'ಗಣಪ', 'ಕರಿಯ 2' ಸಿನಿಮಾದ ನಟ ಸಂತೋಷ್ ಬಾಲರಾಜ್ ಸ್ಥಿತಿ ಗಂಭೀರ
ಕನ್ನಡ ಜನಪ್ರಿಯ ನಿರ್ಮಾಪಕ ಆನೇಕಲ್ ಬಾಲರಾಜ್ ಅವರ ಪುತ್ರ ಸಂತೋಷ್ ಬಾಲರಾಜ್ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಸ್ಯಾಂಡಲ್ವುಡ್ನಲ್ಲಿ ನಾಯಕ ನಟನಾಗಿ ಗುರುತಿಸಿಕೊಂಡಿರುವ ಸಂತೋಷ್ ಬಾಲರಾಜ್ ಪರಿಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಸಂತೋಷ್ ಬಾಲರಾಜ್ ಜಾಂಡೀಸ್ನಿಂದ ಬಳಲುತ್ತಿದ್ದು, ಕೋಮಾಗೆ ಜಾರಿದ್ದಾರೆ ಎಂದು ಹೇಳಲಾಗುತ್ತದೆ.
34 ವರ್ಷ ನಟ ಸಂತೋಷ್ ಬಾಲರಾಜ್ ಕನ್ನಡದಲ್ಲಿ ಹಲವು ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿದ್ದಾರೆ. ಇವರ ತಂದೆ ಆನೇಕಲ್ ಬಾಲರಾಜ್ 'ಕರಿಯ' ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸಿದ್ದ ಈ ಸಿನಿಮಾವನ್ನು ಜೋಗಿ ಪ್ರೇಮ್ ನಿರ್ದೇಶಿಸಿದ್ದರು. ಈ ಸಿನಿಮಾ ಸೂಪರ್ ಹಿಟ್ ಆಗಿತ್ತು. ಕನ್ನಡದಲ್ಲಿ ಒಂದಿಷ್ಟು ಸಿನಿಮಾಗಳನ್ನು ನಿರ್ಮಿಸಿದ ಬಳಿಕ ತಮ್ಮ ಮಗ ಸಂತೋಷ್ ಬಾಲರಾಜ್ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದರು.

ಸಂತೋಷ್ ಬಾಲರಾಜ್ ಕನ್ನಡದಲ್ಲಿ 'ಕೆಂಪ', 'ಗಣಪ', 'ಬರ್ಕ್ಲಿ', 'ಕರಿಯ 2' ಅಂತಹ ಸಿನಿಮಾಗಳಲ್ಲಿ ನಟಿಸಿದ್ದಾರೆ. 'ಗಣಪ' ಹಾಗೂ 'ಕರಿಯ 2' ಸಿನಿಮಾಗಳು ಸಂತೋಷ್ ಬಾಲರಾಜ್ಗೆ ಸಣ್ಣ ಮಟ್ಟದ ಯಶಸ್ಸನ್ನು ನೀಡದ್ದವು. ಬಹುತೇಕ ತಮ್ಮದೇ ಬ್ಯಾನರ್ನ ಸಿನಿಮಾಗಳಲ್ಲಿ ಸಂತೋಷ್ ನಟಿಸುತ್ತಿದ್ದರು. ದೊಡ್ಡ ಬ್ರೇಕ್ಗಾಗಿ ಶ್ರಮಿಸುತ್ತಿದ್ದ ಸಂತೋಷ್ ಅವರ ಆರೋಗ್ಯ ದಿಢೀರನೇ ಕೈಕೊಟ್ಟಿದೆ. ಅವರು ಜಾಂಡೀಸ್ನಿಂದ ಬಳಲುತ್ತಿದ್ದಾರೆಂದು ಹೇಳಲಾಗಿದೆ.
ಸಂತೋಷ್ ಬಾಲರಾಜ್ ಅವರಿಗೆ ಜಾಂಡೀಸ್ ತೀವ್ರಗೊಂಡ ಬೆನ್ನಲ್ಲೇ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ನ ಸಾಗರ್ ಆಸ್ಪತ್ರೆಗೆ ಎರಡು ದಿನಗಳ ಹಿಂದೆ ದಾಖಲು ಮಾಡಲಾಗಿದೆ ಎನ್ನಲಾಗಿದೆ. ಸದ್ಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕೋಮಾಗೆ ಜಾರಿದ್ದು ಆರೋಗ್ಯ ಪರಿಸ್ಥಿತಿ ತೀರ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ. ಅವರ ಆರೋಗ್ಯ ಪರಿಸ್ಥಿತಿಯ ಬಗ್ಗೆ ಕುಟುಂಬಸ್ಥರು ಹಾಗೂ ಆಸ್ಪತ್ರೆಗಳು ಅಧಿಕೃತ ಹೇಳಿಕೆ ನೀಡಬೇಕಿದೆ.
ಕೆಲವು ವರ್ಷಗಳ ಹಿಂದೆ ಸಂತೋಷ್ ಬಾಲರಾಜ್ ಅವರ ತಂದೆ ನಿರ್ಮಾಪಕ ಆನೇಕಲ್ ಬಾಲರಾಜ್ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಆ ಬಳಿಕ ಸಂತೋಷ್ ಬಾಲರಾಜ್ ಸಿನಿಮಾಗಳಿಂದ ಕೊಂಚ ದೂರ ಉಳಿದಿದ್ದರು. ಆದರೆ, ಗ್ರ್ಯಾಂಡ್ ಕಮ್ ಬ್ಯಾಕ್ ಮಾಡುವುದಕ್ಕೆ ಶತಪ್ರಯತ್ನ ಮಾಡುತ್ತಿದ್ದರು. ತಂದೆಯನ್ನು ಕಳೆದುಕೊಂಡಲ್ಲಿಂದ ಸಂತೋಷ್ ಅವರ ಅಮ್ಮನೊಂದಿಗೆ ವಾಸವಿದ್ದರು ಎಂದು ವರದಿಯಾಗಿದೆ. ತಂದೆ ಬಿಟ್ಟು ಹೋದ ವ್ಯವಹಾರದ ಜೊತೆ ಸಿನಿಮಾ ಕಡೆಗೂ ಗಮನ ಹರಿಸುತ್ತಿದ್ದರು ಎಂದು ಹೇಳಲಾಗಿದೆ.
ಸಂತೋಷ್ ಬಾಲರಾಜ್ 2009ರಲ್ಲಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. 'ಕೆಂಪ' ಇವರು ನಟಿಸಿದ ಮೊದಲ ಸಿನಿಮಾ. ತಮ್ಮದೇ ಬ್ಯಾನರ್ ಮೂಲಕ ಸಂತೋಷ್ ಕನ್ನಡ ಚಿತ್ರರಂಗಕ್ಕೇನೋ ಎಂಟ್ರಿ ಕೊಟ್ಟಿದ್ದರು. ಆದರೆ, ಚೊಚ್ಚಲ ಸಿನಿಮಾ ಅವರ ಕೈ ಹಿಡಿಯಲಿಲ್ಲ. ಹಲವು ಸಿನಿಮಾಗಳನ್ನು ನಿರ್ಮಿಸಿದ ಅನುಭವವಿರುವ ಆನೇಕಲ್ ಬಾಲರಾಜ್ ಅವರ ಲೆಕ್ಕಚಾರ ತಲೆಕೆಳಗಾಗಿತ್ತು. ಆದರೂ ಸಂತೋಷ್ ಛಲ ಬಿಡಲಿಲ್ಲ. ಸಂತೋಷ್ ತನ್ನ ಲುಕ್ಸ್ನಲ್ಲಿ ಒಂದಿಷ್ಟು ಬದಲಾವಣೆಗಳನ್ನು ಮಾಡಿಕೊಂಡು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು.
'ಒಲವಿನ ಉಡುಗೊರೆ' 'ಜನ್ಮ' ಅಂತಹ ಸಿನಿಮಾಗಳಲ್ಲಿ ನಟಿಸಿದರೂ ಸಕ್ಸಸ್ ಸಿಗಲಿಲ್ಲ. ಆದರೆ, ಸಂತೋಷ್ ಬಾಲರಾಜ್ ಸಿನಿಪ್ರಿಯರ ಗಮನಕ್ಕೆ ಬಿದ್ದಿದ್ದರು. ಆ ಬಳಿಕ ಬಂದ 'ಗಣಪ' ಇವರಿಗೆ ತಕ್ಕ ಮಟ್ಟಿಗೆ ಯಶಸ್ಸು ಕೊಟ್ಟಿತ್ತು. ಆನಂತರ 'ಕರಿಯ 2' ಸಿನಿಮಾ ಕೂಡ ಸಂತೋಷ್ಗೆ ಸಕ್ಸಸ್ ಕೊಟ್ಟಿತ್ತು. ಇತ್ತೀಚೆಗೆ 'ಬರ್ಕ್ಲಿ', 'ಸತ್ಯಂ' ಎನ್ನುವ ಸಿನಿಮಾಗಳು ಕೂಡ ಬಿಡುಗಡೆಯಾಗಿವೆ. 34 ವರ್ಷದ ನಟ ಇನ್ನೂ ಮದುವೆ ಆಗಿಲ್ಲ. ಜಾಂಡೀಸ್ನಿಂದ ಐಸಿಯುನಲ್ಲಿರುವ ನಟ ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳು, ಆಪ್ತರು, ಸ್ನೇಹಿತರು ಹಾಗೂ ಕುಟುಂಬ ವರ್ಗದ ದೇವರಲ್ಲಿ ಪ್ರಾರ್ಥಸುತ್ತಿದ್ದಾರೆ. ಅವರ ಆರೋಗ್ಯದ ಬಗ್ಗೆ ಹೆಚ್ಚು ಮಾಹಿತಿ ಇನ್ನೂ ಹೊರಬೀಳಬೇಕಿದೆ.


Click it and Unblock the Notifications











