"ವಿಷ ಕುಡಿದ್ರೆ, ಆಸ್ಪತ್ರೆಗೆ ಹಾಕಿ ಕಕ್ಕಿಸ್ಬಹುದು, ಅದೇ... ಹೀಗಾದ್ರೆ?"- ಸೊಸೆಯ ವರದಕ್ಷಿಣೆ ದೂರಿಗೆ ಎಸ್.ನಾರಾಯಣ್ ಟಾಂಗ್
ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಎಸ್.ನಾರಾಯಣ್ ವಿರುದ್ಧ ವರದಕ್ಷಿಣೆ ಕೇಸ್ ದಾಖಲಾಗಿದೆ. ಎಸ್.ನಾರಾಯಣ್ ಪುತ್ರ ಪವನ್ ಅವರ ಪತ್ನಿ ಪವಿತ್ರಾ ದೂರನ್ನು ದಾಖಲಿಸಿದ್ದು, ಈಗಾಗಲೇ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಪವಿತ್ರಾ ಮಾವ ಎಸ್.ನಾರಾಯಣ್ ಹಾಗೂ ಅವರ ಪತ್ನಿ,ಮಗನ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಎಸ್.ನಾರಾಯಣ್, ಪತ್ನಿ ಭಾಗ್ಯಲಕ್ಷ್ಮಿ ಹಾಗೂ ಪತಿ ಪವನ್ ವರದಕ್ಷಿಣೆಗಾಗಿ ಪೀಡಿಸುತ್ತಿದ್ದರೆಂದು ಆರೋಪ ಮಾಡಿದ್ದಾರೆ. ಕಳೆದ ಒಂದು ವರ್ಷದಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದು, ಗಂಡ ಹಾಗೂ ಪುತ್ರನ ಜವಾಬ್ದಾರಿಯನ್ನು ತಾವೇ ನೋಡಿಕೊಳ್ಳುತ್ತಿದ್ದೇನೆ. ಈಗಾಗಲೇ ಹಲವು ಬಾರಿ ಮನೆಯಿಂದ ಹಣವನ್ನು ತಂದು ಕೊಟ್ಟಿದ್ದು, ಆದರೂ ಪದೇ ಪದೆ ಹಣ ಕೇಳುತ್ತಿದ್ದಾರೆಂದು ಆರೋಪಿಸಿದ್ದಾರೆ.

ಸೊಸೆ ವರದಕ್ಷಿಣೆ ಕೇಸ್ ಅನ್ನು ದಾಖಲಿಸುತ್ತಿದ್ದಂತೆ ಮಾಧ್ಯಮಗಳಿಗೆ ಕನ್ನಡದ ಹಿರಿಯ ನಿರ್ದೇಶಕ ಎಸ್.ನಾರಾಯಣ್ ಪ್ರತಿಕ್ರಿಯೆ ನೀಡಿದ್ದಾರೆ. ಸೊಸೆ ಮಾಡಿರುವ ಆರೋಪಕ್ಕೆ ತಿರುಗೇಟು ಕೊಟ್ಟಿದ್ದಾರೆ. ಸೊಸೆಯ ವಿರುದ್ಧ ಸಮಾಧಾನವಾಗಿಯೇ ಆಕ್ರೋಶ ಹೊರಹಾಕಿದ್ದಾರೆ. ಅಷ್ಟಕ್ಕೂ ಎಸ್. ನಾರಾಯಣ್ ತಮ್ಮ ವಿರುದ್ಧ ದಾಖಲಾಗಿರುವ ವರದಕ್ಷಣೆ ಕೇಸ್ ವಿರುದ್ಧ ಏನು ಹೇಳಿದ್ದಾರೆ ಅನ್ನೋದನ್ನು ನೋಡುವುದಾರರೆ.. ಅದರ ಝಲಕ್ ಇಲ್ಲಿದೆ.
ಮನೆ ಬಿಟ್ಟು ಹೋಗಿ 14 ತಿಂಗಳಾಗಿವೆ
ತಮ್ಮ ಮೇಲೆ ಮಾಡಿರುವ ಆರೋಪಕ್ಕೆ ನಿರ್ದೇಶಕ ಎಸ್.ನಾರಾಯಣ್ ಟಿವಿ9ಗೆ ನೀಡಿದ ಪ್ರತಿಕ್ರಿಯೆಯಲ್ಲಿ ಸೊಸೆಗೆ ತಿರುಗೇಟು ಕೊಟ್ಟಿದ್ದಾರೆ. "ಅವರು ಮನೆ ಬಿಟ್ಟು ಹೋಗಿ 14 ತಿಂಗಳಾಗಿತ್ತು. ಕಳೆದ ವರ್ಷ ಜುಲೈ ತಿಂಗಳಲ್ಲಿ ಮನೆ ಬಿಟ್ಟು ಹೋಗುತ್ತಾರೆ. ಅಂದು ಅವರು ಮನೆ ಬಿಟ್ಟು ಹೋಗುವ ವಿಚಾರ ನನಗೆ ಗೊತ್ತಿರಲಿಲ್ಲ. ನಾವು ಈ ರೀತಿ ಮಾಡಿದ್ದರೆ, ಅಂದೇ ದೂರನ್ನು ಕೊಡಬೇಕಿತ್ತು. ಯಾಕೆ ಆ ಸಮಯದಲ್ಲಿ ನಿದ್ದೆ ಮಾಡುತ್ತಿದ್ರಾ? ಇನ್ನು ವರದಕ್ಷಿಣೆ ವಿಷಯಕ್ಕೆ ಬಂದರೆ, 60ನೇ ದಶಕದಲ್ಲಿ ನನ್ನ ತಂದೆ ವರದಕ್ಷಿಣೆ ವಿರುದ್ಧ ದೊಡ್ಡ ಅಭಿಯಾನ ಮಾಡಿದ್ದರು. ಅಂತಹವರ ಮಗ ನಾನು. ಅಲ್ಲದೆ ನನ್ನ ಸಿನಿಮಾದ ಮುಖಾಂತರ ವರದಕ್ಷಿಣೆ ಪಿಡುಗು ತೊಡಗಿಸಬೇಕು ಅಂತ ಸಿನಿಮಾ ಮಾಡಿದವನು. ನಮ್ಮ ಕುಟುಂಬದಲ್ಲಾಗಲಿ, ಪರಂಪರೆಯಲ್ಲಾಗಲಿ ಇದೆಲ್ಲವೂ ಸಾಧ್ಯವೇ ಇಲ್ಲ." ಎಂದಿದ್ದಾರೆ ಎಸ್.ನಾರಾಯಣ್.
ಈ ಕೇಸ್ ಕೋರ್ಟ್ನಲ್ಲಿದೆ
"ಹೆಣ್ಣು ಮಕ್ಕಳಿಗೆ ಬೇರೆ ಅಸ್ತ್ರ ಸಿಗುವುದಿಲ್ಲ. ಹಾಗಾಗಿ ಇಂತಹದ್ದೊಂದು ಅಸ್ತ್ರವನ್ನು ಬಳಸುತ್ತಿದ್ದಾರೆ. ಸದ್ಯ ಈ ಕೇಸ್ ಕೋರ್ಟ್ನಲ್ಲಿ ಇದೆ. ನಾವು ಅಲ್ಲಿಗೆ ಹೋಗಬೇಕಿದೆ. ಹೀಗಾಗಿ ನಾನು ಅವರ ಬಗ್ಗೆ ಹೆಚ್ಚೇನು ಹೇಳುವುದಕ್ಕೆ ಇಷ್ಟ ಪಡುವುದಿಲ್ಲ." ಎಂದೂ ಎಸ್.ನಾರಾಯಣ್ ಹೇಳಿದ್ದಾರೆ.

ಪ್ರೀತಿಸಿ ಮದುವೆ ಆಗಿದ್ದರು
"ಇವರಿಬ್ಬರೂ ಪ್ರೀತಿಸಿ ಮದುವೆ ಆಗಿದ್ದಾರೆ. ಅವರ ಮನೆಯವರಿಗೆ ಗೊತ್ತಿದ್ದು, ಕೊನೆಯ ಕ್ಷಣದಲ್ಲಿ ಬಂದು ನನಗೆ ಹೇಳುತ್ತಾರೆ. ನಾವು ವಿರೋಧ ಮಾಡಿಲ್ಲ. ಇಬ್ಬರನ್ನೂ ಮದುವೆ ಮಾಡಿ ಕೊಟ್ಡಿದ್ವಿ. ಒಂದು ಕುಟುಂಬಕ್ಕೆ ಸೊಸೆಯಾಗಿ ಬಂದ್ಮೇಲೆ ಆ ಕುಟುಂಬದ ಸಂಸ್ಕೃತಿ-ಸಂಸ್ಕಾರ ಅವರು ಬದುಕಿ ಬಾಳಿದ ಹಿನ್ನೆಲೆಯನ್ನು ಅರ್ಥ ಮಾಡಿಕೊಂಡು ಅಲ್ಲಿ ಬಾಳುವುದನ್ನು ಕಲಿಯಬೇಕು. ನಾವೆಲ್ಲ ಬುದ್ದಿ ಹೇಳುವುದಕ್ಕೆ ಆಗುವುದಿಲ್ಲ. ಇವತ್ತಿನ ಪೀಳಿಗೆ ಹಿರಿಯರು ಹೇಳಿದ ಯಾವುದೇ ಮಾತುಗಳನ್ನು ಕೇಳಿಸಿಕೊಳ್ಳುವುದಕ್ಕೆ ಸಿದ್ಧರಿರುವುದಿಲ್ಲ. ಇದು ದೊಡ್ಡ ದುರಂತ. ಹಾಗಾಗಿ ಮೌನವಾಗಿಬಿಡುತ್ತೆ" ಎಂದಿದ್ದಾರೆ.
ವಿಷ ಕುಡಿದಿದ್ರೆ..
"ಇದು ಬಗೆಹರಿಯುವಂತಹ ವಿಷಯ ಆಗಿದ್ದರೆ, ಅದು ಬಗೆ ಹರಿಯುತ್ತಿತ್ತು. ಇದು ಬಗೆಹರಿಸುವಂತಹ ವಿಷಯ ಅಲ್ಲವೇ ಅಲ್ಲ ಇದು. ವಿಷ ಕುಡಿದಿದ್ದರೆ, ಆಸ್ಪತ್ರೆಗೆ ಹಾಕಿ ವಿಷ ಕಕ್ಕಿಸಬಹುದು. ನೇಣು ಹಾಕಿಕೊಂಡರೆ ಏನು ಮಾಡೋದು. ಆ ತರಹದ ಪರಿಸ್ಥಿತಿಯಿದೆ. ನಮ್ಮ ಎಲ್ಲಾ ಅಸ್ತ್ರಗಳನ್ನು ಬಳಸಿದ್ವಿ. ಅದು ಆಗಲಿಲ್ಲ. ಅದಕ್ಕೆ ನೋಡೋಣ. ಕೋರ್ಟ್ಗೆ ಹೋಗ್ತೀವಿ. ಏನು ಹೇಳ್ಬೇಕೋ ಹೇಳ್ತೀನಿ" ಎಂದು ಎಸ್.ನಾರಾಯಣ್ ಪ್ರತಿಕ್ರಿಯೆ ನೀಡಿದ್ದಾರೆ.


Click it and Unblock the Notifications











