AT Raghu Passes Away: ಅನಾರೋಗ್ಯದಿಂದ ಬಳಲುತ್ತಿದ್ದ ಕನ್ನಡದ ಹಿರಿಯ ನಿರ್ದೇಶಕ ಎ ಟಿ ರಘು ನಿಧನ
ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಎ ಟಿ ರಘು ನಿಧನರಾಗಿದ್ದಾರೆ. ಕಳೆದ 55 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಬರಹಗಾರರಾಗಿ, ಸಹನಿರ್ದೇಶಕರಾಗಿ, ಮುಖ್ಯಸಹ ನಿರ್ದೇಶಕರಾಗಿ, ನಿರ್ದೇಶಕರಾಗಿ, ನಿರ್ಮಾಪಕರಾಗಿ ಮತ್ತು ನಟರಾಗಿ ಸೇವೆ ಸಲ್ಲಿಸಿದ್ದರು. ಅದರಲ್ಲೂ ರೆಬೆಲ್ ಸ್ಟಾರ್ ಅಂಬರೀಶ್ ನಟಿಸಿದ ಸಿನಿಮಾಗಳನ್ನೇ ಹೆಚ್ಚಾಗಿ ನಿರ್ದೇಶಿಸಿದ ಹೆಗ್ಗಳಿಕೆ ಇವರದ್ದು.
ತಮ್ಮ ವೃತ್ತಿ ಬದುಕಿನಲ್ಲಿ ಸಾಹಸ ಮಯ ಸಿನಿಮಾಗಳನ್ನೇ ಹೆಚ್ಚಾಗಿ ನಿರ್ದೇಶನ ಮಾಡಿದ್ದರು. ಅದರಲ್ಲೂ ರೆಬೆಲ್ ಸ್ಟಾರ್ ಅಂಬರೀಶ್ಗೆ ಸುಮಾರು 27 ಸಿನಿಮಾಗಳನ್ನು ನಿರ್ದೇಶನ ಮಾಡಿದ ಹೆಗ್ಗಳಿಕೆ ಇವರದ್ದು. ರೆಬೆಲ್ಸ್ಟಾರ್ ಅಂಬರೀಶ್ ಸೂಪರ್ಸ್ಟಾರ್ ಪಟ್ಟ ತಂದುಕೊಡುವಲ್ಲಿ ಎ ಟಿ ರಘು ಪ್ರಮುಖ ಪಾತ್ರ ವಹಿಸಿದ್ದರು. ಆದರೆ, ಇವರ ಕೊನೆಯ ದಿನಗಳು ಅಷ್ಟೊಂದು ಚೆನ್ನಾಗಿರಲಿಲ್ಲ.

ಹಿರಿಯ ನಿರ್ದೇಶಕ ಎ ಟಿ ರಘು ಅವರಿಗೆ 76 ವರ್ಷ ವಯಸ್ಸಾಗಿತ್ತು. ಕಳೆದ ಕೆಲವು ವರ್ಷಗಳಿಂದ ಎ ಟಿ ರಘು ಅನಾರೋಗ್ಯದಿಂದ ಬಳಲುತ್ತಿದ್ದರು. ಕಿಡ್ನಿ ಫೆಲ್ಯೂರ್ ಆಗಿ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದರು. ಅಲ್ಲದೆ, ಎರಡು ಕಾಲು, ಕಣ್ಣು, ಹೃದಯದ ಶಸ್ತ್ರ ಚಿಕಿತ್ಸೆಗೂ ಒಳಗಾಗಿದ್ದರು. ಹೀಗಾಗಿ ಆರ್ಥಿಕ ಸಂಕಷ್ಟಕ್ಕೂ ಸಿಲುಕಿದ್ದರು. ಹೀಗಾಗಿ ಆರ್ಥಿಕ ನೆರವನ್ನು ಕೇಳಿದ್ದರು.
ಎ.ಟಿ. ರಘು 1965ರಲ್ಲಿ ಕೊಡಗು ಜಿಲ್ಲೆಯಿಂದ ಚಿಕ್ಕದೊಂದು ಪಾತ್ರದ ಮೂಲಕ ಸಿನಿಮಾ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟಿದ್ದರು. ಅಲ್ಲಿಂದ ಸಹ ನಿರ್ದೇಶಕನಾಗಿ, ಬರಹಗಾರನಾಗಿ, ನಿರ್ದೇಶಕನಾಗಿ, ನಟನಾಗಿ ಸುಮಾರು 40ಕ್ಕೂ ಅಧಿಕ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಇವುಗಳಲ್ಲಿ 27 ಸಿನಿಮಾಗಳು ಅಂಬರೀಶ್ ಅವರದ್ದು ಎಂಬುವುದು ವಿಶೇಷ. 55 ವರ್ಷಗಳ ಕನ್ನಡ ಚಿತ್ರರಂಗಕ್ಕೆ ಸೇವೆ ಸಲ್ಲಿಸಿದ ರಘು ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಐದು ವರ್ಷದ ಹಿಂದೆ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಕೂಡ ಲಭಿಸಿತ್ತು.
ಎ ಟಿ ರಘು ನಿರ್ದೇಶಿಸಿದ ಆಕ್ಷನ್ ಸಿನಿಮಾಗಳು ಕನ್ನಡ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದ್ದವು. ಬಿ ಹಾಗೂ ಸಿ ಸೆಂಟರ್ಗಳಲ್ಲಿ ರಘು ನಿರ್ದೇಶನದ ಸಿನಿಮಾಗಳಿಗೆ ಒಳ್ಳೆಯ ಗಳಿಕೆ ಮಾಡುತ್ತಿದ್ದವು. ಹೀಗಾಗಿ ಎ. ಟಿ ರಘು ಹೆಚ್ಚು ಬೇಡಿಕೆಯಲ್ಲಿ ಇದ್ದರು. ಈ ಜನಪ್ರಿಯತೆ ಕನ್ನಡ ಅಷ್ಟೇ ಅಲ್ಲ ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲೂ ಸಿನಿಮಾವನ್ನು ನಿರ್ದೇಶನ ಮಾಡುವಂತೆ ಮಾಡಿತ್ತು. 1984ರಲ್ಲಿ ಸೂಪರ್ಸ್ಟಾರ್ ರಜನಿಕಾಂತ್ಗೆ 'ಮೇರಿ ಅದಾಲತ್' ಅನ್ನುವ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಇದು ಅವರದ್ದೇ 'ಆಶ' ಸಿನಿಮಾದ ರಿಮೇಕ್ ಆಗಿತ್ತು.
ಅಂದ್ಹಾಗೆ 1980ರಲ್ಲಿ 'ನ್ಯಾಯ ನೀತಿ ಧರ್ಮ' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. 'ಇನ್ಸ್ ಪೆಕ್ಟರ್ ಕ್ರಾಂತಿ ಕುಮಾರ್', 'ಪುಟ್ಟ ಹೆಂಡ್ತಿ', 'ಮೈಸೂರು ಜಾಣ', 'ಮಂಡ್ಯದ ಗಂಡು', ಮಿಡಿದ ಹೃದಯಗಳು', 'ಅಂತಿಮ ತೀರ್ಪು', 'ನ್ಯಾಯಕ್ಕಾಗಿ ನಾನು', 'ಪದ್ಮವ್ಯೂಹ', 'ಸೂರ್ಯೋದಯ' ಸೇರಿದಂತೆ ಹಲವು ಜನಪ್ರಿಯ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದರು. 1994ರಲ್ಲಿ ಎ ಟಿ ರಘು ನಿರ್ದೇಶಿಸಿದ 'ಮಂಡ್ಯದ ಗಂಡು' ಸಿನಿಮಾ ಬಹಳ ದೊಡ್ಡ ಹೆಸರು ಮಾಡಿತ್ತು. ರೆಬೆಲ್ ಸ್ಟಾರ್ ಅಂಬರೀಶ್ ಈ ಸಿನಿಮಾ ಹೀರೋ. ಅಂಬಿ ವೃತ್ತಿ ಬದುಕಿನಲ್ಲಿ ಸೂಪರ್ ಹಿಟ್ ಆದ ಸಿನಿಮಾವಿದು. 'ಮಂಡ್ಯದ ಗಂಡು' ಸಿನಿಮಾದ ಹಾಡುಗಳು ಇಂದಿಗೂ ಜನರ ಬಾಯಲ್ಲಿಯೇ ಇವೆ.
ಬೆಂಗಳೂರಿನ ಆರ್ ಟಿ ನಗರದ ಮಠದಹಳ್ಳಿಯಲ್ಲಿ ಇರುವ ಎ ಟಿ ರಘು ಅವರ ಮನೆಯಲ್ಲಿ ಪಾರ್ಥಿವ ಶರೀರ ಇಡಲಾಗಿದೆ. ಎ ಟಿ ರಘು ಪುತ್ರ ದುಬೈನಲ್ಲಿ ನೆಲೆಸಿದ್ದಾರೆ. ಅವರು ಬಂದ ಬಳಿಕ ಅಂತ್ಯಕ್ರಿಯೆ ನಡೆಯಲಿದೆ ಎನ್ನಲಾಗಿದೆ. ಇಂದು (ಮಾರ್ಚ್ 21) ಮಧ್ಯಾಹ್ನ 2 ಗಂಟೆ ಬಳಿಕ ಹೆಬ್ಬಾಳದ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ವರದಿಯಾಗಿದೆ.


Click it and Unblock the Notifications











