ಮನೆಕೆಲಸದಾಕೆ ಮೇಲೆ ಶ್ರುತಿ ಮಾನನಷ್ಟ ಮೊಕದ್ದಮೆ
ನಟಿ ಶ್ರುತಿ ನುಡಿದಂತೆ ನಡೆದಿದ್ದಾರೆ. ತಮ್ಮ ಮನೆಕೆಲಸದಾಕೆ ಶೋಭಾ ಮೇಲೆ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಅವರು ಮಂಗಳವಾರ (ಆ.12) ಮಾಧ್ಯಮಗಳ ಮೂಲಕ ತಿಳಿಸಿದ್ದರು. ಅದರಂತೆ ಅವರು ಬುಧವಾರ (ಆ.13) ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.
ಈ ಮೂಲಕ ಶ್ರುತಿ ಮತ್ತು ಅವರ ಮನೆಕೆಲಸದಾಕೆ ಶೋಭಾ ಅವರ ನಡುವಿನ ಜಗಳ ಇನ್ನೊಂದು ತಿರುವು ಪಡೆದುಕೊಂಡಿದೆ. ಈ ಹಿಂದೆ ಶ್ರುತಿ ಅವರ ಮೇಲೆ ಶೋಭಾ ಅವರು ಹಲ್ಲೆ ಆರೋಪ ಮಾಡಿ ಬಸವೇಶ್ವರ ಪೊಲೀಸ್ ಠಾಣೆ ಮೆಟ್ಟಿಲನ್ನೂ ಹತ್ತಿದ್ದರು. [ಏನಿದು ಪ್ರಕರಣ? ಮನೆಕೆಲಸದಾಕೆ ಏನು ಆರೋಪಿಸಿದ್ದ]

ನಟಿ ಶ್ರುತಿ ಅವರು ತಮ್ಮ ಮೇಲೆ ಹಲ್ಲೆ ಮಾಡಿ, ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಕಳೆದ ನಾಲ್ಕು ವರ್ಷಗಳಿಂದ ಅವರ ಮನೆಯಲ್ಲಿ ಕೆಲಸ ಮಾಡುತ್ತಿರುವ ಶೋಭಾ ಆರೋಪಿಸಿದ್ದರು. ಆದರೆ ಈ ಆರೋಪಗಳನ್ನು ಶ್ರುತಿ ಅವರು ಸಾರಾಸಗಟಾಗಿ ತಳ್ಳಿ ಹಾಕಿ ಇದು ತಮ್ಮ ವಿರುದ್ಧ ವಿಚ್ಛೇದಿತ ಪತಿ ಚಂದ್ರಚೂಡ್ ಹಾಗೂ ಶೋಭಾ ಮಾಡುತ್ತಿರುವ ಷಡ್ಯಂತ್ರ ಎಂದಿದ್ದರು. [ಹಲ್ಲೆ, ಕೊಲೆ ಬೆದರಿಕೆ ಆರೋಪಕ್ಕೆ ಶ್ರುತಿ ಪ್ರತಿಕ್ರಿಯೆ]
ಶೋಭಾ ಅವರು ನನ್ನ ವಿರುದ್ಧ ಸುಳ್ಳು ಆರೋಪ ಮಾಡಿದ್ದು, ನಂಬಿಕೆ ದ್ರೋಹ ಎಸಗಿರುವ ಅವರಿಂದ ನನ್ನ ಮರ್ಯಾದೆಗೆ ಧಕ್ಕೆಯಾಗಿದೆ. ಶೋಭಾ ತನ್ನ ವಿರುದ್ಧ ಸುಳ್ಳು ಆರೋಪ ಮಾಡಿರುವ ಬಗ್ಗೆ ದಾಖಲೆಗಳಿವೆ ಎಂದಿದ್ದಾರೆ ಶ್ರುತಿ.
ತಾವು ಮಾಡಿರುವ ಆರೋಪಗಳು ಸತ್ಯಕ್ಕೆ ದೂರವಾಗಿವೆ ಎಂದು ಶೋಭಾ ಅವರು ಪೊಲೀಸರ ಮುಂದೆ ಸತ್ಯ ಒಪ್ಪಿಕೊಂಡಿದ್ದಾರೆ ಎಂದು ಶ್ರುತಿ ಹೇಳಿದ್ದಾರೆ. ಇದೀಗ ಶ್ರುತಿ ಮತ್ತು ಅವರ ಮನೆಕೆಲಸದಾಕೆಯ ನಡುವಿನ ಗುದ್ದಾಟಕ್ಕೆ ಹೊಸ ತಿರುವು ಸಿಕ್ಕಿದೆ.
ಆಕೆಯ ಮೇಲೆ ನಾನು ಖಂಡಿತ ಹಲ್ಲೆ ಮಾಡಿಲ್ಲ. ಆಕೆ ನನಗೆ ನಂಬಿಕೆ ದ್ರೋಹ ಮಾಡಿದ್ದು ನಿಜ. ಆಕೆ ಆ ರೀತಿ ಮಾಡಿದ್ದಾರೆ ಎಂದು ಗೊತ್ತಾದ ಕೂಡಲೆ ಮನೆಗೆ ಕರೆಸಿಕೊಂಡು ಬೈದು, ಕೆಲಸದಿಂದ ತೆಗೆದದ್ದೂ ನಿಜ. ಕೆಲಸದಿಂದ ತೆಗೆದಿದ್ದೀನಿ, ಬೈದಿದ್ದೀನಿ. ಆಕೆ ನನಗೆ ಮಾಡಿದ ದ್ರೋಹಕ್ಕೆ ಬೇರೆಯವರಾಗಿದ್ದರೆ ಏನು ಮಾಡುತ್ತಿದ್ದರೋ ಏನೋ ಎಂದು ಶ್ರುತಿ ಆರೋಪ ಕೇಳಿಬಂದಾಗ ಕೂಡಲೆ ಪ್ರತಿಕ್ರಿಸಿದ್ದರು. (ಏಜೆನ್ಸೀಸ್)


Click it and Unblock the Notifications











