ಕನ್ನಡಿಗ ನೋಡಿ ಸರ್ ಅಂತ ಕಾಲ್ ಮಾಡಿದ್ದೆ ಗುರುಗಳು ಎತ್ತಲಿಲ್ಲ: ಕೆವಿ ರಾಜು ಅಗಲಿಕೆಗೆ ಗಿರಿರಾಜ್ ಭಾವುಕ ಪತ್ರ
ಕನ್ನಡ ಚಿತ್ರರಂಗದ ಕ್ರಾಂತಿಕಾರಿ ನಿರ್ದೇಶಕ ಕೆವಿ ರಾಜು. ಇವರೊಂದಿಗೆ ಸಹಾಯಕರಾಗಿ ಕೆಲಸ ಮಾಡಿದ ಅದೆಷ್ಟೋ ಮಂದಿ ಸ್ವತಂತ್ರ್ಯ ನಿರ್ದೇಶಕರಾಗಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆಯೂರಿದ್ದಾರೆ. ನಿಷ್ಠೂರವಾದಿಯಾಗಿಯೇ ಗುರುತಿಸಿಕೊಂಡಿದ್ದ ಕೆವಿ ರಾಜು, ಸಮಾಜದಲ್ಲಿ ನಡೆಯುವ ಅನ್ಯಾಯದ ವಿರುದ್ಧವೇ ಸಾಕಷ್ಟು ಬಹುತೇಕ ಕಥೆಗಳನ್ನು ಹೆಣೆಯುತ್ತಿದ್ದರು. ಅದಕ್ಕೆ ಇಂದಿಗೂ ಅವರನ್ನು ರೆಬೆಲ್ ಡೈರೆಕ್ಟರ್ ಅಂತಲೇ ಕರೆಯುತ್ತಾರೆ.
ಕೆವಿ ರಾಜು ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಇಂದು( ಡಿಸೆಂಬರ್24) ಕೆವಿ ರಾಜು ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ಕೆವಿ ರಾಜು ಅವರ ಅಗಲಿಕೆ ಕನ್ನಡ ಚಿತ್ರರಂಗಕ್ಕೆ ಮತ್ತೊಂದು ನೋವು ತಂದೊಡ್ಡಿದೆ. ರೆಬೆಲ್ ನಿರ್ದೇಶಕರ ಶಿಷ್ಯ ವೃಂದ ಗುರುಗಳ ಸಾವಿನ ಸುದ್ದಿ ಕೇಳಿ ಕಣ್ಣೀರು ಹಾಕಿದೆ. ಇವರಲ್ಲಿ ಕನ್ನಡ ಸಿನಿಮಾದ ನಿರ್ದೇಶಕ ಗಿರಿರಾಜ್ ತಮ್ಮ ಗುರುಗಳನ್ನು ನೆನೆದು ಭಾವುಕ ಪತ್ರ ಬರೆದಿದ್ದು, ಅದರ ಸಾರಾಂಶ ಹೀಗಿದೆ.

ಸಿನಿಮಾ ನೋಡಿ ಈ ಶಾಟ್ ಹಿಂಗೆ ತೆಗಿಬೇಕಿತ್ತು ಅಂತಿದ್ರು
"ನನ್ನ ಸಿನಿಮಾಗಳನ್ನೆಲ್ಲ ನೋಡಿ, ನನ್ನನ್ನು ಕರೆದು 'ಈ ಶಾಟ್ ಹಿಂಗೆ ತೆಗಿಬೇಕಿತ್ತು' ಅಂತೆಲ್ಲ ನನ್ನ ತಪ್ಪುಗಳನ್ನೆಲ್ಲ ನನಗೆ ಹೇಳುತ್ತಿದ್ದರು. ಮರು ಕ್ಷಣವೇ ಯಾರಾದರೂ ಬಂದರೆ 'ಇವನೊಂದು ಸಿನಿಮಾ ಮಾಡಿದ್ದಾನೆ ನೋಡಿದ್ಯಾ? ಇಲ್ವಾ? ನೇಣು ಹಾಕೊಂಡು ಸಾಯಿ' ಅಂತ ಅವರನ್ನು ಬಯ್ದಿದ್ದು ನೋಡಿದ್ದೀನಿ. ಕೆಲವರು ಫೋನ್ ಮಾಡಿ ರಾಜು ಸರ್ ನಿಮ್ಮ ಬಗ್ಗೆ ಹೊಗಳ್ತಾ ಇದ್ದರು ಅಂತ ಅಂತಿದ್ದರು. ಆದರೆ ಅವರು ಮಾತ್ರ ಎದುರು ಸಿಕ್ಕಿದಾಗೆಲ್ಲ 'ಅದೇನೊ ಒಳ್ಳೆ ಲೌಡ ತರಹ ತೆಗೆದಿದ್ದೀಯಾ' ಅಂತಲೇ ಬಯ್ಯುತ್ತಿದ್ದರು." ಎಂದು ಗುರುಗಳನ್ನು ನೆನಪಿಸಿಕೊಂಡಿದ್ದಾರೆ.

ನಾನವರ ಶಿಷ್ಯ ಅಂತ ಅವರೆಲ್ಲೂ ಹೇಳಿಲ್ಲ
"ನಾನವರ ಶಿಷ್ಯ ಅಂತ ಅವರೆಲ್ಲೂ ಹೇಳಿಲ್ಲ. ಅದಕ್ಕೆ ಅವರೇ ಹೇಳಿದ್ದು 'ಶಿಷ್ಯ ಆದರೆ ಒಂದಾ ನಾನೇ ನಿನ್ನ ಬೆರಳು ಕೇಳ್ತಿನಿ. ಇಲ್ಲಾ ನೀನೇ ಧರ್ಮರಾಯನ ತರಹ ಸುಳ್ಳು ಹೇಳಿ ನನ್ನ ತಲೆ ತೆಗಿತೀಯ. ಒಳ್ಳೆಯ ಡೈರೆಕ್ಟರ್ ಆಗು ಅಂತಷ್ಟೇ ಹೇಳಿದರು. ಅವರು ಒಪ್ಪದೇ ಇದ್ದರೂ, 80ರ ದಶಕದಲ್ಲಿ ಹುಟ್ಟಿ ಕನ್ನಡ ಸಿನಿಮಾ ನೋಡಿ ಬೆಳೆದು ಇವತ್ತು ಇಂಡಸ್ಟ್ರಿಯಲ್ಲಿ ಸಕ್ರೀಯರಾಗಿರುವ ಅರ್ಧಕರ್ಧ ಜನ ಅವರನ್ನ ಮಾನಸ ಗುರು ಅಂತಲೇ ಒಪ್ಕೊತಾರೆ." ಎಂದು ಕೆವಿ ರಾಜು ಅವರನ್ನು ನೆನೆಪಿಸಿಕೊಂಡಿದ್ದಾರೆ.

ರಾಜ್ಯ ಪ್ರಶಸ್ತಿ ತೆಗೆದುಕೊಳ್ಳಲು ಹಿಂದೇಟು
"ಸತ್ತಂತಿಹನು ಬಡಿದೆಚ್ಚರಿಸು ಅನ್ನೊ ಕುವೆಂಪು ಅವರ ಘೋಷ ವಾಕ್ಯವನ್ನು ಯಾರಾದರು ಅಂತರ್ಗತ ಮಾಡ್ಕೊಂಡು ಬದುಕಿದ್ದು ನಾನು ನೋಡಿದ್ದು ಕೆ.ವಿ.ರಾಜು ಸರ್ ಅಲ್ಲಿ ಮಾತ್ರ. ಎಂತಹವನಾದರೂ ಅವರ ಜೊತೆ ಅರ್ಧ ಗಂಟೆ ಆಪ್ತವಾಗಿ ಮಾತಾಡಿದ್ದಿದ್ದರೆ, ಸುಮ್ಮನೆ ಕೂತ್ಕೊಳಕ್ಕಾಗ್ತಿರಲಿಲ್ಲ. ಏನಾದರೂ ಮಾಡಬೇಕು ಅಂತ ಎದ್ದು ನಿಲ್ಲುತ್ತಿದ್ದರು. ಅವರ ಸಿನಿಮಾದಂತೆ ಅವರ ವ್ಯಕ್ತಿತ್ವವೂ ಡೈನಾಮಿಕ್ ಆಗೇ ಇತ್ತು. ಸಮಾಜದ ಶೋಷಣೆಯ ಬಗ್ಗೆ ಜ್ವಾಲಾಮುಖಿಯಷ್ಟು ಸಿಟ್ಟಿತ್ತು. ಸಂದರ್ಶನ ಕೊಡುವುದಕ್ಕೂ ಒಪ್ತಾ ಇರದಿದ್ದ ಸರ್ ಗೆ ರಾಜ್ಯ ಪ್ರಶಸ್ತಿ ಕೊಡ್ತೀವಿ ಅಂದಾಗ, ಏಯ್ ಹೋಗ್ರೊ. ನನಗೂ ಅವಾರ್ಡ್ ಕೊಡ್ತಾರೆ. ಹಿಪೋಕ್ರೇಟ್ಗಳಿಗೂ ಅವಾರ್ಡ್ ಕೊಡ್ತಾರೆ. ಅವಾರ್ಡಿಗೆ ಮರ್ಯಾದೆ ಇಲ್ಲದಿದ್ದರೂ ನನಗೆ ಮರ್ಯಾದೆ ಇಲ್ವ ಅಂತ ಎಂದಿನಂತೆ ಎಲ್ಲರನ್ನೂ ಬಯ್ತಾ ತಗಳಲ್ಲ ಅಂದರು. ಎಲ್ಲ ಆಪ್ತರು, ಶಿಷ್ಯ ಕೋಟಿ ಹೋಗಿ ಇಮೋಷನಲ್ ಬ್ಲಾಕ್ಮೇಲ್ ಮಾಡಿ ಅವಾರ್ಡ್ ತಗೊಳ್ಳೊ ಹಂಗೆ ಮಾಡಿದರು. ಮನೆಗೆ ಮುಟ್ಟುವಷ್ಟರಲ್ಲಿ ಎಲ್ಲೊ ಅದನ್ನು ಕಳ್ಕೊಂಡರು ಅಂತ ಸುದ್ದಿಯಾಯ್ತು. ಕೊನೆಗೆ ಇಲ್ಲ ಮನೆಯವರೇ ಜೋಪಾನವಾಗಿಟ್ಟು ಕೊಂಡಿದ್ದಾರೆ ಅಂತ ಗೊತ್ತಾಯ್ತು." ಎನ್ನುತ್ತಾರೆ ನಿರ್ದೇಶಕ ಗಿರಿರಾಜ್.

ಬಿಗ್ ಬಿ ತಡವಾಗಿ ಬಂದಿದ್ದಕ್ಕೆ ಶೂಟಿಂಗ್ ಪ್ಯಾಕಪ್
"ಕನ್ನಡಿಗ ನೋಡಿ ಸರ್ ಅಂತ ಹೇಳಲು ಕಾಲ್ ಮಾಡಿದ್ದೆ. ಎತ್ತುತ್ತ ಇರಲಿಲ್ಲ. ಈಗ ಈ ಸುದ್ದಿ. ಆದರೆ ಅವರನ್ನ ನೆನೆಸಿಕೊಂಡರೇ ಸಾಕು, ಮೈ ಎಲ್ಲಾ ಮಿಂಚಿನ ಸಂಚಾರವಾಗುತ್ತೆ. ಒಮ್ಮೆ ಅಮಿತಾಬ್ ಬಚ್ಚನ್ ಅವರನ್ನ ಡೈರೆಕ್ಟ್ ಮಾಡಬೇಕಾದರೆ ಒಂದು ದಿನ ಹೇಳಿದ್ದ ಟೈಮಿಗೆ ಅಮಿತಾಬ್ ಅವರು ಬಂದಿರಲಿಲ್ಲ. ಸಾಮಾನ್ಯವಾಗಿ ಎಂದೂ ತಡ ಮಾಡದವರು ಅವತ್ತು ಎರಡು ತಾಸು ತಡ ಮಾಡಿದರಂತೆ. ಆಗ ಅವರ ಅಸಿಸ್ಟೆಂಟ್ ಒಬ್ಬ ಅವರ ಗಾಡಿ ಬಂದಿದ್ದನ್ನ ನೋಡಿ, 'ಸಾಬ್ ಆಗಯೆ. ಸಾಬ್ ಆಗಯೆ' ಅಂತ ಕಿರುಚುತ್ತಲೆ ಬಂದ್ನಂತೆ. ಎರಡು ತಾಸು ಒಂದೇ ಕಡೆ ಕೂತಿದ್ದ ರಾಜು ಸರ್, ಎದ್ದು ಆ ಹುಡುಗನ ತಲೆಗೆ ಮೊಟಕಿ, 'ಯಹಾಂ ಸಾಬ್ ಮೈ ಹೂಂ. ಉನ್ಕೊ ಬೋಲೊ ಪ್ಯಾಕಪ್' ಅಂತಂದರಂತೆ. ಇದು ಊಹಿಸಲೂ ಸಾಧ್ಯ ಇರದ ಘಟನೆಯಾಗಿದ್ದರಿಂದ, ನಮಗೆಲ್ಲಾ ದಂತಕಥೆಯಾಗೇ ಉಳಿದು ಬಿಟ್ಟಿದೆ. ಹೋಗಿ ಬನ್ನಿ ಸರ್. ನಿಮ್ಮ ಹಾಡು ಹಾಡ್ಕೊಂಡೇ ಇರ್ತಿವಿ. ಸೋಲೆ ಇಲ್ಲ.. ನಿಮ್ಮ ಹಾಡು ಹಾಡುವಾಗ." ಹೀಗೆ ನೆನಪಿಸಿಕೊಳ್ಳುತ್ತಾರೆ ಗಿರಿರಾಜ್.


Click it and Unblock the Notifications











