"ಪುನೀತ್ ಸರ್ ದೇವರು.. 7 ಕೋಟಿ ಕನ್ನಡಿಗರೂ ಕ್ಷಮಿಸಬೇಕು"; ಅಪ್ಪು, ಶಿವಣ್ಣ, ದರ್ಶನ್ ಕ್ಷಮೆ ಕೇಳಿದ ಕನಕಪುರ ಶ್ರೀನಿವಾಸ್
ಕನ್ನಡದ ಹಿರಿಯ ನಿರ್ಮಾಪಕ ಕನಕಪುರ ಶ್ರೀನಿವಾಸ್ ಇತ್ತೀಚೆಗೆ 'ಕಾಟನ್ ಪೇಟೆ ಗೇಟ್' ಸಿನಿಮಾದ ಪತ್ರಿಕಾಗೋಷ್ಠಿ ಸಮಯದಲ್ಲಿ ಕನ್ನಡ ಸ್ಟಾರ್ಗಳು ಹಾಗೂ ನಿರ್ದೇಶಕರ ವಿರುದ್ಧ ಕಿಡಿಕಾರಿದ್ದರು. ಅದರಲ್ಲೂ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ತನಗೆ ಮೋಸ ಮಾಡಿದ್ದರಿಂದಲೇ ಅವರನ್ನು ದೇವರು ಬೇಗ ಕರೆದುಕೊಂಡು ಬಿಟ್ಟ ಎಂದು ಹೇಳಿದ್ದರು. ಇದು ರಾಜವಂಶದ ಅಭಿಮಾನಿಗಳ ನಿದ್ದೆ ಕೆಡಿಸಿತ್ತು.
ಹಾಗಂತ ಪುನೀತ್ ರಾಜ್ಕುಮಾರ್ ಅಷ್ಟೇ ಅಲ್ಲ, ಶಿವರಾಜ್ಕುಮಾರ್, ನಿರ್ದೇಶಕ ಜೋಗಿ ಪ್ರೇಮ್, ದರ್ಶನ್, ಎ ಪಿ ಅರ್ಜುನ್ ಸೇರಿದಂತೆ ಹಲವರು ತನ್ನಿಂದ ಹಣ ಪಡೆದಿದ್ದಾರೆ. ಆದರೆ, ಸಿನಿಮಾ ಮಾಡಿಕೊಟ್ಟಿಲ್ಲ. ತಾನು ಕೊಟ್ಟ ಹಣವನ್ನು ಹಿಂತಿರುಗಿಸಿ ಎಂದು ಕೆಟ್ಟ ಪದಗಳನ್ನು ಬಳಸಿ ಬೈದಿದ್ದರು. ಈ ಸಂಬಂಧ ಜೋಗಿ ಪ್ರೇಮ್, ಎ ಪಿ ಅರ್ಜುನ್ನಿಂದ ಹಿಡಿದು ಕೆಲವರು ಫಿಲ್ಮ್ ಚೇಂಬರ್ಗೆ ದೂರನ್ನು ನೀಡಿದ್ದರು. ಈ ಸಂಬಂಧ ಇಂದು (ಫೆಬ್ರವರಿ 18) ಫಿಲ್ಮ್ ಚೇಂಬರ್ ಅಧ್ಯಕ್ಷೆ ಜಯಮಾಲ ಅವರ ಸಮ್ಮುಖದಲ್ಲಿ ಸಭೆ ನಡೆದು, ಕನಕಪುರ ಶ್ರೀನಿವಾಸ್ ಎಲ್ಲರಿಗೂ ಕ್ಷಮೆ ಕೇಳಿದ್ದಾರೆ. ಅದರ ಸಾರಾಂಶ ಹೀಗಿದೆ.

"ದು:ಖದಿಂದ ಹೀಗೆ ಮಾತಾಡಿದ್ದೇನೆ"
"7 ಕೋಟಿ ಕನ್ನಡಿಗರಿಗೆ ಕನಕಪುರ ಶ್ರೀನಿವಾಸ್ ಮಾಡುವ ನಮಸ್ಕಾರಗಳು. ನಾನು ಕಾಟನ್ ಪೇಟೆ ಪತ್ರಿಕಾಗೋಷ್ಠಿಯಲ್ಲಿ ನಿಮಗೆಲ್ಲ ಗೊತ್ತಿರುವ ಹಾಗೆ ಎಮೋಷನಲ್ ಆಗಿ ಕೆಲವು ವಿಚಾರಗಳನ್ನು ಮಾತಾಡಿಬಿಟ್ಟೆ. ಕಾರಣ ಇಷ್ಟೇ ನನ್ನ ಕಾಟನ್ ಪೇಟೆ ಗೇಟ್ ರಿಲೀಸ್ ಆಗಬೇಕಿತ್ತು. ಸ್ವಲ್ಪ ಹಣದ ಅವಶ್ಯಕತೆ ಇತ್ತು. ಆ ದು:ಖದಿಂದ ಹಾಗೆ ಮಾತಾಡಿದ್ದೇನೆ." ಎಂದು ಕನಕಪುರ ಶ್ರೀನಿವಾಸ್ ಹೇಳಿದ್ದಾರೆ.
"ಪುನೀತ್ ಸರ್ ದೇವರು"
"ಪುನೀತ್ ಸರ್ ದೇವರು. ಅವರೊಂದಿಗೆ ಸಿನಿಮಾ ಮಾಡುವುದಕ್ಕಿಂತ ಮುಂಚೆಯಿಂದನೂ ಅವರೊಂದಿಗೆ ವಹಿವಾಟಿದೆ. ಅದಕ್ಕೂ ಮುಂಚೆಯಿಂದಾನೇ ಕನಕಪುರಕ್ಕೆ ಬರುತ್ತಿದ್ದರು. ಮೊನ್ನೆ ಕಾಟನ್ಪೇಟ್ ಗೇಟ್ ಸಿನಿಮಾದ ಪ್ರೆಸ್ ಮೀಟ್ ವೇಳೆ ಪುನೀತ್ ಬಗ್ಗೆ ಮಾತಾಡಿದ್ದೆ. ಮಯೂರ ಅಂತ ಒಂದು ಸಿನಿಮಾ ಒಪ್ಪಿಕೊಂಡಿದ್ದೆ. ಅದಕ್ಕೆ ದುಡ್ಡು ಕೊಟ್ಟಿದ್ದೆ ಅದು ಹಿಂತಿರುಗಿಸದೇ ಇರೋದ್ರಿಂದ ದೇವರೇ ಕರೆದುಕೊಂಡ ಅಂತ ಹೇಳಿದ್ದೆ. ದಯವಿಟ್ಟು 7 ಕೋಟಿ ಕನ್ನಡಿಗರೂ ಕ್ಷಮಿಸಬೇಕು. ಆ ಮಾತನ್ನು ಇವತ್ತು ವಾಪಸ್ ತೆಗೆದುಕೊಳ್ಳುತ್ತಿದ್ದೇನೆ. ಅವರು ಮೇಲೆನೂ ದೇವರಾಗಿಯೇ ಇರುತ್ತಾರೆ ಅಂದುಕೊಂಡಿದ್ದೇನೆ. ಹಾಗೆಯೇ ಇರಲಿ." ಎಂದು ಕನಕಪುರ ಶ್ರೀನಿವಾಸ್ ಕ್ಷಮೆ ಕೋರಿದ್ದಾರೆ.
ಶಿವಣ್ಣ-ಗೀತಕ್ಕಗೂ ಕ್ಷಮೆ
"ಶಿವರಾಜ್ಕುಮಾರ್ ಎಷ್ಟೋ ಸಹಾಯ ಮಾಡಿದ್ದಾರೆ. ನಮ್ಮ ಸ್ಕೂಲ್ ಅನ್ನು ಓಪನ್ ಮಾಡಿಕೊಂಡಿದ್ದಾರೆ. ಅವರೊಂದಿಗೆ ಐದು ಸಿನಿಮಾ ಮಾಡಿದ್ದೇನೆ. ಗೀತಮ್ಮ ಇರಬಹುದು ಅವರ ಉಪಕಾರವನ್ನು ನಾವು ಯಾವತ್ತೂ ಮರೆಯೋ ಹಾಗಿಲ್ಲ. ನಾನು ಅಶಿಕ್ಷಿತ ಅನ್ನೋದು ನಿಮಗೂ ಗೊತ್ತು. ನಾನು ಓದಿಲ್ಲ. ಮನಸ್ಸಿನಲ್ಲಿ ಏನಿದೆಯೋ ಅದನ್ನು ಹೇಳಿಬಿಟ್ಟಿದ್ದೀನಿ. ಶಿವಣ್ಣ ನಿಮಗೆ ಕೈ ಮುಗಿದು ಕೇಳಿಕೊಳ್ಳುತ್ತೇನೆ. ನಿಮ್ಮ ಸಿನಿಮಾ ಇನ್ನೂ ಮಾಡಬೇಕು. ನಾನು ಏನಾದರೂ ತಪ್ಪಾಗಿ ಮಾತಾಡಿದ್ದರೆ, ಕ್ಷಮಿಸಿ ಶಿವಣ್ಣ ಹಾಗೂ ಗೀತಮ್ಮ ಅವರೇ." ಎಂದು ಕೇಳಿ ಕೊಂಡಿದ್ದಾರೆ.
"ದರ್ಶನ್ ಅಣ್ಣ ದೇವರು ಒಳ್ಳೆಯದು ಮಾಡ್ತಾನೆ"
"ದರ್ಶನ್ ಹೇಳಬೇಕು ಅಂದರೆ ಮಾಸ್ ಹೀರೋ. ಅವರಿಗೆ ಕೇಳಿದಾಗ ಕಷ್ಟ ಇತ್ತೋ ಏನೋ ನಾನು ಕೊಡುತ್ತೇನೆ ಶ್ರೀನಿವಾಸ್ ಅವರೇ ಸ್ವಲ್ಪ ಕಾಲಾವಕಾಶ ಕೊಡಿ ಶ್ರೀನಿವಾಸ್ ಅವರೇ ಅಂತ ಕೇಳಿದರು. ಆಯ್ತು ಅಂತ ನಾನು ಬಂದು ಬಿಟ್ಟೆ. ಅವರೂ ದುಡ್ಡು ಕೊಡಬೇಕು ಅಂತ ಹೇಳಿದ್ದೇನೆ. ತಪ್ಪು ದರ್ಶನ್ ಅಣ್ಣ ಯಾವತ್ತು ಬರುತ್ತಿರೋ ಬನ್ನಿ ದೇವರು ಒಳ್ಳೆಯದು ಮಾಡುತ್ತಾನೆ. ನೀವು ಬಂದೇ ಬರುತ್ತೀರಾ. ಬಂದ್ಮೇಲೆ ನಿಮ್ಮ ಸಿನಿಮಾ ಮಾಡಬೇಕು ಅಂತ ಆಸೆಯಿದೆ. ನನ್ನ ಆಸೆಯನ್ನು ನನಸು ಮಾಡಿಕೊಡಿ" ಎಂದು ದರ್ಶನ್ರಲ್ಲಿ ಮನವಿ ಮಾಡಿಕೊಂಡಿದ್ದಾರೆ.
"ಧ್ರುವ ಸರ್ಜಾ ಕಾಲ್ಶೀಟ್ ಕೊಡಿ"
"ಧುವ ಸರ್ಜಾ ಅವರೊಂದಿಗೆ ನಾನು ಮೂರು ಸಿನಿಮಾವನ್ನು ಮಾಡಿದ್ದೇನೆ. ಈ ಸಂದರ್ಭದಲ್ಲಿ ಕೇಳುತ್ತಿದ್ದೇನೆ. ನಾನೊಬ್ಬ ಹಳ್ಳಿ ಹುಡುಗ. ನೀವು ಆರ್ಟಿಸ್ಟ್ಗಳು ಬೇಕು ನಮಗೆ. ಆರ್ಟಿಸ್ಟ್ ಇಲ್ಲದೆ ಸಿನಿಮಾ ಮಾಡುವುದಕ್ಕೆ ಆಗುವುದಿಲ್ಲ. ದಯವಿಟ್ಟು ನನಗೊಂದು ಕಾಲ್ಶೀಟ್ ಕೊಡಿ. ನೀವು ದುಡ್ಡು ಕೊಡಬೇಡಿ. ನೀವು ಏನು ತಗೋತಿದ್ದಿರೋ ಅಷ್ಟೇ ನಾನು ಕೊಡುತ್ತೇನೆ. ಒಳ್ಳೆಯ ಡೈರೆಕ್ಟರ್ ಕರೆದುಕೊಂಡು ಬರುತ್ತೇನೆ. ಸಿನಿಮಾ ಮಾಡಿ ಕೊಡಿ. ಅದು ಬಿಟ್ಟರೆ ಏನೂ ಇಲ್ಲ" ಎಂದು ಕನಕಪುರ ಶ್ರೀನಿವಾಸ್ ಹೇಳಿದ್ದಾರೆ.
"ಪ್ರೇಮ್-ಅರ್ಜುನ್ ಸಿನಿಮಾ ಮಾಡಿಕೊಡ್ತಾರೆ"
"ನಮ್ಮ ಡೈರೆಕ್ಟರ್ ಪ್ರೇಮ್ ಇರಬಹುದು, ಎ ಪಿ ಅರ್ಜುನ್ ಇರಬಹುದು. ಅವರು ನನಗೆ ಸಿನಿಮಾ ಮಾಡಿಕೊಡುತ್ತೇನೆ ಎಂದು ಹೇಳಿದ್ದಾರೆ. ಅವರು ಸಿನಿಮಾ ಮಾಡುವುದಕ್ಕೆ ಒಪ್ಪಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ನನಗೆ ದುಡ್ಡು ಏನೂ ಬೇಡ. ಸಿನಿಮಾ ಮಾಡಿಕೊಡಿ. ಒಳ್ಳೆಯ ಕಥೆ ಮಾಡಿಕೊಡಿ. ನನಗೂ ದೇವರು ತಿನ್ನುವುದಕ್ಕೆ ಉಣ್ಣುವುದಕ್ಕೆ ಎಲ್ಲಾ ಕೊಟ್ಟಿದ್ದಾನೆ. ಇನ್ನೂ ಕನ್ನಡ ಚಿತ್ರರಂಗದಲ್ಲಿ ನನ್ನನ್ನು ಉಳಿಸಿಕೊಳ್ಳಿ. ಇನ್ನೂ 15-20 ವರ್ಷ ಸಿನಿಮಾ ಮಾಡಬೇಕು ಅಂದುಕೊಂಡಿದ್ದೇನೆ. ನನಗೆ 60 ವಯಸ್ಸು ಇನ್ನೂ 10 ವರ್ಷ ಸಿನಿಮಾ ಮಾಡುತ್ತೇನೆ ಎಂದು ಅಂದುಕೊಂಡಿದ್ದೇನೆ." ಎಂದು ಹಿರಿಯ ನಿರ್ಮಾಪಕ ಕನಕಪುರ ಶ್ರೀನಿವಾಸ್ ಹೇಳಿದ್ದಾರೆ.


Click it and Unblock the Notifications











