"ಯಾವಾಗ ಬಂದ್ರೂ, ಯಾವಾಗ ಅಂದ್ರೂ, ಅದೇನೆ ಪರಿಸ್ಥಿತಿ ಇದ್ರೂ, ನಾನು ಸಿನಿಮಾ ಮಾಡ್ತೀನಿ"; ತರುಣ್ ಸುಧೀರ್
ದರ್ಶನ್ ಸದ್ಯದ ಪರಿಸ್ಥಿತಿ ಕಂಡು ಅವರ ಆಪ್ತರು ಕಂಗಾಲಾಗಿದ್ದಾರೆ. ದರ್ಶನ್ ತಪ್ಪು ಮಾಡಿದ್ದಾರೋ ಇಲ್ಲವೋ? ಗೊತ್ತಾಗದೇ ತಲೆ ಕೆಡಿಸಿಕೊಂಡಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ದರ್ಶನ್ ಬಗ್ಗೆ ಹೇಗೆ ಪ್ರತಿಕ್ರಿಯಿಸಬೇಕು ಅನ್ನೋದು ತಿಳಿಯುತ್ತಿಲ್ಲ. ಅದರಲ್ಲಿ ನಿರ್ದೇಶಕ ತರುಣ್ ಸುಧೀರ್ ಕೂಡ ಒಬ್ಬರು.
ದರ್ಶನ್ ಬಂಧನವಾಗಿ ಒಂದು ತಿಂಗಳಾಗಿದೆ. ಇಲ್ಲಿವರೆಗೂ ದರ್ಶನ್ಗೆ ಆಪ್ತರಾಗಿರುವ ನಿರ್ದೇಶಕ ತರುಣ್ ಸುಧೀರ್ ಪ್ರತಿಕ್ರಿಯೆ ನೀಡಿರಲಿಲ್ಲ. ಕೊನೆಗೂ ಪ್ರತಿಕ್ರಿಯೆ ನೀಡಿದ್ದು, ದರ್ಶನ್ ಬಗ್ಗೆ ಭಾವುಕರಾಗಿ ಮಾತಾಡಿದ್ದಾರೆ. ಈ ಘಟನೆ ತಮ್ಮ ಮನಸ್ಸಿಗೆ ನೋವಾಗಿದೆ. ತನ್ನ ಅಣ್ಣನಿಗೆ ಹೀಗೆನಾದರೂ ಆಗಿದ್ದರೆ ಎಷ್ಟು ನೋವಾಗುತ್ತಿತ್ತೋ ಅಷ್ಟೇ ನೋವಾಗಿದೆ ಎಂದು ಹೇಳಿಕೊಂಡಿದ್ದಾರೆ.

ದರ್ಶನ್ ಬಂಧನದ ಬಳಿಕ ತನ್ನ ಮನಸ್ಸಿಗೆ ನೋವಾಗಿದೆ ಎಂದು ತರುಣ್ ಸುಧೀರ್ ಹೇಳಿಕೊಂಡಿದ್ದಾರೆ. "ನನಗೆ ಹೇಗೆ ಪ್ರತಿಕ್ರಿಯೆ ನೀಡಬೇಕು ಅಂತ ಗೊತ್ತಾಗುತ್ತಿಲ್ಲ. ಮನಸ್ಸಿಗಂತೂ ನೋವಾಗಿದೆ. ಆ ಕಡೆ ರೇಣುಕಾಸ್ವಾಮಿಯವರ ಕುಟುಂಬ ಆಗಿರಬಹುದು. ಅವರ ಬಗ್ಗೆನೂ ಅಪಾರವಾದ ನೋವಿದೆ ನನಗೆ. ಇಂತಹದ್ದೊಂದು ಘಟನೆ ಆಗಬಾರದಿತ್ತು. ಆದರೆ, ಇಲ್ಲೂ ಕೂಡ ನನ್ನ ಕುಟಂಬನೇ ಇದೆ. ಈಗ ನನ್ನ ಅಣ್ಣನೇ ಹೀಗೆ ಏನಾದರೂ ಮಾಡಿದ್ದಾನೆ ಅಂದರೆ ಹೇಗೆ ನೋವಾಗುತ್ತೋ, ಅದೇ ನೋವಿನಲ್ಲೇ ನಾನು ಇದ್ದೀನಿ." ಎಂದು ಹೇಳಿದ್ದಾರೆ.
ದರ್ಶನ್ ಕೇಸ್ಗೆ ಸಂಬಂಧಿಸಿದಂತೆ ಕೋರ್ಟ್ನಲ್ಲಿ ಸತ್ಯಾಂಶ ಹೊರಗೆ ಬರುತ್ತೆ ಎಂದಿದ್ದಾರೆ. "ಈಗಲೂ ನನಗೆ ಅನಿಸುತ್ತಿದ್ದಿದ್ದು ಏನಂದರೆ, ನನ್ನದೇನು ತಪ್ಪಿಲ್ಲ ಅಂತ ಆಚೆ ಬರಬಹುದಲ್ವಾ? ಅದೇ ಆಗತ್ತೇನೋ ಅನ್ನುವ ನಂಬಿಕೆ ಮೇಲೆ ನಾನು ಇದ್ದೀನಿ. ಯಾಕಂದ್ರೆ, ನಮ್ಮದೇ ಆದಂತಹ ಒಂದು ಎಮೋಷನ್ಸ್ ಇರುತ್ತೆ. ನಾವು ಒಂದೊಂದು ಕಡೆ ವಾಲುತ್ತೇವೆ. ನನಗೆ ಯಾರು ಆತ್ಮೀಯರಾಗಿರುತ್ತಾರೆ? ನಾನು ಯಾರ ಮೇಲೆ ಪ್ರೀತಿ ತೋರಿಸುತ್ತಿರುತ್ತೇನೆ, ಎಲ್ಲ ಅಭಿಪ್ರಾಯಗಳು ಅವರ ಮೇಲೆ ವಾಲುತ್ತೆ. ಅದಕ್ಕೆ ನಮ್ಮನ್ನು ಮೀರಿ ಕಾನೂನು, ಕೋರ್ಟ್ ಅಂತ ಇರೋದು. ಅದಕ್ಕೆ ಕೋರ್ಟ್ ಅನ್ನೋದು ಇರೋದು. ಏನಿದು ಆ ಸತ್ಯಾಂಶಗಳನ್ನು ನೋಡುತ್ತೆ. ಒಂದು ತನಿಖೆ ಕರೆಕ್ಟ್ ಆಗಿ ಆಗುತ್ತೆ. ಅದಕ್ಕೆ ಏನು ರಿಸಲ್ಟ್ ಸಿಗಬೇಕೋ ಅದು ಸಿಗುತ್ತೆ. ವೈಯಕ್ತಿಕವಾಗಿ ನಾನೂ ಏನೂ ಹೇಳುವುದಕ್ಕೆ ಆಗುವುದಿಲ್ಲ" ಎಂದಿದ್ದಾರೆ.

ಹಾಗೇ "ನನಗೆ ದರ್ಶನ್ ಸರ್ದು ವೈಯಕ್ತಿಕವಾಗಿ ಅಷ್ಟೇ ಅಲ್ಲ. ಎಲ್ಲಾ ರೀತಿಯಿಂದಲೂ ನೋವಾಗಿದೆ. ಪರ್ಸನಲಿ ಆಗಿರಬಹುದು. ಪ್ರೊಫೆಷನಲಿ ಆಗಿರಬಹುದು ಅಥವಾ ಇಬ್ಬ ಸಾಮಾನ್ಯ ವ್ಯಕ್ತಿಯಾಗಿಯೂ ನನಗೆ ಈ ಘಟನೆ ನೋವು ತಂದಿದೆ. ಈ ತರ ಆಗಬಾರದಿತ್ತೇನೋ? ಸರಿ ತಪ್ಪು ಯೋಚನೆ ಮಾಡುವುದಕ್ಕೆ ಆಗುತ್ತಿಲ್ಲ ನನಗೆ." ಎಂದು ತರುಣ್ ಸುಧೀರ್ ಹೇಳಿಕೊಂಡಿದ್ದಾರೆ.
ಇದೇ ವೇಳೆ ದರ್ಶನ್ ಜೊತೆಗೆ ಸಿನಿಮಾ ಮಾಡುವ ಬಗ್ಗೆನೂ ರಿವೀಲ್ ಮಾಡಿದ್ದಾರೆ. "ಆಗ ಕೂಡ ಸರ್ ಡೆವಿಲ್ ಮಾಡಬೇಕು. ಆಮೇಲೆ ಇನ್ನೊಂದು ಸಿನಿಮಾ ಮಾಡಬೇಕು. ಅದಾದ್ಮೇಲೆ ನಮ್ಮದು 59ನೇ ಸಿನಿಮಾ ಅಂತ ಅನೌನ್ಸ್ ಮಾಡಿದ್ವಿ. ಅದಕ್ಕೆ ಬೇಕಿರೋ ಕೆಲಸವನ್ನೆಲ್ಲ ಮಾಡಿದ್ವಿ. ಅವರು ಯಾವಾಗ ಬಂದರೂ, ಅವರು ಯಾವಾಗ ಅಂದರೂ, ಅದೇನೆ ಪರಿಸ್ಥಿತಿ ಇದ್ದರೂ ನಾನಂತೂ ಸಿನಿಮಾ ಮಾಡುತ್ತೇನೆ. ಅಷ್ಟಂತೂ ನನ್ನ ಕಡೆಯಿಂದ ಹೇಳುತ್ತೇನೆ." ಎಂದಿದ್ದಾರೆ.
ಅವರು ನಿರಪರಾಧಿ ಅಂತ ಹೊರ ಬರುತ್ತಾರೆ. ಅದೇ ಸತ್ಯ. ಅದೇ ಆಗಲಿ ಅಂತ ನಂಬಿದ್ದು, ಹಾಗೆ ಆಗುತ್ತೆ ಅನ್ನುವ ನಂಬಿಕೆ ನನಗಿದೆ ಎಂದು ಮಾಧ್ಯಮಗಳ ಮುಂದೆ ತರುಣ್ ಸುಧೀರ್ ಹೇಳಿಕೊಂಡಿದ್ದಾರೆ.


Click it and Unblock the Notifications











