ರಾಜ್, ವಿಷ್ಣು ಜೊತೆ ನಟಿಸಿದ್ದ ಹಿರಿಯ ನಟ ಟಿ ತಿಮ್ಮಯ್ಯ ಇನ್ನಿಲ್ಲ; ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಆಘಾತ
2024 ಮಗಿಯುತ್ತಾ ಬರುತ್ತಿದೆ. ಈ ವೇಳೆ ಕನ್ನಡ ಚಿತ್ರರಂಗಕ್ಕೆ ಅಘಾತದ ಮೇಲೆ ಆಘಾತ ಆಗುತ್ತಿದೆ. ಈಗಾಗಲೇ ಕನ್ನಡ ಚಿತ್ರರಂಗದ ಪ್ರತಿಭೆಗಳು ಅಗಲಿದ ನೋವು ಇನ್ನೂ ಮಾಸಿಲ್ಲ. ಅಷ್ಟರಲ್ಲೇ ಮತ್ತೊಬ್ಬ ದಿಗ್ಗಜ ನಟ ಇಹಲೋಕ ತ್ಯಜಿಸಿದ್ದಾರೆ.
ಡಾ.ರಾಜ್ಕುಮಾರ್, ವಿಷ್ಣುವರ್ಧನ್, ಅನಂತ್ನಾಗ್ ಸೇರಿದಂತೆ ಕನ್ನಡ ಚಿತ್ರರಂಗದ ದಿಗ್ಗಜರೊಂದಿಗೆ ನಟಿಸಿದ್ದ ಜನಪ್ರಿಯ ನಟ ಟಿ. ತಿಮ್ಮಯ್ಯ ಇಂದು (ನವೆಂಬರ್ 16) ನಿಧನರಾಗಿದ್ದಾರೆ. 92 ವರ್ಷ ವಯಸ್ಸಾಗಿದ್ದ ಈ ನಟ ಹೃದಯಾಘಾತದಿಂದ ನಿಧನರಾಗಿದ್ದು ಚಿತ್ರರಂಗಕ್ಕೆ ಶೋಕ ಸಾಗರದಲ್ಲಿದೆ.

80 ಹಾಗೂ 90ರ ದಶಕದಲ್ಲಿ ಚಿತ್ರರಂಗದಲ್ಲಿ ಆಕ್ಟಿವ್ ಆಗಿದ್ದ ಟಿ. ತಿಮ್ಮಯ್ಯ ಪೋಷಕ ಪಾತ್ರಗಳಲ್ಲಿ ಹೆಚ್ಚಾಗಿ ನಟಿಸಿದ್ದರು. ಕನ್ನಡದ ಮೇರು ನಟರ ಸಿನಿಮಾಗಳಲ್ಲಿ ಇವರು ಹೆಚ್ಚಾಗಿ ನಟಿಸಿದ್ದಾರೆ. ಕಳೆದ ಕೆಲವು ವರ್ಷಗಳಿಂದ ವಯಸ್ಸಿನ ಕಾರಣದಿಂದ ಸಿನಿಮಾ ರಂಗದಿಂದ ದೂರ ಉಳಿದಿದ್ದರು.
ಟಿ. ತಿಮ್ಮಯ್ಯ ಅವರು ಚನ್ನಪಟ್ಟಣ ತಾಲೂಕಿನಲ್ಲಿ ಜನಿಸಿದ್ದರು. ಇವರದ್ದು ಬಡ ರೈತಾಪಿ ಕುಟುಂಬ. ಇವರ ತಂದೆಯ ಹೆಸರು ತಿಮ್ಮೇಗೌಡ. ಕಷ್ಟ ಪಟ್ಟು ಶಿಕ್ಷಣ ಮುಗಿಸಿದ ಟಿ. ತಿಮ್ಮಯ್ಯ ಅವರು ಸರ್ವೆಯರ್ ಆಗಿ ವೃತ್ತಿಯನ್ನು ಆರಂಭಿಸಿದ್ದರು. ಇವರಿಗೆ ಸಿನಿಮಾದಲ್ಲಿ ಅವಕಾಶ ಸಿಕ್ಕಿದ್ದು ಕೂಡ ಆಕಸ್ಮಿಕ. ಸರ್ವೆಯರ್ ಆಗಿದ್ದಾಗಲೇ ವಿದ್ಯಾವಂತರ ಪಾತ್ರಗಳಿಗೆ ಸೂಟ್ ಆಗುತ್ತಾರೆಂದು ತಿಮ್ಮಯ್ಯ ಅವರನ್ನು ಒತ್ತಾಯ ಮಾಡಿ ಪಾತ್ರ ಮಾಡಿಸಲಾಗಿತ್ತು.
ಮೊದಲ ಪಾತ್ರ ವೈದ್ಯರಾಗಿ ಅಣ್ಣಾವ್ರ ಎದುರು ಬಣ್ಣ ಹಚ್ಚಿದರು. ಇಲ್ಲಿಂದ ಟಿ.ತಿಮ್ಮಯ್ಯ ಅವರ ಸಿನಿಮಾ ಜರ್ನಿ ಮುಂದುವರೆದಿತ್ತು. ಸ್ವತ: ಅಣ್ಣಾವ್ರ ಇವರ ನಟನೆಯನ್ನು ನೋಡಿ ಮೆಚ್ಚಿಕೊಂಡಿದ್ದರು. ಅವರ ಪ್ರೋತ್ಸಾಹದಿಂದಲೇ ಸಿನಿಮಾದಲ್ಲಿ ನಟನೆಯನ್ನು ಮುಂದುವರೆಸುವಂತಾಗಿತ್ತು. ಅಲ್ಲಿಂದ ಮತ್ತೆಂದು ಹಿಂತಿರುಗಿ ನೋಡುವ ಗೋಜಿಗೆ ಹೋಗಲೇ ಇಲ್ಲ.
ಟಿ. ತಿಮ್ಮಯ್ಯ ಅವರು ಅಣ್ಣಾವ್ರು ಜೊತೆ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದರು. ಹಾಗೇ ಡಾ. ವಿಷ್ಣುವರ್ಧನ್, ಅನಂತ್ ನಾಗ್ ಸೇರಿದಂತೆ ದಿಗ್ಗಜರೊಂದಿಗೆ ನಟಿಸಿದ್ದಾರೆ. ಹಾಗೇ ಜನಪ್ರಿಯ ನಿರ್ದೇಶಕರಾದ ದೊರೈ ಭಗವಾನ್, ಭಾರ್ಗವ, ಸಂಗೀತಂ ಶ್ರೀನಿವಾಸ್ ರಾವ್, ಕೆವಿ ಜಯರಾಮ್ ಸೇರಿದಂತೆ ಹಲವರ ಸಿನಿಮಾಗಳಲ್ಲಿ ಟಿ ತಿಮ್ಮಯ್ಯ ಅವರಿಗೆ ಒಳ್ಳೊಳ್ಳೆಯ ಪಾತ್ರಗಳು ಸಿಕ್ಕಿವೆ.
ಟಿ. ತಿಮ್ಮಯ್ಯ ಅವರು ಸುಮಾರು 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಡಾಕ್ಟರ್ ಪಾತ್ರಗಳಿಂದ ಹಿಡಿದು ಪೋಷಕ ಪಾತ್ರಗಳಲ್ಲಿ ಇವರು ಮಿಂಚಿದ್ದರು. 'ಬೆಂಕಿಯ ಬಾಲೆ', 'ಕಾಮನ ಬಿಲ್ಲು', 'ಚಲಿಸುವ ಮೋಡಗಳು', 'ಪ್ರತಿಧ್ವನಿ', 'ಬಂಧನ', 'ಪರಮೇಶಿ ಪ್ರೇಮ ಪ್ರಸಂಗ', 'ಜ್ವಾಲಾಮುಖಿ','ಭಾಗ್ಯದ ಲಕ್ಷ್ಮಿ ಬಾರಮ್ಮ', 'ಕರ್ಣ', 'ಈ ಜೀವ ನಿನಗಾಗಿ', 'ನಿಶ್ಕರ್ಷ', 'ಬೆಳದಿಂಗಳ ಬಾಲೆ' ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಹಿರಿಯ ನಟ ಟಿ ತಿಮ್ಮಯ್ಯನವರು ಅಂತ್ಯಕ್ರಿಯೆಯನ್ನು ನಾಳೆ ಮಧ್ಯಾಹ್ನ 12 ಗಂಟೆಗೆ ಬನಶಂಕರಿ ಚಿತಾಗಾರದಲ್ಲಿ ನಡೆಯಲಿದೆ. 92 ವರ್ಷ ವಯಸ್ಸಾಗಿದ್ದರಿಂದ ಅವರಿಗೆ ಅನಾರೋಗ್ಯ ಕಾಡುತ್ತಿತ್ತು ಎನ್ನಲಾಗಿದೆ. ಕನ್ನಡ ಚಿತ್ರರಂಗದಲ್ಲಿ ಇದೂವರೆಗೂ ಕಂಡ ಸಹಜ ಕಲಾವಿದರಲ್ಲಿ ಟಿ ತಿಮ್ಮಯ್ಯ ಕೂಡ ಒಬ್ಬರು. ಸುಮಾರು ಐದಾರು ವರ್ಷಗಳ ಇವರ ಕಲಾಸೇವೆ ಎಂದೆಂದಿಗೂ ನೆನಪಿನಲ್ಲಿ ಉಳಿಯುತ್ತೆ.


Click it and Unblock the Notifications











