"ಎಲ್ಲಾ ಮುಗಿದು ಹೋಗಿದೆ, ರೂಮ್ನಿಂದ ಹೊರಗೆ ಬರುತ್ತಿದ್ದಂತೆ ಹೇಳಬೇಕಿತ್ತು"; ಮೀಟೂ ಬಗ್ಗೆ ಡಿಂಗ್ರಿ ನಾಗರಾಜ್ ಹೇಳಿದ್ದೇನು?
ಮಲಯಾಳಂ ಚಿತ್ರರಂಗದಲ್ಲಿ ಹೇಮಾ ಕಮಿಟಿ ವರದಿ ಬಹಿರಂಗಗೊಳ್ಳುತ್ತಿದ್ದಂತೆ ಅಲ್ಲಿನ ನಿರ್ದೇಶಕರು, ನಿರ್ಮಾಪಕರು ಹಾಗೂ ನಟರ ವಿರುದ್ಧ ಗಂಭೀರ ಆರೋಪಗಳು ಹೇಳಿ ಬಂದಿದ್ದವು. ಇವರ ವಿರುದ್ಧ ಈಗ ಪ್ರಕರಣಗಳು ಕೂಡ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಮಲಯಾಳಂ ಚಿತ್ರರಂಗವನ್ನು ನಡುಗಿಸಿದ್ದ ಹೇಮಾ ಕಮಿಟಿ ವರದಿಯಂತೆ ಕನ್ನಡ ಚಿತ್ರರಂಗಕ್ಕೂ ಬೇಕು ಎಂದು ಕೆಲವರು ಸಿ ಎಂಗೆ ಮನವಿ ಕೂಡ ಮಾಡಿಕೊಂಡಿದ್ದರು.
ಆದರೆ, ಕನ್ನಡ ಚಿತ್ರರಂಗದಲ್ಲಿ ಹೇಮಾ ಕಮಿಟಿ ನೀಡಿದ ವರದಿಯಂತೆ ಇಲ್ಲೊಂದು ಕಮಿಟಿ ರಚಿಸುವುದಕ್ಕೆ ವಿರೋಧ ವ್ಯಕ್ತವಾಗಿತ್ತು. ಸದ್ಯಕ್ಕೆ ತೆರೆಮರೆಯಲ್ಲಿ ಈ ಕಸರತ್ತು ನಡೆಯುತ್ತಿದೆ. ಇತ್ತೀಚೆಗೆ ಕನ್ನಡದ ಹಿರಿಯ ಹಾಸ್ಯ ನಟ ಡಿಂಗ್ರಿ ನಾಗರಾಜ್ ಕೂಡ ಪರೋಕ್ಷವಾಗಿ ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಸುದ್ದಿ ಮನೆ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಈ ಹೇಳಿಕೆ ನೀಡಿದ್ದಾರೆ.

ಹಿರಿಯ ಪತ್ರಕರ್ತ ಗಣೇಶ್ ಕಾಸರಗೋಡು ನಡೆಸಿಕೊಡುವ ಸಂದರ್ಶನದಲ್ಲಿ ಮೀಟೂ ಪ್ರಕರಣಗಳ ಬಗ್ಗೆ ಪ್ರಶ್ನೆ ಮಾಡಲಾಗಿತ್ತು. ಈ ವೇಳೆ ತಮ್ಮ ಕಾಲದಲ್ಲಿ ಯಾಕೆ ಇದು ದೊಡ್ಡ ಸುದ್ದಿಯಾಗಿಲ್ಲ? ಎಂದೋ ನಡೆದಿದ್ದನ್ನು ಈಗ ಯಾಕೆ ಹೊರ ಹಾಕುತ್ತಿದ್ದಾರೆ? ಅಂದೇ ಯಾಕೆ ಮಾಧ್ಯಮಗಳ ಮುಂದೆ ಬಂದಿಲ್ಲ? ಎಂದು ಡಿಂಗ್ರಿ ನಾಗರಾಜ್ ತಮ್ಮದೇ ಶೈಲಿಯಲ್ಲಿ ಹೇಳಿದ್ದಾರೆ. ಕನ್ನಡ ಚಿತ್ರರಂಗದ ಹಿರಿಯ ಕಲಾವಿದ ಆಡಿದ ಝಲಕ್ ಏನು? ತಿಳಿಯಲು ಮುಂದೆ ಓದಿ.
"ನಾಲ್ಕು ಗೋಡೆಗಳ ಮಧ್ಯೆ ನಡೆಯೋ ಪ್ರಸಂಗ"
"ನಾನು ಒಂದು ಮಾತು ಹೇಳುತ್ತೇನೆ. ಅದು ನಾಲ್ಕು ಗೋಡೆಗಳ ಮಧ್ಯೆ ನಡೆಯುವ ಪ್ರಸಂಗ ಅದು. ಹೊರಗಡೆ ಬರೋದಿಲ್ಲ. ಹೊರಗಡೆ ಬಂದ ಕೂಡಲೇ ಅಲ್ಲೇ ಮರೆತು ಬಿಡುತ್ತಾರೆ. ಹಾಗಾಗಿ ಅಂದು ನಮ್ಮ ಜನಗಳಿಗೆ ಪಬ್ಲಿಸಿಟಿ ಆಗಲಿಲ್ಲ. ಈಗ್ಯಾಕೆ ಅನ್ನೋದು ಗೊತ್ತಿಲ್ಲ. ಅವರಾಗೇ ಅವರು ಹೇಳಿಕೊಳ್ಳುತ್ತಿದ್ದಾರೆ. ಆಗಲೇ ಬಂದು ಹೇಳಬೇಕಿತ್ತು. ಈಗ್ಯಾಕೆ ಹೇಳಿದರು. ಈಗ ಹೇಳಿ ಏನು ಪ್ರಯೋಜನ? ಇರೋವರೆಗೂ ಖುಷಿಯಾಗಿ ಇದ್ಬಿಟ್ಟು. ಎಲ್ಲಾ ಸಂತೋಷವನ್ನು ಅನುಭವಿಸಿಬಿಟ್ಟು. ಈಗ ಅದನ್ನು ಯಾಕೆ ಹೇಳಬೇಕಿತ್ತು? ರೂಮ್ನಿಂದ ಹೊರಗೆ ಬರುತ್ತಿದ್ದಂತೆ ಹೇಳಬೇಕಿತ್ತು." ಎಂದು ಡಿಂಗ್ರಿ ನಾಗರಾಜ್ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
"ಎಲ್ಲಾ ನಡೆದು ಹೋಗಿದೆ"
"ನಮ್ಮಲ್ಲಿ ಎಲ್ಲಾ ನಡೆದು ಹೋಗಿದೆ. ನಾಲ್ಕು ಗೋಡೆಗಳ ಮಧ್ಯೆ ನಡೆದು ಹೋಗಿದೆ. ಯಾರಿಗೂ ಗೊತ್ತಿಲ್ಲದೇನೆ ನಡೆದು ಹೋಗಿದೆ. ಕಣ್ಮುಚ್ಚಿ ಕಣ್ಣು ತೆಗೆಯುವುದರೊಳಗೆ ಎಲ್ಲಾ ಮುಗಿದು ಹೋಗಿದೆ. ಇದೆಲ್ಲ ಏನು ಗೊತ್ತಾ? ಸುಮ್ಸುಮ್ಮನೆ ಜನರ ದಿಕ್ಕು ತಪ್ಪಿಸುವುದು. ಟೈಮ್ ವೇಸ್ಟ್. ನಿಮಗೆ ಸ್ವಲ್ಪನೂ ಬುದ್ದಿ ಇಲ್ವಾ ಅಂತ. ಈಗ್ಯಾಕೆ ಹೇಳುತ್ತಿದ್ದೀರ. ನಿಮ್ಮ ಮನೆಯವರು ನಿಮ್ಮ ಬಗ್ಗೆ ಏನು ಅಂದುಕೊಳ್ಳಬೇಕು." ಎಂದು ಹೇಳಿದ್ದಾರೆ.

"ವೈಯಕ್ತಿಕ ಜೀವನ ಆರಾಮಾಗಿದೆ"
"ನನ್ನ ವೈಯಕ್ತಿಕ ಜೀವನದಲ್ಲಿ ಏನಿಲ್ಲ. ಆರಾಮಾಗಿ ಇದ್ದೇನೆ. ಸರ್ವಮಂಗಳ ಇದ್ದಾಗಲೇ ಅವರು ಬೇರೆ ಕಡೆಗೆ ವಾಲಿದ್ದರು. ಆಗ ನಮ್ಮ ನಾಟಕದಲ್ಲಿ ಪಾರ್ಟ್ ಮಾಡುತ್ತಿದ್ದರು. ನಾನು ಅವರ ಮನೆಗೆ ಹೋಗಿದೆ ಕೇಳಿದೆ. ನಮ್ಮ ಮಾವನವಿಗೆ ಈಗಲೂ 70 ಸಾವಿರ ಪೆನ್ಷನ್ ಬರುತ್ತೆ. ಅವರು ಫಾರೆನ್ಸಿಕ್ ಸ್ಪೆಷಲಿಸ್ಟ್ ಆಗಿದ್ದವರು. ಅದಕ್ಕೆ ಮಾಲಾ ಅವರನ್ನು ಮದುವೆ ಆಗಿಲ್ಲ. ಅಷ್ಟು ಬರುತ್ತಿದೆ ಅಂತ ಈಗಲೇ ನನಗೆ ಗೊತ್ತಾಗಿದ್ದು." ಎಂದು ಡಿಂಗ್ರಿ ನಾಗರಾಜ್ ಹೇಳಿದ್ದಾರೆ.
ಹಾಗೇ ತಮ್ಮ ಪತ್ನಿ ಮಾಲಾ ತಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ಹೆಂಡ್ತಿ ಇಷ್ಟು ಚೆನ್ನಾಗಿ ನೋಡಿಕೊಂಡಿದ್ದಕ್ಕೇ 77 ವರ್ಷ ಆದರೂ ನೆಮ್ಮದಿಯಾಗಿ ಇದ್ದೇನೆ. ಮನೆಯಲ್ಲಿ ಒಂದೇ ಒಂದು ಜಗಳ ಕೂಡ ಇಲ್ಲ. ಪುತ್ರ ರಾಜವರ್ಧನ್ ಕೂಡ ತಂದೆ ತಾಯಿಯನ್ನು ಗೌರವದಿಂದ ಕಾಣುತ್ತಾನೆ ಎಂದು ಡಿಂಗ್ರಿ ನಾಗರಾಜ್ ಹೇಳಿಕೊಂಡಿದ್ದಾರೆ.


Click it and Unblock the Notifications











