ಶಿವಣ್ಣನ ಅನಾರೋಗ್ಯದ ಬಗ್ಗೆ ಹಿರಿಯ ನಟ ದೇವರಾಜ್ ಹೀಗ್ಯಾಕೆ ಅಂದರು?
ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಕಂಡರೆ ಸ್ಯಾಂಡಲ್ವುಡ್ನಲ್ಲಿ ಎಲ್ಲರಿಗೂ ಪ್ರೀತಿ. ಇಲ್ಲಿ ನಡೆಯೋ ಪ್ರತಿಯೊಂದು ಕಾರ್ಯಕ್ರಮದಲ್ಲೂ ಶಿವಣ್ಣ ಇರಬೇಕು ಅಂತ ಬಯಸುತ್ತಾರೆ. ಶಿವಣ್ಣನೇ ಮುಖ್ಯ ಅತಿಥಿಯಾಗಿ ಬರಬೇಕು ಅಂತ ಬಯಸುತ್ತಾರೆ. ಸೆಂಚುರಿ ಸ್ಟಾರ್ ವೇದಿಕೆ ಹತ್ತಿ ಮೈ ಹಿಡಿದು ಒಂದೆರಡು ಒಳ್ಳೆಯ ಮಾತುಗಳನ್ನು ಆಡಿದರೆ ಮುಗಿದೇ ಹೋಯ್ತು. ಆ ಸಿನಿಮಾ ಗೆದ್ದಂತೆ.
ಕನ್ನಡ ಚಿತ್ರರಂಗದ ಮತ್ತೊಬ್ಬ ಲೆಜೆಂಡ್ ದೇವರಾಜ್ ಅವರ ದ್ವಿತೀಯ ಪುತ್ರ ಪ್ರಣಮ್ ನಟಿಸಿದ ಎರಡನೇ ಸಿನಿಮಾ ರಿಲೀಸ್ಗೆ ರೆಡಿಯಾಗುತ್ತಿದೆ. ಹೀಗಾಗಿ ಶಿವಣ್ಣನೇ ಮುಖ್ಯ ಅತಿಥಿಯಾಗಿ ಬರಬೇಕು ಅಂತ ದೇವರಾಜ್ ಆಹ್ವಾನ ನೀಡಿದ್ದರು. ಅನಾರೋಗ್ಯದ ಹಿನ್ನೆಲೆಯಲ್ಲಿಯೂ ಶಿವರಾಜ್ಕುಮಾರ್ ಕಾರ್ಯಕ್ರಮಕ್ಕೆ ಬರುವುದಾಗಿ ಭರವಸೆಯನ್ನು ನೀಡಿದ್ದರು.

ಮಾತು ಕೊಟ್ಟಂತೆ ಶಿವಣ್ಣ ಇಂದು (ಅಕ್ಟೋಬರ್ 23) ಪ್ರಣಮ್ ದೇವರಾಜ್ ನಟಿಸಿರುವ 'S/O ಮುತ್ತಣ್ಣ' ಸಿನಿಮಾದ ಟೀಸರ್ ಲಾಂಚ್ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಈ ವೇಳೆ ಶಿವಣ್ಣ ಕಮಿಟ್ಮೆಂಟ್, ಗುಣವನ್ನು ಹೊಗಳಿದರು. ಅನಾರೋಗ್ಯವಿದ್ದರೂ ಶಿವಣ್ಣ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಬಂದಿದ್ದಕ್ಕೆ ಧನ್ಯವಾದಗಳನ್ನು ತಿಳಿಸಿದರು. ಈ ವೇಳೆ ದೇವರಾಜ್ ತಮ್ಮ ಮಕ್ಕಳಿಗೂ ಈ ಗುಣವನ್ನು ಮರೆಯಬಾರದು ಎಂದು ಸಲಹೆ ನೀಡಿದರು.
ಮಗನ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದಾಗ ಶಿವಣ್ಣನಿಗೆ ಆರೋಗ್ಯ ಸರಿಯಿಲ್ಲ ಅನ್ನೋದು ಗೊತ್ತಿತ್ತು. ಹೀಗಾಗಿ ಅಳುಕಿನಿಂದ ಅವರಿಗೆ ಆಹ್ವಾನ ನೀಡಿದ್ದರು. ಆ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. "ನಾನು ಶಿವಣ್ಣ ಅವರನ್ನು ಮೀಟ್ ಮಾಡುವುದಕ್ಕೆ ಹೋದಾಗ ಎರಡನೇ ನಿಮಿಷ ಮೀಟ್ ಮಾಡಿದ್ದು. ಅದಕ್ಕಿಂತ ಹೆಚ್ಚು ಸಮಯ ತೆಗೆದುಕೊಂಡಿಲ್ಲ. ನನಗೆ ಗೊತ್ತಿತ್ತು ವಿಷಯಗಳು. ಆದರೂ ನಾನು ತೊಂದರೆ ಕೊಡಬಾರದು ಅಂತ ಮನಸ್ಸಲ್ಲಿ ಅಳುಕಿತ್ತು. ಅಲ್ಲಿ ಹೋದ ಕೂಡಲೇ ನಾನು ಬರ್ತೀನಿ. ನೀವ್ಯಾಕೆ ಬರುವುದಕ್ಕೆ ಹೋದ್ರಿ, ಹೋಗಿ ದೇವರಾಜ್ ಅವರೇ ಅಂತ ಹೇಳಿದರು. ಇದು ದೊಡ್ಮನೆಯ ದೊಡ್ಡ ಗುಣ." ಎಂದು ದೇವರಾಜ್ ಹೇಳಿದ್ದಾರೆ.
ಶಿವಣ್ಣ ಜಾಗದಲ್ಲಿ ತಾನೇ ಇದ್ದಿದ್ದರೆ ಆಗೋದಿಲ್ಲ ಅಂತ ಹೇಳುತ್ತಿದ್ದೆ ಎಂದು ದೇವರಾಜ್ ಹೇಳಿದ್ದಾರೆ. "ನಿಜ ಹೇಳ್ತೀನಿ. ಅವರ ಪರಿಸ್ಥಿತಿಯಲ್ಲಿ ನಾನು ಇದ್ದಿದ್ದರೆ, ಎಷ್ಟೋ ಸಲ ಇಲ್ಲಾರೀ ನನ್ನ ಕೈಯಲ್ಲಿ ಆಗಲ್ಲ ಅಂತ ಹೇಳಿ ತಪ್ಪಿಸಿಕೊಂಡು ಬಿಡುತ್ತಿದ್ದೆ. ಆ ಕೆಲಸವನ್ನು ಅವರೂ ಮಾಡಬಹುದಿತ್ತು. ಆದರೆ, ಅವರೂ ಮಾಡಲಿಲ್ಲ. ನಮ್ಮ ಹುಡುಗರು, ನಮ್ಮ ಮಕ್ಕಳು ಬೆಳೆಯಬೇಕು. ನಾನು ಬರುತ್ತೇನೆ ಎಂದು ಹೇಳಿ ಕಾರ್ಯಕ್ರಮವನ್ನು ನೆರವೇರಿಸಿಕೊಟ್ಟರು." ಎಂದಿದ್ದಾರೆ.

ಶಿವಣ್ಣನ ಈ ಗುಣವನ್ನು ತಮ್ಮ ಮಕ್ಕಳೂ ಮರೆಯಬಾರದೆಂದು ವೇದಿಕೆ ಮೇಲೆ ದೇವರಾಜ್ ಸಲಹೆ ನೀಡಿದ್ದಾರೆ. "ಈ ಗುಣವನ್ನು ನಾನು ಯಾವತ್ತೂ ಮರೆಯೋದಿಲ್ಲ. ಇದನ್ನು ನನ್ನ ಮಕ್ಕಳು ಮರೆಯಬಾರದು ಅಂತ ಹೇಳ್ತೀನಿ. ಈ ಗುಣಗಳನ್ನು ನೋಡಿ ಕಲಿಯುವಂತಹ ಅವಕಾಶ ನಿಮಗೆ ಸಿಕ್ಕಿದೆ. ಅವರ ಕುಟುಂಬವೇ ಹೇಳಿಕೊಂಡಂತೆ ಕೀರ್ತಿ, ಯಶಸ್ಸು, ದುಡ್ಡು ಎಲ್ಲವೂ ಜನರು ಪ್ರೀತಿಯಿಂದ ಕೊಟ್ಟಿದ್ದು. ನಾವು ಬರುತ್ತೇವೆ. ನಮಗೆ ಕಲಾವಿದರಾಗಿ ಒಂದು ಅವಕಾಶ ಸಿಕ್ಕಿದೆ. ಅದನ್ನು ಮನಸ್ಪೂರ್ತಿಯಾಗಿ ಜನರಿಗೆ ಒಪ್ಪಿಸಿ, ಅವರ ಜನರಿಗೆ ಅಷ್ಟೇ ಪ್ರೀತಿ ಪಾತ್ರರಾಗಿ ಎಲ್ಲೂ ಕೆಟ್ಟ ಹೆಸರು ತೆಗೆದುಕೊಳ್ಳದೆ ಮುಂದುವರೆಯ ಬೇಕು ಎಂದು ಹಾರೈಸುತ್ತೇನೆ." ಎಂದು ದೇವರಾಜ್ ಹೇಳಿದ್ದಾರೆ.
ಹಾಗೇ ಶಿವಣ್ಣ ಕೂಡ ಆನಾರೋಗ್ಯವಿದ್ದರೂ, ಆ ಎನರ್ಜಿ ಮಾತ್ರ ಕಮ್ಮಿಯಾಗಿರಲಿಲ್ಲ. "ತುಂಟತನ ಇರಬೇಕು. ಅದು ಇಲ್ಲದೆ ಮನುಷ್ಯ ಇಲ್ಲ. ನನಗೆ ಈ ವಯಸ್ಸಿನಲ್ಲೂ ತುಂಟ ತನವಿದೆ ಏನು ಮಾಡಲಿ. ಯಾಕಂದ್ರೆ, ನಾನು ಇರೋದೆ ಹಾಗೆ ಏನು ಮಾಡಲಿ. ನನ್ನನ್ನು ತಿದ್ದುವುದಕ್ಕೆ ಆಗಲ್ಲ. ಇವತ್ತೂ ವಾಕಿಂಗ್ ಮಾಡುವಾಗ ಚೇಷ್ಠೆ ಮಾಡಿಕೊಂಡು ಡ್ಯಾನ್ಸ್ ಮಾಡಿಕೊಂಡು ಹೋಗುತ್ತೇನೆ. ಅದೇ ನಾನು. ನನ್ನ ತರ ಬಿಟ್ಟು ನಾನು ಬೇರೆ ತರ ಇರೋಕೆ ಆಗಲ್ಲ" ಎಂದು ಶಿವಣ್ಣ ಹೇಳಿದ್ದಾರೆ.


Click it and Unblock the Notifications











