'ವಾಲ್ತೇರು ವೀರಯ್ಯ', 'ವೀರ ಸಿಂಹ ರೆಡ್ಡಿ', 'ವಾರಿಸು'ಗೆ ಹೆಚ್ಚು ಥಿಯೇಟರ್: ಕನ್ನಡದ ಕತೆಯೇನು?
ಹಬ್ಬ ಹರಿದಿನಗಳು ಬಂತು ಅಂದ್ರೆ, ಸಾಲು ಸಾಲು ಸಿನಿಮಾಗಲು ರಿಲೀಸ್ಗೆ ರೆಡಿಯಾಗಿ ನಿಂತುಬಿಡುತ್ತವೆ. ಅದರಲ್ಲೂ ಸಂಕ್ರಾಂತಿ ಬಂತು ಅಂದ್ರೆ, ತೆಲುಗು, ತಮಿಳಿನ ಸಿನಿಮಾಗಳು ರಿಲೀಸ್ಗೆ ಕ್ಯೂ ನಿಂತು ಬಿಡುತ್ತವೆ.
ಈ ವರ್ಷ ಕೂಡ ಕಾಂಪಿಟೇಷನ್ ಏನು ಕಮ್ಮಿಯಿಲ್ಲ. ಸಂಕ್ರಾಂತಿಗೆ ಅಖಾಡಕ್ಕಿಳಿದು ಕ್ರಾಂತಿ ಮಾಡೋಕೆ ದಿಗ್ಗಜರು ತುದಿಗಾಲಲ್ಲಿ ನಿಂತಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ ಹಾಗೂ ಬಾಲಕೃಷ್ಣ ಟಾಲಿವುಡ್ನಲ್ಲಿ ಬಾಕ್ಸಾಫೀಸ್ ಯುದ್ಧಕ್ಕೆ ಇಳಿದಿದ್ದಾರೆ. ಇನ್ನೊಂದು ಕಡೆ ತಮಿಳುನಾಡಿನಲ್ಲೂ ದಳಪತಿ ವಿಜಯ್ ಹಾಗೂ ಅಜಿತ್ ಕುಮಾರ್ ಸಿನಿಮಾಗಳು ಗುದ್ದಾಡಲಿವೆ.
ಟಾಲಿವುಡ್ ಹಾಗೂ ಕಾಲಿವುಡ್ ಸಿನಿಮಾಗಳ ಎಫೆಕ್ಟ್ ಸ್ಯಾಂಡಲ್ವುಡ್ ಮೇಲೂ ಬಿದ್ದಿದೆ. ಈ ದಿಗ್ಗಜರ ಸಿನಿಮಾಗಳಿಗೆ ಹೆಚ್ಚು ಥಿಯೇಟರ್ಗೆ ಸಿಕ್ಕಿದ್ದು, ಇದೇ ವೇಳೆ ಬಿಡುಗಡೆಯಾಗುತ್ತಿರುವ ಕನ್ನಡ ಸಿನಿಮಾಗಳ ಪಾಡೇನು? ಅನ್ನೋ ಪ್ರಶ್ನೆ ಎದುರಾಗಿದೆ.

ಚಿರಂಜೀವಿ Vs ಬಾಲಯ್ಯ
ಟಾಲಿವುಡ್ನಲ್ಲಿ ಸಂಕ್ರಾಂತಿ ಜ್ವರ ಜೋರಾಗಿದೆ. ಇಬ್ಬರು ದಿಗ್ಗಜರು ಬಾಕ್ಸಾಫೀಸ್ನಲ್ಲಿ ಸಮರಕ್ಕಿಳಿಯಲು ರೆಡಿಯಾಗಿದ್ದಾರೆ. ಚಿರಂಜೀವಿ ನಟನೆಯ 'ವಾಲ್ತೇರು ವೀರಯ್ಯ' ಹಾಗೂ ಬಾಲಯ್ಯ ಅಭಿನಯದ 'ವೀರ ಸಿಂಹ ರೆಡ್ಡಿ' ಈ ಎರಡೂ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ರಿಲೀಸ್ ಆಗುತ್ತಿದೆ. ಕರ್ನಾಟಕದಲ್ಲೂ ಇವರಿಬ್ಬರ ಸಿನಿಮಾಗಳಿಗೆ ಹೆಚ್ಚು ಬೇಡಿಕೆಯಿದೆ. ಹೀಗಾಗಿ ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಆಗುತ್ತಿದೆ. ಮೂಲಗಳ ಪ್ರಕಾರ 'ವಾಲ್ತೇರು ವೀರಯ್ಯ' 150 ಸ್ಕ್ರೀನ್, ವೀರ ಸಿಂಹ ರೆಡ್ಡಿ 145 ಸ್ಕ್ರೀನ್ನಲ್ಲಿ ರಿಲೀಸ್ ಆಗುತ್ತಿದೆ.

ಅಜಿತ್ Vs ವಿಜಯ್
ಟಾಲಿವುಡ್ನಲ್ಲಿ ದಿಗ್ಗಜರು ಅಖಾಡಕ್ಕೆ ಇಳಿದಿದ್ದರೆ, ಕಾಲಿವುಡ್ನಲ್ಲೂ ಇಬ್ಬರು ಸೂಪರ್ಸ್ಟಾರ್ಗಳು ಫೈಟ್ ಮಾಡೋಕೆ ಸಜ್ಜಾಗಿದ್ದಾರೆ. ಅಜಿತ್ ಕುಮಾರ್ ಅಭಿನಯದ 'ಥುನಿವು' ಜನವರಿ 11ಕ್ಕೆ ರಿಲೀಸ್ ಆಗುತ್ತಿದೆ. ಅದೇ ದಳಪತಿ ವಿಜಯ್ ಅಭಿನಯದ 'ವಾರಿಸು' ಸಿನಿಮಾ ಕೂಡ ಇದೇ ರಿಲೀಸ್ ಆಗುತ್ತಿದೆ. ಕರ್ನಾಟಕದಲ್ಲೂ ಇವರಿಬ್ಬರ ಸಿನಿಮಾಗಳು ಉತ್ತಮ ಬ್ಯುಸಿನೆಸ್ ಮಾಡುತ್ತವೆ. ಈ ಕಾರಣಕ್ಕೆ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಈ ಎರಡೂ ಸಿನಿಮಾಗಳಿಗೆ ಹೆಚ್ಚು ಥಿಯೇಟರ್ ಸಿಗಲಿದೆ. ಮೂಲಗಳ ಪ್ರಕಾರ, 'ವಾರಿಸು' ಕೂಡ 150 ಸ್ಕ್ರೀನ್ಗಳಲ್ಲಿ ರಿಲೀಸ್ ಆಗಲಿದೆ. ಹಾಗೇ 'ಥುನಿವು' 138 ಸ್ಕ್ರೀನ್ಗಳಲ್ಲಿ ರಿಲೀಸ್ ಆಗುತ್ತಿದೆ.

ಕನ್ನಡ ಸಿನಿಮಾಗಳ ಕತೆಯೇನು?
ಸಂಕ್ರಾಂತಿ ಹಬ್ಬದಂದು ಕನ್ನಡದ ಒಬ್ಬ ಸೂಪರ್ಸ್ಟಾರ್ ಸಿನಿಮಾನೂ ರಿಲೀಸ್ ಆಗುತ್ತಿಲ್ಲ. ಹೀಗಾಗಿ ವಿತರಕರು ಪರಭಾಷೆಯ ಸಿನಿಮಾಗಳನ್ನು ರಿಲೀಸ್ ಮಾಡುವುದಕ್ಕೆ ಮುಂದಾಗಿದ್ದಾರೆ. ಕನ್ನಡದಲ್ಲಿ 'ಆರ್ಕೆಸ್ಟ್ರಾ ಮೈಸೂರು', 'ಮಂಕು ಭಾಯ್ ಫಂಕಿ ರಾಣಿ', 'ವಿರಾಟಪುರ ವಿರಾಗಿ' ಅಂತಹ ಸ್ಮಾಲ್ ಬಜೆಟ್ ಸಿನಿಮಾಗಳಿಗೆ ಸಿಕ್ಕಿರೋದು ಕಮ್ಮಿ ಚಿತ್ರಮಂದಿರಗಳೇ. ಹೊಸ ವರ್ಷದ ಮೊದಲ ಹಬ್ಬವನ್ನು ಪರಭಾಷಾ ಸಿನಿಮಾಗಳಿಗೆ ಬಿಟ್ಟುಕೊಟ್ಟಂತಾಗಿದೆ. ಇದರೊಂದಿಗೆ 'ವೇದ' ಸಿನಿಮಾ 4ನೇ ವಾರದಲ್ಲಿ 138 ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಈ ವಾರ ರಿಲೀಸ್ ಆಗುತ್ತಿರೋ ಮೂರು ಸಿನಿಮಾ 'ಆರ್ಕೆಸ್ಟ್ರಾ ಮೈಸೂರು' ಸಿನಿಮಾಗೆ 200 ಚಿತ್ರಮಂದಿರ ಸಿಕ್ಕಿದೆ ಎನ್ನಲಾಗುತ್ತಿದೆ.

ಬಾಲಯ್ಯನ 'ಅಖಂಡ' ಭರ್ಜರಿ ಬ್ಯುಸಿನೆಸ್
ಬಾಲಕೃಷ್ಣ ಅಭಿನಯದ 'ಅಖಂಡ' ಸಿನಿಮಾ ಕಳೆದ ವರ್ಷ ಭರ್ಜರಿ ಬ್ಯುಸಿನೆಸ್ ಮಾಡಿತ್ತು. ಕರ್ನಾಟಕದಲ್ಲಿಯೇ ಸುಮಾರು 13 ರಿಂದ 15 ಕೋಟಿ ರೂ. ಬ್ಯುಸಿನೆಸ್ ಮಾಡಿತ್ತು. ದಳಪತಿ ವಿಜಯ್ ಹಾಗೂ ಅಜಿತ್ ಸಿನಿಮಾಗಳು ಕೂಡ 8 ರಿಂದ 10 ಕೋಟಿ ರೂ. ಬ್ಯುಸಿನೆಸ್ ಮಾಡುತ್ತವೆ. ಈ ಕಾರಣಕ್ಕೆ ಕರ್ನಾಟಕದ ಬಾಕ್ಸಾಫೀಸ್ ಮೇಲೆ ಪರಭಾಷೆಯ ಸಿನಿಮಾಗಳು ಕಣ್ಣಿಟ್ಟಿರುತ್ತವೆ.


Click it and Unblock the Notifications











