ಹಾಸ್ಯ ನಟ ಮಿತ್ರನ ಬಾಳಲ್ಲಿ 'ರಾಗ' ಎಫೆಕ್ಟ್; 8 ವರ್ಷ ಪೊಲೀಸ್ ಕೇಸ್.. ರೌಡಿಸಂ.. ಏನೆಲ್ಲ ಆಯ್ತು?
ಹಾಸ್ಯ ಮಿತ್ರ ಯಾರಿಗೆ ಗೊತ್ತಿಲ್ಲ ಹೇಳಿ. ಭಟ್ಟರು ನಿರ್ದೇಶಿಸಿದ 'ಮನಸಾರೆ' ಸಿನಿಮಾ ಬಟ್ಟೆ ಬೇಡ ಡೈಲಾಗ್ ಇಂದಿಗೂ ಟ್ರೋಲ್ ಮಂದಿಯ ಫೇವರಿಟ್. 'ಅಧ್ಯಕ್ಷ' ಸಿನಿಮಾ ವಕೀಲನ ಪಾತ್ರ. 'ರಾಗ' ಸಿನಿಮಾದ ರೋಲ್ ಇದ್ಯಾವುದನ್ನು ಕನ್ನಡಿಗರು ಮರೆಯುವುದಕ್ಕೆ ಸಾಧ್ಯವೇ ಇಲ್ಲ. ಹೊಟ್ಟೆ ಹಿಡಿದುಕೊಂಡು ನಗುವಷ್ಟು ನಗು ತರಿಸುತ್ತಿದ್ದ ಮಿತ್ರ ಒಂದಿಷ್ಟು ಕಣ್ಮರೆಯಾಗಿದ್ದರು. ಸಿನಿಮಾದಲ್ಲಿ ಕಾಣಿಸುತ್ತಲೇ ಇರಲಿಲ್ಲ.
ಹಾಸ್ಯ ಪಾತ್ರಗಳಲ್ಲಿ ಮಿಂಚುತ್ತಿದ್ದ ನಟ ಮಿತ್ರ ಎಲ್ಲಿಗೆ ಹೋದ್ರು? ಅವರಿಗೆ ಯಾಕೆ ಅವಕಾಶಗಳು ಸಿಗುತ್ತಿಲ್ಲ? ಅನ್ನೋ ಪ್ರಶ್ನೆಗಳು ಹಾಸ್ಯ ಪ್ರಿಯರನ್ನು ಕಾಡಿದ್ದು ಇದೆ. ಆದರೆ, ಅದೆಲ್ಲದಕ್ಕೂ ಉತ್ತರ ಕೊಡುವ ಮನಸ್ಸಿದ್ದರೂ, ತೆರೆಮರೆಗೆ ಸರಿದಿದ್ದರಿಂದ ಅದಕ್ಕೂ ಅವಕಾಶವಿರಲಿಲ್ಲ. ಸುಮಾರು 8 ವರ್ಷ ಜೀವನದಲ್ಲಿ ಬರೀ ಸೋಲನ್ನೇ ಕಂಡಿದ್ದ ಈ ನಟನ ಪಾಡು ಹೇಳತೀರದು.

'ರಾಗ' ಅನ್ನುವ ಸಿನಿಮಾವನ್ನು ನಿರ್ಮಾಣ ಮಾಡಿ, ಅದರಿಂದ ನಷ್ಟ ಅನುಭವಿಸಿದ ಬಳಿಕ ಅವರ ಬದುಕಿನಲ್ಲಿ ಏನೆಲ್ಲ ಬದಲಾವಣೆ ಆಯ್ತು? ಅವರ ಕಷ್ಟದ ದಿನಗಉ ಹೇಗಿದ್ದವು? ಅನ್ನೋದನ್ನು ಕನ್ನಡ ಪಿಕ್ಚರ್ ಯೂಟ್ಯೂಬ್ ಸಂದರ್ಶನದಲ್ಲಿ ಸ್ವತ: ಕನ್ನಡದ ಹಾಸ್ಯ ನಟ ಮಿತ್ರ ಸವಿಸ್ತಾರವಾಗಿ ಹೇಳಿಕೊಂಡಿದ್ದಾರೆ. ಅದರದ್ದೊಂದು ಝಲಕ್ ಇಲ್ಲಿದೆ.
ಹಾಸ್ಯ ನಟ ಮಿತ್ರ ತನ್ನ ವೃತ್ತಿ ಬದುಕಿನ ಪೀಕ್ನಲ್ಲಿದ್ದ ಕಾಲದಲ್ಲಿ 'ರಾಗ' ಅನ್ನುವ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದರು. ಆ ಸಿನಿಮಾಗೆ ಅವರೇ ಹೀರೊ. ಸುಮಾರು 5 ರಿಂದ 6 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಸಿನಿಮಾ ನಿರ್ಮಾಣ ಆಗಿತ್ತು. ಎಲ್ಲರೂ 'ಬಾಹುಬಲಿ 2' ಸಮಯದಲ್ಲಿ ರಿಲೀಸ್ ಮಾಡಿಬೇಡಿ ಅಂತ ಹೇಳಿದ್ದರೂ ಕೇಳದ ಮಿತ್ರ ಓವರ್ ಕಾನ್ಫಿಡೆನ್ಸ್ನಲ್ಲಿ ಬಿಡುಗಡೆ ಮಾಡಿದ್ದರು. ಅದರಿಂದ ಸಿಕ್ಕಾಪಟ್ಟೆ ಲಾಸ್ ಆಗಿತ್ತು.
"ಬಾಹುಬಲಿ ಮುಂದೆ ಸಿನಿಮಾವನ್ನು ರಿಲೀಸ್ ಮಾಡಬೇಡಿ ಎಂದು ಎಲ್ಲರೂ ಹೇಳಿದ್ದರು. ಆದರೆ, ನನ್ನ ತಲೆಗೆ ಮಂಕು ಕವಿದಿತ್ತು. ಅಹಂಕಾರ ಜಾಸ್ತಿ ಆಗಿತ್ತು. ಕೊಬ್ಬಿನ ಮನುಷ್ಯ ಆಗಿದ್ದೆ. ಯಾರ ಮಾತನ್ನೂ ಕೇಳದ ಮನುಷ್ಯ ಆಗಿದ್ದೆ. ಕನ್ನಡ ಸಿನಿಮಾವೇನು ಬಾಹುಬಲಿ ಮುಂದೆ ನಿಂತುಕೊಳ್ಳುವುದಕ್ಕೆ ಆಗುವುದಿಲ್ಲವೇನು? ಅಂತ ನಾನು ಆಸೆ ಪಟ್ಟಂತೆ ಕಪಾಲಿ ಚಿತ್ರಮಂದಿರದಲ್ಲಿ ಏಪ್ರಿಲ್ 21ನೇ ತಾರೀಕು ಮಗಳ ಹುಟ್ಟುಹಬ್ಬದಂದು ಸಿನಿಮಾ ರಿಲೀಸ್ ಮಾಡಿದೆ. ಇಷ್ಟು ಕೋಟಿ ಕೊಡ್ತೀನಿ ಸಿನಿಮಾ ಕೊಡಿ ಅಂತ ಬಂದರೂ ನನಗೆ ಓವರ್ ಕಾನ್ಫಿಡೆನ್ಸ್ ಇತ್ತು. ಸಿನಿಮಾ ಕೊಡಲಿಲ್ಲ." ಎಂದು ನಟ ಮಿತ್ರ ಹೇಳಿಕೊಂಡಿದ್ದಾರೆ.

ಜಯಣ್ಣ ಭೋಗೇಂದ್ರ ಅಂತಹ ವಿತರಕರೇ 'ರಾಗ' ರಿಲೀಸ್ ಮಾಡಲು ಸರಿಯಾದ ಸಮಯ ಅಲ್ಲ ಎಂದಿದ್ದರು. ರಾಜಕುಮಾರ, ಹೆಬ್ಬುಲಿ, ದರ್ಶನ್ ಸಿನಿಮಾ 'ಚಕ್ರವರ್ತಿ' ಇದೆ. ಇನ್ನೊಂದು ಕಡೆ ಬಾಹುಬಲಿ ಬರುತ್ತಿದೆ. ನೀವು ಮಧ್ಯದಲ್ಲಿ ಸಿಕ್ಕಿಕೊಳ್ಳುತ್ತೀರಾ ಅಂದಿದರೂ ಮಿತ್ರ ಕೇಳಿರಲಿಲ್ಲ. ಯಾಕಂದ್ರೆ, "ಟ್ರೈಲರ್ ಮೂರು ವಾರ ಟ್ರೆಂಡಿಂಗ್ನಲ್ಲಿದೆ. ಸಾಂಗ್ಸ್ 16 ರಿಂದ 18ಲಕ್ಷಕ್ಕೆ ಜೀ ನವರು ತಗೊಂಡಿದ್ದಾರೆ. ನನ್ನ ರೇಂಜ್ ಬೇರೆ. ಮುಂದಿನ ಸಿನಿಮಾಗೆ ಪ್ಲಾನ್ ಮಾಡ್ರಿ ಅಂತ ಹೇಳಿದ್ದೆ. ಅಂದು ನಾನು ಮಾತಾಡಿಲ್ಲ. ನನ್ನ ಸೊಕ್ಕು, ನನ್ನ ದುರಹಂಕಾರ, ಓವರ್ ಕಾನ್ಫಿಡೆನ್ಸ್ ಮಾತಾಡಿತ್ತು. ಸಿನಿಮಾ ಸೋಲುತ್ತೆ. ಸಾಲಗಾರನಾಗ್ತೀನಿ. ತಲೆ ಮರೆಸಿಕೊಂಡು ಓಡಾಡುವ ಪರಿಸ್ಥಿತಿ ಬರುತ್ತೆ." ಎಂದು ಮಿತ್ರ ಹೇಳಿಕೊಂಡಿದ್ದಾರೆ.
ಒಂದು ಸಿನಿಮಾದ ಸೋಲು ಮಿತ್ರರನ್ನು ಸಂಕಷ್ಟಕ್ಕೆ ಸಿಲುಕಿಸುತ್ತೆ. ಒಂದೆರಡು ವರ್ಷ ಬರೋಬ್ಬರಿ ಎಂಟು ವರ್ಷ. ಇವರ ಹೊಟೇಲ್ ಉಧ್ಯಮ ಬಿದ್ದು ಹೋಗುತ್ತೆ. 14 ಸ್ಟಾರ್ಟ್ ಅಪ್ಗಳು ಸೋಲುತ್ತವೆ. "ನನ್ನ ಹೊಟೇಲ್ ಉದ್ಯಮ ಬಿದ್ದು ಹೋಗುತ್ತೆ. ಇನ್ನೊಂದು ಹೊಟೇಲ್ ಕೂಡ ಬಿದ್ದು ಹೋಗುತ್ತೆ. ಅದೂ ಕೂಡ ಲಾಸ್ ಆಗುತ್ತೆ. ಒಂದು ಸಿನಿಮಾ ಫ್ಲಾಪ್ ಆಯ್ತು. ಈ ಎಂಟು ವರ್ಷದಲ್ಲಿ 14 ಸ್ಟಾರ್ಟ್ ಅಪ್ ಮಾಡುತ್ತೇನೆ. 14ನ್ನೂ ಕಳೆದುಕೊಳ್ಳುತ್ತೇನೆ. ನಾನು ಮಾಡದೇ ಇರೋ ತಪ್ಪಿಗೆ, ಮಾಡಿರೋ ತಪ್ಪಿಗೆ ಎಲ್ಲವೂ ಬರುತ್ತೆ. ಕೋರ್ಟ್ ಕೇಸ್ಗಳಾಗುತ್ತವೆ. ಪೊಲೀಸ್ ಕೇಸ್ಗಳಾಗುತ್ತವೆ. ರೌಡಿಸಂ ಎಂಟ್ರಿ ಆಗುತ್ತೆ. ಏನು ಮಾಡಿದರೂ ತಪ್ಪು, ಅವಕಾಶಗಳಿಲ್ಲ, ಸಿನಿಮಾಗಳಿಲ್ಲ ಎನ್ನುವಂತಾಗಿತ್ತು." ಎಂದು ಕನ್ನಡ ಪಿಕ್ಚರ್ಗೆ ಹೇಳಿದ್ದಾರೆ.
ಕನ್ನಡದ ಶಿಸ್ತಿನ ನಟ ಆರ್ಥಿಕ ವಿಚಾರದಲ್ಲಿ ಶಿಸ್ತನ್ನು ಕಳೆದುಕೊಂಡಿದ್ದರು. ಪ್ರತಿಯೊಂದು ಬ್ಯುಸಿನೆಸ್ನಲ್ಲೂ ಶತ್ರುಗಳು ಹುಟ್ಟಿಕೊಂಡಿದ್ದರು. "ಸರಿಯಾದ ಸಮಯಕ್ಕೆ ಹಣ ಕೊಡುವುದು ಮಿಸ್ ಆಯ್ತು. ಒಂದೊಂದು ವ್ಯಾಪಾರದಲ್ಲೂ 10 ಜನ ಶತ್ರುಗಳು ಹುಟ್ಕೊಂಡ್ರು. ಈ ಎಂಟು ವರ್ಷ 14 ಸ್ಟಾರ್ಟ್ಅಪ್, 150 ಜನ ಶತ್ರುಗಳು ಹುಟ್ಟುಕೊಂಡಿದ್ದರು. ಅದು ನಾನೇ ಹುಟ್ಟಿಸಿಕೊಂಡಿದ್ದು. ಅವರು ಕೆಟ್ಟವರಲ್ಲ." ಎಂದು ಹೇಳಿದ್ದಾರೆ. ಸದ್ಯಕ್ಕೀಗ ಸಾಲಗಳನ್ನು ತೀರಿಸಿ, ಮತ್ತೆ 'ಕರಾವಳಿ' ಸೇರಿದಂತೆ ಹಲವು ಸಿನಿಮಾಗಳಲ್ಲಿ ಮತ್ತೆ ಆಕ್ಟಿವ್ ಆಗಿದ್ದಾರೆ.


Click it and Unblock the Notifications











