Actress Ramya: 'ಮೋಹಕತಾರೆ ರಮ್ಯಾಗೆ ಹೃದಯಾಘಾತ' ಇದು ಫೇಕ್.. ಸುಳ್ಳು ಸುದ್ದಿ ಹಬ್ಬಿದ್ದೇಗೆ?
ಇಂದು (ಸೆಪ್ಟೆಂಬರ್ 6) ಬೆಳಗ್ಗೆಯಿಂದ ಮೋಹಕತಾರೆ ರಮ್ಯಾ ಬಗ್ಗೆ ಕೆಟ್ಟ ಸುದ್ದಿಯೊಂದು ಓಡಾಡುತ್ತಿತ್ತು. ತಮಿಳು ಮಾಧ್ಯಮಗಳಲ್ಲಿ ರಮ್ಯಾ ಹೃದಯಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಸುದ್ದಿ ಹಬ್ಬಿಸಲಾಗಿತ್ತು.
ರಮ್ಯಾ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ ಅನ್ನೋ ಸುದ್ದಿ ಹಬ್ಬುತ್ತಿದ್ದಂತೆ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದರು. ಸೋಶಿಯಲ್ ಮೀಡಿಯಾದಲ್ಲೂ ಈ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿತ್ತು.

ಆದರೆ, ಇದು ಸುಳ್ಳು ಸುದ್ದಿ. ಮೋಹಕತಾರೆ ರಮ್ಯಾ ಆರೋಗ್ಯವಾಗಿದ್ದಾರೆ. ಅವ್ರಿಗೆ ಏನೂ ಆಗಿಲ್ಲ ಅಂತ ಆಪ್ತ ಮೂಲಗಳು ತಿಳಿಸಿವೆ. ಶೀಘ್ರದಲ್ಲಿಯೇ ಈ ಸುದ್ದಿಗೆ ಪ್ರತಿಕ್ರಿಯೆ ನೀಡುವ ಸಾಧ್ಯತೆಗಳು ಇವೆ.
ಸುಳ್ಳು ಸುದ್ದಿ ಹಬ್ಬಿದ್ದು ಹೇಗೆ?
ತಮಿಳಿನ ಪಿಆರ್ಓ ಒಬ್ಬರು ದಿಢೀರನೇ ರಮ್ಯಾ/ದಿವ್ಯಾ ಸ್ಪಂದನಾ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಟ್ವೀಟ್ ಮಾಡಿದ್ದರು. ಈ ಟ್ವೀಟ್ ಮಾಡುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದೇ ಟ್ವೀಟ್ ಅನ್ನು ಆಧರಿಸಿ ಕೆಲವು ತಮಿಳು ಮಾಧ್ಯಮಗಳು ಸುದ್ದಿಯನ್ನು ಬಿತ್ತರಿಸಿದ್ದವು. ಇಲ್ಲಿಂದ ರಮ್ಯಾ ಅಭಿಮಾನಿಗಳಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
ಏನಿದು ಘಟನೆ?
ತಮಿಳು ಪಿಆರ್ಓ ಒಬ್ಬರು ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ನಿಧನ ಹೊಂದಿದ್ದ ಹಳೆಯ ಸುದ್ದಿಯನ್ನು ತಡವಾಗಿ ನೋಡಿದ್ದರು. ಸ್ಪಂದನಾ ಅವರನ್ನೇ ದಿವ್ಯಾ ಸ್ಪಂದನಾ ಅಂತ ಕನ್ಫ್ಯೂಸ್ ಆಗಿ, ಅದನ್ನು ಟ್ವೀಟ್ ಮಾಡಿದ್ದಾರೆ. ಅವರು ಈಗ ಆ ಟ್ವೀಟ್ ಅನ್ನು ತೆಗೆದಿದ್ದಾರೆ. ಈಗ ಎಲ್ಲವೂ ಸುಗಮವಾಗಿದೆ." ಎಂದು ರಮ್ಯಾ ಸ್ಪಂದನಾ ಗೆಳೆತಿ ಸುನೈನಾ ಸುರೇಶ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಈಗ ಎಲ್ಲಿದ್ದಾರೆ ರಮ್ಯಾ?
ಮೋಹಕತಾರೆ ರಮ್ಯಾ ಸದ್ಯ ವಿದೇಶ ಪ್ರವಾಸದಲ್ಲಿದ್ದಾರೆ. ವಿಷಯ ಹೊರ ಬೀಳುತ್ತಿದ್ದಂತೆ ಅವರ ಆಪ್ತರು ರಮ್ಯಾರನ್ನು ಸಂಪರ್ಕ ಮಾಡಿದ್ದು, ಮೋಹಕತಾರೆ ಆರೋಗ್ಯವಾಗಿದ್ದಾರೆ ಅನ್ನೋ ಮಾತು ಕೇಳಿಬರುತ್ತಿದೆ. ಸದ್ಯ ರಮ್ಯಾ ಜಿನೇವಾದಲ್ಲಿದ್ದು, ನಾಳೆ (ಸೆಪ್ಟೆಂಬರ್ 6) ಪ್ರಾಗ್ಗೆ ಪಯಣ ಬೆಳೆಸಲಿದ್ದಾರೆ. ಇದೇ ವಾರ ವಿದೇಶ ಪ್ರವಾಸ ಮುಗಿಸಿ ಬೆಂಗಳೂರಿಗೆ ಹಿಂತಿರುಗುತ್ತಿದ್ದಾರೆ ಎಂದು ಆಪ್ತರು ಟ್ವೀಟ್ ಮಾಡುತ್ತಿದ್ದಾರೆ.
'ಉತ್ತರಕಾಂಡ' ಸಿನಿಮಾಗೆ ತಯಾರಿ
ಮೋಹಕತಾರೆ ರಮ್ಯಾ ಸಿನಿಮಾಗೆ ಮತ್ತೆ ಕಮ್ಬ್ಯಾಕ್ ಮಾಡಿದ್ದಾರೆ. ತಮ್ಮದೇ ನಿರ್ಮಾಣದ 'ಸ್ವಾತಿ ಮುತ್ತಿನ ಮಳೆ ಹನಿಯೇ' ರಿಲೀಸ್ ಆಗಬೇಕಿದೆ. ಇನ್ನೊಂದು ಕಡೆ ಡಾಲಿ ಧನಂಜಯ್ ಜೊತೆ ನಟಿಸುತ್ತಿರುವ 'ಉತ್ತರಕಾಂಡ' ಆರಂಭ ಆಗಬೇಕಿದೆ. ಕೆಲವು ದಿನಗಳ ಹಿಂದಷ್ಟೇ ವಿದೇಶದಿಂದ ಕೆಲವು ಫೋಟೊಗಳನ್ನು ಹಂಚಿಕೊಂಡಿದ್ದರು. ಅದರಲ್ಲಿ ಸ್ಲಿಮ್ ಆಗಿದ್ದರು. ಹೀಗಾಗಿ 'ಉತ್ತರಕಾಂಡ' ಮೇಲೆ ಅವರ ಅಭಿಮಾನಿಗಳು ಕಣ್ಣಿಟ್ಟಿದ್ದಾರೆ.


Click it and Unblock the Notifications











