ರಾಜ್ಕುಮಾರ್ ಖುದ್ದಾಗಿ ತೆರಳಿ ತನ್ನದೇ ಪ್ರತಿಮೆಯನ್ನು ತೆರವುಗೊಳಿಸಿದ್ದು ಏಕೆ? ಕುಣಿಗಲ್ನಲ್ಲಿ ನಡೆದ ಆ ಘಟನೆ ಏನು?
ಕನ್ನಡದ ಕಣ್ಮಣಿ ಡಾ.ರಾಜ್ಕುಮಾರ್ ಅಭಿಮಾನಿಗಳು ವಿಶ್ವದ ಮೂಲೆ ಮೂಲೆಯಲ್ಲೂ ಇದ್ದಾರೆ. ಅವರ ಸಿನಿಮಾಗಳಿಗೆ, ಸರಳತೆ, ನಡೆ-ನುಡಿಗಳಿಗೆ ಅವರ ಅಭಿಮಾನಿಗಳಾದವರು ಅಪಾರ ಸಂಖ್ಯೆಯಲ್ಲಿ ಕಾಣಬಹುದು. ಅದರಲ್ಲೂ ಕರ್ನಾಟಕದಲ್ಲಿ ಅಣ್ಣಾವ್ರಿಗೆ ಇರುವಷ್ಟು ಅಭಿಮಾನಿ ಬಳಗ ಮತ್ಯಾರಿಗೂ ಇಲ್ಲ. ಕರ್ನಾಟಕದ ಮೂಲೆ ಮೂಲೆಯಲ್ಲಿ ಅವರನ್ನು ಆರಾಧಿಸುವ ಅಭಿಮಾನಿಗಳು ಇದ್ದಾರೆ.
ಈ ಕಾರಣಕ್ಕೆ ರಾಜ್ಯದ ಹಳ್ಳಿ ಹಳ್ಳಿಯಲ್ಲಿಯೂ ಡಾ. ರಾಜ್ಕುಮಾರ್ ಅವರ ಪ್ರತಿಮೆಯನ್ನು ನೋಡಬಹುದು. ಸುಮಾರು 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಸಿನಿಪ್ರಿಯರನ್ನು ರಂಜಿಸಿದ ರಾಜ್ಕುಮಾರ್ ದೈಹಿಕವಾಗಿ ಮರೆಯಾಗಿದ್ದರೂ, ಜನ ಮಾನಸದಲ್ಲಿ ಇನ್ನೂ ಇದ್ದಾರೆ. ರಾಜ್ಯದ ಹಲವೆಡೆಗಳಲ್ಲಿ ಅಣ್ಣಾವ್ರ ಪ್ರತಿಮೆಯನ್ನು ಇಟ್ಟು ಗೌರವ ಸೂಚಿಸುತ್ತಾರೆ.

ಒಂದು ವೇಳೆ ಅಣ್ಣಾವ್ರ ಪ್ರತಿಮೆಗೆ ಚಿಕ್ಕದೊಂದು ಚಿಕ್ಕೆ ಬಿದ್ದರೂ ಅಭಿಮಾನಿಗಳು ರೊಚ್ಚಿಗೇಳುತ್ತಾರೆ. ಇನ್ನು ಪ್ರತಿಮೆಯನ್ನೇ ತೆಗೆಯುವ ಸಂದರ್ಭ ಎದುರಾದರೆ ಹೇಗಿರುತ್ತೆ? ರಾಜ್ಯದೆಲ್ಲಡೆಗೆ ಪ್ರತಿಭಟನೆ ನಡೆಯುವ ಸಾಧ್ಯತೆಯಿತ್ತು. ಇಂತಹ ಸಂದರ್ಭದಲ್ಲಿ ಸ್ವತ: ಅಣ್ಣಾವ್ರೇ ಹೋಗಿ ತನ್ನದೇ ಪುತ್ಥಳಿಯನ್ನು ತೆಗೆಸಿ ಬಂದಿದ್ದರು. ಗೋಕಾಕ್ ಚಳುವಳಿಯ ಸಂದರ್ಭದಲ್ಲಿ ಈ ಘಟನೆ ನಡೆದಿತ್ತು.
ಪತ್ರಕರ್ತ, ಬರಹಗಾರ ಚಕ್ರವರ್ತಿ ಚಂದ್ರಚೂಡ್ ಇಂತಹದ್ದೊಂದು ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಪ್ರತಿಮೆಯನ್ನೇ ಪ್ರಮುಖ ವಿಷಯವಾಗಿಟ್ಟುಕೊಂಡು ಮಾಡಿರುವ 'ಕಾಲಾಪತ್ಥರ್' ಸಿನಿಮಾ ವೀಕ್ಷಿಸಿದ ಬಳಿಕ ಅಣ್ಣಾವ್ರ ಪ್ರತಿಮೆಯ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಕುಣಿಗಲ್ ಸಮೀಪ ಅಣ್ಣಾವ್ರ ಪ್ರತಿಮೆ ಇದ್ದ ಜಾಗದಲ್ಲಿ ಕೆರೆ ನಿರ್ಮಾಣ ಮಾಡಬೇಕಿತ್ತು. ಆದರೆ, ಆ ಊರಿನ ಜನರು ಹೇಗೆ ತೆಗೆಯುವುದು ಎಂಬ ಗೊಂದಲದಲ್ಲಿ ಇದ್ದರು. ಆಗ ಅಣ್ಣಾವ್ರೇ ಖುದ್ದಾಗಿ ಹೋಗಿ ಪ್ರತಿಮೆಯನ್ನು ತೆಗೆದು ಹಾಕಿದ್ದರು. ಆ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.

"ಕರ್ನಾಟಕದಲ್ಲಿ ಡಾ.ರಾಜ್ಕುಮಾರ್ ಅಂತ ಒಂದು ಹೆಸರಿದೆ. ಗೋಕಾಕ್ ಚಳುವಳಿಯ ನಂತರ ಕುಣಿಗಲ್ ಹತ್ತಿರ ಒಂದು ಕೆರೆ ಕಟ್ಟಬೇಕಾಗುತ್ತೆ. ಕೆರೆ ಕಟ್ಟಬೇಕಾದರೆ, ಅದೇ ಜಾಗದಲ್ಲಿ ಡಾ.ರಾಜ್ಕುಮಾರ್ ಅವರದ್ದು ಒಂದು ಪ್ರತಿಮೆ ಇರುತ್ತೆ. ಅದನ್ನು ಕೆಡವಿ ಕೆರೆ ಕಟ್ಟುವುದು ಹೇಗೆ ಎಂದು ಇಡೀ ಊರೇ ಇದ್ದಾಗ, ಗೋಕಾಕ್ ಚಳುವಳಿ ಬಳಿಕ ಅವರಿಗೆ ಯಾವುದೋ ಪತ್ರಿಕೆಯಲ್ಲಿ ಓದಿದ ಬಳಿಕ ಗೊತ್ತಾಗುತ್ತೆ. ಸ್ವತ: ಅಣ್ಣಾವ್ರು ಕುಣಿಗಲ್ ಹತ್ತಿರ ಭಕ್ತರಹಳ್ಳಿ ಹತ್ತಿರ ಇನ್ನೊಂದು ಸಣ್ಣ ಹಳ್ಳಿಗೆ ಹೋಗಿ ಅವರೇ ಅವರ ಪ್ರತಿಮೆಯನ್ನು ತೆರವುಗೊಳಿಸಿದರು." ಎಂಬ ಮಾಹಿತಿಯನ್ನು ಚಕ್ರವರ್ತಿ ಚಂದ್ರಚೂಡ್ ಹಂಚಿಕೊಂಡಿದ್ದಾರೆ.
ಇದೇ ಸಂದರ್ಭದಲ್ಲಿ ಇಡೀ ಕರ್ನಾಟಕದಲ್ಲಿ ಡಾ.ರಾಜ್ಕುಮಾರ್ ಅವರದ್ದು ಅತೀ ಹೆಚ್ಚು ಪ್ರತಿಮೆಗಳಿವೆ ಎಂದು ಹೇಳಿದ್ದಾರೆ. "ಡಾ.ರಾಜ್ಕುಮಾರ್ ಅವರದ್ದು ಕರ್ನಾಟಕದಲ್ಲಿ ಅತೀ ಹೆಚ್ಚು ಪ್ರತಿಮೆಗಳಿವೆ. 5190ಕ್ಕೂ ಹೆಚ್ಚು ಪ್ರತಿಮೆಗಳು ಇವೆ. ತನ್ನ ಪ್ರತಿಮೆಯನ್ನು ತಾನೇ ತೆರವುಗೊಳಿಸಿ, ಊರಿಗೆ ಒಂದು ಕೆರೆ ಬರಬೇಕು. ನೀರು ಬೇಕು ಅಂತ ಮಾಡಿದ ಏಕೈಕ ವ್ಯಕ್ತಿ ರಾಷ್ಟ್ರದಲ್ಲೇ ವಿಶ್ವದಲ್ಲೇ ಯಾರಾದರೂ ಇದ್ದರೆ ಅದು ಡಾ.ರಾಜ್ಕುಮಾರ್. ಅಂತಹ ನಾಡಿನಲ್ಲಿ ನಾವು ಹುಟ್ಟಿದ್ದೀವಿ."
ಇತ್ತೀಚೆಗೆ ರಾಯಚೂರಿನಲ್ಲಿ ಕಿಚ್ಚ ಸುದೀಪ್ ಪ್ರತಿಮೆ ಇಟ್ಟು ಅಭಿಮಾನಿಗಳು ದೇವಸ್ಥಾನ ಕಟ್ಟಿದ್ದರು. ಅಲ್ಲಿಗೆ ಕಿಚ್ಚ ಸುದೀಪ್ ಅವರನ್ನು ಕರೆದಿದ್ದರು. ಆಗ ಸುದೀಪ್ ತನ್ನ ಪ್ರತಿಮೆಯನ್ನು ತೆರವುಗೊಳಿಸಿ, ಅಲ್ಲಿ ಬುದ್ಧ ವಿಹಾರ ಕೇಂದ್ರ ಮಾಡಿದರೆ ಉದ್ಘಾಟನೆಗೆ ಬರುತ್ತೇನೆ ಎಂದಿದ್ದರು. ಬಳಿಕ ಅಭಿಮಾನಿಗಳು ಅವರ ಪ್ರತಿಮೆಯನ್ನು ತೆಗೆದು ಬುದ್ಧನ ಪ್ರತಿಮೆ ಇಟ್ಟಿದ್ದರು. ಆ ಬಳಿಕವೇ ಸುದೀಪ್ ಅಲ್ಲಿಗೆ ಹೋಗಿದ್ದನ್ನು ಪತ್ರಕರ್ತ ಚಕ್ರವರ್ತಿ ಚಂದ್ರಚೂಡ್ ನೆನೆಪಿಸಿಕೊಂಡಿದ್ದಾರೆ.


Click it and Unblock the Notifications











