"ಈಕೆ ಇರೋವರೆಗೆ ಯಾರಿಗೂ ಏಳಿಗೆ ಇಲ್ಲ" ಅಂತ ಪೋಸ್ಟ್: ಕೊನೆಯ ದಿನಗಳಲ್ಲಿ ಅಪರ್ಣ ಟೀಕಿಸಿದ್ಯಾರು?
ಅಚ್ಚ ಕನ್ನಡದ ನಿರೂಪಕಿ ಅಪರ್ಣ ವಸ್ತಾರೆ ಇತ್ತೀಚೆಗೆ ಶ್ವಾಸಕೋಶದ ಕ್ಯಾನ್ಸರ್ನಿಂದ ಕೊನೆಯುಸಿರೆಳೆದಿದ್ದರು. ಇದು ಕನ್ನಡದ ಅಭಿಮಾನಿಗಳಿಗೆ ದೊಡ್ಡ ಮಟ್ಟಕ್ಕೆ ಶಾಕ್ ಆಗಿತ್ತು. ಯಾವತ್ತೂ ತಮಗಾದ ನೋವನ್ನು ಹೇಳಿಕೊಳ್ಳದೆ,ತಾವೇ ನೋವನ್ನು ಉಂಡು ಇಹಲೋಕ ತ್ಯಜಿಸಿದ್ದರು.
ಆದರೆ, ಅಪರ್ಣ ವಸ್ತಾರೆ ಅವರು ಎರಡು ವರ್ಷಗಳ ಕಾಲ ಕ್ಯಾನ್ಸರ್ನಿಂದ ಬಳಲುತ್ತಿದ್ದರು. ಈ ವೇಳೆ ಇವರಿಗೆ ಹತ್ತಿರವಾಗಿದ್ದವರು ಇವರಿಗೆ ನೋವು ಕೊಟ್ಟಿದ್ದರು. ಅಂತಹ ಸಂದರ್ಭದಲ್ಲಿ ಅಪರ್ಣ ವಸ್ತಾರೆ ತಮ್ಮ ಪತಿಯ ಬಳಿ ನೋವನ್ನು ತೋಡಿಕೊಂಡಿದ್ದರು. ಒಂದು ವರ್ಗ ಸರ್ಕಾರದ ಮುಂದೆ ಅಪರ್ಣ ವಿರುದ್ಧ ಪ್ರತಿರೋಧ ಒಡ್ಡಿದ್ದರು ಎಂದು ರ್ಯಾಪಿಡ್ ರಶ್ಮಿ ಯೂಟ್ಯೂಬ್ ಚಾನೆಲ್ನ ಸಂದರ್ಶನದಲ್ಲಿ ನಾಗರಾಜ್ ವಸ್ತಾರೆ ಹೇಳಿದ್ದಾರೆ. ಅದರದ್ದೊಂದು ಝಲಕ್ ಇಲ್ಲಿದೆ.

ರ್ಯಾಪಿಡ್ ರಶ್ಮಿ ಯೂಟ್ಯೂಬ್ ಚಾನೆಲ್ನಲ್ಲಿ ಅಪರ್ಣ ಪತಿ ನಾಗರಾಜ್ ವಸ್ತಾರೆ ಕೆಲವು ನೋವಿನ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಅಪರ್ಣ ಅವರಿಗೆ ಕೊನೆಯ ದಿನಗಳಲ್ಲಿ ದೈಹಿಕ ನೋವು ಒಂದು ಕಡೆಯಾದರೆ, ಇನ್ನೊಂದು ಕಡೆ ಮಾನಸಿಕ ನೋವು ಕೊಡಲಾಗಿತ್ತು ಎಂದು ಬೇಸರದಿಂದ ಹೇಳಿಕೊಂಡಿದ್ದಾರೆ.
"ಕೆಲವೊಮ್ಮೆ ಈ ವೃತ್ತಿ ಜೀವನದಲ್ಲಿ ಬೇಸರ ಆಗಿದ್ದು ನಿಜ. ಈ ಭಂಡ ಜಗತ್ತಿನಲ್ಲಿ ಇರುವ ಬದಲು ಹೋಗುವುದೇ ಲೇಸು ಅಂತ ಒಂದೆರಡು ಬಾರಿ ಹೇಳಿದ್ದರು. ಏನಾಗಿತ್ತು ಅಂದರೆ, ಅವಳ ಸಮೀಪ ವರ್ತಿಯಲ್ಲಿರುವವರಿಂದ ಕುಟುಕುಗಳು, ಕುಹಕಗಳು ಇದ್ದೇ ಇದ್ದವು. ಆದರೆ, ಅವರಿಗೆ ವಿಷಯ ಗೊತ್ತಿರಲಿಲ್ಲ. ನಿಮಗೆ ಗೊತ್ತಿರಬಹುದು ಕಳೆದ ಐದಾರು ವರ್ಷಗಳಲ್ಲಿ ಸ್ವಾತಂತ್ರ್ಯ ದಿನೋತ್ಸವದ ದಿವಸ, ಗಣರಾಜ್ಯೋತ್ಸವದ ದಿವಸ ಇವರೊಬ್ಬರಿಗೆ ಅವಕಾಶ ಕೊಡುತ್ತಿದ್ದಾರೆ. ನಾವೂ ಇದ್ದೇವೆ ಅಂತ ಒಂದು ದಂಡು ಸರ್ಕಾರದ ಎದುರು ನಿಂತುಕೊಂಡು ಪ್ರತಿರೋಧ ಒಡ್ಡಿದ್ದರು. ಅವರೆಲ್ಲ ಇವಳನ್ನು ಹೇಗೆ ಬಿಂಬಿಸಿದ್ದರು ಅಂದರೆ, ಇವಳು ಅಲ್ಲಿಗೆ ಹೋಗಿ ತಾನಾಗಿಯೇ ಅವಕಾಶ ಗಿಟ್ಟಿಸಿಕೊಳ್ಳುತ್ತಿದ್ದಾಳೆ. ಅದು ಅವಳನ್ನು ತುಂಬಾ ತುಂಬಾನೇ ಕಾಡಿತ್ತು. ಆದರೆ, ಅದ್ಯಾವುದೂ ಸತ್ಯವಲ್ಲ. ಯಾಕಂದ್ರೆ ನನಗೆ ಗೊತ್ತು" ಎಂದು ನಾಗರಾಜ್ ವಸ್ತಾರೆ ಹೇಳಿದ್ದಾರೆ.

ಅಷ್ಟೇ ಅಲ್ಲದೆ, ಯಾರೋ ಒಬ್ಬರು ಅಪರ್ಣ ವಸ್ತಾರೆ ವಿರುದ್ಧ ಫೇಸ್ ಬುಕ್ನಲ್ಲಿ ಪೋಸ್ಟ್ ಮಾಡಿದ್ದನ್ನು ನೆನಪಿಸಿಕೊಂಡಿದ್ದಾರೆ. "ಇಷ್ಟೆಲ್ಲ ಆದ್ಮೇಲೆ ಒಂದು ಪೋಸ್ಟ್ ಬಂತು. ಈಕೆ ಇರುವವರೆಗೆ ಯಾರಿಗೂ ಏಳಿಗೆ ಇಲ್ಲ ಅನ್ನುವಂತಹ ಅರ್ಥದ್ದು. ಅದನ್ನು ನೋಡುತ್ತಿದ್ದಂತೆ ಅವಳು ತುಂಬಾನೇ ರೊಚ್ಚಿಗೆದ್ದು ಬಿಟ್ಟಳು. ಅನವಶ್ಯಕವಾಗಿ ಇನ್ನೊಬ್ಬರ ಕುಲ ಮೂಲವನ್ನ, ಜಾತಿಯ ಮೂಲವನ್ನ ಇಟ್ಕೊಂಡು ಅದರ ಮೇಲೆ ಪ್ರಹಾರ ಮಾಡುವುದು ತುಂಬಾನೇ ಕಷ್ಟದ ಕೆಲಸ." ಎಂದಿದ್ದಾರೆ.
"ಕೆಲವರು ನಿಮಗೆ ಸಂಸ್ಕೃತ ಬಲ್ಲ ಬ್ರಾಹ್ಮಣ ಸುಂದರಿಯರೇ ಬೇಕೆ? ಈ ರೀತಿಯ ಮಾತುಗಳನ್ನು ಆಡುತ್ತಿದ್ದರು. ಈ ರೀತಿಯ ಮಾತುಗಳು ಅವಳಿಗೆ ತುಂಬಾನೇ ನೋವು ತಂದಿತು. ಕೊನೆಗೆ ನಾನು ಸರ್ಕಾರದ ಕಾರ್ಯಕ್ರಮಗಳಲ್ಲಿ ನಾನು ಪಾಲ್ಗೊಳ್ಳುವುದಿಲ್ಲ ಅಂತ ನಿರ್ಧಾರ ಮಾಡಿ ಕಳೆದ ಸೆಪ್ಟೆಂಬರ್ನಿಂದ ಯಾರೇ ಕರೆದರೂ ಹೋಗಲಿಲ್ಲ. ನಿಜವಾದ ವಿಷಯ ಹೇಳುವುದಕ್ಕೆ ಆಗುವುದಿಲ್ಲ." ಎಂದು ನಾಗರಾಜ್ ವಸ್ತಾರೆ ಹೇಳಿದ್ದಾರೆ.
ಕೀಮೊಥೆರಪಿ ಕೊಟ್ಟ ಬಳಿಕ ಅಪರ್ಣ ವಸ್ತಾರೆ ಅವರಿಗೆ ರಿಯಾಕ್ಷನ್ ಆಗುವುದಕ್ಕೆ ಶುರುವಾಗಿತ್ತು. ಮೂರು ತಿಂಗಳು ಬೆಳಗ್ಗೆ ಆಸ್ಪತ್ರೆಯಿಂದ ಕರೆದುಕೊಂಡು ಬಂದರೆ, ಮತ್ತೆ ರಾತ್ರಿ ಕರೆದುಕೊಂಡು ಹೋಗುತ್ತಿದ್ದರು. ಕೆಲವೊಮ್ಮೆ ಮಧ್ಯರಾತ್ರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೂ ಇದೆ. ಯಾರೂ ಸಹಾಯಕ್ಕೆ ಇರುತ್ತಿರಲಿಲ್ಲ ಎಂದು ಈ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.


Click it and Unblock the Notifications










