"ಎಲ್ಲೋ ಕೂತುಕೊಂಡು ನನ್ನ ಬಗ್ಗೆ ಕಾಮೆಂಟ್ ಮಾಡ್ತಾರೆ"; ನಟಿ-ನಿರೂಪಕಿ ಜಾಹ್ನವಿ ಬೇಸರ
ಕನ್ನಡ ಕಿರುತೆರೆಯಲ್ಲಿ ಮಿಂಚುತ್ತಿರುವ ನಿರೂಪಕಿ ಕಮ್ ನಟಿ ಜಾಹ್ನವಿ. ನ್ಯೂಸ್ ಚಾನೆಲ್ಗಳಲ್ಲಿ ಒಂದಿಷ್ಟು ದಿನ ಆಂಕರ್ ಆಗಿ ಗುರುತಿಸಿಕೊಂಡಿದ್ದ ಜಾಹ್ನವಿ ಸದ್ಯಕ್ಕೀಗ ರಿಯಾಲಿಟಿ ಶೋಗಳಲ್ಲಿ ಬ್ಯುಸಿಯಾಗಿದ್ದಾರೆ. 'ಗಿಚ್ಚಿ ಗಿಲಿಗಿಲಿ' ಶೋನಲ್ಲಿ ಭಾಗವಹಿಸಿದ್ದರು. ಇಲ್ಲಿ ಅವರ ನಟನೆ ಬಗ್ಗೆ ಮೆಚ್ಚುಗೆ ಮಾತುಗಳು ಕೇಳಿ ಬಂದಿದ್ದವು.
ನ್ಯೂಸ್ ಚಾನೆಲ್ಗಳ ನಿರೂಪಣೆ ಜೊತೆ ಜೊತೆಗೆ ರಿಯಾಲಿಟಿ ಶೋನಲ್ಲಿ ಬ್ಯುಸಿಯಾಗಿರುತ್ತಿದ್ದ ನಟಿಗೆ ಸಿನಿಮಾಗಳಲ್ಲಿ ನಟಿಸುವ ಅವಕಾಶವೂ ಬಂದಿತ್ತು. ಬಿಗ್ಬಾಸ್ ಸೀಸನ್ 9ರ ವಿನ್ನರ್ ರೂಪೇಶ್ ಶೆಟ್ಟಿ ನಟಿಸುತ್ತಿರುವ 'ಅಧಿಪತ್ರ' ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಇನ್ನೂ ರಿಲೀಸ್ ಆಗಬೇಕಿದೆ.

ಜಾಹ್ನವಿ ಸದ್ಯ ಟಿವಿ, ರಿಯಾಲಿಟಿ ಶೋ ಹಾಗೂ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಕನ್ನಡ ಪಿಚ್ಚರ್ ಯೂಟ್ಯೂಬ್ ಚಾನೆಲ್ಗೆ ಸಂದರ್ಶನ ಕೊಟ್ಟಿದ್ದು, ಇದರಲ್ಲಿ ಟ್ರೋಲ್ ಮಾಡುವವರು, ಕೆಟ್ಟ ಕಾಮೆಂಟ್ಗಳನ್ನು ಮಾಡುವವರ ಬಗ್ಗೆ ಓಪನ್ ಆಗಿ ಮಾತಾಡಿದ್ದಾರೆ.
ಯಾರೇ ಆಗಿದ್ದರೂ ಸ್ವಲ್ಪ ಹೆಸರು ಮಾಡುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುವುದಕ್ಕೆ ಶುರು ಮಾಡುತ್ತಾರೆ. ಪಬ್ಲಿಕ್ ಲೈಫ್ಗೆ ಬಂದ್ಮೇಲೆ ಇದೆಲ್ಲ ಕಾಮನ್ ಆಗಿದ್ದರೂ, ಅದನ್ನು ಕೆಲವರಿಗೆ ಇಂತಹ ಸಂದರ್ಭಗಳನ್ನು ಡೀಲ್ ಮಾಡುವುದಕ್ಕೆ ಪರದಾಡುತ್ತಾರೆ. ಆ ಬಗ್ಗೆ ನಿರೂಪಕಿ, ನಟಿ ಜಾಹ್ನವಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
"ಪಬ್ಲಿಕ್ ಲೈಫ್ಗೆ ಬಂದ್ವಿ ಅಂದಾಗ ಏನಾದರೂ ಮಾತಾಡುತ್ತಾರೆ. ನಮ್ಮೂರು ಸಕಲೇಶಪುರದಲ್ಲಿ ಇದ್ದಾಗ ನಮ್ಮದೊಂದು ಗ್ಯಾಂಗ್ ಇತ್ತು. ಅಲ್ಲಿಂದ ಏನೇನೋ ಗಾಸಿಪ್ಗಳು ಬರುತ್ತಲೇ ಇತ್ತು. ಗೋವಾಗೆ ಹೋಗಿದ್ದರಂತೆ ಅಂತೆಲ್ಲ ಗಾಸಿಪ್ ಬರೋದು. ನಾನು ಮದುವೆ ಆದ್ಮೇಲೆ ಗೋವಾ ನೋಡಿದ್ದು. ನನಗೆ ಅವಾಗೆಲ್ಲ ಶಾಕ್ ಆಗೋದು. ನಾವು ಇಲ್ಲೇ ಇದ್ದೀವಪ್ಪ ಯಾರು ಹುಟ್ಟಿಸುತ್ತಾರೆ ಅಂತ. ಆಗ ಬೇಜಾರಾಗೋದು. ಇನ್ನೇನು ಬೇರೆ ಬೇರೆ ತರ ಗಾಸಿಪ್ಗಳೆಲ್ಲ ಬರೋದು." ಎಂದು ಜಾಹ್ನವಿ ಹೇಳಿಕೊಂಡಿದ್ದಾರೆ.
ತಮ್ಮ ಜೀವನದಲ್ಲಿ ಏನು ನಡೀತಿದೆ? ನಾವೇನು ಮಾಡುತ್ತಿದ್ದೇವೆ ಅನ್ನೋದೆ ಗೊತ್ತಿರಲ್ಲ. ಸುಮ್ಮನೆ ಎಲ್ಲೋ ಕೂತು ಕಾಮೆಂಟ್ಗಳನ್ನು ಮಾಡುತ್ತಾರೆ ಎಂದು ಜಾಹ್ನವಿ ಬೇಸರ ವ್ಯಕ್ತಪಡಿಸಿದ್ದಾರೆ. "ಎಲ್ಲೋ ಕೂತುಕೊಂಡು ಏನೋ ಕಾಮೆಂಟ್ ಮಾಡುತ್ತಿರುತ್ತಾರೆ. ನಮ್ಮ ಬಗ್ಗೆ ಗೊತ್ತಿರಲ್ಲ. ನಮ್ಮ ಜೀವನದಲ್ಲಿ ಏನಾಗುತ್ತಿದೆ ಅನ್ನೋದು ಗೊತ್ತಿರಲ್ಲ. ಏನು ಮಾಡುತ್ತಿರುತ್ತೇವೆ ಅನ್ನೋದು ಗೊತ್ತಿಲ್ಲ. ಅವರ ಕಲ್ಪನೆಗೆ ತಕ್ಕಂತೆ ಏನೋ ಮಾಡಿದಾಗ, ಪಾಪ ಇನ್ನೇನು ಮಾಡೋಕೆ ಆಗುತ್ತೆ. ಏನೋ ಮಾಡಿದ್ದಾರೆ ಅಂತ ನಾನು ತುಂಬಾ ಓದುವುದಕ್ಕೂ ಹೋಗಲ್ಲ." ಎಂದಿದ್ದಾರೆ.

ಇತ್ತೀಚೆಗೆ ತಮ್ಮ ಬಗ್ಗೆ ಬಂದಿದ್ದ ಸುದ್ದಿಯೊಂದರ ಬಗ್ಗೆನೂ ಜಾಹ್ನವಿ ಮಾತಾಡಿದ್ದಾರೆ. "ಯಾವುದೋ ಒಂದು ಯೂಟ್ಯೂಬ್ ಚಾನೆಲ್ ನಾನು ಅವರಿಗೆ ಇಂಟರ್ವ್ಯೂನೇ ಕೊಟ್ಟಿರಲ್ಲ. ಸುಮ್ ಸುಮ್ಮನೆ ಸುದ್ದಿಗಳನ್ನು ಬರೆದಿರುತ್ತಾರೆ. ನಾನು ಯಾವಾಗ ಹೋಗಿ ಹೇಳಿದೆ ಅಂತ ಅನಿಸುತ್ತಿರುತ್ತೆ. ಏನೂ ಮಾಡುವುದಕ್ಕೆ ಆಗಲ್ಲ. ತುಂಬಾ ಸೀರಿಯಸ್ ಆಗಿ ತೆಗೆದುಕೊಂಡರೆ, ನಮ್ಮ ತಲೆ ಕೆಡುತ್ತೆ. ಅಂತಹವರು ಇದ್ದೇ ಇರುತ್ತಾರೆ. ನಾನು ಯಾವಾಗಿದ್ದರೂ ನನ್ನ ಮನಸ್ಸಿಗೆ ಬೆಲೆ ಕೊಡೋದು ಜಾಸ್ತಿ. ನಾನು ತಪ್ಪು ಮಾಡಿದ್ದೇನಾ ಇಲ್ವಾ ಅಂತ ನನ್ನ ಮನಸ್ಸಿಗೆ ಗೊತ್ತಾಗುತ್ತೆ. ಅದನ್ನು ಬೇರೆ ಯಾರೂ ಹೇಳುವುದು ಬೇಕಾಗಿಲ್ಲ. ಆ ಮಟ್ಟಿಗೆ ಸಂಸ್ಕಾರದಲ್ಲಿ ಬೆಳೆದಿರೋರು ನಾವು. ನನಗೇನು ಸರಿಯಿದೆ ಅನಿಸಿರುತ್ತಲ್ಲ ಅದರಲ್ಲಿ ನನಗೆ ತೃಪ್ತಿ ಇರುತ್ತೆ ನಾನು ಆರಾಮಾಗಿ ಮಲಗುತ್ತೇನೆ." ಎಂದು ಜಾಹ್ನವಿ ಹೇಳಿದ್ದಾರೆ.
ಕೆಲವು ಕಡೆ ಹೋದಾಗ ಜನರು ಜಾಹ್ನವಿಗೆ ಪ್ರಶಂಸೆ ವ್ಯಕ್ತಪಡಿಸುತ್ತಾರೆ. ಅವರಷ್ಟೇ ಎತ್ತರಕ್ಕೆ ಬೆಳೆದ ಮಗನನ್ನು ನೋಡಿ ಸಂತೂರ್ ಮಮ್ಮಿ ಅಂತ ಕರೆಯುತ್ತಾರೆ ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
"ಒಂದು ಆಸೆ ಅಂತ ಇದ್ದರೆ ಲೇಟಾಗಿದ್ದರೂ ಫುಲ್ಫಿಲ್ ಆಗುತ್ತೇನೋ. ಆಸೆ ಇರಬೇಕು, ಅದಕ್ಕೆ ಬೇಕಾಗಿರೋ ಡೆಡಿಕೇಷನ್ ಇರಬೇಕು. ಹೌದು ಕೆಲವು ಕಡೆ ಸಂತೂರ್ ಮಮ್ಮಿ ಅಂತಾರೆ. ನಿಮಗೆ ಮದುವೆ ಆಗಿದೆಯಾ ಅಂತಾರೆ. ನಿಮಗೆ ಮದುವೆ ಆಗಿದೆಯಾ ಅಂತಾರೆ. ಇಷ್ಟೆಲ್ಲ ಆದ್ಮೇಲೂ ಅವಕಾಶಗಳು ಸಿಗುತ್ತಿದೆಯಲ್ಲ ಅದಕ್ಕೆ ಖುಷಿಯಾಗುತ್ತಿದೆ. ಹೆಣ್ಮಕ್ಕಳು ಮದುವೆ ಆದ್ಮೇಲೆ ಅವಕಾಶ ಇರಲ್ಲ. ಸಿನಿಮಾಗಳು ಸಿಗೋದಿಲ್ಲ ಅಂತಾರೆ. ಹೆಣ್ಮಕ್ಕಳು ಫಿಟ್ ಆಗಿದ್ದರೆ, ನೋಡುವುದಕ್ಕೆ ಚೆನ್ನಾಗಿದ್ದರೆ, ಆಸಕ್ತಿ ಇದ್ದರೆ, ಅವಕಾಶ ಕೊಡಬೇಕು." ಎಂದು ಹೇಳಿದ್ದಾರೆ.


Click it and Unblock the Notifications











