ನಮಗೆ ಶಿವಣ್ಣನ ಪ್ರಾಣ ಬೇಡ, ಬೆಂಬಲ ಬೇಕು: ಚಿತ್ರರಂಗದ ವಿರುದ್ಧ ಸಿಡಿದೆದ್ದ ಕನ್ನಡಪರ ಸಂಘಟನೆಗಳು
ಮಹಾರಾಷ್ಟ್ರದಲ್ಲಿ ಎಂಇಎಸ್ ಪುಂಡರು ಕರ್ನಾಟಕದ ಧ್ವಜವನ್ನು ಸುಟ್ಟಿದ್ದಾರೆ. ಬೆಳಗಾವಿಯಲ್ಲಿ ಬಸವಣ್ಣ ಭಾವಚಿತ್ರಕ್ಕೆ ಮಸಿ ಬಳಿದಿದ್ದಾರೆ. ಸಂಗೊಳ್ಳಿರಾಯಣ್ಣನ ಪ್ರತಿಮೆಯನ್ನು ವಿರೂಪಗೊಳಿಸಿದ್ದಾರೆ. ಈ ಘಟನೆಗಳು ಕನ್ನಡಪರ ಸಂಘಟನೆಗಳನ್ನು ಕೆರಳಿಸಿವೆ. ಹೀಗಾಗಿ ಎಂಇಎಸ್ ಹಾಗೂ ಶಿವಸೇನೆಯನ್ನು ಕರ್ನಾಟಕದಲ್ಲಿ ನಿಷೇಧ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಕನ್ನಡ ಸಂಘಟನೆಗಳು ಗಡುವು ನೀಡಿವೆ. ಒಂದು ವೇಳೆ ನಿಷೇಧ ಮಾಡದೇ ಹೋದರೆ ಕರ್ನಾಟಕ ಬಂದ್ ಮಾಡಲು ಮುಂದಾಗಿದೆ.
ನಾಡದ್ರೋಹಿ ಎಂಇಎಸ್ ಬ್ಯಾನ್ ಮಾಡುವಂತೆ ಡಿಸೆಂಬರ್ 31ರಂದು ಕರ್ನಾಟಕ ಬಂದ್ ಮಾಡುವುದಕ್ಕೆ ಮುಂದಾಗಿರುವುದೇನೋ ಸರಿ. ಆದರೆ, ಕರ್ನಾಟಕ ಬಂದ್ಗೆ ಕೆಲವು ಸಂಘಟನೆಗಳು ಕೇವಲ ನೈತಿಕ ಬೆಂಬಲ ಮಾತ್ರ ನೀಡುವುದಾಗಿ ಹೇಳಿದೆ. ಇದರಲ್ಲಿ ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿ ಕೂಡ ಸೇರಿದೆ. ಹೀಗಾಗಿ ಕನ್ನಡ ಚಿತ್ರರಂಗದ ಈ ನಿರ್ಧಾರವನ್ನು ಕನ್ನಡಪರ ಸಂಘಟನೆಗಳು ಖಂಡಿಸಿವೆ. ಕನ್ನಡ ಚಿತ್ರರಂಗದ ವಿರುದ್ಧ ಆಕ್ರೋಶ ಹೊರ ಹಾಕುತ್ತಿವೆ. ಅದರಲ್ಲೂ ಕನ್ನಡ ಚಿತ್ರರಂಗದ ನೇತೃತ್ವವನ್ನು ಶಿವಣ್ಣ ವಹಿಸಿಕೊಳ್ಳಬೇಕು ಅಂತ ಕರ್ನಾಟಕ ಪರ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ.
ಡಿಸೆಂಬರ್ 31 ನಡೆಯಲಿರುವ ಬಂದ್ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಬೆಂಬಲ ಕೊಡಬೇಕು. ಒಂದು ವೇಳೆ ಬಂದ್ಗೆ ಬೆಂಬಲ ನೀಡದೆ ಹೋದರೆ ಥಿಯೇಟರ್ಗೆ ಮುತ್ತಿಗೆ ಹಾಕಲಾಗುವುದು ಎಂದು ಕರ್ನಾಟಕ ಪರ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಜಿ.ಪಿ.ವಿಶ್ವನಾಥ್ ಆಕ್ರೋಶ ಹೊರಹಾಕಿದ್ದಾರೆ. ಈ ವೇಳೆ ಶಿವಣ್ಣ ಕನ್ನಡಕ್ಕಾಗಿ ಜೀವ ಬೇಕಾದ್ರೂ ಕೊಡುತ್ತೇನೆ ಎಂದಿದ್ದಾರೆ. ಆದರೆ, ಶಿವಣ್ಣನ ಪ್ರಾಣ ಬೇಡ ಬೆಂಬಲ ಬೇಕು ಎಂದು ಕಿಡಿಕಾರಿದ್ದಾರೆ.

ಶಿವಣ್ಣ ಕನ್ನಡ ಚಿತ್ರರಂಗದ ನೇತೃತ್ವ ತೆಗೆದುಕೊಳ್ಳಬೇಕು
"ಶಿವಣ್ಣ ಅವರಿಗೆ ಕೈ ಮುಗಿದು ಕೇಳಿಕೊಳ್ಳುತ್ತೇವೆ. ರಾಜಣ್ಣನವರು ಹೋದ ಮೇಲೆ ಯಾರೂ ಕೂಡ ಕನ್ನಡ ಚಿತ್ರರಂಗದ ನೇತೃತ್ವವನ್ನು ತೆಗೆದುಕೊಳ್ಳುತ್ತಿಲ್ಲ. ನೀವು ಹೇಳಿದ್ರಿ, ಈ ನಾಡಿಗೆ ಚ್ಯುತಿ ಬಂದರೆ, ನಾನು ಪ್ರಾಣಕೊಡಲು ಸಿದ್ಧನಿದ್ದೇನೆ ಎಂದು ಹೇಳಿದ್ರಿ. ಶಿವಣ್ಣ ಅವರೇ ದಯವಿಟ್ಟು ಎಲ್ಲಾ ಕನ್ನಡಿಗರ ಸ್ವಾಭಿಮಾನದ ಪ್ರಶ್ನೆ. ನೀವು ಬನ್ನಿ ಈ ನಾಡಿಗೋಸ್ಕರ ಎಂಇಎಸ್ ಹಾಗೂ ಶಿವಸೇನೆಯನ್ನೂ ಸಂಪೂರ್ಣ ನಿಷೇಧ ಮಾಡಬೇಕು ಅಂದ್ರೆ, ನೀವು ನೇತೃತ್ವ ತೆಗೆದುಕೊಳ್ಳಲೇಬೇಕಾಗುತ್ತೆ." ಎಂದು ಶಿವಣ್ಣನಿಗೆ ಕರ್ನಾಟಕ ಪರ ಸಂಘಟನೆಗಳ ಒಕ್ಕೂಟ ಒತ್ತಡ ಹಾಕಿದೆ.

ರಶ್ಮಿಕಾಗೆ ಟಾಂಗ್ ಕೊಟ್ಟ ಕನ್ನಡ ಪರ ಸಂಘಟನೆ
" ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಈ ರೀತಿ ಕೈ ಕಟ್ಟಿ ಕೂಳಿತುಕೊಳ್ಳಬಾರದು. ಲಾಕ್ಡೌನ್ ಸಮಯದಲ್ಲಿ ತಿಂಗಳುಗಟ್ಟಲೆ ಮನೆಯಲ್ಲಿ ಇದ್ದಾಗ, ಲಾಭ-ನಷ್ಟ ಆಗಲಿಲ್ವಾ? ಇವತ್ತು ಯಾವ ಲಾಭ ನಷ್ಟ ನೋಡಲು ಹೋಗುತ್ತಿದ್ದೀರಿ? ಒಬ್ಬ ನಟಿಗೆ ಕನ್ನಡದಲ್ಲಿ ಡಬ್ಬಿಂಗ್ ಮಾಡಿ ಅಂದ್ರೆ, ನನಗೆ ಸಮಯವಿರಲಿಲ್ಲ ಅಂತಾರೆ. ಇವರು ಬೆಳೆಯುವ ತನಕ ಕನ್ನಡಿಗರಿಗೆ ಸಮಯವಿರುತ್ತೆ. ಕನ್ನಡ ಚಿತ್ರೋದ್ಯಮ ಬೇಕು. ಬೆಳೆದಾದ ಮೇಲೆ ಸಮಯವಿರುವುದಿಲ್ಲ. ಇನ್ನೊಬ್ಬ ನಟ ಲಾಭ-ನಷ್ಟ ಅಂತ ಮಾತಾಡುತ್ತಾರೆ. ನೀವು ಹೇಗೆ ಮಾತಾಡಿಯೇ ಒಗ್ಗಟ್ಟು ಮೂಡುತ್ತಿಲ್ಲ. ಕುತಂತ್ರಿಗಳೆಲ್ಲಾ ಕಂತ್ರಿಗಳಾಗಿ ರಾಜ್ಯದೊಳಗೆ ನುಸುಳಿ ನಮ್ಮನ್ನೇ ಆಳುವುದಕ್ಕೆ ಹೋಗುತ್ತಿದ್ದಾರೆ." ಅಂತ ಆಕ್ರೋಶ ಹೊರಹಾಕಿದ್ದಾರೆ. ನೀವು ಕರ್ನಾಟಕ ಬಂದ್ಗೆ ಕೈ ಜೋಡಿಸದೇ ಹೋದರೇ, ಮುಂದಿನ ದಿನಗಳಲ್ಲಿ ನಾವು ಬೆಂಬಲಕ್ಕೆ ನಿಲ್ಲುವುದಿಲ್ಲವೆಂದು ಎಚ್ಚರಿಕೆ ನೀಡಿದ್ದಾರೆ.

ಚಿತ್ರಮಂದಿರಕ್ಕೆ ಮುತ್ತಿಗೆ
ಕನ್ನಡ ಚಿತ್ರರಂಗ ನೈತಿಕ ಬೆಂಬಲ ನೀಡುತ್ತೇವೆ ಎಂದಿರುವುದಕ್ಕೆ ಕನ್ನಡ ಪರ ಸಂಘಟನೆಗಳು ಆಕ್ರೋಶ ಹೊರ ಹಾಕಿವೆ. ಡಿಸೆಂಬರ್ 31ರಂದು ಮೂರು ಸಿನಿಮಾಗಳು ಬಿಡುಗಡೆಯಾದರೆ, ಚಿತ್ರಮಂದಿರಕ್ಕೆ ಮುತ್ತಿಗೆ ಹಾಕುತ್ತೇವೆ ಅಂತ ಕಿಡಿಕಾರಿದ್ದಾರೆ. "ಕನ್ನಡ ಚಿತ್ರರಂಗ ಬಂದ್ಗೆ ಬೆಂಬಲ ಕೊಡದೆ ಹೋದರೇ, 3 ಅಲ್ಲ 30 ಸಿನಿಮಾ ಬಿಡುಗಡೆ ಆದರೂ ಬಿಡಲ್ಲ. ಥಿಯೇಟರ್ಗೆ ಮುತ್ತಿಗೆ ಹಾಕುವುದರ ಮೂಲಕ ಸರಿಯಾದ ಸಂದೇಶ ರವಾನೆ ಮಾಡುತ್ತೇವೆ. " ಎಂದು ಕರ್ನಾಟಕ ಪರ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಜಿ.ಪಿ.ವಿಶ್ವನಾಥ್ ಆಕ್ರೋಶ ಹೊರಹಾಕಿದ್ದಾರೆ.

ನೈತಿಕ ಬೆಂಬಲಕ್ಕೆ ವಾಟಾಳ್ ಕಿಡಿ
"ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನೈತಿಕ ಬೆಂಬಲ ನೀಡುತ್ತೇವೆ ಅಂತ ಹೇಳಿದೆ. ನೈತಿಕ ಬೆಂಬಲ ಯಾರಿಗೂ ಬೇಕಾಗಿಲ್ಲ. ನೀವು ಮನೆಯಲ್ಲೇ ಕೂತುಕೊಂಡು, ಮನೆಯಲ್ಲೇ ಮಲಗಿಕೊಂಡು, ಮನೆಯಲ್ಲೇ ತಿಂದುಕೊಂಡು ಅಲ್ಲೇ ನೈತಿಕ ಬೆಂಬಲನಾ? ನಿಮ್ಮ ನೈತಿಕ ಬೆಂಬಲವನ್ನು ತಿರಸ್ಕಾರ ಮಾಡಿದ್ದೇನೆ ನಾನು. ನಮಗೆ ನಿಮ್ಮ ನೈತಿಕ ಬೆಂಬಲ ಬೇಕಾಗಿಲ್ಲ." ಎಂದು ವಾಟಾಳ್ ನಾಗರಾಜ್ ಕಿಡಿಕಾರಿದ್ದಾರೆ.


Click it and Unblock the Notifications











