ಕನ್ನಡದ ಖ್ಯಾತ ನಿರೂಪಕಿ ಅಪರ್ಣ ಇನ್ನಿಲ್ಲ: ಅಪ್ಪಟ ಕನ್ನಡದ ನಿರೂಪಕಿಯ ಮಾತಗಳಷ್ಟೇ ಜೀವಂತ
ಕನ್ನಡದ ಖ್ಯಾತ ಹಾಗೂ ಹಿರಿಯ ನಿರೂಪಕಿ ಅಪರ್ಣ ಅಪಾರ ಅಭಿಮಾನಿಗಳನ್ನು ಬಿಟ್ಟು ಅಗಲಿದ್ದಾರೆ. ಹಲವು ದಿನಗಳಿಂದ ಕ್ಯಾನ್ಸರ್ ಕಾಯಿಲೆಯಿಂದ ಅಪರ್ಣ ಬಳಲುತ್ತಿದ್ದರು. ಚಿಕಿತ್ಸೆ ಫಲಿಸದೆ ಇಂದು (ಜುಲೈ 11) ಮೃತಪಟ್ಟಿದ್ದಾರೆ. ಅಪರ್ಣ ಸಾವಿನ ವಿಚಾರ ತಿಳಿದು ಅವರ ಅಭಿಮಾನಿಗಳು ಹಾಗೂ ಕನ್ನಡಿಗರು ಶಾಕ್ಗೆ ಒಳಗಾಗಿದ್ದಾರೆ.
ಖ್ಯಾತ ನಿರೂಪಕಿ ಅಪರ್ಣ ಕೆಲವು ದಿನಗಳಿಂದ ಕ್ಯಾನ್ಸರ್ನಿಂದ ಬಳಲುತ್ತಿದ್ದು, ಇಹಲೋಕ ತ್ಯಜಿಸಿದ್ದಾರೆ. ಬನಶಂಕರಿ ಸೆಕೆಂಡ್ ಸ್ಟೇಜ್ನಲ್ಲಿರುವ ಅವರ ನಿವಾಸದಲ್ಲಿ ಅಪರ್ಣ ಕೊನೆಯುಸಿರೆಳೆದಿದ್ದಾರೆ. ನಿರೂಪಕಿಯಾಗಿ ಅಪರ್ಣಾ ಕನ್ನಡಿಗರ ಮನೆ ಮಾನಸದಲ್ಲಿ ನೆಲೆಸಿದ್ದರು. ಅಪ್ಪಟ ಕನ್ನಡದಲ್ಲಿಯೇ ನಿರೂಪಣೆ ಮಾಡುತ್ತಿದ್ದ ಕೆಲವೇ ಕೆಲವು ನಿರೂಪಕಿಯರಲ್ಲಿ ಇವರು ಕೂಡ ಒಬ್ಬರಾಗಿದ್ದರು.

ಅರ್ಪಣ ಅವರು ಕಳೆದ ಎರಡು ವರ್ಷಗಳಿಂದ ಶ್ವಾಸಕೋಶದ ಕ್ಯಾನ್ಸರ್ನಿಂದ ಬಳಲುತ್ತಿದ್ದರು. ಅಪರ್ಣ ನಾಲ್ಕನೇ ಹಂತದ ಕ್ಯಾನ್ಸರ್ನಿಂದ ಬಳಲುತ್ತಿದ್ದರು ಎಂದು ಪತಿ ನಾಗರಾಜ್ ವಸ್ತಾರೆ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ.
ಅಪರ್ಣ ಕೇವಲ ನಿರೂಪಕಿಯಷ್ಟೇ ಅಲ್ಲ ನಟಿಯಾಗಿಯೂ ಗುರುತಿಸಿಕೊಂಡಿದ್ದರು. 1984ರಲ್ಲಿ ತೆರೆಕಂಡ ಪುಟ್ಟಣ್ಣ ಕಣಗಾಲ್ ನಿರ್ದೇಶಿಸಿದ 'ಮಸಣದ ಹೂವು' ಸಿನಿಮಾದಿಂದ ಅರ್ಪಣೆ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ನಂತರ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದ್ರು. ಶಿವರಾಜ್ಕುಮಾರ್ ನಟನೆಯ 'ಇನ್ಸ್ಪೆಕ್ಟರ್ ವಿಕ್ರಮ್' ಸೇರಿದಂತೆ ಹಲವು ಸಿನಿಮಾಗಳಿಗೆ ಬಣ್ಣ ಹಚ್ಚಿದ್ದಾರೆ.
90ರ ದಶಕದಲ್ಲಿ ನಟನೆಯಿಂದ ನಿರೂಪಕಿಯಾಗಿ ವೃತ್ತಿಯನ್ನು ಆರಂಭಿಸಿದ್ದರು. ಚಂದನ ವಾಹಿನಿ ಸೇರಿದಂತೆ ಹಲವು ಟಿವಿ ಕಾರ್ಯಕ್ರಮಗಳಿಗೆ ನಿರೂಪಕಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ರೇಡಿಯೋ ಜಾಕಿಯಾಗಿ, ಕಾಮಿಡಿಯನ್ ಆಗಿ ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದಾರೆ. 'ಮೂಡಲಮನೆ', 'ಮುಕ್ತ' ಮುಂತಾದ ಹಲವು ಧಾರಾವಾಹಿಗಳಲ್ಲಿ ಅಪರ್ಣ ನಟಿಸಿದ್ದಾರೆ.
2013 ರಲ್ಲಿ ಬಿಗ್ ಬಾಸ್ ಕನ್ನಡದ ಮೊದಲ ಸೀಸನ್ನಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದರು. ಹಾಗೇ ಸೃಜನ್ ಲೋಕೇಶ್ ನಡೆಸಿಕೊಡುತ್ತಿದ್ದ 'ಮಜಾ ಟಾಕೀಸ್'ನಲ್ಲಿ ನಟಿಸಿ, ಕಿರುತೆರೆ ವೀಕ್ಷಕರನ್ನು ರಂಜಿಸಿದ್ದರು. ಇದರಲ್ಲಿ ವರಲಕ್ಷ್ಮಿ ಉರ್ಫ್ ವರು ಪಾತ್ರದಲ್ಲಿ ಮಿಂಚಿದ್ದರು. ಇವರು ಧ್ವನಿಯನ್ನು ಬಸ್ ನಿಲ್ಧಾಣ ಹಾಗೂ ಮೆಟ್ರೋ ಆರಂಭದ ದಿನಗಳಲ್ಲಿ ಪ್ರಯಾಣಿಕರಿಗೆ ಮಾಹಿತಿ ನೀಡಲು ಬಳಸಿಕೊಳ್ಳಲಾಗಿತ್ತು.


Click it and Unblock the Notifications











