"ಕುವೆಂಪು, ಬಸವಣ್ಣಗೆ ಅವಮಾನ.. ಶಾಂತಿ ಕದಡಿದ್ದಕ್ಕೆ ಇದು ತಕ್ಕ ಪಾಠ": ಬಿಜೆಪಿಗೆ ತಿವಿದ ಕವಿರಾಜ್
ಕರ್ನಾಟಕ ವಿಧಾನ ಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವಿನ ಹಣಾಹಣಿಯಲ್ಲಿ ಬಿಜೆಪಿ, ಜೆಡಿಎಸ್ಗೆ ತೀವ್ರ ಹಿನ್ನಡೆಯಾಗಿದೆ. ಬಿಜೆಪಿಯನ್ನು ಹೀನಾಯಾವಾಗಿ ಸೋಲಿಸಿದ್ದಕ್ಕೆ ಸ್ಯಾಂಡಲ್ವುಡ್ನ ಸಿನಿಸಾಹಿತಿ ಕವಿರಾಜ್ ಪೋಸ್ಟ್ ಒಂದನ್ನು ಬರೆದಿದ್ದಾರೆ.
ಇದೇ ಪೋಸ್ಟ್ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಬಿಜೆಪಿ ಪಕ್ಷ ಕರ್ನಾಟಕದಲ್ಲಿ ಹೀನಾಯಾವಾಗಿ ಸೋತಿದ್ದಕ್ಕೆ ಪದಗಳಲ್ಲೇ ಕವಿರಾಜ್ ತಿವಿದಿದ್ದಾರೆ. ಬಿಜೆಪಿ ಕರ್ನಾಟಕದಲ್ಲಿ ಸೋತಿದ್ದು ಯಾಕೆ? ಅನ್ನೋದನ್ನು ವಿವರಿಸಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಕವಿರಾಜ್ ಪೋಸ್ಟ್ ವೈರಲ್ ಆಗುತ್ತಿದ್ದು, ಪರ ಹಾಗೂ ವಿರೋಧ ವ್ಯಕ್ತವಾಗುತ್ತಿದೆ. ಅಂದ್ಹಾಗೆ, ಈ ಪೋಸ್ಟ್ನಲ್ಲಿ ಅಂತಹದ್ದೇನು ಹೇಳಿದ್ದಾರೆ ಅನ್ನೋದನ್ನು ತಿಳಿಯಲು ಮುಂದೆ ಓದಿ..
ಕವಿರಾಜ್ ಪೋಸ್ಟ್ನಲ್ಲಿ ಏನೇನಿದೆ?
"ಪದೇ ಪದೇ ನಾಡಿನ ಶಾಂತಿ ಕದಡಿದ್ದು,
ಶಾಲೆ - ಪಠ್ಯಪುಸ್ತಕಗಳಲ್ಲು ರಾಜಕೀಯ ತಂದು ಮಲೀನಗೊಳಿಸಿದ್ದು,
ಕುವೆಂಪು , ಬಸವಣ್ಣ , ಅಂಬೇಡ್ಕರ್ , ಅವರಂತಹ ಮಹನೀಯರನ್ನು ಅವಮಾನಿಸಿದ್ದು. ಧರ್ಮ - ದೇವರು ಎಲ್ಲವನ್ನು ರಾಜಕೀಯ ಅಸ್ತ್ರವಾಗಿಸಿಕೊಂಡಿದ್ದು,
ಕನ್ನಡತನ, ಕನ್ನಡದ ಆಸ್ಮಿತೆಗಳ ವಿರುದ್ಧ ನಿಂತಿದ್ದು , ಹಿಂದಿ ಹೇರಿಕೆ ಬೆಂಬಲಿಸಿದ್ದು,
ಈ ಮಣ್ಣಿನ ಹೋರಾಟಗಾರರನ್ನು ಕಡೆಗಣಿಸಿ , ಶಿವಾಜಿ, ಸಾವರ್ಕರ್ ಅಂತಹಾ ಉತ್ತರದ ಹೋರಾಟಗಾರರನ್ನು ಮೆರೆಸಿದ್ದು,
ಹಿಂದೆಂದೂ ಕಂಡಿರದ ಭ್ರಷ್ಟಾಚಾರ -ಅಹಂಕಾರದ ಆಡಳಿತ ,
ಬೆಲೆ ಏರಿಕೆಗಳಿಂದ ಬಡವರ ಬದುಕನ್ನು ಸಂಕಷ್ಟಕ್ಕೆ ದೂಡಿದ್ದು,
ಪದೇ ಪದೆ ತಪ್ಪು ನಿರ್ಧಾರಗಳನ್ನು ತೆಗೆದುಕೊಂಡು ಜನ ಉಗಿದ ನಂತರ ಯೂ ಟರ್ನ್ ಹೊಡೆದಿದ್ದು,
ಕರೋನಾದಂತಹ ವಿಕೋಪದ ಸಮಯದಲ್ಲಿ ಜೀವಗಳನ್ನು ರಕ್ಷಿಸುವಲ್ಲಿ ಹೊಣೆಗೇಡಿತನ ತೋರಿದ್ದು,
ಅಮಾಯಕ ಯುವಕರ ಹೆಣಗಳನ್ನು ರಾಜಕೀಯಕ್ಕೆ ಬಳಸಿಕೊಂಡಿದ್ದು,
ನಾಗಪುರ ನಿರ್ದೇಶಿತ ಮೂಲಭೂತವಾದದ ಪ್ರಯೋಗಗಳಿಗೆ ಕರ್ನಾಟಕವನ್ನು ಪ್ರಯೋಗಶಾಲೆಯಾಗಿಸಿದ್ದು,
ಆಪರೇಷನ್ ಕಮಲ, ರೆಸಾರ್ಟ್ ರಾಜಕೀಯದಂತ ಅನೈತಿಕ ರಾಜಕಾರಣದಿಂದ ರಾಷ್ಟ್ರಮಟ್ಟದಲ್ಲಿ ನಾಡಿನ ಗೌರವ ಹಾಳುಮಾಡಿದ್ದು,
ವಿರೋಧಿಸಿದವರನ್ನು ಹೆದರಿಸಲು ಆಡಳಿತ ವ್ಯವಸ್ಥೆಯನ್ನು ಬಳಸಿಕೊಂಡಿದ್ದು,
ಇವೆಲ್ಲವುಗಳ ವಿರುದ್ಧ ಕರ್ನಾಟಕದ ಮತದಾರರು ಜಾಗೃತನಾಗಿ ತೀರ್ಪು ನೀಡಿದ್ದಾರೆ." ಎಂದು ಬರೆದು ಪೋಸ್ಟ್ ಮಾಡಿದ್ದಾರೆ.
"ಕನ್ನಡಿಗರು ಸೊಪ್ಪು ಹಾಕಿಲ್ಲ"
ರ್ಯಾಲಿಗಳಿಂದ, ಹಣದ ಬಲದಿಂದ, ಜಾತಿ ರಾಜಕೀಯದಿಂದ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ. ಕರ್ನಾಟಕದ ಜನರ ಪ್ರಬುದ್ಧತೆಯನ್ನು ಮೆಚ್ಚಿಕೊಂಡಾಡಿದ್ದಾರೆ. ಸದ್ಯ ಈ ಪೋಸ್ಟ್ ಈಗ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಎಡೆ ಮಾಡಿಕೊಡುತ್ತಿದೆ.
"ಕೇಂದ್ರ ನಾಯಕರ ಅಬ್ಬರದ ರ್ಯಾಲಿಯಿಂದ ಅಲೆ ಸೃಷ್ಟಿಯಾಗಿಬಿಡುತ್ತೆ ಎಂಬ ಭ್ರಮೆ, ಹಣ ಬಲದ ಧಿಮಾಕು, ಜಾತಿ ರಾಜಕೀಯ, ದ್ವೇಷ ಭಾಷಣ ಇವಕ್ಕೆಲ್ಲಾ ಸೊಪ್ಪು ಹಾಕದ ಕರುನಾಡಿನ ಮತದಾರರ ಪ್ರಜ್ಞಾವಂತಿಕೆ ಬಗ್ಗೆ ಹೆಮ್ಮೆಯೆನಿಸುತ್ತದೆ. ಅತಂತ್ರ ಫಲಿತಾಂಶ ಕೊಟ್ಟರೇ ಅನೈತಿಕ ರಾಜಕಾರಣದ ರೂವಾರಿಗಳು ಅದನ್ನು ಹೇಗೆಲ್ಲಾ ದುರುಪಯೋಗ ಪಡಿಸಿಕೊಂಡು ಹಣಬಲ, ಅಧಿಕಾರ ಬಲದಿಂದ ರಾಜ್ಯದಲ್ಲಿ ಸರ್ಕಾರ ಸ್ಥಾಪಿಸುತ್ತಾರೆ ಎಂಬ ಸ್ಪಷ್ಟ ಅರಿವು ಮತದಾರ ಪ್ರಭುಗಳಿಗೆ ಇದೆ. ಹಾಗಾಗಿಯೇ ನಿರ್ಣಾಯಕ ಫಲಿತಾಂಶ ನೀಡಿ ಯಾರ್ಯಾರು ಎಲ್ಲಿರಬೇಕು ಎಂದು ಖಚಿತವಾಗಿ ತೋರಿಸಿರುವ ಮತದಾರರು ಅಭಿನಂದನಾರ್ಹರು. ಮತದಾರರ ಪ್ರಜ್ಞಾವಂತಿಕೆ ಮತ್ತು ಪ್ರಜಾಪ್ರಭುತ್ವ ಹೀಗೆ ಪ್ರಬುದ್ಧವಾಗುತ್ತ ಚಿರಾಯುವಾಗಲಿ." ಎಂದು ಕವಿರಾಜ್ ಪೋಸ್ಟ್ ಮಾಡಿದ್ದಾರೆ.


Click it and Unblock the Notifications











