರುತಿಸಿಕೊಂಡಿದ್ದರು. ಹಾಗೇ 'ಪಾರು', 'ನಾ ನಿನ್ನ ಬಿಡಲಾರೆ' ಧಾರಾವಾಹಿಯನ್ನು ನಿರ್ಮಾಣ ಮಾಡಿದ್ದರು.
ಇತ್ತೀಚೆಗಷ್ಟೇ ದಿಲೀಪ್ ರಾಜ್ ಹೊಚ್ಚ ಹೊಸ ಧಾರಾವಾಹಿ 'ಕೃಷ್ಣ ರುಕ್ಕು' ಆರಂಭ ಮಾಡಿದ್ದರು. ಇಷ್ಟೇ ಅಲ್ಲದೇ, 'ಬ್ರಹ್ಮಗಂಟು' ಅನ್ನೋ ಧಾರಾವಾಹಿಯನ್ನು ನಿರ್ಮಾಣ ಮಾಡುತ್ತಿದ್ದಾರೆ. ದಿಲೀಪ್ ರಾಜ್ ಅವರು ಮೂಲತ: ಅರಸಿಕೆರೆ ಮೂಲದವರು. ಆದರೆ, ಹುಟ್ಟಿದ್ದು ಬೆಂಗಳೂರಲ್ಲಿ. 1978ರ ಸೆಪ್ಟೆಂಬರ್ 2 ರಂದು ಜನಿಸಿದರು. ಆರಂಭದ ದಿನಗಳಿಂದಲೇ ನಟನೆ ಕಡೆಗೆ ಒಲವು ಮೂಡಿಸಿಕೊಂಡಿದ್ದರು. ಮೊದಲು ನಾಟಕಗಳಲ್ಲಿ ಸಕ್ರಿಯರಾಗಿದ್ದರು. ಆನಂತರ ಸಿನಿಮಾಗಳತ್ತ ಮುಖ ಮಾಡಿದ್ದರು.
ದಿಲೀಪ್ ರಾಜ್ ಇತ್ತೀಚೆಗೆ ತೆರೆ ಕಂಡಿದ್ದ 'ಲವ್ ಮಾಕ್ಟೇಲ್ 3' ಸಿನಿಮಾದಲ್ಲಿ ನಟಿಸಿದ್ದರು. ಡಾರ್ಲಿಂಗ್ ಕೃಷ್ಣ ನಟಿಸಿ, ನಿರ್ದೇಶಿಸಿದ್ದ ಈ ಸಿನಿಮಾ ವಕೀಲರ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಬಹುಶ: ಇದೇ ಅವರು ನಟಿಸಿದ ಕೊನೆಯ ಸಿನಿಮಾ ಎಂದು ಹೇಳಲಾಗುತ್ತಿದೆ. ದಿಲೀಪ್ ರಾಜ್ ಅವರ ನಿಧನ ಕನ್ನಡ ಚಿತ್ರರಂಗ ಹಾಗೂ ಕಿರುತೆರೆ ಲೋಕಕ್ಕೆ ತುಂಬಲಾರದ ನಷ್ಟ ಆಗಿದೆ.


Click it and Unblock the Notifications