Radhika Pandit: ಎದೆಹಾಲು ದಾನ ಮಾಡಿ ಎಂದು ಸಂದೇಶ ಸಾರಿದ ರಾಧಿಕಾ ಪಂಡಿತ್
ರಾಧಿಕಾ ಪಂಡಿತ್ ವಿವಾಹದ ಬಳಿಕ ಸಿನಿಮಾ ಕಾಣಿಸಿಕೊಂಡಿದ್ದು ತೀರಾ ವಿರಳ. ಆದರೆ, ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ. ಇಬ್ಬರು ಮುದ್ದು ಮಕ್ಕಳೊಂದಿಗಿನ ಫೋಟೊವನ್ನು ಆಗಾಗ ಹಂಚಿಕೊಳ್ಳುತ್ತಾರೆ. ಪತಿ ಜೊತೆ ಪ್ರವಾಸಕ್ಕೆ ಹೋದ ಫೋಟೊಗಳನ್ನು ತಮ್ಮ ಅಭಿಮಾನಿಗಳಿಗಾಗಿ ಶೇರ್ ಮಾಡುತ್ತಾರೆ. ಈ ಬಾರಿಗೆ ಸಮಾಜಕ್ಕೆ ಉಪಯುಕ್ತವಾಗುವಂತಹ ಸಂದೇಶವನ್ನು ಸಾರಿ ಒಂದು ವಿಡಿಯೋ ಮಾಡಿದ್ದಾರೆ.
ರಾಧಿಕಾ ಪಂಡಿತ್ ಈಗ ಸಂದೇಶವನ್ನು ಹೊತ್ತು ಬಂದಿದ್ದಾರೆ. ಎದೆ ಹಾಲಿನ ಪ್ರಾಮುಖ್ಯತೆ ಬಗ್ಗೆ ಉಪಯುಕ್ತ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಈ ಸಂಬಂಧ ಒಂದು ವಿಡಿಯೋ ಮಾಡಿದ್ದು, ವೈದ್ಯರೊಬ್ಬರು ಈ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ರಾಧಿಕಾ ಪಂಡಿತ್ ಮಕ್ಕಳಿಗೆ ಎದೆ ಹಾಲು ಯಾಕೆ ಮುಖ್ಯ ಅನ್ನುವುದನ್ನು ತಿಳಿಸಿದ್ದಾರೆ.
'ಎದೆಹಾಲು ಅತ್ಯಮೂಲ್ಯವಾದ ಉಡುಗೊರೆ'
ರಾಧಿಕಾ ಪಂಡಿತ್ ಎದೆ ಹಾಲು ದಾನ ಮಾಡಲು ಕರೆ ನೀಡಿದ್ದಾರೆ. ಈ ವಿಡಿಯೋ ಎದೆ ಹಾಲಿನ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಕೂಡ ಮಾಡಿದ್ದಾರೆ. '' ಜೀವನ ಅತ್ಯಮೂಲ್ಯ ಉಡುಗೊರೆಗಳಲ್ಲಿ ಎದೆಹಾಲು ಕೂಡ ಒಂದು. ಎದೆಹಾಲಿನಲ್ಲಿ ಇರುವ ಅಂಶಗಳನ್ನು ಮತ್ಯಾವುದಕ್ಕೂ ಹೋಲಿಸಲು ಸಾಧ್ಯವಿಲ್ಲ. ಈಗ ತಾನೇ ಹುಟ್ಟಿರುವ ಮಕ್ಕಳಿಗೆ ಎದೆ ಹಾಲು ತುಂಬಾನೆ ಮುಖ್ಯ ಆಗುತ್ತೆ. ಪೋಷಕಾಂಶಗಳು ಹಾಗೂ ರೋಗ ನಿರೋಧಕ ಶಕ್ತಿಯ ಗುಣಗಳು ಈ ಎದೆ ಹಾಲಿನಲ್ಲಿ ಮಾತ್ರ ಇದೆ." ಎಂದು ರಾಧಿಕ ಪಂಡಿತ್ ಹೇಳಿದ್ದಾರೆ.
"ಎಳೆ ಮಕ್ಕಳಿಗೆ ಎದೆಹಾಲು ತುಂಬಾನೇ ಮುಖ್ಯ. ಭಾರತದಲ್ಲಿ ಅದೆಷ್ಟೋ ಮಕ್ಕಳು ಈ ಎದೆ ಹಾಲು ಸಿಗದೆ ವಂಚಿತರಾಗುತ್ತಾರೆ. ಇಂತಹವರಿಗಾಗಿ ಎದೆ ಹಾಲು ದಾನ ಮಾಡಿ ಎಂದು ಹೇಳಿದ್ದಾರೆ. ಅಂತಹ ಮಕ್ಕಳಿಗೆ ಸಹಾಯ ಮಾಡಲಿ ಅಂತಾನೇ ಮಿಲ್ಕ್ ಬ್ಯಾಂಕ್ ಶುರುಮಾಡಿದ್ದಾರೆ. " ಎಂದು ಮಿಲ್ಕ್ ಬ್ಯಾಂಕ್ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಎದೆ ಹಾಲನ್ನು ದಾನ ಮಾಡಿ ಎಂದ ರಾಧಿಕಾ ಪಂಡಿತ್
"ಯಾವ ತಾಯಂದಿರಲ್ಲಿ ಅಗತ್ಯಕ್ಕಿಂತ ಹೆಚ್ಚು ಎದೆಹಾಲು ಇದೆ. ಯಾವ ತಾಯಂದಿರು ಎದೆಹಾಲನ್ನು ದಾನ ಮಾಡಬಹುದು ಅಂತಹವರಿಂದ ತುಂಬಾನೇ ಸಹಾಯ ಆಗುತ್ತೆ. ನಿಮ್ಮ ಜಿಲ್ಲೆಗಳಲ್ಲಿ ಈ ಮಿಲ್ಕ್ ಬ್ಯಾಂಕ್ ಇರುತ್ತೆ. ಅಲ್ಲಿ ಬಂದು ನೀವು ದಾನ ಮಾಡಿದರೆ, ಅದೆಷ್ಟೋ ಮಕ್ಕಳಿಗೆ ಸಹಾಯ ಆಗುತ್ತೆ. " ಎಂದು ಎದೆ ಹಾಲಿನ ಮಹತ್ವ ಹಾಗೂ ತಾಯಂದಿರು ಎಲ್ಲಿ ಎದೆ ಹಾಲನ್ನು ನೀಡಬಹುದು ಎಂಬ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಮಾರ್ಚ್ 27ರಂದು ಎದೆ ಹಾಲು ದಾನದ ಬಗ್ಗೆ ಮಾಹಿತಿ ನೀಡಲು ಬೆಂಗಳೂರಿನಲ್ಲಿ ಕಾಲ್ನಡಿಗೆ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ. 'ಎದೆಹಾಲು ದಾನ ಮಾಡಿ, ಜೀವಗಳನ್ನು ಉಳಿಸಿ' ಎಂಬ ಉದ್ದೇಶದಿಂದ ಈ ಜಾಥಾ ಹಮ್ಮಿಕೊಂಡಿದ್ದು, ಅದರಲ್ಲಿ ಭಾಗವಹಿಸುವಂತೆ ರಾಧಿಕಾ ಪಂಡಿತ್ ವಿಡಿಯೋ ಮೂಲಕ ತಮ್ಮ ಅಭಿಮಾನಿಗಳಿಗೆ ಸಂದೇಶ ರವಾನಿಸಿದ್ದಾರೆ.


Click it and Unblock the Notifications











