'ಪಪ್ಪಿ' ಹಿಡಿದು ಬಾಲ ನಟರಿಗೆ ಸೈಕಲ್ ಕೊಡಿಸಿದ ಮೋಹಕತಾರೆ ರಮ್ಯಾ; ಸಿನಿಮಾ ಯಾವಾಗ ನೋಡ್ತಾರೆ?
ಕನ್ನಡ ಚಿತ್ರರಂಗದಲ್ಲಿ ಕಳೆದ ಕೆಲವು ದಿನಗಳಿಂದ ಉತ್ತರ ಕರ್ನಾಟಕ ಭಾಗದ ಬಾಲ ಕಲಾವಿದರ ಸಿನಿಮಾ 'ಪಪ್ಪಿ' ಸದ್ದು ಮಾಡುತ್ತಿದೆ. ಇಬ್ಬರು ಮಕ್ಕಳು ಉತ್ತರ ಕರ್ನಾಟಕ ಶೈಲಿಯಲ್ಲಿ ಡೈಲಾಗ್ ಬಿಟ್ಟು ಸಿನಿಪ್ರಿಯರನ್ನು ಸೆಳೆದಿದ್ದಾರೆ. ಈ ಸಿನಿಮಾ ಟ್ರೈಲರ್ ನೋಡಿನೇ ಕನ್ನಡ ಚಿತ್ರರಂಗದ ದಿಗ್ಗಜರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದರು. ಆ ಸಿನಿಮಾ ಇಂದು (ಮೇ 1) ಬಿಡುಗಡೆಯಾಗಿದೆ. ಇದೇ ಖುಷಿಯಲ್ಲಿ ಆ ಇಬ್ಬರು ಬಾಲ ಕಲಾವಿದರಿಗೆ ರಮ್ಯಾ ವಿಶೇಷವಾದ ಉಡುಗೊರೆಯನ್ನು ಕೊಟ್ಟಿದ್ದಾರೆ.
ಅಂದ್ಹಾಗೆ ಈ 'ಪಪ್ಪಿ' ಸಿನಿಮಾದಲ್ಲಿ ಜಗದೀಶ್ ಕೊಪ್ಪಳ, ಆದಿತ್ಯ ಸಿಂಧನೂರು ಇಬ್ಬರೂ ಬಾಲ ಕಲಾವಿದರಾಗಿ ನಟಿಸಿದ್ದಾರೆ. ಇಬ್ಬರೂ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಕೇವಲ ಟ್ರೈಲರ್ನಿಂದ ಸಿನಿ ಪ್ರೇಮಿಗಳ ಗಮನ ಸೆಳೆದಿದ್ದರು. ಈ ಸಿನಿಮಾ ಚಿತ್ರಮಂದಿರಕ್ಕೆ ಲಗ್ಗೆ ಇಟ್ಟಿದ್ದು, ಪ್ರೇಕ್ಷಕರು ಯಾವ ರೀತಿ ಸಪೋರ್ಟ್ ಮಾಡುತ್ತಾರೆ ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗುತ್ತೆ. ಆದರೆ, ಸಿನಿಮಾ ಬಿಡುಗಡೆ ದಿನವೇ ಈ ಬಾಲ ಕಲಾವಿದರು ಡಬಲ್ ಖುಷಿಯಲ್ಲಿ ಇದ್ದಾರೆ.

ಬಾಲ ಕಲಾವಿದರು ಖುಷಿಯಲ್ಲಿ ಇರುವುದಕ್ಕೆ ಪ್ರಮುಖ ಕಾರಣ ಮೋಹಕತಾರೆ ರಮ್ಯಾ. ಜಗದೀಶ್ ಕೊಪ್ಪಳ ಹಾಗೂ ಆದಿತ್ಯ ಸಿಂಧನೂರು ಇಬ್ಬರಿಗೂ ಅವರು ಇಷ್ಟ ಪಟ್ಟಂತೆ ಸೈಕಲ್ಗಳನ್ನು ಕೊಡಿಸಿ ಖುಷಿ ಪಡಿಸಿದ್ದಾರೆ. ಕನ್ನಡ ಸ್ಟಾರ್ ನಟಿಯೊಬ್ಬರು ಮಕ್ಕಳ ಆಸೆಯನ್ನು ಈಡೇರಿಸಿದ್ದಕ್ಕೆ, ಅವರ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ತಾನೇಕೆ ಇವರಿಗೆ ಸೈಕಲ್ ಕೊಡಿಸಿದೆ ಅನ್ನೋದನ್ನು ಹೇಳಿದ್ದಾರೆ.
ಮೋಹಕತಾರೆ ರಮ್ಯಾ ಹೇಳಿ ಕೇಳಿ ಶ್ವಾನ ಪ್ರಿಯೆ. ಅವರಿಗೆ ಈ ಸಾಕು ಪ್ರಾಣಿಯನ್ನು ಕಂಡರೆ ಎಲ್ಲಿಲ್ಲದ ಪ್ರೀತಿ. ಮನೆಯಲ್ಲಿ ಶ್ವಾನವನ್ನು ಸಾಕಿದ್ದಾರೆ. ಇದು ಅವರ ಇನ್ಸ್ಟಾಗ್ರಾಂ ಪೇಜ್ ಅನ್ನು ನೋಡಿದರೆ ಸುಲಭವಾಗಿ ಗೊತ್ತಾಗುತ್ತೆ. ಈಗ 'ಪಪ್ಪಿ' ಸಿನಿಮಾದ ಬಾಲ ಕಲಾವಿದರೊಂದಿಗೆ ಕನೆಕ್ಟ್ ಆಗಿದ್ದೂ ಕೂಡ ಇದೇ ಕಾರಣಕ್ಕೆ. ಅಷ್ಟಕ್ಕೂ ಟ್ರೈಲ್ ನೋಡಿ ಅವರಿಗೆ ಸೈಕಲ್ ಗಿಫ್ಟ್ ಮಾಡುವುದು ಏನಿತ್ತು? ಅನ್ನೋದನ್ನು ಸೈಕಲ್ ಕೊಡಿಸಿದ ಬಳಿಕ ರಮ್ಯಾ ಅವರೇ ಹೇಳಿಕೊಂಡಿದ್ದಾರೆ.
'ಪಪ್ಪಿ' ಸಿನಿಮಾ ಬಾಲ ಕಲಾವಿದರು ಸಂದರ್ಶನವೊಂದರಲ್ಲಿ ಸೈಕಲ್ ಬೇಕು ಎಂದು ಹೇಳಿಕೊಂಡಿದ್ದರಂತೆ. ಅದನ್ನು ರಮ್ಯಾ ಅವರಿಗೆ ಟ್ಯಾಗ್ ಮಾಡಿದ್ದರು. ಇದನ್ನು ನೋಡಿ ಅವರಿಗೆ ಸೈಕಲ್ ಕೊಡಿಸಬೇಕೆಂದು ಮನಸ್ಸಾಗಿದೆ. ಹೀಗಾಗಿ ಸೈಕಲ್ ಗಿಫ್ಟ್ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ. "ನನಗೆ ಗೊತ್ತಿರಲಿಲ್ಲ. ಇವರು ನನಗೆ ಟ್ಯಾಗ್ ಮಾಡಿದ್ದರು. ಆಗ ನಾನು ಇವರ ಸಂದರ್ಶನ ನೋಡಿದೆ. ಅದರಲ್ಲಿ ನನಗೆ ಸೈಕಲ್ ಬೇಕು ಅಂತ ಹೇಳಿದ್ದರು. ಅದನ್ನು ನೋಡಿ ನನಗೆ ಸೈಕಲ್ ಕೊಡಿಸಬೇಕು ಅಂತ ಅನಿಸಿತು. ಪಾಪ ಅವರು ಕೇಳಿದ್ದಾರೆ. ಅದಕ್ಕೆ ಕೊಡಿಸಿದೆ." ಎಂದು ರಮ್ಯಾ ಹೇಳಿಕೊಂಡಿದ್ದಾರೆ.
ಇದೇ ವೇಳೆ 'ಪಪ್ಪಿ' ಸಿನಿಮಾದ ಬಾಲ ಕಲಾವಿದರು ರಮ್ಯಾಗೆ ನೀವು ಸಿನಿಮಾ ನೋಡಬೇಕು. ಇವತ್ತೇ ನೋಡಬೇಕು ಅಂತ ಹಠ ಹಿಡಿದಿದ್ದರು. ಅದಕ್ಕೆ ರಮ್ಯಾ ಇವತ್ತು ಆಗಲ್ಲ ಆದರೆ, ಸಿನಿಮಾ ನೋಡುತ್ತೇನೆ ಎಂದು ಭರವಸೆ ನೀಡಿದ್ದಾರೆ. ಅಂದ್ಹಾಗೆ 'ಪಪ್ಪಿ' ಸಿನಿಮಾ ಅಪ್ಪಟ ಉತ್ತರ ಕರ್ನಾಟಕದ ಭಾಷೆಯ ಕೌಟುಂಬಿಕ ಸಿನಿಮಾ. ಇಂದು ಗ್ರ್ಯಾಂಡ್ ಆಗಿ ಬಿಡುಗಡೆಯಾಗಿದೆ. ಈ ಸಿನಿಮಾವನ್ನು ನೋಡಿ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮೆಚ್ಚಿಕೊಂಡು ತಂಡಕ್ಕೆ ಬೆಂಬಲವಾಗಿ ನಿಂತಿದ್ದಾರೆ.
'ಪಪ್ಪಿ' ಸಿನಿಮಾವನ್ನು ಆಯುಷ್ ಮಲ್ಲಿ ಆಕ್ಷನ್ ಕಟ್ ಹೇಳಿದದ್ದಾರೆ. ಪ್ರಮುಖ ಪಾತ್ರದಲ್ಲಿ ಜಗದೀಶ್ ಕೊಪ್ಪಳ, ಆದಿತ್ಯ ಸಿಂಧನೂರು, ಅದೃಷ್ಟ ಸಂಕನೂರು, ಋತ್ವಿಕ್ ಬಳ್ಳಾರಿ, ದುರುಗಪ್ಪ ಕಾಂಬ್ಳಿ, ರೇಣುಕಾ, ಆರಾವ ಲೋಹಿತ್ ನಾಗರಾಜ್ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಶ್ರೀಧರ್ ಕಶ್ಯಪ್, ರವಿ ಬಿಲ್ಲೂರ್ ಸಂಗೀತ ನೀಡಿದ್ದಾರೆ. ಬಿ ಸುರೇಶ್ ಬಾಬು ಕ್ಯಾಮರಾ ವರ್ಕ್ ಇದೆ . ವಿಶ್ವ.ಎನ್.ಎಂ ಈ ಸಿನಿಮಾದ ಎಡಿಟರ್. ಈ ಸಿನಿಮಾ ಹಾಸ್ಯದ ಜೊತೆಗೆ ಗಂಭೀರ ವಿಷಯವನ್ನು ಹೇಳುತ್ತಿದೆ.


Click it and Unblock the Notifications











