ಪದ್ಮಭೂಷಣ ಡಾ.ಬಿ.ಸರೋಜಾದೇವಿ ಅವರಿಗೆ ಶ್ರದ್ಧಾಂಜಲಿ; ನಾಸರ್, ಕಲಾವತಿ, ಸುಮಲತಾ ಸೇರಿದಂತೆ ಚಿತ್ರರಂಗ ಭಾಗಿ
ಬಹುಭಾಷಾ ನಟಿ ಬಿ. ಸರೋಜಾ ದೇವಿ ಕಳೆದ ತಿಂಗಳು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ಅಪ್ಪಟ ಕನ್ನಡದ ನಟಿ ತಮಿಳು, ತೆಲುಗು, ಹಿಂದಿ ಭಾಷೆಯಲ್ಲಿ ನಟಿಸಿ ಜನಮೆಚ್ಚುಗೆ ಪಡೆದಿದ್ದರು. ವಯೋ ಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಸರೋಜಾ ದೇವಿಯವರು ಕಳೆದ ತಿಂಗಳು ಇಹಲೋಕವನ್ನು ತ್ಯಜಿಸಿದ್ದರು. ಈ ಹಿನ್ನೆಲೆಯಲ್ಲಿ ಕನ್ನಡ ಚಿತ್ರರಂಗ ಹಾಗೂ ಪರ ಭಾಷೆಯ ಗಣ್ಯರು ಸರೋಜಾ ದೇವಿಯವರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸಿದ್ದಾರೆ.
ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕಲಾವಿದರ ಸಂಘದಲ್ಲಿ ಹಿರಿಯ ನಟಿ, ಅಭಿನಯ ಸರಸ್ವತಿ, ಪದ್ಮಭೂಷಣ ಡಾ.ಬಿ.ಸರೋಜಾದೇವಿ ಅವರ ಆತ್ಮಕ್ಕೆ ಶಾಂತಿ ಕೋರಲಾಗಿದೆ. ಕನ್ನಡದ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಈ ಶ್ರದ್ದಾಂಜಲಿ ಕಾರ್ಯಕ್ರಮದ ಮುಂದಾಳತ್ವವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಕನ್ನಡ, ತೆಲುಗು, ತಮಿಳು ಚಿತ್ರರಂಗದ ಕಲಾವಿದರು ಹಾಗೂ ತಂತ್ರಜ್ಞರು ಭಾಗವಹಿಸಿದ್ದರು.

ಡಾ.ಬಿ.ಸರೋಜಾದೇವಿ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಕಲಾವಿದರ ಸಂಘದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ನಿರ್ದೇಶಕರ ಸಂಘ, ನಿರ್ಮಾಪಕರ ಸಂಘ ಹಾಗೇ ಕನ್ನಡ ಚಿತ್ರರಂಗದ ಹಲವು ಸಂಘಟನೆಗಳಿಂದ ಆಯೋಜನೆ ಮಾಡಲಾಗಿತ್ತು. ದಿವಂಗತ ಡಾ.ಬಿ.ಸರೋಜಾದೇವಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ವೇಳೆ ದಿವಂಗತ ಸರೋಜಾದೇವಿಯವರ ಚಿತ್ರರಂಗದ ಸುದೀರ್ಘ ದಾರಿಯನ್ನು ವಿಡಿಯೋ ಮೂಲಕ ನೆರೆದಿದ್ದ ಗಣ್ಯರ ಮುಂದೆ ಪ್ರದರ್ಶನ ಮಾಡಲಾಯಿತು.
ಪದ್ಮಭೂಷಣ ಡಾ.ಬಿ.ಸರೋಜಾದೇವಿ ಅವರ ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ಕನ್ನಡ ಚಿತ್ರರಂಗದಿಂದ ಮುಖ್ಯಮಂತ್ರಿ ಚಂದ್ರು, ಸುಂದರರಾಜ್, ಗಿರಿಜಾ ಲೋಕೇಶ್, ಸುಮಲತಾ ಅಂಬರೀಶ್, ರಾಕ್ಲೈನ್ ವೆಂಕಟೇಶ್, ಅನು ಪ್ರಭಾಕರ್, ರಘು ಮುಖರ್ಜಿ, ನೆನಪಿರಲಿ ಪ್ರೇಮ್ ಸೇರಿದಂತೆ ಮುಂತಾದವರು ಭಾಗವಹಿಸಿ ಅನುಭವ ಹಂಚಿಕೊಂಡರು. ಹಾಗೇ ತಮಿಳು ಚಿತ್ರರಂಗದ ಹಿರಿಯ ನಟ ನಾಸಿರ್ ಹಾಗೂ ಕಲಾವತಿಯವರು ಆಗಮಿಸಿ ಹಿರಿಯ ನಟಿಯನ್ನು ನೆನೆಪಿಸಿಕೊಂಡಿದ್ದಾರೆ.
ಈ ವೇಳೆ ಈ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಆಯೋಜಿಸಿದ್ದ ನಿರ್ಮಾಪಕ-ನಟ ರಾಕ್ಲೈನ್ ವೆಂಕಟೇಶ್ ಪದ್ಮಭೂಷಣ ಡಾ.ಬಿ.ಸರೋಜಾದೇವಿಯವರನ್ನು ನೆನಪಿಸಿಕೊಂಡಿದ್ದಾರೆ. "ಈ ಕಾರ್ಯಕ್ರಮವನ್ನು ಕಲಾವಿದರ ಸಂಘದಲ್ಲಿ ನಡೆಸಲು ಕಾರಣವಿದೆ. ಈ ಕಟ್ಟಡ ನಿರ್ಮಾಣ ಆಗುವುದಕ್ಕೆ ಸರೋಜಮ್ಮನವರ ಶ್ರಮ ಕೂಡ ತುಂಬಾ ಇದೆ. ಇಡೀ ಚಿತ್ರರಂಗ ಒಂದು ಕುಟುಂಬವಾಗಿ ಈ ಕಾರ್ಯಕ್ರಮ ನಡೆಸುತ್ತಿದ್ದೇವೆ. ಬೇರೆ ಬೇರೆ ಚಿತ್ರರಂಗದಿಂದ ನಟರಾದ ನಾಸರ್, ಕಲಾವತಿಯವರೂ ಆಗಮಿಸಿದ್ದಾರೆ. ಕಲಾವಿದರ ಭವನ ಕಟ್ಟುವುದು ರಾಜ್ ಕುಮಾರ್ ಅವರ ಕನಸು ಆಗಿತ್ತು. ಅದನ್ನು ಅಂಬರೀಶ್ ಅವರು ನನಸು ಮಾಡಿದರು. ಈ ಭವನ ಕಟ್ಟುವುದಕ್ಕೆ ಸರೋಜಾದೇವಿ ಅವರು ಅಧ್ಯಕ್ಷರಾಗಿದ್ದರು" ಎಂದು ಹಿರಿಯ ನಟಿ ಸರೋಜಾದೇವಿಯವರೊಂದಿಗಿನ ಒಡನಾಟ ನೆನೆದು ಭಾವುಕರಾಗಿದ್ದಾರೆ.

ಇದೇ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಮಲತಾ ಅಂಬರೀಶ್ ಕೂಡ "ಸರೋಜಮ್ಮನವರ ಬಗ್ಗೆ ಮಾತನಾಡಲು ನಾವು ಚಿಕ್ಕವರು. ಚಿತ್ರರಂಗದಲ್ಲಿ ಛಾಪನ್ನು ಮೂಡಿಸಿದವರು. ಇಂದಿಗೂ ದೇಶ ವಿದೇಶಗಳಲ್ಲೂ ಅವರ ಹಾಡುಗಳನ್ನು ಇಷ್ಟ ಪಡುತ್ತಾರೆ. ಅವರು ಯಾವಾಗಲೂ ಚಿಕ್ಕ ಮಕ್ಕಳ ತರ ಇರುತ್ತಿದ್ದರು. ಅಂಬರೀಶ್ ಅವರನ್ನು ತಮ್ಮನ ಹಾಗೆ ನೋಡುತ್ತಿದ್ದರು. ಅವರು ವೃತ್ತಿ ಹಾಗೂ ವೈಯಕ್ತಿಕ ಬದುಕನ್ನು ತುಂಬಾನೇ ಚೆನ್ನಾಗಿ ನಡೆಸಿದರು. ಇದು ಎಲ್ಲರಿಗೂ ಮಾದರಿ ಆಗಬೇಕು. ಈ ಭವನ ಮಾಡಲು ರಾಜಕುಮಾರ್ ಹಾಗೂ ಅಂಬರೀಶ್ ಅವರಂತೆಯೇ ಸರೋಜಾದೇವಿ ಅವರ ಶ್ರಮ ಕೂಡ ಇದೆ. ಇಂತಹ ಭವನ ಇಡೀ ಇಂಡಿಯಾದಲ್ಲಿಯೇ ಇಲ್ಲ. ಇಂತಹ ಭವನವನ್ನು ಕಲಾವಿದರು ಚೆನ್ನಾಗಿ ಬಳಸಿಕೊಂಡು, ಮುಂದುವರೆಸಿಕೊಂಡು ಹೋಗಬೇಕು" ಎಂದು ನಟಿ-ಮಾಜಿ ಸಂಸದೆ ಸುಮಲತಾ ಅಂಬರೀಶ್ ಅಭಿಪ್ರಾಯ ಪಟ್ಟಿದ್ದಾರೆ.
ಇನ್ನು ಚೆನೈನಿಂದ ಆಗಮಿಸಿದ್ದ ಬಹು ಭಾಷಾ ನಟ ನಾಸರ್ ಅವರೂ ಕೂಡ ತಮ್ಮ ಹಾಗೂ ಸರೋಜಾದೇವಿ ಅವರ ನಡುವಿನ ಒಡನಾಟವನ್ನು ಮೆಲುಕು ಹಾಕಿದರು. ಈ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು ಸೇರಿದಂತೆ ಕನ್ನಡ ಚಿತ್ರರಂಗದ ಬೇರೆ ಸಂಘದ ಪದಾಧಿಕಾರಿಗಳು ಆಗಮಿಸಿದ್ದರು. ಈ ಕಾರ್ಯಕ್ರಮದಲ್ಲಿ ಸರೋಜಾದೇವಿ ಅವರ ಪುತ್ರಿ ಕೂಡ ಹಾಜರಿದ್ದರು.


Click it and Unblock the Notifications











