'ಸು ಫ್ರಮ್ ಸೋ' ಕಥೆ ಹುಟ್ಟಿದ್ದು 6 ವರ್ಷಗಳ ಹಿಂದೆ; ರಾಜ್ ಬಿ ಶೆಟ್ಟಿಯ ಒಂದು ಮಾತಿನಿಂದ ಆಯ್ತು ಚಮತ್ಕಾರ!
'ಸು ಫ್ರಮ್ ಸೋ' ಕನ್ನಡ ಚಿತ್ರರಂಗವನ್ನು ಮತ್ತೆ ತಿರುಗಿ ನೋಡುವಂತೆ ಮಾಡಿದ ಸಿನಿಮಾ. ಹಾರರ್ ಕಾಮಿಡಿ ಮೂಲಕ ಹೊಸಬರ ತಂಡ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯುತ್ತಿದ್ದಾರೆ. ಇನ್ನೇನು ಮುಗಿದೇ ಹೋಯ್ತು ಅನ್ನುವಾಗಲೇ 'ಸು ಫ್ರಮ್ ಸೋ' ದೇವ್ರಂತೆ ಬಂದು ಸ್ಯಾಂಡಲ್ವುಡ್ ಅನ್ನು ಕಾಪಾಡಿದೆ. ಭಾರತೀಯ ಚಿತ್ರರಂಗದಲ್ಲಿ ಮತ್ತೆ ಅದೇ ಹಳೆಯ ರಾಜ್ಯಭಾರ ಮುಂದುವರೆಯುವ ಲಕ್ಷಣಗಳು ಎದ್ದು ಕಾಣಿಸುತ್ತಿದೆ.
ಜನರಿಗೆ ಮನರಂಜನೆಯನ್ನು ನೀಡಬೇಕು ಎನ್ನುವ ಒಂದು ಧ್ಯೇಯದೊಂದಿಗೆ ಶುರುವಾಗಿದ್ದ ಸಿನಿಮಾ ಇಂದು ಬಾಕ್ಸಾಫೀಸ್ನಲ್ಲಿ ಸದ್ದು ಮಾಡುತ್ತಿದೆ. ಮಲಾಡೆ ಮಲಗಿದ್ದ ಕನ್ನಡ ಚಿತ್ರರಂಗಕ್ಕೆ ಬೂಸ್ಟ್ ಕೊಟ್ಟಿದೆ. ಆದರೆ, ಈ ಕಥೆ ಆರು ವರ್ಷಗಳ ಹಿಂದೆ ಹುಟ್ಟಿದ್ದು. ಒಂದು ವೇಳೆ ಅಂದೇ ಈ ಸಿನಿಮಾ ಸೆಟ್ಟೇರಿ ರಿಲೀಸ್ ಆಗಿದ್ದರೆ, ಏನಾಗುತ್ತಿತ್ತು? ಇಂತಹದ್ದೊಂದು ಪ್ರಶ್ನೆ ಹುಟ್ಟೋದು ಸಹಜ.

'ಸು ಫ್ರಮ್ ಸೋ' ಕಥೆಯನ್ನು ನಿರ್ದೇಶಕ ಜೆಪಿ ತುಮಿನಾಡು ಅವರಿಗೆ ಆರು ವರ್ಷಗಳ ಹಿಂದೆ ರೆಡಿ ಮಾಡಿಟ್ಟುಕೊಂಡಿದ್ದರು. ಆದರೆ, ಒಂದು ಮೊಟ್ಟೆಯ ಕತೆ ಸಿನಿಮಾಗಾಗಿ ರಾಜ್ ಬಿ ಶೆಟ್ಟಿ ತಂಡವನ್ನು ಸೇರಿಕೊಂಡ ಬಳಿಕ ಕಥೆ ಬದಲಾವಣೆ ಅಗುತ್ತಾ ಹೋಯ್ತು. ಹೀಗಾಗಿ 'ಸು ಫ್ರಮ್ ಸೋ' ಸರಿಯಾದ ಸಮಯಕ್ಕೆ ಬಂದಿದೆ ಅನ್ನೋದು ನಿರ್ದೇಶಕ ಜೆಪಿ ತುಮಿನಾಡು ಅನಿಸಿಕೆ. ಇತ್ತೀಚೆಗೆ ಮೆಟ್ರೋ ಸಾಗಾ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ 'ಸು ಫ್ರಮ್ ಸೋ' ಕಥೆ ಹುಟ್ಟಿದ ಇಂಟ್ರೆಸ್ಟಿಂಗ್ ವಿಷಯವನ್ನು ಹಂಚಿಕೊಂಡಿದ್ದಾರೆ.
ಈ ಸಿನಿಮಾದ ನಿರ್ದೇಶಕರು ರಾಜ್ ಬಿ ಶೆಟ್ಟಿ ತಂಡ ಸೇರಿಕೊಂಡ ಬಳಿಕ ಸಿನಿಮಾ ಮಾಡುವ ಆಲೋಚನೆ ಬದಲಾಗಿತ್ತು. ರಂಗಭೂಮಿಯಿಂದ ಬಂದ ನಿರ್ದೇಶಕ ಜೆಪಿ ತುಮಿನಾಡು ಒಂದಿಷ್ಟು ಕಥೆಯನ್ನು ಬರೆದಿಟ್ಟುಕೊಂಡಿದ್ದರು. ಆದರೆ, ರಾಜ್ ಬಿ ಶೆಟ್ಟಿ ಜೊತೆ ಸೇರಿಕೊಂಡ ಬಳಿಕ ಅದು ಬದಲಾಗುತ್ತಾ ಹೋಯ್ತು. ಮಾಡಿಕೊಂಡಿದ್ದ ಸ್ಕ್ರಿಪ್ಟ್ಗಳು ಸಿನಿಮಾ ಮಾಡಲಾಗದ ಕಥೆಗಳಾಗಿದ್ದವು. ಕಥೆ ಬರೆಯುವ ಶೈಲಿ ಬದಲಾಗಿತ್ತು.
"ಇದು ಆರು ವರ್ಷಕ್ಕಿಂತ ಮುಂಚೆ ಹುಟ್ಟಿರುವಂತಹ ಕಥೆ. ಒಂದು ಮೊಟ್ಟೆಯ ಕಥೆಯ ನಂತರ ರಾಜ್ ಸರ್ ಜೊತೆನೇ ಇದ್ವಿ. ಸಿನಿಮಾ ಮಾಡಬೇಕು ಎನ್ನುವ ಹುಚ್ಚು ಇತ್ತು. ಸಿನಿಮಾಗಳನ್ನು ನೋಡಿ ಒಂದಿಷ್ಟು ಕಥೆಗಳನ್ನು ಮಾಡಿದ್ದೆ. ಬೇರೆ ಯಾವುದಾದರೂ ಸಿನಿಮಾ ನೋಡಿ, ಈ ರೀತಿ ಒಂದು ಸಿನಿಮಾ ಮಾಡಬೇಕು ಅಂದುಕೊಂಡಿದ್ದೆ. ಒಂದು ಸ್ಕ್ರಿಪ್ಟ್ ರೆಡಿಯಾಗುತ್ತಿತ್ತು. ರಾಜ್ ಬಿ ಶೆಟ್ಟಿಯವರನ್ನು ಭೇಟಿಯಾದ ಬಳಿಕ ಸಿನಿಮಾ ಲೋಕವೇ ಬೇರೆ ಅನ್ನೋದು ಗೊತ್ತಾಯ್ತು." ಎನ್ನುತ್ತಾರೆ 'ಸು ಫ್ರಮ್ ಸೋ' ನಿರ್ದೇಶಕರು.

ಸಿನಿಮಾ ಮಾಡಬೇಕು ಎಂದು ಹಾತೊರೆಯುತ್ತಿದ್ದ ಜೆಪಿ ತುಮಿನಾಡಿಗೆ ರಾಜ್ ಬಿ ಶೆಟ್ಟಿ ಒಂದು ಸಲಹೆಯನ್ನು ನೀಡಿದ್ದರು. ಅದೇ ಈಗ 'ಸು ಫ್ರಮ್ ಸೋ' ಆಗಿ ಬರುವುದಕ್ಕೆ ಅಡಿಪಾಯವಾಗಿತ್ತು. "ನಾನು ರಂಗಭೂಮಿಯಿಂದ ಬಂದವನು. ರಂಗಭೂಮಿಯಲ್ಲಿ ನಾಟಕಗಳನ್ನು ಮಾಡುತ್ತಿದ್ದೀರಲ್ಲ. ನೀವು ಸಿನಿಮಾವನ್ನು ಮಾಡಬೇಕು ಅಂತ ಹೇಳಿದರು. ಏನಾದರೂ ಕಥೆ ಇದ್ದರೆ ಮಾಡಿಕೊಳ್ಳಿ ಅಂದರು. ಅವರನ್ನು ಭೇಟಿ ಮಾಡಿದ ಬಳಿಕ ನಾನು ಮಾಡಿಕೊಂಡ ಕತೆಗಳೆಲ್ಲ ಸೈಡಿಗೆ ಹೋದವು.ಅದ್ಯಾವುದೂ ಸಿನಿಮಾದ ಕಥೆಗಳಲ್ಲ ಅನ್ನೋದು ನನಗೆ ಗೊತ್ತಾಯ್ತು. ಆಗ ರಾಜ್ ಸರ್ ನೀವು ಸಿನಿಮಾದಿಂದ ಸಿನಿಮಾ ಮಾಡುವುದಲ್ಲ. ನೀವು ಇರುವ ಜಾಗದಿಂದ ಕಥೆಗಳನ್ನು ಹೆಕ್ಕಬೇಕು ಎಂದು ಹೇಳಿದ್ದರು." ಅದೇ 'ಸು ಫ್ರಮ್ ಸೋ'ಗೆ ಕಾರಣ ಆಯ್ತು.
ತನ್ನೂರಿನ ಸುತ್ತಮುತ್ತದ ಸನ್ನಿವೇಶಗಳನ್ನು ಇಟ್ಟುಕೊಂಡು ಕಥೆ ಹೆಣೆಯುವುದಕ್ಕೆ ಆರಂಭಿಸಿದ್ದರು. ಕೊನೆಗೂ ಕಥೆ ರೆಡಿಯಾಗಿತ್ತು."ನನ್ನ ಸುತ್ತಮುತ್ತ ನೋಡಿದ ಘಟನೆಗಳನ್ನೇ ಇಟ್ಟುಕೊಂಡು ಕಥೆ ಮಾಡಿದೆ. ಆಗ ಒಂದು ಕಥೆ ರೆಡಿಯಾಯ್ತು. ಅದು 'ಸು ಫ್ರಮ್ ಸೋ'. ಅದನ್ನು ಟೈಟಲ್ ಕೊಟ್ಟಿದ್ದೂ ಕೂಡ ರಾಜ್ ಸರ್ ಅವರೇ. ಸುಲೋಚನಾ ಫ್ರಮ್ ಸೋಮೇಶ್ವರ ಅಂತ. ಈ ಸಿನಿಮಾ ಟೈಟಲ್ ತುಂಬಾ ಉದ್ದ ಆಯ್ತಲ್ಲ. ಅದಕ್ಕೆ 'ಸು ಫ್ರಂ ಸೋ' ಅಂತ ಹಾಕಿದ್ವಿ." ಎಂದು 'ಸು ಫ್ರಮ್ ಸೋ' ಕತೆ ಹುಟ್ಟಿದ ಹಿನ್ನೆಲೆಯನ್ನು ತೆರೆದಿಟ್ಟಿದ್ದಾರೆ.


Click it and Unblock the Notifications











