ಕಿಚ್ಚನ ₹10 ಕೋಟಿ ಲೀಗಲ್ ನೋಟಿಸ್ ವಿರುದ್ಧ ರೊಚ್ಚಿಗೆದ್ದ ಎಂಎನ್ ಕುಮಾರ್:ಸಂಧಾನಕ್ಕೆ ರವಿಚಂದ್ರನ್,ಶಿವಣ್ಣಗೆ ಕರೆ!
ಕಿಚ್ಚ ಸುದೀಪ್ ಹಾಗೂ ಹಿರಿಯ ನಿರ್ಮಾಪಕ ಎಂಎನ್ ಕುಮಾರ್ ನಡುವಿನ ಜಟಾಪಟಿ ಮುಗಿಯೋ ಹಾಗೇ ಕಾಣಿಸುತ್ತಿಲ್ಲ. ಏಟಿಗೆ ತಿರುಗೇಟು ನೋಡುವ ಪ್ರತಿಕ್ರಿಯೆ ನಡೆಯುತ್ತಲೇ ಇದೆ. ಕಿಚ್ಚ ಸುದೀಪ್ ಅಡ್ವಾನ್ಸ್ ತೆಗೆದುಕೊಂಡು ಸಿನಿಮಾ ಮಾಡಿಕೊಡುತ್ತಿಲ್ಲ ಅಂತ ನಿರ್ಮಾಪಕ ಕುಮಾರ್ ಆರೋಪ ಮಾಡಿದ್ದರು. ಈ ಆರೋಪಕ್ಕೆ ಇಂದು(ಜುಲೈ 8) ಕಿಚ್ಚ ಸುದೀಪ್ ಲೀಗಲ್ ನೋಟಿಸ್ ಕಳುಹಿಸಿದ್ದಾರೆ.
ನಿರ್ಮಾಪಕ ಎಂ ಎನ್ ಕುಮಾರ್ ವಿರುದ್ಧ ಕಿಚ್ಚ ಸುದೀಪ್ ಪರ ವಕೀಲರು ₹10 ಕೋಟಿ ಮಾನಹಾನಿ ಹಾಗೂ ಭೇಷರತ್ ಕ್ಷಮೆ ಕೇಳುವಂತೆ ನೋಟಿಸ್ ಕಳುಹಿಸಿದ್ದಾರೆ. ಈ ಸಂಬಂಧ ನಿರ್ಮಾಪಕ ಕುಮಾರ್ ರೊಚ್ಚಿಗೆದ್ದಿದ್ದಾರೆ. ಈ ಸಂಬಂಧ ಮತ್ತೊಂದು ಪತ್ರಿಕಾಗೋಷ್ಠಿ ನಡೆಸಿ ಆಕ್ರೋಶ ಹೊರಹಾಕಿದ್ದಾರೆ.

"ನೋಟಿಸ್ಗೆ ಪ್ರತ್ಯುತ್ತರ ನೀಡುತ್ತೇನೆ"
ಕಿಚ್ಚ ಸುದೀಪ್ ಲೀಗಲ್ ನೋಟಿಸ್ ಕಳುಹಿಸಿದ ಬಳಿಕ ನಿರ್ಮಾಪಕ ಎಂಎನ್ ಕುಮಾರ್ ಆಕ್ರೋಶ ಹೊರ ಹಾಕಿದ್ದಾರೆ. ಕಳೆದ ಹಲವು ವರ್ಷಗಳಿಂದ ಸಿನಿಮಾ ಮಾಡಿಕೊಡುವಂತೆ ಕೇಳಿಕೊಂಡಿದ್ದೇನೆ. ಸಾಕಷ್ಟು ಪ್ರಯತ್ನ ಪಟ್ಟಿದ್ದು, ಸ್ಪಂದನೆ ಸಿಗದೆ ಇದ್ದಾಗ ಬೇರೆ ವಿಧಿ ಇಲ್ಲದೆ ಪತ್ರಿಕಾಗೋಷ್ಠಿ ಮಾಡಿ ನೋವು ತೋಡಿಕೊಂಡಿದ್ದಾಗಿ ಹೇಳಿದ್ದಾರೆ.
"ಕಿಚ್ಚ ಸುದೀಪ್ ಜೊತೆಗಿನ ವ್ಯವಹಾರದ ಬಗ್ಗೆ ಅವರ ಪತ್ನಿಗೆ ಹೇಳಿದ್ದೆ. ನಮ್ಮಿಬ್ಬರಿಗೂ ಸ್ನೇಹಿತರಾಗಿರುವ ರವಿಚಂದ್ರನ್ ಸರ್ ಅವರ ಮನೆಗೆ ಹೋಗಿ ಮನವಿ ಮಾಡಿಕೊಂಡಿದ್ದೆ. ಅವರು ಸುದೀಪ್ ಜೊತೆ ಮಾತಾಡಿದ್ದರು. ಆದರೂ ಪ್ರತಿಕ್ರಿಯೆ ನೀಡಲಿಲ್ಲ. ಹೀಗಾಗಿ ಮಾಧ್ಯಮದ ಮುಂದೆ ಬಂದಿದ್ದೇನೆ. ಈಗ ನೋಟಿಸ್ ಕಳಿಸಿದ್ದಾರೆ. ಅದನ್ನು ನಾನು ಎದುರಿಸುತ್ತೇನೆ. ಆದರೆ, ವಾಣಿಜ್ಯ ಮಂಡಳಿ, ನಿರ್ಮಾಪಕ ಸಂಘ ಸೇರಿದಂತೆ ಅಂಗ ಸಂಸ್ಥೆಗಳ ಹೇಳಿದಂತೆ ನಡೆದುಕೊಳ್ಳುತ್ತೇನೆ" ಎಂದು ನಿರ್ಮಾಪಕ ಪ್ರತಿಕ್ರಿಯಿಸಿದ್ದಾರೆ.

ಎನ್ಎಂ ಸುರೇಶ್ ಪ್ರತಿಕ್ರಿಯೆ ಏನು?
ಹಿರಿಯ ನಿರ್ಮಾಪಕ ಎಂಎನ್ ಕುಮಾರ್ ಜೊತೆ ಪತ್ರಿಕಾಗೋಷ್ಠಿಯಲ್ಲಿ ಭಾಗಿಯಾಗಿದ್ದ ಎನ್ಎಂ ಸುರೇಶ್ಗೂ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ಈ ಬಗ್ಗೆ ನಿರ್ದೇಶಕರ ಸಂಘದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ನಿರ್ಮಾಪಕ ಎನ್ಎಂ ಸುರೇಶ್ ಕೂಡ ಬೇಸರ ವ್ಯಕ್ತಪಡಿಸಿದ್ದಾರೆ.
"ಎಂಎನ್ ಕುಮಾರ್ ಅವರ ಪುತ್ರ ಹೇಳಿದ ಮಾತನ್ನೇ ಹೇಳಿದ್ದೇನೆ. ಅಪ್ಪ ಎರಡು ಮೂರು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ನೋವು ತೋಡಿಕೊಂಡಿದ್ದರು. ಅದನ್ನೇ ಹೇಳಿದ್ದೇನೆ. ನನ್ನ ವೈಯಕ್ತಿಕ ಹೇಳಿಕ ಅಲ್ಲ. ಈಗ ನೋಟಿಸ್ ಕೊಟ್ಟಿದ್ದಾರೆ. ಒಬ್ಬ ನಿರ್ಮಾಪಕರಿಗೆ ತೊಂದರೆ ಆಗುತ್ತಿದೆ ಅಂದರೆ, ಕೊನೆವರೆಗೂ ಅವರ ಜೊತೆ ನಿಲ್ಲುತ್ತೇನೆ." ಎಂದು ಎಂಎನ್ ಸುರೇಶ್ ಹೇಳಿದ್ದಾರೆ.

ಫಿಲ್ಮ್ ಚೇಂಬರ್ನಲ್ಲಿ ಸಂಧಾನ ಸಭೆ
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಇಂತಹದ್ದೇ ಸಮಸ್ಯೆಯನ್ನು ಬಗೆಹರಿಸಲು, ಸಂಧಾನ ಮಾಡಲು ಕಮಿಟಿಯೊಂದು ಇದೆ. ಇದರಲ್ಲಿ ನಿರ್ಮಾಪಕ ರಾಕ್ಲೈನ್ ವೆಂಕಟೇಶ್,ರವಿಚಂದ್ರನ್, ದೊಡ್ಡಣ್ಣ ಸೇರಿದಂತೆ ಶಿವಣ್ಣ ಇದ್ದಾರೆ. ಹೀಗಾಗಿ ಈ ಸಮಸ್ಯೆಯನ್ನು ಬಗೆಹರಿಸಲು ಅವರೇ ಮುಂದೆ ಬರಬೇಕು ಎನ್ನುವುದು ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕರ್ ಒತ್ತಾಯಿಸಿದ್ದಾರೆ.
ಇಂತಹ ಸಮಸ್ಯೆ ಬಂದಾಗ, ಚಿತ್ರರಂಗದ ಹಿರಿಯರು ಬರುತ್ತಿದ್ದರು. ಈಗಲೂ ಹಾಗೇ ಶಿವಣ್ಣ, ರವಿಚಂದ್ರನ್ ಬರಬೇಕು ಎಂದು ಒತ್ತಾಯಿಸಿದ್ದಾರೆ. ಅಲ್ಲದೆ ಯಾರೂ ಇಲ್ಲದೆ ಇರೋದ್ರಿಂದ ಚಿತ್ರರಂಗದ ಎಲ್ಲಾ ಅಂಗ ಸಂಸ್ಥೆಗಳ ಜೊತೆ ಚರ್ಚಿಸಿ ಸೋಮವಾರ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ನಿರ್ಮಾಪಕರು ಅಭಿಪ್ರಾಯ ಪಟ್ಟಿದ್ದಾರೆ.


Click it and Unblock the Notifications











