"ಎಷ್ಟೋ ದಿನ ನಿನ್ನ ಹೆಸರೇನು ಅಂತ ಕೇಳಿರಲ್ಲ.. ದೇವಸ್ಥಾನದಲ್ಲಿ ಕೂತಿದ್ದಾಗ ಹಣ ಹಾಕಿದ್ರು" - ದುನಿಯಾ ಸೂರಿ
ದುನಿಯಾ ಸೂರಿ ಸಿನಿಮಾಗಳು ಬಾರದೇನೆ ಅದೆಷ್ಟೋ ದಿನಗಳಾಗಿದ್ದವು. ಕೊನೆಗೂ ಈಗ 'ಬ್ಯಾಡ್ ಮ್ಯಾನರ್ಸ್' ಬಿಡುಗಡೆಗೆ ಸಜ್ಜಾಗಿದೆ. ಇದೇ ತಿಂಗಳು (ನವೆಂಬರ್) ಸಿನಿಮಾ ಅದ್ಧೂರಿಯಾಗಿ ಬಿಡುಗಡೆಗೆ ವೇದಿಕೆ ಸಜ್ಜಾಗಿದೆ. ಇಲ್ಲಿವರೆಗೂ ಸಿನಿಮಾ ಬಗ್ಗೆ ಒಂದೇ ಒಂದು ಮಾತಾಡಿರದ ದುನಿಯಾ ಸೂರಿ ಈಗ ಅಖಾಡಕ್ಕೆ ಇಳಿದಿದ್ದಾರೆ.
ದುನಿಯಾ ಸೂರಿ ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಎರಡನೇ ಸಿನಿಮಾ ನಿರ್ದೇಶಿಸೋ ಜವಾಬ್ದಾರಿ ಹೊತ್ತಿದ್ದರು. ಆದರೆ, ಈ ಸಿನಿಮಾ ಅಂದುಕೊಂಡಿದ್ದಕ್ಕಿಂತ ಹೆಚ್ಚು ಸಮಯ ಹಿಡಿದಿದೆ. ಒಂದೊಂದು ಸೀನ್ ಅನ್ನೂ ಪರ್ಫೆಕ್ಟ್ ಆಗಿ ಬರೋವರೆಗೂ ಬಿಟ್ಟಿಲ್ಲ ಅನ್ನೋದು ಚಿತ್ರತಂಡದಿಂದ ಸಿಕ್ಕಿರೋ ಮಾಹಿತಿ.

ರಗಡ್ ಸಿನಿಮಾಗಳನ್ನು ತೆಗೆಯೋದ್ರಲ್ಲಿ ದುನಿಯಾ ಸೂರಿ ಫೇಮಸ್. ಅದಕ್ಕೆ ಇವರನ್ನು ಸೂಕ್ಕಾ ಸೂರಿ ಅಂತಲೂ ಕರೆಯುತ್ತಾರೆ. 'ಬ್ಯಾಡ್ ಮ್ಯಾನರ್ಸ್' ಸಿನಿಮಾ ಪ್ರಚಾರದಲ್ಲಿರೀ ಸೂರಿ ಗೌರೀಶ್ ಅಕ್ಕಿ ಸ್ಟುಡಿಯೋಗೆ ಸಂದರ್ಶನ ನೀಡಿದ್ದಾರೆ. ಈ ವೇಳೆ ಹಲವು ಗಂಭೀರ ವಿಷಯಗಳನ್ನು ತಮಾಷೆಯಾಗಿ ಹೇಳಿದ್ದಾರೆ. ಎಷ್ಟೋ ದಿನ ನಿನ್ನ ಹೆಸರೇನು ಅಂತ ಕೇಳೋರೆ ಇರಲಿಲ್ಲ. ದೇವಸ್ಥಾನದಲ್ಲಿ ಕೂತಿದ್ದಾಗ ಯಾರೋ ಹಣ ಹೋಗಿದ್ದ ವಿಷಯವನ್ನು ಸ್ವಾರಸ್ಯಕರವಾಗಿ ವಿವರಿಸಿದ್ದಾರೆ.
"ಹೆಸರು ಕೇಳಿದರೆ ತಬ್ಬಿಬ್ಬಾಗುತ್ತೆ"
ಮೂರು ವರ್ಷಗಳಿಂದ ದುನಿಯಾ ಸೂರಿ ನಿರ್ದೇಶಿಸಿದ ಒಂದೇ ಒಂದು ಸಿನಿಮಾ ರಿಲೀಸ್ ಆಗಿರಲಿಲ್ಲ. 2020ರಲ್ಲಿ ನಿರ್ದೇಶಿಸಿದ್ದ 'ಪಾಪ್ ಕಾರ್ನ್ ಮಂಕಿ ಟೈಗರ್' ಕೊನೆಯ ಸಿನಿಮಾ ಆಗಿತ್ತು. ಈಗ ಮೂರು ವರ್ಷಗಳ ಬಳಿಕ ಬ್ಯಾಡ್ ಮ್ಯಾನರ್ಸ್ ಸಿನಿಮಾ ರಿಲೀಸ್ ಆಗುತ್ತಿದೆ. ಈ ಲಾಂಗ್ ಗ್ಯಾಪ್ ವೇಳೆ ಸೂರಿಗಾದ ಅನುಭವವನ್ನು ಗೌರೀಶ್ ಅಕ್ಕಿ ಸ್ಟುಡಿಯೋದಲ್ಲಿ ಹೇಳಿದ್ದಾರೆ."ಎಷ್ಟು ಸಿನಿಮಾ ಮಾಡಿದ್ದೀವಿ ಅಂತ ಗೊತ್ತಾಗಲ್ಲ. ಆ ನಂಬರ್ಗಳನ್ನು ಎತ್ತಿ ಸೈಡಿಗೆ ಇಟ್ಟರೆ ಕೆಲಸಕ್ಕೆ ಬರೋದಿಲ್ಲ. ಯಾರಾದರೂ ಬಂದು ಹಿಂದೆ ಈ ಪಿಕ್ಚರ್ ಮಾಡಿದ್ದೀರಾ ಅಂದರೂ ಗೊತ್ತಾಗಲ್ಲ. ಒಮ್ಮೆ ಬಂದು ಹೆಸರು ಕೇಳಿದರೆ ತಬ್ಬಿಬಾಗಿಬಿಡುತ್ತೆ. ನಿಮ್ಮ ಹೆಸರೇನು ಅಂತ ಯಾರೂ ಕೇಳಿನೇ ಇರೋದಿಲ್ಲ. ಎಷ್ಟೋ ದಿನಗಳಾಗಿರುತ್ತೆ." ಎಂದು ದುನಿಯಾ ಸೂರಿ ಹೇಳಿದ್ದಾರೆ.
"ಆಟೋ ಡ್ರೈವರ್ ಅಂದುಕೊಂಡ್ರು"
"ಮೊನ್ನೆ ನಾನು ಬೇಕರಿಯಲ್ಲಿ ಏನೋ ತೆಗೆದುಕೊಂಡು ಬಂದೆ. ಅಲ್ಲೊಂದು ಆಟೋ ಬಂದು ನಿಂತಿದೆ. ನಾನು ಬರುವಷ್ಟರಲ್ಲಿ ನಾಲ್ಕೈದು ಜನ ಬಂದು ನಿಂತಿದ್ದರು. ಅವರಲ್ಲಿ ಯಾರೋ ಬಂದು ಬನ್ನಿ ಹೋಗೋಣ ಅಂದರು. ಆಗ ನನಗೆ ಅರ್ಥ ಆಯ್ತು ನಾನು ಖಾಕಿ ಶರ್ಟ್ ಹಾಕಿದ್ದೀನಿ. ಅದಕ್ಕೆ ಕರೀತಿದ್ದಾರೆ ಅವರು. ನಾನು ಇದು ನನ್ನ ಆಟೋ ಅಲ್ಲ ಅಂದೆ. ಅವರು ಹೊರಟು ಹೋದ್ರು." ಎಂದು ಬೇಕರಿ ಹೋಗಿ ಹಿಂತಿರುಗುವಾಗ ನಡೆದ ಘಟನೆಯನ್ನು ವಿವರಿಸಿದ್ದಾರೆ.

"ಬ್ಯಾಂಕ್ ಮ್ಯಾನೇಜರ್ ಅಲ್ವಾ?"
ಮತ್ತೊಂದು ಸಂದರ್ಭದಲ್ಲಿ ದುನಿಯಾ ಸೂರಿ ರಸ್ತೆ ದಾಟುವಾಗ ಪಕ್ಕದಲ್ಲಿ ಬಂದು ನಿಂತವರು ಬ್ಯಾಂಕ್ ಮ್ಯಾನೇಜರ್ ಅಂದುಕೊಂಡಿದ್ದರು. ಈ ಘಟನೆಯನ್ನು ವಿವರಿಸಿದ್ದಾರೆ. "ಇನ್ನೊಂದು ದಿನ ರೋಡ್ ದಾಟುವಾಗ ಪಕ್ಕದಲ್ಲಿ ಬಂದು ನಿಂತರು. ಅವರು ನಿಮ್ಮ ಬ್ಯಾಂಕ್ನಲ್ಲಿ ಸ್ವಲ್ಪ ಮಾತಾಡಿ ಅಂದರು. ಬ್ಯಾಂಕ್ ಏನು ಅಂದೆ? ಅದಕ್ಕೆ ಅವರು ನೀವು ಬ್ಯಾಂಕ್ ಮ್ಯಾನೇಜರ್ ಅಲ್ವಾ ಅಂದರು." ಎಂದು ಸೂರಿ ಹೇಳಿದ್ದಾರೆ.
"ದೇವಸ್ಥಾನದಲ್ಲಿ ಕೂತಿದ್ದಾಗ ಕಾಯಿನ್ ಹಾಕಿದ್ರು"
"ನನ್ನ ಸ್ನೇಹಿತರು ಸಚ್ಚಿ ನಾನು ಎಲ್ಲೋ ಕೂತಿದ್ದಾಗ ಯಾರೋ ಬಂದು ಕಾಯಿನ್ ಹಾಕಿ ಹೋಗಿದ್ದೂ ಇದೆ. ಟೆಂಪಲ್ ಹತ್ತಿರ ಎಲ್ಲೋ ಕೂತಿದ್ದೆವು. ಕಾಯಿನ್ ಹಾಕಿ ಹೊರಟು ಹೋದರು. ಯಾರು ಯಾರಿಗೋ ಹೇಗೇಗೋ ಕಾಣಿಸುತ್ತೇವೆ ನಾವು. ಅದಕ್ಕೆ ಹೇಳೋದು ಇಲ್ಲಿ ಎಲ್ಲರಿಗೂ ಒಂದು ಕಾಸ್ಟ್ಯೂಮ್ ಇದೆ. ಪೊಲೀಸರಿಗೆ ಖಾಕಿ ಕೊಟ್ಟಿದ್ದೀವಿ. ಡಾಕ್ಟರ್ಗೆ ಒಂದು ಕೊಟ್ಟಿದ್ದೀವಿ. ಇಲ್ಲಾ ಅಂದರೆ ಕಂಡು ಹಿಡಿಯೋದಕ್ಕೆ ಆಗೋದಿಲ್ಲ." ಎಂದು ದುನಿಯಾ ಸೂರಿ ಸಂದರ್ಶನದಲ್ಲಿ ಹೇಳಿದ್ದಾರೆ.


Click it and Unblock the Notifications











