ಸಾ ರಾ ಗೋವಿಂದು ನೇತೃತ್ವದಲ್ಲಿ ಸಿಎಂ ಸಿದ್ಧರಾಮಯ್ಯ ಭೇಟಿಯಾದ ನಿರ್ಮಾಪಕರು: ಚಿತ್ರರಂಗದ ಸಮಸ್ಯೆ ನಿವಾರಣೆಗೆ ಮನವಿ
ಕನ್ನಡ ಚಿತ್ರರಂಗ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿರಬಹುದು. ಆದರೆ, ಇಲ್ಲಿ ಸಮಸ್ಯೆಗಳೇನು ಕಮ್ಮಿಯಿಲ್ಲ. ಸಿನಿಮಾ ಮಂದಿಗೆ ದಿನಕ್ಕೊಂದು ಸಮಸ್ಯೆ ಎದುರಾಗುತ್ತಲೇ ಇದೆ. ಚಿತ್ರರಂಗ ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸುವಂತೆ ನಿರ್ಮಾಪಕ ಸಾರಾ ಗೋವಿಂದು ನೇತೃತ್ವದ ನಿರ್ಮಾಪಕರ ತಂಡ ಇಂದು (ಜೂನ್ 27) ಸಿ ಎಂ ಸಿದ್ಧರಾಮಯ್ಯ ಅವರನ್ನು ಭೇಟಿ ಮಾಡಿದ್ರು.
ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಸಾ ರಾ ಗೋವಿಂದು, ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ಉಪಾಧ್ಯಕ್ಷ ಎಂ ಜಿ ರಾಮಮೂರ್ತಿ, ಕಾರ್ಯದರ್ಶಿ ಪ್ರವೀಣ್ ಕುಮಾರ್ ಹಾಗೂ ನಿರ್ಮಾಪಕ ಎನ್ ಎಂ ಸುರೇಶ್ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

ಕನ್ನಡದ ಚಿತ್ರರಂಗ ಕೋವಿಡ್ ಬಳಿಕ ಹಲವು ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿವೆ. ಮೊದಲಿಗೆ ಸಿಂಗಲ್ ಸ್ಕ್ರೀನ್ಗಳು ಮುಚ್ಚುತ್ತಿವೆ. ಇವುಗಳನ್ನು ಉಳಿಸಿಗಾಗಿ ಮನವಿ ಮಾಡಿಕೊಂಡಿದ್ದಾರೆ. ಹಾಗೇ ಪೈರಸಿ, ಮೈಸೂರಿನಲ್ಲಿ ಫಿಲ್ಮ್ ಸಿಟಿ, ಸಬ್ಸಿಡಿ ಹಣ ಬಿಡುಗಡೆ, ರಾಜ್ಯ ಪ್ರಶಸ್ತಿ ವಿತರಣೆ, ಮನರಂಜನಾ ತೆರಿಗೆ ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಸಿಎಂ ಬಳಿ ಚರ್ಚೆ ಮಾಡಿದ್ದಾರೆ.
ತಮ್ಮ ಬ್ಯುಸಿ ಸಮಯದಲ್ಲೂ ಸಿಎಂ ಸಿದ್ದರಾಮಯ್ಯ ಸಿನಿಮಾ ನಿರ್ಮಾಪಕರ ಭೇಟಿಗೆ ಸಮಯ ನೀಡಿ, ಸಮಸ್ಯೆಗಳನ್ನು ಆಲಿಸಿದ್ದಾರೆ. ಇದೇ ವೇಳೆ ತಮ್ಮ ಚಿತ್ರರಂಗದ ಸಮಸ್ಯೆಗಳ ಪರಿಹಾರಕ್ಕೆ ಬದ್ಧರಾಗಿರುವುದಾಗಿ ತಿಳಿಸಿದ್ದಾರೆ.
ಕನ್ನಡ ಚಿತ್ರರಂಗದ ಸಮಗ್ರ ಚರ್ಚೆಗೆ ಅಧಿಕಾರಿಗಳೊಂದಿಗೆ ಸಮಯ ನಿಗದಿ ಪಡಿಸಲಾಗುತ್ತೆ. ಅವರೊಂದಿಗೆ ಚರ್ಚೆ ಮಾಡಿದ ಬಳಿಕ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತೆ ಎಂದು ಸಿಎಂ ಸಿದ್ಧರಾಮಯ್ಯ ಕನ್ನಡದ ನಿರ್ಮಾಪಕರುಗಳಿಗೆ ಭರವಸೆಯನ್ನು ನೀಡಿದ್ದಾರೆ.
ಇದೂವರೆಗೂ ಹಲವು ಸರ್ಕಾರಗಳು ಬಂದಿವೆ ಹೋಗಿವೆ. ಸರ್ಕಾರಗಳು ಬಂದಾಗಲೆಲ್ಲಾ ಕನ್ನಡ ಚಿತ್ರರಂಗ ಸಮಸ್ಯೆಯನ್ನು ಬಗೆ ಹರಿಸುವಂತೆ ಆಯಾ ಕಾಲಘಟ್ಟದ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿ ಬರುತ್ತಾರೆ. ಈ ಬಾರಿ ಕೂಡ ನಿರ್ಮಾಪಕ ಸಾರಾ ಗೋವಿಂದು ನೇತೃತ್ವದಲ್ಲಿ ಮನವಿ ಸಲ್ಲಿಸಿ ಬಂದಿದ್ದಾರೆ.
ಇದಕ್ಕೂ ಮುನ್ನ ನಿರ್ಮಾಪಕ ಹಾಗೂ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ನೇತೃತ್ವದಲ್ಲಿ ಚಿತ್ರರಂಗದ ಹಿರಿಯರು ಹಾಗೂ ಗಣ್ಯರು ಸಿಎಂ ಸಿದ್ಧರಾಮಯ್ಯ ಅವರನ್ನು ಭೇಟಿ ಮಾಡಿದ್ದರು. ಇಂತಹದ್ದೇ ಹಲವು ಸಮಸ್ಯೆಗಳ ಬಗ್ಗೆ ಮನವಿ ಸಲ್ಲಿಸಿದ್ದರು.


Click it and Unblock the Notifications











